ಮಂಗಳವಾರ, ಜೂನ್ 28, 2016

ವುಕಾನ್ ಸೆನ್ಸಾರ್ ಮತ್ತು ಚೀನಿ ಪ್ರಜಾಪ್ರಭುತ್ವ!

ಒಂದೊಮ್ಮೆ ಚೀನಾ ಪ್ರಜಾಪ್ರಭುತ್ವದ ಪ್ರತೀಕವಾಗಿದ್ದ 'ವುಕಾಂಗ್' ಇಂದು ಚೀನೀ ಸರ್ವಾಧಿಕಾರದ ಪ್ರಜಾದಮನ ನೀತಿಯನ್ನು ಪ್ರತಿನಿಧಿಸಿದರೂ ಅಚ್ಚರಿ ಪಡಬೇಕಿಲ್ಲ. 
- ಕೀರ್ತಿರಾಜ್


ಚೀನಾದ ಕಮ್ಯುನಿಸ್ಟ್ ನಾಯಕರು ಚೀನಾವನ್ನು ಪ್ರಜಾಪ್ರಭುತ್ವ ಎಂದು ಬಿಂಬಿಸಿಕೊಳ್ಳುವ ಯಾವುದೇ ಅವಕಾಶವನ್ನೂ ಕೈಬಿಟ್ಟವರಲ್ಲ. ವಾಸ್ತವಿಕವಾಗಿ ಕಮ್ಯುನಿಸ್ಟರ ಪ್ರತಿಯೊಂದು ಹೆಜ್ಜೆಯೂ ಪ್ರಜಾಪ್ರಭುತ್ವದೊಂದಿಗೆ ಅಂತರ ಕಾಯ್ದುಕೊಂಡರೂ ಹೊರಜಗತ್ತಿಗೆ ಪ್ರಜಾರಾಜ್ಯವೆಂದು ತೋರಿಸಿಕೊಳ್ಳುವ ಆಸೆ ಯಾವ ಚೀನಿ ನಾಯಕರನ್ನೂ ಬಿಟ್ಟಿಲ್ಲ. ಕೆಲವೇ ವರ್ಷಗಳ ಹಿಂದೆ ಚೀನಾದ ಪ್ರಜಾಪ್ರಭುತ್ವದ ಸಂಕೇತದಂತಿದ್ದ 'ವುಕಾನ್' (Wukan) ಎಂಬ ಪದವನ್ನು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಹೆಚ್ಚು ಸೆನ್ಸಾರ್ ಮಾಡಲಾಗಿದೆ. ಇದರೊಂದಿಗೆ ಚೀನಾದ ಪ್ರಜಾಪ್ರಭುತ್ವ(?)ದ ಪ್ರಶ್ನೆ ಮತ್ತೊಮ್ಮೆ ಚರ್ಚೆಗೆ ಒಳಗಾಗಿದೆ. 

ಐದು ವರ್ಷಗಳ ಹಿಂದೆ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ವುಕಾನ್ ಎಂಬ ಹಳ್ಳಿಯ ಜನ ಚೀನಿ ಸರಕಾರವನ್ನು ಪ್ರತಿಭಟಿಸಿ ಹಳ್ಳಿಯನ್ನು ಸಂಪರ್ಕಿಸುವ ರಸ್ತೆಗಳಿಗೆ ದಿಗ್ಬಂಧನ ಹಾಕಿದ್ದಷ್ಟೇ ಅಲ್ಲದೇ ಹಳ್ಳಿಯಲ್ಲಿದ್ದ ಸರಕಾರಿ ಅಧಿಕಾರಿಗಳನ್ನು ಹೊರಗಟ್ಟಿ, ಹಳ್ಳಿಯೊಳಗೆ ಪ್ರವೇಶವನ್ನೂ ನಿರಾಕರಿಸಿದ್ದರು. ವುಕಾನ್ ಹಳ್ಳಿಗರ ಪ್ರತಿಭಟನೆಗ ಕಾರಣ ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಅಧಿಕಾರಿಗಳು ಕೃಷಿ ಮತ್ತು ಇನ್ನಿತರ ಭೂಮಿಯನ್ನು ಹೆಚ್ಚು ಲಾಭಕ್ಕೋಸ್ಕರ ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದು. ಇಂಥದ್ದೊಂದು ಘಟನೆ ಭಾರತದಲ್ಲಾಗಿದ್ದರೆ ಹತ್ತರಲ್ಲಿ ಹನ್ನೊಂದು ಎಂಬಂತಾಗುತ್ತಿತ್ತು. ಆದರೆ ಚೀನಾದಲ್ಲಿ ಜನ ಪ್ರತಿಭಟಿಸಿ ರಸ್ತೆಗಿಳಿಯುವ ಮೊದಲು ನೂರು ಬಾರಿ ಯೋಚಿಸಿ, ಪ್ರಾಣದ ಮೇಲಿನ ಆಸೆ ಬಿಟ್ಟ ನಂತರವಷ್ಟೇ ಎನ್ನುವುದಕ್ಕೆ 1989ರಲ್ಲಿ ಟಿಯಾನ್ಮೆನ್ ವೃತ್ತದಲ್ಲಿ ಚೀನಿ ಕಮ್ಯುನಿಸ್ಟ್ ಸರಕಾರ ನಡೆಸಿದ ಹತ್ಯಾಕಾಂಡಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ! ಪ್ರತಿಭಟನಾಕಾರರನ್ನು ಚೀನಿ ಸರಕಾರ ನಡೆಸಿಕೊಳ್ಳುವ ರೀತಿ ಪ್ರತಿಭಟನೆಯ ಅವಶ್ಯಕತೆ ಮತ್ತು ಅವಕಾಶಗಳೆರಡನ್ನೂ ಮಬ್ಬಾಗಿಸುತ್ತವೆ. ಹೀಗಿದ್ದಾಗಲೂ 2011ರಲ್ಲಿ ವುಕಾಂಗ್ ಹಳ್ಳಿಯ ಜನ ಸ್ಥಳೀಯ ಅಧಿಕಾರಿಗಳ ಭೂಕಬಳಿಕೆಯನ್ನು ವಿರೋಧಿಸಿ ಚೀನೀ ಸರಕಾರವನ್ನು ಎದುರು ಹಾಕಿಕೊಂಡಿದ್ದು ಗಮನಾರ್ಹ ಬೆಳವಣಿಗೆಯೇ ಸರಿ.

ವುಕಾಂಗ್ ಹಳ್ಳಿಗರ ಈ ದಿಟ್ಟತನಕ್ಕೆ ಪ್ರತಿಯಾಗಿ ಚೀನಿ ಸರಕಾರದ ಪ್ರತ್ಯುತ್ತರ ಏನಿದ್ದೀತು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಚೀನಿ ಸರಕಾರ ಈ ಹಿಂದೆ ಪ್ರಜೆಗಳ ಪ್ರತಿರೋಧವನ್ನು ದಮನಿಸಿದ ರೀತಿಯಲ್ಲೇ ವುಕಾನ್ ಹಳ್ಳಿಗರನ್ನೂ ನಿರ್ನಾಮ ಮಾಡಿಬಿಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿತ್ತು. ಊಹಿಸಲಾಗದ ಅಚ್ಚರಿಯಂತೆ ಚೀನಿ ಕಮ್ಯುನಿಸ್ಟ್ ಸರಕಾರ ಸಾಧು ಪ್ರಜಾಪ್ರಭುತ್ವದಂತೆ ವರ್ತಿಸಿತ್ತು! ಗುವಾಂಗ್ಡಾಂಗ್ ಪ್ರಾಂತ್ಯದ ಕಮ್ಯುನಿಸ್ಟ್ ಪಕ್ಷದ ಪ್ರಾಂತೀಯ ಮುಖ್ಯಸ್ಥ ವಾಂಗ್ ಯಾಂಗ್, ವುಕಾನ್ ಪ್ರತಿಭಟನಾಕಾರರನ್ನು ಭೇಟಿಯಾಗಿ, ಸ್ಥಳೀಯ ಸರಕಾರದ ಆಯ್ಕೆಗಾಗಿ ಮುಕ್ತ ಚುನಾವಣೆ ಮತ್ತು ಭೂಕಬಳಿಕೆಯ ವಿಚಾರವಾಗಿ ವಿಚಾರಣೆ ನಡೆಸುವ ವಾಗ್ದಾನ ನೀಡಿದ್ದ. ಈ ರೀತಿಯಾಗಿ 2011ರಲ್ಲಿ ಚೀನಾದ ದಿನಪತ್ರಿಕೆಗಳ ಮುಖ್ಯ ಸುದ್ಧಿಯಾದ 'ವುಕಾನ್ ಘಟನೆ' ಅಪರೂಪಕ್ಕೆಂಬಂತೆ ಚೀನಾ ಕೂಡ ಪ್ರಜಾಪ್ರಭುತ್ವ ಮೌಲ್ಯಗಳ ಅನುಸಾರ ಕಾರ್ಯನಿರ್ವಹಿಸುತ್ತದೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿತು. ಅಂದಿನಿಂದ 'ವುಕಾನ್' ಎಂಬ ಪದ ಚೀನಾದೊಳಗೂ ಪ್ರಜಾಪ್ರಭುತ್ವದ ಜೀವಂತಿಕೆಗೆ ಪರ್ಯಾಯವಾಗಿ ಉಪಯೋಗಿಸಲ್ಪಡುತ್ತಿತ್ತು. 2011ರ ಈ ದಂಗೆ 'ವುಕಾಂಗ್' ಪದವನ್ನು ಚೀನಾದ ಕಮ್ಯುನಿಸ್ಟರ ಪಾಲಿಗೆ  ಪ್ರತಿಷ್ಠೆಯ ವಿಷಯವಾಗಿಸಿತ್ತು.

ಆದರೀಗ 'ವುಕಾನ್' ಪದ ಚೀನಾದಲ್ಲಿ ಕಟ್ಟುನಿಟ್ಟಾಗಿ ಸೆನ್ಸಾರ್ ಮಾಡಲ್ಪಟ್ಟಿದೆ. ವುಕಾನ್ ಹಳ್ಳಿಯಲ್ಲಿ ಮತ್ತೆ ಹೋರಾಟದ ಕಿಚ್ಚು ಹತ್ತಿಕೊಂಡಿದೆ. ಇದೇ ಜೂನ್ 17ರಂದು ವುಕಾನ್ ಹಳ್ಳಿಯ ಜನಪ್ರಿಯ ನಾಯಕ ಲಿನ್  ಜುಲ್ವಾನ್ ಬಂಧನಕ್ಕೊಳಗಾಗಿದ್ದನ್ನು ವಿರೋಧಿಸಿ ವುಕಾನ್ ಹಳ್ಳಿಗರು ಐದು ವರ್ಷಗಳ ನಂತರ ಮತ್ತೆ ಬೀದಿಗಿಳಿದಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಬಂಧನಕ್ಕೊಳಗಾದ ಲಿನ್ 2011ರ ವುಕಾನ್ ದಂಗೆಯ ಪ್ರಮುಖ ನಾಯಕರಲ್ಲಿ ಒಬ್ಬನಾಗಿದ್ದ! ದಂಗೆಯ ನಂತರ ವಾಂಗ್ ಯಾಂಗ್ ಆಶ್ವಾಸನೆಯಂತೆ ನಡೆದ ಚುನಾವಣೆಯಲ್ಲಿ ಜನಬೆಂಬಲದೊಂದಿಗೆ ಜಯಗಳಿಸಿದ್ದ ಲಿನ್ ಬಂಧನ ವುಕಾಂಗ್ ನಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಜೂನ್ 19ರಂದು ಸಾವಿರಾರು ಪ್ರತಿಭಟನಾನಿರತರು, ತಮ್ಮ ಬಂಧನಕ್ಕೊಳಗಾದ ನಾಯಕನನ್ನು ಹಿಂದಿರುಗಿಸುವಂತೆ ಆಗ್ರಹಿಸಿದ್ದರು. ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಪ್ರತಿಭಟನಾಕಾರರು ಅಂತರ್ಜಾಲವನ್ನು ಬಳಸಿಕೊಂಡು, ಹಳ್ಳಿಯ ಮೇಲಿನ ಪೊಲೀಸ್ ದಾಳಿ ಮತ್ತು ಲಿನ್ ಬಂಧನದ ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಚೀನಾ ಸರಕಾರ 'ವುಕಾನ್' ಎಂಬ ಪದವನ್ನೇ ಸೆನ್ಸಾರ್ ಮಾಡಿ ಅಂತರ್ಜಾಲದ ಮೇಲಿನ ತನ್ನ ನಿಯಂತ್ರಣದಿಂದ ಈ ಸುದ್ಧಿ ಹರಡದಂತೆ ನೋಡಿಕೊಂಡಿದೆ. ವೈಬೋ (Weibo- ಚೀನಾದಲ್ಲಿ ಟ್ವಿಟರ್ ನಂತೆ ಕಾರ್ಯನಿರ್ವಹಿಸುವ ಸಾಮಾಜಿಕ ಜಾಲತಾಣ)ದಿಂದ ಲಿನ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಷ್ಟೇ ಅಲ್ಲದೇ, ವುಕಾನ್ ಸಂಬಂಧಿತ ಎಲ್ಲಾ ಪೋಸ್ಟ್, ವಿಡಿಯೋ ಮತ್ತು ಚಿತ್ರಗಳನ್ನು ತೆಗೆದುಹಾಕಲಾಗಿದೆ. ಕೆಲವೊಂದು ಮೂಲಗಳ ಪ್ರಕಾರ 2011ರ ದಂಗೆಯ ನಾಯಕತ್ವ ವಹಿಸಿದ್ದ ಲಿನ್ ಮೇಲೆ ಐದು ವರ್ಷಗಳ ನಂತರ ಚೀನೀ ಕಮ್ಯುನಿಸ್ಟರು ವ್ಯವಸ್ಥಿತವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಇನ್ನಿತರ ಆಂತರಿಕ ದಂಗೆ ಮತ್ತು ಪ್ರಜಾಪ್ರಭುತ್ವದ ಪರ ಧ್ವನಿ ಎತ್ತುವವರಿಗೆ ಪರೋಕ್ಷ ಎಚ್ಚರಿಕೆಯನ್ನೂ ನೀಡಲಾಗಿದೆ.

2011ರಲ್ಲಿ ವುಕಾನ್ ದಂಗೆ ಮತ್ತು ಚೀನಿ ಸರಕಾರ ನಡೆಸಿಕೊಂಡ ರೀತಿಗೂ ಇವತ್ತಿನ 2016ರ ವುಕಾನ್ ದಂಗೆಗೂ ಅಜಗಜಾಂತರ ವ್ಯತ್ಯಾಸವಿದೆ. 2011ರ ದಂಗೆಯ ಸಂದರ್ಭದಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥನಾಗಿದ್ದ ಹು ಜಿಂಟಾವೋ ಉದಾರವಾದಿ ನಿಲುವಿನಿಂದಾಗಿ, ವಾಂಗ್ ಯಾಂಗ್ ವುಕಾಂಗ್ ಸಮಸ್ಯೆಯನ್ನು ಶಾಂತ ರೀತಿಯಲ್ಲಿ ಪರಿಹರಿಸಲು ಪ್ರಯತ್ನಪಟ್ಟಿದ್ದರು. ಆದರೆ ಇವತ್ತಿನ ಕ್ಸಿ ಜಿನ್ ಪಿಂಗ್ ನಾಯಕತ್ವ ವುಕಾಂಗ್ ಸಮಸ್ಯೆಯನ್ನು ಯಾವ ರೀತಿ ಕೊನೆಗೊಳಿಸುತ್ತಾರೆ ಎಂಬುದರ ಮೇಲೆ ಚೀನಾದ ಪ್ರಜಾಪ್ರಭುತ್ವದ ಗಟ್ಟಿತನ ನಿರ್ಧಾರವಾಗಲಿದೆ. ಒಂದೊಮ್ಮೆ ಚೀನಾ ಪ್ರಜಾಪ್ರಭುತ್ವದ ಪ್ರತೀಕವಾಗಿದ್ದ 'ವುಕಾಂಗ್' ಇಂದು ಚೀನೀ ಸರ್ವಾಧಿಕಾರದ ಪ್ರಜಾದಮನ ನೀತಿಯನ್ನು ಪ್ರತಿನಿಧಿಸಿದರೂ ಅಚ್ಚರಿ ಪಡಬೇಕಿಲ್ಲ. ಪದೇ ಪದೇ ಕಾರ್ಲ್ ಮಾರ್ಕ್ಸ್ ಮತ್ತು ಕಾರ್ಮಿಕರ ಸಮಾಜವಾದಿ ರಾಜ್ಯದ ತತ್ವ ಹೇಳುವ ಕಮ್ಯುನಿಸ್ಟರ ಪರಿಸ್ಥಿತಿ ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ ಎಂಬಂತಾಗಿದೆ.




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 24 June 2016)

ಗುರುವಾರ, ಜೂನ್ 2, 2016

ಭಯೋತ್ಪಾದನೆಯತ್ತ ಪಾಕಿಸ್ತಾನದ ಸಹಿಷ್ಣುತೆ!

ಇಡೀ ವಿಶ್ವದ ಕಣ್ಣಲ್ಲಿ ಪಾಕಿಸ್ತಾನ ಭಯೋತ್ಪಾದಕರ ತೊಟ್ಟಿಲು ಅನ್ನಿಸಿಕೊಂಡರೂ, ಅಲ್ಲಿನ ರಾಜಕೀಯ ಮತ್ತು ಮಿಲಿಟರಿ ನಾಯಕರು ಕ್ಯಾರೇ ಎನ್ನುತ್ತಿಲ್ಲ! ಸ್ವಂತ ಬಲದಲ್ಲಿ ಸಾಧಿಸಲಾಗದ್ದನ್ನು ಉಗ್ರರ ಮರೆಯಲ್ಲಿ ಸಾಧಿಸುವ ಜಿದ್ದಿಗೆ ಬಿದ್ದಂತಿದೆ ಪಾಕಿಸ್ತಾನದ ಪರಿಸ್ಥಿತಿ. 
- ಕೀರ್ತಿರಾಜ್



ತನ್ನ ಹುಟ್ಟಿನೊಂದಿಗೆ ಭಯೋತ್ಪಾದನೆಯನ್ನೂ ಸೃಷ್ಟಿಸಿ, ಉಳಿಸಿ ಬೆಳೆಸಿಕೊಂಡು ಬಂದ ಕುಖ್ಯಾತಿ ನಮ್ಮ ನೆರೆಯ ಸೋದರ(?) ರಾಷ್ಟ್ರ ಪಾಕಿಸ್ತಾನಕ್ಕೆ ಸೇರುತ್ತದೆ. ಭಯೋತ್ಪಾದಕರ ಕಡೆಗೆ ದಶಕಗಳಿಂದ ಪಾಕಿಸ್ತಾನದ ಆಳ್ವಿಕೆ ವ್ಯಕ್ತಪಡಿಸಿದ ಸಹಿಷ್ಣುತೆಗೆ ಕೃತಜ್ಞತಾಪೂರ್ವಕವಾಗಿ ಭಯೋತ್ಪಾದಕರೂ ಭಾರತವನ್ನು ಗೋಳು ಹೊಯ್ದುಕೊಳ್ಳುತ್ತಲೇ ಇದ್ದಾರೆ. 2014ರಲ್ಲಿ ತಾಲಿಬಾನಿ ಉಗ್ರರು ಪಾಕಿಸ್ತಾನದ ಸೈನಿಕ ಶಾಲೆಯೊಂದಕ್ಕೆ ದಾಳಿ ನಡೆಸಿ 140ಕ್ಕೂ ಹೆಚ್ಚು ಮಕ್ಕಳನ್ನು ಕೊಂದುಹಾಕಿದಾಗ, ಮೊದಲ ಬಾರಿಗೆ ಪಾಕಿಸ್ತಾನದ ಈ ಉಗ್ರ ಪ್ರೀತಿಗೆ ಮಾರಣಾಂತಿಕ ಹೊಡೆತ ಬಿದ್ದಿತ್ತು. ಅವರಿವರನ್ನು ಬಾವಿಗೆ ತಳ್ಳಿ ವಿಕೃತ ಆನಂದ ಅನುಭವಿಸುತ್ತಿದ್ದ ಪಾಕ್ ಸೈನ್ಯಕ್ಕೆ, ತನ್ನದೇ ಮಕ್ಕಳ ರಕ್ತ ಸಿಕ್ತ ದೇಹಗಳನ್ನು ನೋಡಿ ಆ ಕ್ಷಣಕ್ಕೆ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕಬೇಕೆನಿಸಿದ್ದು ಸಹಜವೇ. ಪಾಕಿಸ್ತಾನದೊಳಗಿರುವ ಎಲ್ಲಾ ಸ್ಥಳೀಯ ಮತ್ತು ವಿದೇಶಿ ಉಗ್ರರ ನಿರ್ನಾಮಗೊಳಿಸಲು ಪಾಕ್ ಸೇನೆ ಕೊಟ್ಟ ಹೆಸರು  'ಜರ್ಬ್-ಎ-ಅಜ್ಬ್' (Zarb-­e-­Azb) ಕಾರ್ಯಾಚರಣೆ. ಏಷ್ಯಾದ ಬಲಿಷ್ಟ ಸೇನೆಗಳಲ್ಲೊಂದಾದ ಪಾಕ್ ಸೇನೆಯ ಈ ರೌದ್ರಾವತಾರ ಕಂಡು  'ಜರ್ಬ್-ಎ-ಅಜ್ಬ್ ಕಾರ್ಯಾಚರಣೆ' ಉಗ್ರರ ಹುಟ್ಟಡಗಿಸುತ್ತದೆ ಎಂದೆನಿಸಿತ್ತು. ದುರಾದೃಷ್ಟವಶಾತ್ ಅಂದುಕೊಂಡದ್ಯಾವುದೂ ನಡೆಯಲಿಲ್ಲ. ಪಾಕಿಸ್ತಾನದ ರೋಷಾವೇಷಗಳೆಲ್ಲಾ ಅಲ್ಪ ಸಮಯದಲ್ಲಿ ತಣ್ಣಗಾಗಿ ಹೋಗಿತ್ತು!

'ಜರ್ಬ್-ಎ-ಅಜ್ಬ್ ಕಾರ್ಯಾಚರಣೆ'ಯಲ್ಲೂ ಪಾಕಿಸ್ತಾನದ ಇಬ್ಬಂದಿ ನೀತಿಯಿಂದಾಗಿ ಹಕ್ಕಾನಿ ಗುಂಪಿನಂಥ ಪ್ರಮುಖ ಉಗ್ರರು ತಪ್ಪಿಸಿಕೊಳ್ಳುವಂತಾಯಿತು. ಹಕ್ಕಾನಿ ಉಗ್ರರು ಡ್ಯುರಾಂಡ್ ರೇಖೆ ದಾಟಿ ಅಫ್ಘಾನಿಸ್ತಾನ ಸೇರಿಕೊಂಡು ತಮ್ಮ ನೆಲೆಯನ್ನು ಮತ್ತಷ್ಟು ಭದ್ರಗೊಳಿಸಿದ್ದಾರೆ. 64 ಜನರ ಸಾವಿಗೆ ಕಾರಣವಾದ ಕಾಬೂಲ್ ಬಾಂಬ್ ಸ್ಪೋಟದಲ್ಲಿ ಹಕ್ಕಾನಿ ಗುಂಪಿನ ಕೈಚಳಕವಿತ್ತು. ಇತ್ತಿಚೆಗೆ ಹಕ್ಕಾನಿ ಗುಂಪು ಆಯೋಜಿಸಿದ್ದ ದಾಳಿಯನ್ನು ಅಫ಼್ಘನ್ ಸೇನಾಪಡೆಗಳು ವಿಫಲಗೊಳಿಸಿದ್ದು, ಹಕ್ಕಾನಿ ಗುಂಪು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಎಷ್ಟೊಂದು ಸಕ್ರಿಯವಾಗಿವೆ ಎಂಬುದಕ್ಕೆ ಸಾಕ್ಷಿ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆ ಉಗ್ರರನ್ನು ಅಫ್ಘನ್ ಗಡಿ ದಾಟಿಸಲು ಒಂದು ನೆಪವಾಗಿ ಮಾರ್ಪಟ್ಟಿತು. ಎಲ್ಲೋ ತಲೆ ಮರೆಸಿಕೊಂಡಿದ್ದ ಕೆಲ ಮರಿ ಉಗ್ರರರನ್ನು ಬಲಿ ಕೊಟ್ಟು, ಮಹತ್ಕಾರ್ಯ ಸಾಧಿಸಿದಂತೆ ಎದೆಯುಬ್ಬಿಸಿತ್ತು ಪಾಕ್ ಸೈನ್ಯ. ಪಾಕಿಸ್ತಾನ ದಶಕಗಳಿಂದ ಹಕ್ಕಾನಿ ಉಗ್ರರಿಗೆ ನೀಡುತ್ತಿರುವ ಬೆಂಬಲದಲ್ಲಿ ರವೆಯಷ್ಟು ಕಡಿಮೆಯಾಗಿಲ್ಲ ಎನ್ನುವುದು ಬೆಳಕಿನಷ್ಟೇ ಸತ್ಯ. ಅದೇನೆ ಇರಲಿ ಇಸ್ಲಾಮಿಕ್ ರಾಷ್ಟ್ರಗಳ ನಾಯಕನಾಗುವ ಹುಚ್ಚು ಭ್ರಮೆಯಲ್ಲಿರುವ ಪಾಕಿಸ್ತಾನದ ಮುಂದೆ ಕಿನ್ನರಿ ಬಾರಿಸುವುದೂ ಅಸಂಬದ್ಧವೇ ಸರಿ.

ಇಡೀ ವಿಶ್ವದ ಕಣ್ಣಲ್ಲಿ ಪಾಕಿಸ್ತಾನ ಭಯೋತ್ಪಾದಕರ ತೊಟ್ಟಿಲು ಅನ್ನಿಸಿಕೊಂಡರೂ, ಅಲ್ಲಿನ ರಾಜಕೀಯ ಮತ್ತು ಮಿಲಿಟರಿ ನಾಯಕರು ಕ್ಯಾರೇ ಎನ್ನುತ್ತಿಲ್ಲ! ಸ್ವಂತ ಬಲದಲ್ಲಿ ಸಾಧಿಸಲಾಗದ್ದನ್ನು ಉಗ್ರರ ಮರೆಯಲ್ಲಿ ಸಾಧಿಸುವ ಜಿದ್ದಿಗೆ ಬಿದ್ದಂತಿದೆ ಪಾಕಿಸ್ತಾನದ ಪರಿಸ್ಥಿತಿ. ಅಫ್ಘಾನಿಸ್ತಾನದಲ್ಲಿ ಭಾರತಕ್ಕೆ ನಿರೀಕ್ಷೆಗೂ ಮೀರಿದ ಸಾರ್ವಜನಿಕ ಬೆಂಬಲ ವ್ಯಕ್ತವಾಗುತ್ತಿರುವುದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಅಫ್ಘನ್ನರ ಬೆಂಬಲ ಪಡೆದಿರುವ ಭಾರತ ನಿಧಾನವಾಗಿಯಾದರೂ ಭದ್ರವಾಗಿಯೇ ಅಫ್ಘನ್ ನೆಲದಲ್ಲಿ ತನ್ನ ಕಾಲೂರಿದೆ. ಸಮಸ್ಯೆಗಳ ಕೂಪವಾಗಿದ್ದ ಅಫ್ಘನ್ನರಿಗೂ ಭಾರತದ ಸ್ನೇಹದಿಂದ ಆನೆಬಲ ಬಂದಂತಾಗಿದೆ. ಭಾರತದ ಈ ರಾಜಕೀಯ ಪ್ರಭಾವ ಮತ್ತು ಇತ್ತೀಚಿನ ರಾಜತಾಂತ್ರಿಕ ನಡೆಗಳು ಪಾಕಿಸ್ತಾನದ ಸ್ಥಾಪಿತ ಹಿತಾಸಕ್ತಿಗಳಿಗೆ ಹಿನ್ನಡೆಯುಂಟು ಮಾಡಿವೆ. ಇದೇ ಕಾರಣಕ್ಕಾಗಿ ರಾಜಮಾರ್ಗದಲ್ಲಿ ಸಾಧಿಸಲಾಗದ್ದನ್ನು ವಾಮಮಾರ್ಗದಲ್ಲಿ ದಕ್ಕಿಸಿಕೊಳ್ಳುವ ಪಾಕಿಸ್ತಾನದ ಹತಾಶ ಪ್ರಯತ್ನವೇ ಭಯೋತ್ಪಾದನೆಯ ಪೋಷಣೆ. ಪಾಕಿಸ್ತಾನದ ಆಂತರಿಕ ಭದ್ರತೆ ಬುಡಮೇಲಾಗಿದ್ದರೂ, ಉಗ್ರರನ್ನು ಬೆಂಬಲಿಸುವುದನ್ನು ಗಮನಿಸಿದರೆ, ತನ್ನನ್ನೂ ಸುಟ್ಟುಕೊಂಡು ಇತರರನ್ನೂ ಬದುಕಲು ಬಿಡದ ವಿಕ್ಷಿಪ್ತ ಮನೋಭಾವದ ವಿಚಿತ್ರ ದೇಶ ಎಂದರೆ ತಪ್ಪಾಗಲಾರದು. ಹೀಗೆ ಮುಂದುವರಿದಲ್ಲಿ ಟರ್ಕಿಯನ್ನು ಯುರೋಪಿನ ರೋಗಿಷ್ಟ ಎಂದಂತೆ ಪಾಕಿಸ್ತಾನ ಏಷ್ಯಾದ ಆತ್ಮಹತ್ಯಾ ಬಾಂಬರ್ ಆಗುವ ದಿನಗಳು ದೂರವಿಲ್ಲ!

ಉಗ್ರರ ಕಡೆಗೆ ಪಾಕಿಸ್ತಾನದ ತೋರಿಸುತ್ತಿರುವ ಒಲವು ಅಫ್ಘಾನಿಸ್ತಾನದ ಪಾಲಿಗೆ ಸಹಿಸಲಾಗದ ತಲೆನೋವಾಗಿದೆ. ಕಲಹಗಳಿಂದ ಬಳಲಿ ಬೆಂಡಾಗಿರುವ ಅಫ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಅಮೆರಿಕಾ, ಚೀನಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ಶೃಂಗಸಭೆಯಲ್ಲಿ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ, ನೇರವಾಗಿ ಪಾಕಿಸ್ತಾನದ ನಗರಗಳಲ್ಲಿ ಆಶ್ರಯ ಪಡೆದ ತಾಲಿಬಾನ್ ತಲೆಗಳತ್ತ ಬೊಟ್ಟು ಮಾಡಿದ್ದು, ಭಯೋತ್ಪಾದಕರ ಅಟ್ಟಹಾಸದಲ್ಲಿ ಪಾಕ್ ಪಾತ್ರವನ್ನು ಸೂಚ್ಯವಾಗಿ ತಿಳಿಸಿಕೊಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಆತ್ಮಹತ್ಯಾ ಬಾಂಬ್ ದಾಳಿಗಳು, ಪಾಕ್ ಬೆಂಬಲಿತ ಉಗ್ರರ ಕೃತ್ಯ ಎಂಬುದನ್ನು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ ಇತ್ತಿಚೆಗೆ ವಿವರ್ಗೀಕರಿಸಿದ ದಾಖಲೆಗಳು ರುಜುವಾತುಪಡಿಸುತ್ತವೆ. 2014ರ ದಾಳಿಯ ನಂತರ ಪಾಕಿಸ್ತಾನ ಉಗ್ರವಿರೋಧಿಯಾಗಿ ಬದಲಾಗಿದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಇರಲಾರದೆ ಇರುವೆ ಬಿಟ್ಟುಕೊಂಡಂತೆ, ಪಾಕಿಸ್ತಾನ ಹೋದ ಕಡೆಯೆಲ್ಲಾ ಮುಖಭಂಗ ಅನುಭವಿಸಿ, ಇರಲಾರದೆ ಭಯೋತ್ಪಾದಕರನ್ನು ಬಿಟ್ಟುಕೊಂಡಿದ್ದಾರಷ್ಟೇ. ಭಯೋತ್ಪಾದನೆ ಮತ್ತು ಪಾಕಿಸ್ತಾನದ ನಡುವಿನ ಅವಿನಾಭಾವ ನಂಟನ್ನು ಅರ್ಥ ಮಾಡಿಕೊಳ್ಳುವವರೆಗೂ, ಅಮೆರಿಕಾದಿಂದ ಹಿಡಿದು ಅಫ್ಘಾನಿಸ್ತಾನದವರೆಗೆ ಭಯೋತ್ಪಾದನಾ ನಿರ್ಮೂಲನೆ ಕನಸಿನ ಮಾತೇ ಸರಿ.




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 2 June 2016)