ಬುಧವಾರ, ಮಾರ್ಚ್ 30, 2016

ಇಸ್ಲಾಮಿಕ್ ಸ್ಟೇಟ್ ಉಗ್ರ ನಿಗ್ರಹದಲ್ಲಿ ಸಮನ್ವಯ ಕೊರತೆ

ವಿಶ್ವ ರಾಜಕೀಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಅಮೆರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ಭಯೋತ್ಪಾದನೆ ಭಾರತದ ಹುಚ್ಚು ದೂರಿನಂತೆ ಕಂಡಿತ್ತು!2001 ಸೆಪ್ಟೆಂಬರ್ 11ರಲ್ಲಿ ಅಲ್ ಖೈದಾ ಅಮೆರಿಕಾದ ಮೇಲೆ ವಕ್ರ ದೃಷ್ಟಿ ಬೀರಿದ ಮೇಲಷ್ಟೇ ಭಯೋತ್ಪಾದನೆಯ ವಿಚಾರದಲ್ಲಿ ವಿಶ್ವದ ದೊಡ್ಡಣ್ಣನ ದೃಷ್ಟಿ ನೆಟ್ಟಗಾಗಿದ್ದು!
- ಕೀರ್ತಿರಾಜ್


ಸ್ವಾತಂತ್ರ್ಯಾನಂತರದಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕರ ಸಮಸ್ಯೆಯ ವಿಚಾರವಾಗಿ ಜಾಗತಿಕ ವೇದಿಕೆಯಲ್ಲಿ ಭಾರತ ಪ್ರತಿ ಬಾರಿಯೂ ಧ್ವನಿ ಎತ್ತುತ್ತಿದ್ದರೂ, ವಿಶ್ವ ಸಂಸ್ಥೆ ಮತ್ತು ವಿಶ್ವ ರಾಜಕೀಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಅಮೆರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ಭಯೋತ್ಪಾದನೆ ಭಾರತದ ಹುಚ್ಚು ದೂರಿನಂತೆ ಕಂಡಿತ್ತು! ಭಾರತದ ಅಭಿವೃದ್ಧಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದ ಭಯೋತ್ಪಾದನೆ ಸೂಪರ್ ಪವರ್ ಗಳಿಗೆ ತಮಾಷೆಯ ವಿಷಯವಾಗಿತ್ತು. 2001 ಸೆಪ್ಟೆಂಬರ್ 11ರಲ್ಲಿ ಅಲ್ ಖೈದಾ ಅಮೆರಿಕಾದ ಮೇಲೆ ವಕ್ರ ದೃಷ್ಟಿ ಬೀರಿದ ಮೇಲಷ್ಟೇ ಭಯೋತ್ಪಾದನೆಯ ವಿಚಾರದಲ್ಲಿ ವಿಶ್ವದ ದೊಡ್ಡಣ್ಣನ ದೃಷ್ಟಿ ನೆಟ್ಟಗಾಗಿದ್ದು! ಇದಾದ ಮೇಲೆ ಉಗ್ರವಾದವನ್ನು ಹತ್ತಿಕ್ಕಲು ವಿಶ್ವ ಮಟ್ಟದಲ್ಲಿ ಹಲವಾರು ಪ್ರಯತ್ನಗಳು ನಡೆದರೂ, ಭಯೂತ್ಪಾದನೆಯ ನಿರ್ಮೂಲನ ಇವತ್ತಿಗೂ ಸಾಧ್ಯವಾಗಿಲ್ಲ. ಭಯೋತ್ಪಾದಕ ಸಂಘಟನೆಗಳು ಹಲವಾರಿದ್ದರೂ, ಬಹಳ ಚಾಲ್ತಿಯಲ್ಲಿರುವ ಒಂದು ಹೆಸರನ್ನು ಉಗ್ರವಾದದ ಜೊತೆಗೆ ಸಮೀಕರಿಸುವುದು ಸಾಮಾನ್ಯ. ಕೆಲ ವರ್ಷಗಳ ಹಿಂದೆ ಅಲ್ ಖೈದಾ ಇದ್ದಂತೆ , ಸದ್ಯದ ಕುಖ್ಯಾತ ಹೆಸರು ಇಸ್ಲಾಮಿಕ್ ಸ್ಟೇಟ್!

ಕಳೆದ ವಾರ ಇಸ್ಲಾಮಿಕ್ ಸ್ಟೇಟ್ ಉಗ್ರರು ಬ್ರುಸ್ಸೆಲ್ಸ್ ಮೇಲೆ ನಡೆಸಿದ ದಾಳಿ ಮೂವತ್ತಕ್ಕೂ ಹೆಚ್ಚು ಜನರ ಪ್ರಾಣ ಬಲಿ ತೆಗೆದುಕೊಂಡು ಹಲವರಿಗೆ ಗಂಭೀರ ಗಾಯಗಳಾಗಿದ್ದು, ಯುರೋಪಿಯನ್ನರಲ್ಲಿ ಮತ್ತೆ ಆತಂಕದ ಕಾರ್ಮೋಡ ಮೂಡಿಸಿದೆ . ಯುರೋಪ್ ಮೇಲಿನ ಭಯೋತ್ಪಾದಕ ದಾಳಿ ಇದೇ ಮೊದಲೇನಲ್ಲ. 2004ರಲ್ಲಿ ಮ್ಯಾಡ್ರಿಡ್ ಮೇಲೆ ನಡೆದ ಬಾಂಬು ದಾಳಿಯಲ್ಲಿ 192 ಜನ, ಜುಲೈ 2005ರಲ್ಲಿ ನಡೆದ ಲಂಡನ್ ದಾಳಿಯಲ್ಲಿ 52 ಮತ್ತು ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಪ್ಯಾರಿಸ್ ದಾಳಿಯಲ್ಲಿ 130 ಜನರ ಪ್ರಾಣ ಹಾನಿಯಾಗಿದೆ. ಯುರೋಪಿನ 28 ರಾಷ್ಟ್ರಗಳನ್ನು ಒಳಗೊಂಡ, ವಿಶ್ವದಲ್ಲೇ ಅತ್ಯಂತ ಯಶಸ್ವೀ ಮತ್ತು ಪರಿಣಾಮಕಾರಿ ಪ್ರಾದೇಶಿಕ ಸಂಘಟನೆ ಎಂದು ಖ್ಯಾತಿ ಗಳಿಸಿದ ಯುರೋಪಿಯನ್ ಯೂನಿಯನ್, ಯುರೋಪನ್ನು ಗಡಿರಹಿತ ಖಂಡವಾಗಿಸಿ, ರಾಷ್ಟ್ರಗಳ ಗಡಿಯನ್ನು ಮೀರಿದ ಯುರೋಪಿಯನ್ ಪ್ರಾದೇಶಿಕತೆಯನ್ನು ಪ್ರತಿಪಾದಿಸುತ್ತಿದೆ. ಯುರೋಪಿನ ಯಾವುದಾದರೊಂದು ರಾಷ್ಟ್ರ ಸೇರಿಕೊಂಡ ಉಗ್ರವಾದಿಗಳೂ ಕೂಡ ಗಡಿಗಳನ್ನು ಮೀರಿ ಯುರೋಪಿನಾದ್ಯಂಥ ವ್ಯಾಪಿಸಿಕೊಂಡು ಬಿಟ್ಟಿದ್ದಾರೆ. ದುರಾದೃಷ್ಟವಶಾತ್  ಯುರೋಪಿನ ಮುಕ್ತ ಗಡಿಗಳು ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ವರದಾನವಾಗಿ ಪರಿಣಮಿಸಿದೆ!


ಬ್ರುಸ್ಸೆಲ್ಸ್ ದಾಳಿಯ ನಂತರ ಯುರೋಪ್ ನಲ್ಲಿ ಹಲವಾರು ಬದಲಾವಣೆಗಳಾಗಿವೆ. ಉಗ್ರ ದಾಳಿಯ ಬೆನ್ನಲ್ಲೇ ಫ್ರಾನ್ಸ್ ಪ್ಯಾರಿಸ್ ನಲ್ಲಿ ಅನುಮಾನಸ್ಪದ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಕಳೆದ ಶುಕ್ರವಾರ ಬ್ರುಸ್ಸೆಲ್ಸ್ ದಾಳಿಗೆ ಸಂಬಂಧಿತ ವ್ಯಕ್ತಿಯೊಬ್ಬನನ್ನು ಬೆಲ್ಜಿಯಮ್ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜರ್ಮನ್ ಪೊಲೀಸರೂ ಕೂಡ ಇಬ್ಬರು ವ್ಯಕ್ತಿಗಳನ್ನು ಅವರ ಮೊಬೈಲ್ ಸಂದೇಶಗಳ ಆಧಾರದಲ್ಲಿ ಬಂಧಿಸಿದ್ದಾರೆ. ಮೂರು ದೇಶಗಳಲ್ಲಿ ನಡೆದ ಕ್ಷಿಪ್ರ ಗತಿಯ ಪೋಲಿಸ್ ಕಾರ್ಯಾಚರಣೆಗಳು, ಇಸ್ಲಾಮಿಕ್ ಸ್ಟೇಟ್ ವಿರುದ್ಧದ ರಣ ನೀತಿಯಲ್ಲಿ ಮುಖ್ಯ ಪಾತ್ರ ವಹಿಸಲಿವೆ. ಯುರೋಪಿಯನ್ ಪೊಲೀಸ್ ವ್ಯವಸ್ಥೆಯ ಸಾಮರ್ಥ್ಯದ ಮೇಲೆ ನಂಬಿಕೆಯಿದ್ದರೂ, ಪರಸ್ಪರ ಸಹಕಾರ ಮತ್ತು ಸಮನ್ವಯತೆಯ ಕೊರತೆಗೆ ಕಳೆದ ಹದಿನೈದು ವರ್ಷಗಳಲ್ಲಿ ನಡೆದ ಸಾಲು ಉಗ್ರ ದಾಳಿಗಳೇ ಸಾಕ್ಷಿ.

ಕಳೆದ ವಾರ ಟರ್ಕಿ ಅಧಿಕಾರಿಗಳು ನೀಡಿದ ವಿವರದಂತೆ, ಬ್ರುಸ್ಸೆಲ್ಸ್ ಆತ್ಮಹತ್ಯಾ ಬಾಂಬರ್ ಗಳಲ್ಲಿ ಒಬ್ಬನಾಗಿದ್ದ ಇಬ್ರಾಹಿಮ್ ಎಲ್ ಬಾಕ್ರಾವಿಯನ್ನು ಟರ್ಕಿ ಬಂಧನದಲ್ಲಿಟ್ಟಿತ್ತು ಕೊನೆಗೆ ಗಡೀಪಾರು ಮಾಡಲಾಗಿತ್ತು. ಉಗ್ರ ಇಸ್ಲಾಮಿಕ್ ಸ್ಟೇಟ್ ಸೇರಿಕೊಳ್ಳುವ ವಿವರಗಳನ್ನು ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು ಟರ್ಕಿ ಅಧಿಕಾರಿಗಳು ಬೆಲ್ಜಿಯಂ ಪೊಲೀಸರಿಗೆ ರವಾನಿಸಿದ್ದರು. ಆದರೂ ಬೆಲ್ಜಿಯಂ ಪೊಲೀಸರು ವಿವರಗಳನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾದರು. ಯುರೋಪಿಯನ್ ಒಕ್ಕೂಟದ 28 ರಾಷ್ಟ್ರಗಳ ಮಧ್ಯೆ ರಕ್ಷಣಾ ಮಾಹಿತಿ ಹಾಗೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣಿಸುತ್ತಿದೆ. ದೇಶದ ಒಳಗಡೆಯೂ ಕೂಡ ಪೊಲೀಸ್, ಗುಪ್ತಚರದಳ, ರಕ್ಷಣಾ ವ್ಯವಸ್ಥೆಗಳಲ್ಲಿ ಸಮನ್ವಯತೆಯಿಲ್ಲ ಎನ್ನುವುದು ಬುಸ್ಸೆಲ್ಸ್ ಘಟನೆಯಿಂದ ಸ್ಪಷ್ಟವಾಗಿದೆ. 2001 ಅಲ್ ಖೈದಾ ದಾಳಿಗೆ ಮುಂಚಿತವಾಗಿ ಅಮೆರಿಕದ ಆಂತರಿಕ ಗುಪ್ತದಳ ಎಫ್ ಬಿ ಮತ್ತು ಬಾಹ್ಯ ಗುಪ್ತದಳ ಸಿ ಮಧ್ಯೆ ಇದೇ ಸಮನ್ವಯದ ಕೊರತೆಯಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ತದನಂತರ ಅಮೆರಿಕಾ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು, ಭಯೋತ್ಪಾದನಾ ನಿಗ್ರಹದಲ್ಲಿ ಅಮೆರಿಕಾದ ರಕ್ಷಣಾ ದಳ, ರಾಜಕಾರಣಿಗಳಿಂದ ಹಿಡಿದು ಸಾಮಾನ್ಯ ಜನತೆ ತೋರಿದ ಸಮಗ್ರತೆಯಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ.


ಇಸ್ಲಾಮಿಕ್ ಸ್ಟೇಟ್ ಅನ್ನು ಸಿದ್ಧಾಂತವಿಲ್ಲದ, ಯೋಜನೆಗಳಿಲ್ಲದ ಒಂದು ದಂಗೆಕೋರ ಗುಂಪು ಎಂದು ತಿಳಿದುಕೊಳ್ಳುವುದು ತಪ್ಪಾದೀತು. ಸಂಘಟನೆಗೆ ಸ್ಪಷ್ಟವಾದ ಯೋಜನೆಗಳಿವೆ ಮತ್ತು ತನ್ನ ಭವಿಷ್ಯತ್ತಿನ ಸ್ಥಾನಮಾನದ ಬಗೆಗೂ ಸ್ಪಷ್ಟ ಚಿತ್ರಣವಿದೆ. ಹಾಗಿಲ್ಲದೆ ಹೋಗಿದ್ದರೆ ಪ್ರಪಂಚದಾದ್ಯಂತ ತನ್ನ ಪ್ರಭಾವ ವಿಸ್ತರಿಸಿ ಜಗತ್ತಿನ ಮೂಲೆ ಮೂಲೆಗಳಿಂದ ಯುವಕರನ್ನು ಸಂಘಟನೆಯತ್ತ ಸೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಹಿಂಸೆಯನ್ನೇ ಬಳಸಿಕೊಂಡು ಅಂತರಾಷ್ಟ್ರೀಯ ರಾಜಕಾರಣದಲ್ಲಿ ಛಾಪು ಮೂಡಿಸುವ ಹಾಗೂ ತಮ್ಮದೇ ಅಸ್ಮಿತೆಯನ್ನು ಸೃಷ್ಟಿಸಿಕೊಳ್ಳುವ ಬಹುದೊಡ್ಡ ಪ್ರಯತ್ನವೊಂದು ಜಾರಿಯಲ್ಲಿದೆ. ಇತ್ತೀಚೆಗೆ ಪ್ರಕಟವಾದ ಜೆಸ್ಸಿಕಾ ಸ್ಟರ್ನ್ ಮತ್ತು ಜೆ ಎಂ ಬರ್ಗರ್ ರವರ 'ISIS: The State of Terror' ಎಂಬ ಪುಸ್ತಕದಲ್ಲಿ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಅಬು ಬಕರ್ ಅಲ್-ಬಗ್ದಾದಿಯ ಬಗ್ಗೆ ಕುತೂಹಲಕಾರಿ ವಿವರಗಳಿವೆ. ಪುಸ್ತಕದಲ್ಲಿ ಬಗ್ದಾದಿ ಅಬು ಬಕರ್ ನಾಜಿ ಬರೆದ ಕೃತಿ 'The Management of Savagery'ಯಿಂದ ಬಹಳವಾಗಿ ಪ್ರಭಾವಿತನಾಗಿದ್ದ ಎಂದು ದಾಖಲಿಸಿದ್ದಾರೆ. ನಾಜಿ ತನ್ನ ಪುಸ್ತಕದಲ್ಲಿ ಹಿಂಸೆಯ ನಿರ್ವಹಣೆಯ ಬಗೆಗೆ, ಉಗ್ರ ಹಿಂಸೆ ಮತ್ತು ಕ್ರೌರ್ಯದ ಮೂಲಕ, ಬೆಂಬಲಿಗರು ಮತ್ತು ವಿರೋಧಿಗಳಿಂದ ಗೌರವ ಗಳಿಸುವ ವಿವಿಧ ದಾರಿಗಳನ್ನು ಬಿಚ್ಚಿಟ್ಟಿದ್ದಾನೆ. ಹೀಗೆ ಇಸ್ಲಾಮಿಕ್ ಸ್ಟೇಟ್ ಇತರ ಉಗ್ರ ಸಂಘಟನೆಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ವಿಶ್ವ ಶಕ್ತಿಗಳ ಸಮನ್ವಯದ ಕೊರತೆಯನ್ನು ಇಸ್ಲಾಮಿಕ್ ಸ್ಟೇಟ್ ಬಂಡವಾಳ ಮಾಡಿಕೊಂಡಾಗಿದೆ ಸಾಂಪ್ರದಾಯಿಕ ಭಯೋತ್ಪದನಾ ನಿಗ್ರಹ ತಂತ್ರಗಳು ಇಸ್ಲಾಮಿಕ್ ಸ್ಟೇಟ್ ನಿಯಂತ್ರಿಸುವಲ್ಲಿ ವಿಫಲವಾಗುತ್ತಿರುವುದೂ ಇದೇ ಕಾರಣಕ್ಕಾಗಿ!




 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Vishwavani newspaper on 30 March 2016)

ಶನಿವಾರ, ಮಾರ್ಚ್ 26, 2016

ಜೆ. ಎನ್. ಯು ಪ್ರಕರಣ: ದ್ರೋಹ ರಾಷ್ಟ್ರಕ್ಕೆ ಮಾತ್ರವಲ್ಲ, ಸಮಾಜಕ್ಕೂ ಕೂಡ!


ಜೆ.ಎನ್.ಯು ಸೇರಿದಂತೆ ಇತರ ವಿಶ್ವವಿದ್ಯಾಲಯಗಳ ಪ್ರಕರಣಗಳನ್ನು ತಿಳಿಯದೇ ಆದ ತಪ್ಪು ಅಥವಾ ಕ್ಷುಲ್ಲಕ ವಿಚಾರಗಳೆಂದು ಹೀಗಳೆದರೆ ತಪ್ಪಾದೀತು. ಈ ರೀತಿಯ ದಿಕ್ಕು ತಪ್ಪಿದ ಪ್ರತಿಭಟನೆಗಳು ನೈಜ ಶೋಷಿತ ಜನಾಂಗಗಳ ಹೋರಾಟಗಳಿಗೂ ಕೆಟ್ಟ ಹೆಸರು ತಂದು, ಕ್ರಾಂತಿಯ ಘನತೆಯನ್ನೇ ಮುಕ್ಕಾಗಿಸುತ್ತಿವೆ.
-  ಕೀರ್ತಿರಾಜ್


“ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.” ಕುವೆಂಪುರವರ ಈ ವಿಶ್ವಮಾನವ ಸಂದೇಶ ಪ್ರಸ್ತುತ ಭಾರತವಷ್ಟೇ ಅಲ್ಲದೆ, ವಿಶ್ವದ ಎಲ್ಲಾ ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಸಾಂಸ್ಕ್ರೃತಿಕ ವಲಯಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಸಂಸ್ಠೆ ಅಥವಾ ವ್ಯಕ್ತಿಗಳಿಗೆ ಸರಿಯಾಗಿ ಅನ್ವಯಿಸುತ್ತದೆ. ಶೈಕ್ಷಣಿಕ ಕ್ಷೇತ್ರ ಕೂಡ ಇದಕ್ಕೆ ಹೊರತೇನಲ್ಲ. ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆ.ಎನ್.ಯು)ದಲ್ಲಿ ನಡೆದ ವಿವಾದವೂ ಮತ್ತು ಅದರಾಚೆಗೆ ನಡೆದ ಚರ್ಚೆಗಳೂ ವಿಶ್ವಮಾನವನನ್ನು ಅಲ್ಪನಾಗಿಸುವ ಪ್ರಯತ್ನಕ್ಕೊಂದು ಸ್ಪಷ್ಟ ನಿದರ್ಶನವಷ್ಟೇ. ಇತ್ತೀಚೆಗಿನ ವಾದ ವಿವಾದಗಳು ನೈಜ ವಸ್ತುವಿಷಯವನ್ನು ಕಡೆಗಣಿಸಿ, ಸಮಸ್ಯೆಯ ಪರಿಹಾರಕ್ಕಿಂತ ಹೆಚ್ಚಾಗಿ ತುಪ್ಪ ಸುರಿಯುವ ಕಡೆಗೆ ಗಮನ ಹರಿಸುತ್ತಿರುವುದು ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗಳೆರಡಕ್ಕೂ ಕಂಟಕಪ್ರಾಯ ಎಂಬುದನ್ನು ದೇಶದ ಸ್ವಯಂ ಘೋಷಿತ ಸರ್ವಜ್ಞರು ಮರೆತಂತಿದೆ.

ಜೆ.ಎನ್.ಯು ಅಂಗಳದಲ್ಲಿ ದೇಶ ವಿರೋಧಿ ಘೋಷಣೆಗಳಿಂದ ಪ್ರೇರೆಪಿಸಲ್ಪಟ್ಟ ಈ ಸಮಸ್ಯೆ ಬಲಪಂಥೀಯ ಮತ್ತು ಎಡಪಂಥೀಯರ ನಡುವಿನ ಸಂಘರ್ಷವಾಗಿ ಬದಲಾಗಿದೆ. ಭಾರತ ವಿರೋಧಿ ಘೋಷಣೆ ಮಾಡಿದವರಿಗೆ ಭಾರತ ಮಾಡಿದ ಅನ್ಯಾಯವಾದರೂ ಏನು? ನೆಲ ಜಲಗಳನ್ನು ಕರುಣಿಸಿದ್ದಲ್ಲದೇ, ಹಸಿವಿಲ್ಲದಿದ್ದರೂ ತಿನ್ನಿಸುವ ತಾಯಿಯಂತೆ, ಅವಶ್ಯಕತೆಗೂ ಮೀರಿ ಸಾಂವಿಧಾನಿಕವಾಗಿ ಎಲ್ಲಾ ಹಕ್ಕುಗಳನ್ನೂ, ಜೆ.ಎನ್.ಯು ನಂಥ ವಿಶ್ವವಿದ್ಯಾಲಯಗಳನ್ನಷ್ಟೇ ಅಲ್ಲದೇ ಪ್ರತಿಭಟನೆಯ ಅವಕಾಶವನ್ನು ನೀಡಿದ್ದೂ ಇದೇ ಭಾರತ! ಹೀಗಿದ್ದೂ ಭಾರತ ವಿರೋಧಿ ಘೋಷಣೆಯ ಅವಶ್ಯಕತೆಯಾದರೂ ಏನಿತ್ತು? ಇನ್ನೊಂದೆಡೆ ದೇಶ ವಿದ್ರೋಹಿ ಘೋಷಣೆಗಳು ಸುಳ್ಳು ಆರೋಪವಷ್ಟೇ ಎಂಬ ವಾದವೂ ಕೇಳಿಬರುತ್ತಿದೆ. ಕೋರ್ಟ್ ಆವರಣದಲ್ಲಿ ಜೆ.ಎನ್.ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಇದೇ ಸಂದರ್ಭದಲ್ಲಿ ಸರಕಾರ ಈ ಸಮಸ್ಯೆಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬ ಆರೋಪದ ಮೇಲೆ ಕೆಲ ಎಬಿವಿಪಿ ವಿದ್ಯಾರ್ಥಿ ನಾಯಕರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿರುವುದು ಹೊಸ ಬೆಳವಣಿಗೆಗಳಿಗೆ ಅನುವು ಮಾಡಿಕೊಟ್ಟಂತಾಗಿದೆ. ಅದೇನೇ ಇರಲಿ, ದೇಶ ವಿರೋಧಿ ಘೋಷಣೆಗಳು ಮತ್ತು ಭಾವನೆಗಳು ಹೊರಗಿನ ಶತ್ರುಗಳಿಗಿಂತಲೂ ಅಪಾಯಕಾರಿ ಮತ್ತು ಇಂಥ ದೇಶ ವಿದ್ರೋಹಿ ಕೃತ್ಯಗಳು ಅಕ್ಷಮ್ಯ ಮತ್ತು ಖಂಡಿಸಲೇಬೇಕಾದ ವಿಷಯ.

ಚರ್ಚೆಯ ಭರಾಟೆಯಲ್ಲಿ ಕೆಲವರು ವಿಶ್ವವಿದ್ಯಾಲಯಗಳನ್ನು ನಿಂದಿಸಿದರೆ, ಇನ್ನೂ ಕೆಲವರು ಹಿಂದುತ್ವ, ಕೇಸರಿಕರಣವೆಂದು ವಾದ ಮಂಡಿಸಿದ್ದೂ ಆಗಿ ಹೋಗಿದೆ. ಸರಿ-ತಪ್ಪುಗಳ  ಮಧ್ಯೆ ಇಂಥ ವಿವಾದಗಳಿಗೆ ವಿಶ್ವವಿದ್ಯಾಲಯಗಳೇ ಕೇಂದ್ರ ಬಿಂದುಗಳಾಗುತ್ತಿರುವುದೇಕೆ ಎಂಬ ಪ್ರಶ್ನೆ ಯಾರನ್ನೂ ಕಾಡಲೇ ಇಲ್ಲ. ಸಾಮಾನ್ಯ ಅನಕ್ಷರಸ್ಥ ಜನತೆ ಇಂಥ ವಿವಾದಗಳ ಬಲಿಪಶುವಾದ ಉದಾಹರಣೆಗಳಿವೆಯೇ ಹೊರತು, ವಿವಾದ ಸೃಷ್ಟಿಸಿದ ನಿದರ್ಶನಗಳಿಲ್ಲ. ಹಾಗಿದ್ದಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಕಾರ್ಲ್ ಮಾರ್ಕ್ಸ್ ನಿಂದ ಅಮರ್ತ್ಯ ಸೆನ್, ಅಂಬೆಡ್ಕರ್ ರಿಂದ ವಿವೇಕಾನಂದರವರೆಗೆ, ಮಹಾತ್ಮ ಗಾಂಧಿಯಿಂದ ನೇತಾಜಿಯವರೆಗೂ ಎಲ್ಲರನ್ನೂ ಓದಿಕೊಂಡವರಿಗೆ ಸಮಾಜದ ಸೂಕ್ಷ್ಮಗಳೇಕೆ ತಿಳಿಯುತ್ತಿಲ್ಲ? ಜೆ.ಎನ್.ಯು ಪ್ರಕರಣ ಇದೇ ಮೊದಲ ಬಾರಿಯೇನಲ್ಲ, ಕೊನೆಯದೂ ಅಲ್ಲ. ಈ ರೀತಿಯ ವಿವಾದಗಳಿಂದ ಈ ವರೆಗೆ ಏನಾದರೂ ಸಾಧಿಸಿದ್ದರೆ, ಅದು ಸಾಮಾಜಿಕ ಹಿನ್ನಡೆ ಮತ್ತು ಕಂದಕಗಳಷ್ಟೇ ಅಲ್ಲದೇ ಬೇರೇನೂ ಅಲ್ಲ. ಇತಿಹಾಸದಿಂದ ಪಾಠ ಕಲಿಯದವನು ಭವ್ಯ ಭವಿಷ್ಯ ನಿರ್ಮಿಸಲಾರ ಎಂಬ ಮಾತಿದೆ. ತಪ್ಪುಗಳನ್ನು ಮರುಕಳಿಸುವ ಧಾವಂತದಲ್ಲಿರುವ ನಾವು ಇತಿಹಾಸವನ್ನೂ ಹಿಂದಿರುಗಿ ನೋಡವಷ್ಟು ಬಿಡುವು ನಮಗಿಲ್ಲ. ಹೌದು, ನಮ್ಮೆಲ್ಲ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳು ಎಡಪಂಥೀಯ ಮಾರ್ಕ್ಸ್ ವಾದಿ ಪ್ರಭಾವಳಿಯಲ್ಲಿದ್ದಾರೆ ಎಂದೇ ಊಹಿಸಿಕೊಂಡರೂ ಈ ರೀತಿಯ ವಿಚಾರಹೀನ ವಿವಾದಗಳನ್ನು ಸಮರ್ಥಿಸಿಕೊಳ್ಳುವಂತಿಲ್ಲ.

ಈ ಎಲ್ಲಾ ಪ್ರಹಸನಗಳಿಗೆ ಕಾರಣರಾದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಸಂಖ್ಯೆ ಶೇಕಡಾ ಒಂದರಷ್ಟೂ ಇಲ್ಲ ಎನ್ನುವುದು ಬೆಳಕಿನಷ್ಟೇ ಸತ್ಯ. ಹಾಗಿದ್ದಲ್ಲಿ ಈ ಒಂದು ಸಣ್ಣ ಗುಂಪು, ಇಡೀ ವಿದ್ಯಾರ್ಥಿ ಸಮುದಾಯ ಹಾಗೂ ವಿಶ್ವವಿದ್ಯಾಲಯದ ಅಘೋಷಿತ ಪ್ರತಿನಿಧಿಗಳಾಗಿದ್ದೂ ಅನುಮನಕ್ಕೆಡೆ ಮಾಡಿಕೊಡುವಂತಿದೆ. ಈ ರೀತಿಯ ದಿಕ್ಕು ತಪ್ಪಿದ ಪ್ರತಿಭಟನೆಗಳು ನೈಜ ಶೋಷಿತ ಜನಾಂಗಗಳ ಹೋರಾಟಗಳಿಗೂ ಕೆಟ್ಟ ಹೆಸರು ತಂದು, ಕ್ರಾಂತಿಯ ಘನತೆಯನ್ನೇ ಮುಕ್ಕಾಗಿಸುತ್ತಿವೆ. ಹೀಗಾಗಿ ಗುರುತಿಸಿಕೊಳ್ಳುವಿಕೆಯ ನೆಪದಲ್ಲಿ ನಡೆಸುವ ಪೊಳ್ಳು ಹೋರಾಟಗಳು ಸಮಾಜಕ್ಕೂ ದ್ರೋಹ ಬಗೆದಂತೆಯೇ ಸರಿ. ತಮಗಾಗುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತುವ ಹಾಗೂ ಪ್ರತಿಭಟಿಸುವ ಹಕ್ಕು ವಿದ್ಯಾರ್ಥಿಗಳಿಗೆ ಇದ್ದೇ ಇದೆ. ಭಾರತದ ಪ್ರಜಾಪ್ರಭುತ್ವ ಎಲ್ಲಾ ವರ್ಗ, ಜನಾಂಗ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಭಟನೆಯ ಅವಕಾಶ ಒದಗಿಸಿಕೊಟ್ಟಿದೆ. ಆದರೆ ಇದೇ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ಮಾಡುವ ರಾಷ್ಟ್ರ ಹಾಗೂ ಸಮಾಜ ವಿರೋಧಿ ಕೃತ್ಯಗಳು, ತಾನು ಕುಳಿತಿರುವ ರೆಂಬೆಯನ್ನೇ ಕಡಿಯುತ್ತಿರುವ ಮೂರ್ಖನನ್ನು ಪ್ರತಿನಿಧಿಸುವಂತಿರುತ್ತದೆ!






  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Kannda Prabha newspaper on 4 March 2016)


ಬುಧವಾರ, ಮಾರ್ಚ್ 23, 2016

ಭಗತ್ ಸಿಂಗ್ ಒಳಗೊಬ್ಬ ನವ ಭಾರತದ ಚಿಂತಕ

ಭಗತ್ ಸಿಂಗ್ ಹೋರಾಟ ಕೇವಲ ಬ್ರಿಟಿಷ್ ರಾಜ್ ಗೆ ಸೀಮಿತವಾಗಿರಲಿಲ್ಲ. ಭಾರತವನ್ನು ಕಾಡುತ್ತಿರುವ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಮೊಳಗಿದ ರಣಕಹಳೆ ಇಂಕ್ವಿಲಾಬ್ ಜಿಂದಾಬಾದ್!
                                                                                                   

 -   ಕೀರ್ತಿರಾಜ್


23 ಮಾರ್ಚ್ 1931ರಂದು ಭಗತ್ ಸಿಂಗ್ ತನ್ನ ಸಹವರ್ತಿಗಳಾದ ಸುಖದೇವ್ ಮತ್ತು ರಾಜಗುರು ಪ್ರಾಣತ್ಯಾಗ ಮಾಡಿದ ದಿನ. ಪ್ರತಿ ವರ್ಷ ಮಾರ್ಚ್ 23ರನ್ನು ಹುತಾತ್ಮರ ದಿನವನ್ನಾಗಿಸಿ ಮೂರು ಕ್ರಾಂತಿ ರತ್ನಗಳ ಬಲಿದಾನವನ್ನು ಗೌರವಿಸುವ ಪ್ರಯತ್ನವೂ ನಡೆಯುತ್ತದೆ. ಹುತಾತ್ಮರ ದಿನವನ್ನು ಮರೆತಿರುವಾಗ, ಅವರ ಆದರ್ಶಗಳೂ ಹಂತ ಹಂತವಾಗಿ ಮರೆಯಾಗುತ್ತಿರುವಾಗ, ಕ್ರಾಂತಿಯ ಕೆಚ್ಚು ತಣ್ಣಗಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಭಗತ್ ಸಿಂಗ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವುದು ಕೇವಲ ಕ್ರಾಂತಿಕಾರಿ ಭಗತ್ ಅಷ್ಟೇ. ಆದರೆ ಭಗತ್ ಕೇವಲ ಬಿಸಿ ರಕ್ತದ ಕ್ರಾಂತಿಕಾರಿಯಷ್ಟೇ ಅಲ್ಲ, ಚಿಂತನೆಗಳ ಸಾಗರವನ್ನೇ ತುಂಬಿಕೊಂಡಿದ್ದ ಒಬ್ಬ ಚಿಂತಕ. ಸಮಾಜವಾದ, ಧರ್ಮ, ಜಾತಿ, ಅಸ್ಪ್ರಶ್ಯತೆ, ಮತ್ತಿತರ ಸಾಮಾಜಿಕ ರಾಜಕೀಯ ವಿಷಯಗಳ ಬಗೆಗೆ ಭಗತ್ ಸಿಂಗ್ ತನ್ನ ಲೇಖನಗಳಲ್ಲಿ ಮತ್ತು ಪತ್ರಗಳಲ್ಲಿಅಭಿವ್ಯಕ್ತ ಪಡಿಸಿದ ರೀತಿ ಅದ್ಭುತ! ಭಗತ್ ಸಿಂಗ್ ಒಬ್ಬ ಕ್ರಾಂತಿಕಾರಿಯಾಗಿ ಎಲ್ಲರಿಗೂ ಚಿರಪರಿಚಿತ. ಆದರೆ ಭಗತ್ ಸಿಂಗ್ ಒಳಗಿದ್ದ ಇನ್ನಿತರ ಪ್ರತಿಭೆ, ಸಾಧನೆಗಳು ಕ್ರಾಂತಿಯ ಪ್ರಖರತೆಯಲ್ಲಿ ಮಬ್ಬಾಗಿ ಹೋಗಿವೆ. ಪ್ರಸ್ತುತ ಭಾರತಕ್ಕೆ ಭಗತ್ ಸಿಂಗ್ ಅವಶ್ಯಕತೆ ಬಹಳಷ್ಟು ಇದ್ದಾಗಲೂ, ಅವರ ಆದರ್ಶಗಳನ್ನು ಇತಿಹಾಸದಲ್ಲೇ ಹೂತಿಡುವ ಸರ್ವ ಪ್ರಯತ್ನಗಳು ನಡೆದಿವೆ.

ಪೊಳ್ಳು ಸಮಾಜವಾದಿಗಳು, ಸ್ವಯಂಘೋಷಿತ ಬುದ್ಧಿಜೀವಿಗಳು ಕಪಟ ಕ್ರಾಂತಿಯ ಸಂದೇಶದೊಂದಿಗೆ, ಸಮಾಜ ಮತ್ತು ರಾಷ್ಟ್ರಗಳೆರಡನ್ನೂ ಅಧಃಪತನದತ್ತ ಸಾಗಿಸುತ್ತಿರುವಾಗ ಭಗತ್ ಸಿಂಗ್ ಚಿಂತನೆಗಳ ಅವಶ್ಯಕತೆ ಹಿಂದೆಂದಿಗಿಂತಲೂ ಮಹತ್ವದ್ದೆನಿಸಿದೆ. ಭಗತ್ ಬರಹಗಳನ್ನು ಓದುತ್ತಾ ಓದ ಹಾಗೆ ಕ್ರಾಂತಿಕಾರಿಯ ಒಳಗೊಬ್ಬ ನವ ಭಾರತದ ರಾಜಕೀಯ ಚಿಂತಕನಾಗಿ, ಕ್ರಾಂತಿಗೆ ಗುರುವಾಗಿ, ವ್ಯವಸ್ಥೆಯ ಬಗೆಗೆ ಕಳಕಳಿ ತೋರುವ ಪತ್ರಕರ್ತನಾಗಿ ಭಗತ್ ತನ್ನನ್ನು ತಾನು ತೆರೆದುಕೊಳ್ಳುತ್ತಾ ಹೋಗುತ್ತಾರೆ.ಭಗತ್ ಸಿಂಗ್ ಕೇವಲ ಬ್ರಿಟಿಷರ ವಿರುದ್ಧ ಮಾತ್ರ ಸಮರ ಸಾರಲಿಲ್ಲ, ಅವರ ಗುರಿ ಮಾನವತೆಯನ್ನು ಸಂಕೋಲೆಗಳಿಂದ ಬಿಡಿಸುವುದಾಗಿತ್ತು. ಉದಾಹರಣೆಗೆ 1928 ಜೂನ್ ನಲ್ಲಿ ಅಮೃತಸರದಿಂದ ಪ್ರಕಟಗೊಳ್ಳುತ್ತಿದ್ದಕೀರ್ತಿ ಎಂಬ ಪತ್ರಿಕೆಯಲ್ಲಿ ಭಗತ್ ಸಿಂಗ್ ಬರೆದ ಎರಡು ಲೇಖನಗಳು ಭಗತ್ ಸಿಂಗ್ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತವೆ. ಒಂದು ಲೇಖನ 'ಅಚೂತ್ ಕಾ ಸವಾಲ್ ಅಸ್ಪೃಶ್ಯತೆಗೆ ಸಂಬಂಧಿಸಿದ್ದಾದರೆ, ಇನ್ನೊಂದು ಲೇಖನ 'ಸಂಪ್ರದಾಯಿಕ್ ದಂಗೆ ಔರ್ ಉನ್ಕಾ ಇಲಾಜ್'ನಲ್ಲಿ ಕೋಮು ಗಲಭೆಗಳು ಮತ್ತು ಅವುಗಳ ಪರಿಹಾರಗಳ ಸ್ಪಷ್ಟವಾಗಿ ವಿವರಿಸಲಾಗಿದೆ.


ಭಗತ್ ಸಿಂಗ್ ಅವರ ಬರಹಗಳ ಬಗೆಗಿನ ಇತ್ತೀಚಿನ ಅಧ್ಯಯನಗಳು, ಸಂಶೋಧನೆಗಳು ಭಗತ್ ಸಿಂಗ್ ಪ್ರೌಢ ರಾಜಕೀಯ ಚಿಂತಕ ಎಂದು ಸಾಬೀತು ಪಡಿಸಿವೆ. ಭಗತ್ ಸಿಂಗ್ ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಪ್ರೊಫೆಸರ್ ಚಮನ್ ಲಾಲ್ ಭಗತ್ ಸಿಂಗ್ ರಾಜಕೀಯ ಚಿಂತನೆಗಳ ಮಹತ್ವದ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಭಾರತದಲ್ಲಿ ಸಮಾಜವಾದಿ ಕ್ರಾಂತಿಯ ಸಾಧ್ಯತೆಗಳ ಬಗೆಗೂ ಸ್ಪಷ್ಟವಾದ ನಿಲುವು ಭಗತ್ ಸಿಂಗ್ ಬರಹಗಳಲ್ಲಿ ಅಭಿವ್ಯಕ್ತಗೊಂಡಿದೆ. ಸಮಾಜವಾದದ ಸೋಗು ಹಾಕಿಕೊಂಡಿರುವ ಅವಕಾಶವಾದಿಗಳ ಮುಖವಾಡ ಕಳಚಲು ಭಗತ್ ಸಿಂಗ್ ಅವಶ್ಯಕತೆ ಪ್ರಸ್ತುತ ಭಾರತದಲ್ಲಿ ಬಹಳಷ್ಟಿದೆ. ಭಗತ್ ಸಿಂಗ್ ನಂಥ ಒಬ್ಬ ಅಪ್ರತಿಮ ವೀರನ ಒಳಗೊಬ್ಬ ಅದ್ಭುತ ರಾಜಕೀಯ ಚಿಂತಕನನ್ನು ಇಂದಿನ ಸಮಾಜ ಮರೆತು ಬಿಟ್ಟಿದೆ. ಭಗತ್ ಸಿಂಗ್ ಚಿಂತನೆಗಳು ಭಾರತವಷ್ಟೇ ಅಲ್ಲದೇ ಇಂದಿನ ದಕ್ಷಿಣ ಏಷ್ಯಾದ ಅನೇಕ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಉತ್ತರವಾಗಬಲ್ಲುದು. ಭಗತ್ ಸಿಂಗ್ ಬರೆದ ಅನೇಕ ಪತ್ರಗಳು ಮತ್ತು ಲೇಖನಗಳಲ್ಲಿ ಒಂದಷ್ಟು ಕಳೆದು ಹೋಗಿದ್ದರೆ, ಇನ್ನೂ ಕೆಲವನ್ನು ಸಾಮಾನ್ಯ ಜನರ ಕಣ್ಣಿಗೆ ಬೀಳದಂತೆ ತಡೆಯಲಾಗಿತ್ತು! ಭಗತ್ ಸಿಂಗ್ ಕೇವಲ ಹುಚ್ಚು ಆವೇಶದಲ್ಲಿ ಕ್ರಾಂತಿಯ ಬೆನ್ನೇರಿ ಪ್ರಾಣಾರ್ಪಣೆ ಮಾಡಿದ ವ್ಯಕ್ತಿಯಲ್ಲ. ಭಗತ್ ಕ್ರಾಂತಿಗೆ ಒಂದು ಉನ್ನತ ಧ್ಯೇಯ ಇತ್ತು. ಕ್ರಾಂತಿಯ ಬಗ್ಗೆ ಭಗತ್ ಸಿಂಗ್ ನಿಲುವನ್ನು ಅರ್ಥ ಮಾಡಿಕೊಳ್ಳಬೇಕಾದಲ್ಲಿ ಅವರು ಬರೆದ ಪತ್ರಗಳನ್ನು ಓದಲೇಬೇಕು. ಭಗತ್ ಸಿಂಗ್ ಬರೆದ ಕೆಲವೇ ಪತ್ರ ಹಾಗೂ ಲೇಖನಗಳು ಲಭ್ಯವಿದೆ. ಅದರಲ್ಲೂ ಆಯ್ದ ನಾಲ್ಕು ಪತ್ರಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ.

1931 ಜನವರಿ ಮತ್ತು ಫೆಬ್ರವರಿಯಲ್ಲಿ ಭಗತ್ ಬರೆದ ಎರಡು ಪತ್ರಗಳು ಹರಿಕೃಷ್ಣನ್ ಕೇಸ್ ಗೆ ಸಂಬಂಧಿಸಿದ್ದು. ಹರಿಕೃಷ್ಣನ್ ಎಂಬ ಯುವ ಕ್ರಾಂತಿಕಾರಿ ಡಿಸೆಂಬರ್ 23 1930ರಂದು ಪಂಜಾಬ್ ಗವರ್ನರ್ ಕೊಲೆ ಯತ್ನದ ಆರೋಪದ ವಿಚಾರಣೆ ಎದುರಿಸುತ್ತಿದ್ದ. ಹರಿಕೃಷ್ಣನ್ ತಂದೆ ಬಹಳ ಪ್ರಭಾವಶಾಲಿ ಶ್ರೀಮಂತ ವ್ಯಕ್ತಿಯಾಗಿದ್ದು ತನ್ನ ಮಗನನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಿದ್ದರು. ಹರಿಕೃಷ್ಣನ್ ಪರ ವಕೀಲರು ಮುಂದಿಟ್ಟ ವಾದದ ತಿರುಳು ಹೀಗಿತ್ತು: 'ಆರೋಪಿಗೆ ಗವರ್ನರ್ ಕೊಲೆ ಮಾಡುವ ಉದ್ದೇಶವಿರಲಿಲ್ಲ, ಕೇವಲ ಒಂದು ಎಚ್ಚರಿಕೆಯಾಗಿ ಹಿಂಸೆಯನ್ನು ಉಪಯೋಗಿಸಲಾಗಿದೆ.' ಮೂಲಕ ಹರಿಕೃಷ್ಣನ್ ಪರ ವಕೀಲರು ತನ್ನ ಕಕ್ಷಿದಾರರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ವಕೀಲರ ವಾದದ ಬಗ್ಗೆ ಭಗತ್ ಸಿಂಗ್ ತನ್ನ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಭಗತ್ ಪ್ರಕಾರ ಕ್ರಾಂತಿಕಾರಿಗಳು ರಾಜಕೀಯ ಆರೋಪಿಗಳು ಮತ್ತು ಅವರು ನೀಡುವ ಪ್ರತಿಯೊಂದು ಹೇಳಿಕೆಯೂ ಅವರ ತತ್ವಾದರ್ಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹರಿಕೃಷ್ಣನ್ ಪರ ವಕೀಲರ ವಾದ ಕ್ರಾಂತಿಕಾರಿಗಳ ಸಂಪೂರ್ಣ ಚಟುವಟಿಕೆಗಳ ರಾಜಕೀಯ ಗುರಿಯನ್ನೇ ವಿಫಲಗೊಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಭಗತ್ ಪ್ರಕಾರ ಒಬ್ಬ ಕ್ರಾಂತಿಕಾರಿ ನ್ಯಾಯಾಲಯದ ಮುಂದೆ ನೀಡುವ ಹೇಳಿಕೆ ಹೀಗಿರಬೇಕು," ಕ್ರಾಂತಿಯ ಗುರಿ ಒಬ್ಬ ವ್ಯಕ್ತಿಯ ಹತ್ಯೆ ಅಥವಾ ಹಿಂಸೆಯಲ್ಲ, ಆದರೆ ನಿರಂತರ ಶೋಷಣೆಗೊಳಪಡಿಸುತ್ತಿರುವ ವ್ಯವಸ್ಥೆಯಿಂದ ಹೊರಬರಲು ನಮಗೆ ಬೇರೆ ದಾರಿಯಿಲ್ಲ. ಶೋಷಿತ ಜನರನ್ನು ಬಿಡುಗಡೆಗೊಳಿಸುವ ಹಾದಿಯಲ್ಲಿ ವೈಯಕ್ತಿಕ ಕಷ್ಟ ನಷ್ಟಗಳು ಮತ್ತು ಬಲಿದಾನಗಳು ಅನಿವಾರ್ಯ" ರೀತಿ ಹರಿಕೃಷ್ಣನ್ ಪ್ರಕರಣದಲ್ಲಿ ವೈಯಕ್ತಿಕ ಲಾಭಗಳಿಗಿಂತ ಗುರಿ ಶ್ರೇಷ್ಠ ಮತ್ತು ನ್ಯಾಯಾಧಿಕರಣದ ಮುಂದೆಯೂ, ಕೊನೆಗೆ ತಮ್ಮ ಸಾವಿನಲ್ಲಿಯೂ ಕ್ರಾಂತಿಯ ಉದ್ದೇಶ ಗೆಲ್ಲಬೇಕು ಎಂಬುವುದೇ ಭಗತ್ ಅಭಿಪ್ರಾಯವಾಗಿತ್ತು.

ಕ್ರಾಂತಿಯ ಉತ್ಕಟತೆಗೆ ಇನ್ನೊಂದು ನಿದರ್ಶನ ಭಗತ್ ತನ್ನ ತಂದೆಗೆ ಬರೆದ ಪತ್ರ. ಭಗತ್ ಸಿಂಗ್ ಪ್ರಕರಣ ಅಂತಿಮ ಹಂತದಲ್ಲಿದ್ದಾಗ, ಭಗತ್ ತಂದೆ ಸರ್ದಾರ್ ಕಿಶನ ಸಿಂಗ್, ಮಗನನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ನ್ಯಾಯಾಧಿಕರಣಕ್ಕೊಂದು ಮನವಿ ಸಲ್ಲಿಸುತ್ತಾರೆ. ಮನವಿಯ ಪ್ರಕಾರ ತಮ್ಮ ಮಗ ಮುಗ್ಧ, ಸೌಂಡರ್ಸ್ ಹತ್ಯೆಯಲ್ಲಿ ಅವನ ಪಾತ್ರವಿಲ್ಲ, ಹಾಗಾಗಿ ಅವನು ನಿರಪರಾಧಿ ಎಂದು ಸಾಬೀತುಪಡಿಸಲು ಅವಕಾಶ ನೀಡಬೇಕಾಗಿ ಕೇಳಿಕೊಂಡಿದ್ದರು. ವಿಷಯ ಜೈಲಿನಲ್ಲಿದ್ದ ಭಗತ್ ಗೆ ತಿಳಿದಾಗ ತನ್ನ ತಂದೆಯ ನಡೆಯನ್ನು ತೀವ್ರವಾಗಿ ಪ್ರತಿಭಟಿಸುತ್ತಾರೆ. ಮತ್ತು ತಂದೆ ಕಿಶನ್ ಸಿಂಗ್ ಗೆ ಆಕ್ರೋಶಭರಿತ ಪತ್ರವೊಂದನ್ನು ಬರೆಯುತ್ತಾರೆ. ಭಗತ್ ಗೆ ಸಾವಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಯಾವುದೇ ಉದ್ದೇಶವಿರಲಿಲ್ಲ. ತನ್ನ ಸಾವು ಕೂಡ ಕ್ರಾಂತಿಯ ಹಾದಿಯಲ್ಲಿ ರಾಜಕೀಯ ಪ್ರೇರಣೆಯಾಗಬೇಕು ಎಂದು ಭಗತ್ ಬಯಸಿದ್ದರು. ತಂದೆ ಕಿಶನ್ ಸಿಂಗ್ ನ್ಯಾಯಾಧಿಕರಣಕ್ಕೆ ಸಲ್ಲಿಸಿದ ಮನವಿಯನ್ನು ತನ್ನ ತತ್ವಾದರ್ಶಗಳಿಗಾದ ದ್ರೋಹ ಎಂದು ಭಗತ್ ಪರಿಗಣಿಸುತ್ತಾರೆ. ತಂದೆ ಕಿಶನ್ ಸಿಂಗ್ ಭಾರತದ ಸ್ವಾತಂತ್ರ್ಯಕ್ಕೆ ಮಾಡಿದ ತ್ಯಾಗಕ್ಕೆ ಗೌರವ ಸೂಚಿಸುವ ಭಗತ್, ತಂದೆಯಾಗಿ ಮಗನ ಮೇಲಿನ ಕಾಳಜಿ ಕಿಶನ್ ಸಿಂಗ್ ರನ್ನು ಒಂದು ಬಗೆಯ ಕೆಟ್ಟ ಬಲಹೀನತೆಗೆ ತಳ್ಳಿತು ಎಂದು ಅಭಿಪ್ರಾಯ ಪಡುತ್ತಾರೆ. ಕೊನೆಗೆ ತಂದೆಯ ಕೃತ್ಯ ಬೆನ್ನಿಗೆ ಚೂರಿ ಹಾಕುವುದಕ್ಕಿಂತಲೂ ಹೀನ ಬಲಹೀನತೆಗೆ ಹೋಲಿಸುವ ಭಗತ್. ಪುತ್ರ ವಾತ್ಸಲ್ಯ, ವೈಯಕ್ತಿಕ ಲಾಭಗಳ ನೆಪದಲ್ಲಿ, ನೇಣು ಕುಣಿಕೆ ತಪ್ಪಿಸಿಕೊಳ್ಳುವ ಅವಕಾಶವಿದ್ದಾಗಲೂ, ತನ್ನ ಕ್ರಾಂತಿಯ ಆದರ್ಶಗಳಿಗೆ ಬೆಲೆ ಕೊಡುವ ಮೇರು ವ್ಯಕ್ತಿತ್ವ ತೋರಿಸುತ್ತಾರೆ.

ಇವೆಲ್ಲದರ ಮಧ್ಯೆ ನನ್ನ ಗಮನ ಸೆಳೆದ ಪತ್ರ ಅದು ಸುಖದೇವ್ ಬರೆದ ಪತ್ರಕ್ಕೆ ಉತ್ತರವಾಗಿ ಭಗತ್ ಬರೆದ ಪ್ರತಿಕ್ರಿಯೆ ಪತ್ರ. ಜೈಲಿನಲ್ಲಿದ್ದ ಸುಖದೇವ್ ತೀರ್ಪಿಗಾಗಿ ಕಾಯುತ್ತಿದ್ದ ಸಮಯ. ಸುಖದೇವ್ ಗೆ ಜೀವಾವಧಿ ಶಿಕ್ಷೆಯಾಗುವ ಸಂಭವವಿತ್ತು. ಕಲ್ಪನೆಯೇ ಸುಖದೇವ್ ನನ್ನು ಕಂಗೆಡಿಸಿತ್ತು. ಮರಣದಂಡಣೆ ಅಥವಾ ಬಿಡುಗಡೆಯ ಹೊರತಾಗಿ ವರ್ಷಗಟ್ಟಲೆ ಜೈಲುವಾಸಕ್ಕೆ ಸುಖದೇವ್ ಮನಸ್ಸು ಒಪ್ಪಿಕೊಂಡಿರಲಿಲ್ಲ. ಇದೇ ವಿಷಯವಾಗಿ ಸುಖ್ ದೇವ್ ಭಗತ್ ಸಿಂಗ್ ಗೆ ಒಂದು ಪತ್ರ ಬರೆದು ಮರಣದಂಡಣೆಯಾದರೂ ಆದೀತು ಆದರೆ ಜೀವನ ಪರ್ಯಂತ ಜೈಲಿನಲ್ಲಿ ಕಳೆಯಬೇಕಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿಯಾದ ದಾರಿ ಎಂದು ಅಭಿಪ್ರಾಯ ಪಟ್ಟಿದ್ದ. ಇದಕ್ಕೆ ಉತ್ತರವಾಗಿ ಭಗತ್ ಬರೆದ ಪತ್ರ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಯಸುವ ಎಲ್ಲರೂ ಓದಲೇಬೇಕಾದ ಪತ್ರ. ಮಿತ್ರ ಸುಖ್ ದೇವನಿಗೆ ಉತ್ತರಿಸುತ್ತಾ ಭಗತ್ ಹೀಗೆ ಬರೆಯುತ್ತಾನೆ, ಪ್ರತಿಯೊಬ್ಬ ಕ್ರಾಂತಿಕಾರಿಯೂ ತನ್ನ ಕಾರ್ಯ ನ್ಯಾಯ ಸಮ್ಮತವಾಗಿದೆ ಎಂದು ತಿಳಿದ ಮೇಲೆ ಕಾರ್ಯೋನ್ಮುಖನಾಗುತ್ತಾನೆ. ಬಾಂಬ್ ಸ್ಫೋಟಿಸುವುದಷ್ಟೇ ಕ್ರಾಂತಿಯಲ್ಲ. ಅದರ ಬಳಿಕ ನಾವು ಅನುಭವಿಸುವ ಶಿಕ್ಷೆಯ  ನೋವಿನಲ್ಲೂ ಕ್ರಾಂತಿ ಅರಳುತ್ತದೆ ಎಂಬ ಉನ್ನತ ಆದರ್ಶ ಭಗತ್ ಪತ್ರದಲ್ಲಿ ಉಲ್ಲೇಖವಾಗಿದೆ.


ಕೇವಲ ಕ್ರಾಂತಿಯ ಬಗೆಗೆ ಅಲ್ಲದೇ ಮಾರ್ಕ್ಸ್ ವಾದ, ಅರಾಜಕತಾವಾದ, ನಾಸ್ತಿಕವಾದ ಇನ್ನಿತರ ವಿಷಯಗಳ ಬಗೆಗೆ ಭಗತ್ ಗಂಭೀರ ವಿಮರ್ಶೆಗಳನ್ನು ಕೊಟ್ಟಿದ್ದಾರೆ. ಇವೆಲ್ಲವನ್ನೂ ಗಮನಿಸಿದಾಗ, ಇಷ್ಟು ದಿನ ಭಗತ್ ಸಿಂಗ್ ರನ್ನು ಕೇವಲ ಒಬ್ಬ ಕ್ರಾಂತಿಕಾರಿಯಾಗಿ ಸೀಮಿತಗೊಳಿಸಿದ ಶಿಕ್ಷಣ ವ್ಯವಸ್ಥೆಯ ಸಂಕುಚಿತತೆಯ ಕುರಿತು ಪ್ರಶ್ನೆಗಳು ಮೂಡುತ್ತವೆ.







  
 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 23 March 2016)