ಗುರುವಾರ, ನವೆಂಬರ್ 24, 2016

ಸನ್ ತ್ಸು ಯುದ್ಧ ಕಲೆ ನೆನಪಿಸಿದ ಚೀನಾ ಸಮರ ತಂತ್ರ

"ನಿಮ್ಮ ತಂತ್ರಗಳು ಅಭೇಧ್ಯವಾದ ಕಗ್ಗತ್ತಲಿನಂತಿರಲಿ ಮತ್ತು ನಿಮ್ಮ ಕಾರ್ಯ ಸಿಡಿಲಿನಂತಿರಲಿ" ಎಂದವನು ಸಾರ್ವಕಾಲಿಕ ಮಿಲಿಟರಿ ತಂತ್ರಜ್ಞ ಮತ್ತು ಸಮರತಾಂತ್ರಿಕ ನಿಪುಣ ಸನ್ ತ್ಸು. ಸರಿ ಸುಮಾರು ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಚೀನಾದಲ್ಲಿ ಜೀವಿಸಿದ್ದ ಎನ್ನಲಾದ ಈ ಶ್ರೇಷ್ಠ ತತ್ವಜ್ಞಾನಿಯ ವಿಚಾರಗಳನ್ನು ಇವತ್ತಿಗೂ ಪ್ರಸ್ತುತ ಎನ್ನಲಾಗುತ್ತದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


"ನಿಮ್ಮ ತಂತ್ರಗಳು ಅಭೇಧ್ಯವಾದ ಕಗ್ಗತ್ತಲಿನಂತಿರಲಿ ಮತ್ತು ನಿಮ್ಮ ಕಾರ್ಯ ಸಿಡಿಲಿನಂತಿರಲಿ" ಎಂದವನು ಸಾರ್ವಕಾಲಿಕ ಮಿಲಿಟರಿ ತಂತ್ರಜ್ಞ ಮತ್ತು ಸಮರತಾಂತ್ರಿಕ ನಿಪುಣ ಸನ್ ತ್ಸು. ಸರಿ ಸುಮಾರು ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಚೀನಾದಲ್ಲಿ ಜೀವಿಸಿದ್ದ ಎನ್ನಲಾದ ಈ ಶ್ರೇಷ್ಠ ತತ್ವಜ್ಞಾನಿಯ ವಿಚಾರಗಳನ್ನು ಇವತ್ತಿಗೂ ಪ್ರಸ್ತುತ ಎನ್ನಲಾಗುತ್ತದೆ. ಯುದ್ಧ ತಂತ್ರಗಳಿಗೆ ಸಂಬಂಧಿಸಿದಂತೆ ಸನ್ ತ್ಸು ಬರೆದ ಅತ್ಯಂತ ಪ್ರಭಾವಶಾಲಿ ಪುಸ್ತಕವೇ 'ದ ಆರ್ಟ್ ಆಫ್ ವಾರ್'! ಪೂರ್ವ ಏಷ್ಯಾಕ್ಕೆ ಸೀಮಿತವಾಗಿದ್ದ ಈ ಪುಸ್ತಕದ ಪ್ರಭಾವ ಇಪ್ಪತ್ತನೇ ಶತಮಾನದಲ್ಲಿ ವಿಶ್ವದಾದ್ಯಂತ ಹರಡಿ ಶ್ರೇಷ್ಠ ಮಿಲಿಟರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಕ್ರೀಡಾಪಟುಗಳ ಯಶಸ್ಸಿನ ಹಿಂದೆ ಮಹತ್ತರ ಪಾತ್ರ ವಹಿಸಿತ್ತು. ಇದೀಗ ವಿಶ್ವದ ದೊಡ್ಡಣ್ಣನಾಗಲು ಹೊರಟಿರುವ ಚೀನಾ ತನ್ನ ಶತ್ರುಗಳನ್ನು ಬಗ್ಗು ಬಡಿಯಲು ತನ್ನದೇ ನೆಲದ ಈ ಮಿಲಿಟರಿ ತಂತ್ರಜ್ಞನ ತಂತ್ರಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದೆ.

ದೇಶದ ಅವಿಭಾಜ್ಯ ಅಂಗವೊಂದರ ಮೇಲೆ ವಿದೇಶಿ ದಾಳಿಯಾದಾಗ ಅದನ್ನು ಖಂಡಿಸಿ ಅದರ ವಿರುದ್ಧ ಸರಕಾರದ ಜೊತೆ ಕೈ ಜೋಡಿಸುವುದು ದೇಶದ ನಾಗರಿಕನೊಬ್ಬನ ನೈತಿಕ ಜವಾಬ್ದಾರಿ. 'ದ ಆರ್ಟ್ ಆಫ್ ವಾರ್' ಪುಸ್ತಕದ ಮೊದಲ ಅಧ್ಯಾಯದಲ್ಲಿ ಸನ್ ತ್ಸು ನೈತಿಕತೆಯ ಪ್ರಭಾವವನ್ನು ಈ ರೀತಿ ವಿವರಿಸಿದ್ದಾನೆ, " ನೈತಿಕ ಪ್ರಭಾವದಿಂದಾಗಿ ಜನರು ತಮ್ಮ ನಾಯಕರೊಂದಿಗೆ ಸಾಮರಸ್ಯದಿಂದಿರುತ್ತಾರೆ. ಮತ್ತು ಸಾವಿನ ಭಯವೂ ಇಲ್ಲದೆ  ತಮ್ಮ ಜೀವನ ಪರ್ಯಂತ ನಾಯಕರಿಗೆ ಬೆಂಬಲವಾಗಿ ನಿಲ್ಲುತ್ತಾರೆ." ಹೀಗಾಗಿ ಚೀನಿ ನಾಯಕರು ತಮ್ಮ ಪ್ರಜೆಗಳನ್ನು ನೈತಿಕ ಪ್ರಭಾವದಲ್ಲಿಟ್ಟುಕೊಳ್ಳುವ ಪ್ರಯತ್ನಗಳು ಜಾರಿಯಲ್ಲಿಟ್ಟಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿಯೇ ಚೀನಾ ವಿದ್ಯಾರ್ಥಿಗಳಿಗೆ ಚೀನಾದ ಭೂಪ್ರದೇಶದ ಬಗ್ಗೆ ತಪ್ಪು ಮಾಹಿತಿಯನ್ನು ತುಂಬಲಾಗುತ್ತದೆ. ಚೀನಾಗೆ ಇತರ ರಾಷ್ಟ್ರಗಳ ಜೊತೆಗಿರುವ ಗಡಿ ತಗಾದೆಗಳ ವಿಚಾರವನ್ನು ಅತೀ ಬುದ್ಧಿವಂತಿಕೆಯಿಂದ ಮುಚ್ಚಿಡಲಾಗುತ್ತಿದೆ. ಈ ರೀತಿ ಚೀನಾ ಹಕ್ಕು ಸಾಧಿಸಿದ ಭೂಪ್ರದೇಶಗಳೆಲ್ಲವೂ ಅಧಿಕೃತವಾಗಿ ಚೀನಾ ಭೂಭಾಗಗಳೇ ಎಂದು ಬಿಂಬಿಸುವ ಪ್ರಯತ್ನ ಚೀನಾದ ಶಾಲಾ ತರಗತಿಗಳಲ್ಲಿ ನಿರ್ವಿಘ್ನವಾಗಿ ಸಾಗುತ್ತಿದೆ. ಸಹಜವಾಗಿಯೇ ಚಿಕ್ಕಂದಿನಲ್ಲಿ ಕಲಿತ ಈ ತಪ್ಪು ಪಾಠಗಳು, ವಯಸ್ಕರಾದಾಗ ಇನ್ನೂ ಗಟ್ಟಿಯಾಗುತ್ತವೆ. 2014ರಲ್ಲಿ ಸಂಸ್ಥೆಯೊಂದು ನಡೆಸಿದ ಸರ್ವೆಯೊಂದರಲ್ಲಿ ತಿಳಿದು ಬಂದ ಅಚ್ಚರಿಯ ವಿಷಯವೇನೆಂದರೆ ಸರ್ವೇಗೆ ಒಳಗಾದ ಪ್ರತಿಯೊಬ್ಬ ಚೀನೀ ವ್ಯಕ್ತಿಯೂ ' ನೈನ್ ಡ್ಯಾಶ್ ರೇಖೆ'ಯ ಒಳಗಿನ ಎಲ್ಲಾ ಭೂಭಾಗಗಳು ಚೀನಾದ ಅಧಿಕೃತ ಭೂಪ್ರದೇಶ ಎಂದು ನಂಬಿದ್ದಾರೆ! ಹೀಗಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಬೇರೆ ಯಾವುದೇ ದೇಶ ಹಿಡಿತ ಬಲಪಡಿಸಿಕೊಳ್ಳಲು ಪ್ರಯತ್ನಿಸಿದರೆ, ಚೀನಾ ಜನತೆ ತಮ್ಮ ನಾಯಕರ ಯಾವುದೇ ವಿಧ್ವಂಸಕ ನಿರ್ಧಾರವನ್ನು ಕಣ್ಣು ಮುಚ್ಚಿಕೊಂಡು ಒಪ್ಪಿ ಬಿಡುತ್ತಾರೆ. ಇದು ಚೀನಾದ ಕಮ್ಯುನಿಸ್ಟ್ ನಾಯಕರು ಜನತೆಯ ಮೇಲೆ ಹೇರಿರುವ ನೈತಿಕ ಪ್ರಭಾವ!

2016 ಜುಲೈನಲ್ಲಿ ಹೇಗ್ ನ್ಯಾಯಾಧಿಕರಣ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಚೀನಾದ ಆಕ್ರಮಣಕಾರಿ ನಿಲುವಿಗೆ ಛೀಮಾರಿ ಹಾಕಿ, ಈ ಪ್ರದೇಶದಲ್ಲಿ ಚೀನಾ ಹಕ್ಕು ಸಾಧಿಸುವುದು ಕಾನೂನು ಬಾಹಿರ ಎಂಬ ತೀರ್ಪು ನೀಡಿತ್ತು. ಆದರೆ ಈ ತೀರ್ಪು ಅನುಷ್ಠಾನಗೊಳ್ಳುವ ಮುನ್ನವೇ ಸೆಪ್ಟೆಂಬರ್ ನಲ್ಲಿ ಚೀನಾ ಮತ್ತು ರಷ್ಯಾಗಳ ನೌಕಾಪಡೆಗಳು ಜಂಟಿ ಸಮರಾಭ್ಯಾಸ ನಡೆಸುವ ಮೂಲಕ ವಿಶ್ವಕ್ಕೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಈ ಎರಡು ದೇಶಗಳ ನಡುವಿನ ಶೀತಲ ಸಮರದ ಕಾಲದ ವೈರತ್ವ ಹಂತ ಹಂತವಾಗಿ ಮರೆಯಾಗಿ, ಇದೀಗ ರಷ್ಯಾ ಮತ್ತು ಚೀನಾಗಳು ಪರಸ್ಪರರ ಹಿತಾಸಕ್ತಿಗಳಿಗೆ ಹೆಗಲು ಕೊಡುವ ಕೆಲಸ ಮಾಡುತ್ತಿವೆ. ತನ್ನ ಪುಸ್ತಕದ ಹನ್ನೊಂದನೆ ಅಧ್ಯಾಯದಲ್ಲಿ ಸನ್ ತ್ಸು ಮೈತ್ರಿ ಕೂಟಗಳ ಬಗ್ಗೆ ಈ ರೀತಿ ಬರೆಯುತ್ತಾನೆ, "ನೆರೆಹೊರೆಯ ರಾಜ್ಯಗಳ ಯೋಜನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ನಾವು ಯಾವುದೇ ಮತ್ರಿಕೂಟ ರಚಿಸಬಾರದು" ಚರಿತ್ರೆಯನ್ನು ಗಮನಿಸಿದರೆ ರಷ್ಯಾ ಒಂದು ಸಾರಿ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆ ಗುರುತಿಸಿಕೊಂಡರೆ ಇನ್ನೊಂದು ಬಾರಿ ಪೂರ್ವದೆಡೆ ವಾಲುತ್ತದೆ. ರಷ್ಯಾದ ಭೂಭಾಗವೂ ಕೂಡ ಅತ್ತ ಪಶ್ಚಿಮವೂ ಅಲ್ಲದ, ಇತ್ತ ಪೂರ್ವಕ್ಕೂ ಸೇರದ ತ್ರಿಶಂಕು ಸ್ವರ್ಗ! ೧೯೯೦ರಲ್ಲಿ ಸೊವಿಯೆತ್ ಪತನದೊಂದಿಗೆ ರಷ್ಯಾ ಪಶ್ಚಿಮದ ರಾಷ್ಟ್ರಗಳ ಬಳಗ ಸೇರಿಕೊಂಡು ಬಿಟ್ಟಿತ್ತು. ಆದರೆ ವ್ಲಾದಿಮಿರ್ ಪುಟಿನ್ ಅಧಿಕಾರಕ್ಕೇರಿದ ಮೇಲೆ ರಷ್ಯಾದ ಪ್ರತಿ ಹೆಜ್ಜೆಯೂ ಪಾಶ್ಚಾತ್ಯ ರಾಷ್ಟ್ರಗಳ ತಲೆನೋವಿಗೆ ಕಾರಣವಾಗಿದೆ. ರಷ್ಯಾದ ಈ ಆಕ್ರಮಣಕಾರಿ ಮನೋಭಾವದ ಹಿಂದೆ ಅಮೆರಿಕಾ ನಿಯಂತ್ರಿತ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಬದಲಿಸುವ ಮಹತ್ವಾಕಾಂಕ್ಷೆಯಿದೆ. ಹೀಗಾಗಿ ಅಮೆರಿಕಾ ನಿರ್ಮಿಸಿ, ನಿಯಂತ್ರಿಸುತ್ತಿರುವ ಈ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಧ್ವಂಸ ಮಾಡಲು ಸಮಾನಮನಸ್ಕ ದೈತ್ಯ ರಾಷ್ಟ್ರವೊಂದರ ಹುಡುಕಾಟದಲ್ಲಿರುವ ರಷ್ಯಾಗೆ ಸರಿಯಾದ ಸಮಯದಲ್ಲೇ ಕಣ್ಣಿಗೆ ಬಿದ್ದಿದ್ದು ಚೀನೀ ಡ್ರ್ಯಾಗನ್! ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದ ಚೀನಾಗೆ ಸನ್ ತ್ಸು ಪುಸ್ತಕದಲ್ಲಿದ್ದ ಮಾದರಿ ಗೆಳೆಯ ರಷ್ಯಾ ರೂಪದಲ್ಲಿ ದೊರೆತಿತ್ತು. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕಾ ಹಸ್ತಕ್ಷೇಪ ಮಾಡಿದ ಕೂಡಲೇ ಅತ್ತ ರಷ್ಯಾ ಬಾಲ್ಟಿಕ್ ರಾಜ್ಯಗಳಿಗೆ ಬೆದರಿಕೆ ಒಡ್ಡುವ ಅಥವಾ ನೇರ ಮಿಲಿಟರಿ ಕಾರ್ಯಾಚರಣೆಗಿಳಿಯುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಈಗಾಗಲೇ ದಕ್ಷಿಣ ಚೀನಾ ಸಮುದ್ರದ ದ್ವೀಪ ಸಮೂಹಗಳನ್ನು ವಶಪಡಿಸಿಕೊಂಡಿದ್ದಷ್ಟೇ ಅಲ್ಲದೇ ಈ ದ್ವೀಪಗಳನ್ನು ತಮ್ಮ ಮಿಲಿಟರಿ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ. ಬಂದರುಗಳನ್ನು ಆಧುನೀಕರಿಸಲಾಗಿದೆ. ದ್ವೀಪಗಳನ್ನು ಕೃತಕವಾಗಿ ವಿಸ್ತರಿಸುವುದರ ಮೂಲಕ ಹೆಚ್ಚಿನ ಸೈನ್ಯ, ಯುದ್ಧ ವಿಮಾನಗಳು, ಯುದ್ಧ ನೌಕೆಗಳ ಜೊತೆ ಸದೃಢ ರಕ್ಷಣಾ ವಲಯಗಳನ್ನು ರಚಿಸಲಾಗಿದೆ. 'ದ ಆರ್ಟ್ ಆಫ್ ವಾರ್' ಪುಸ್ತಕದ ನಾಲ್ಕನೇ ಅಧ್ಯಾಯದಲ್ಲಿ ಬರೆದಿರುವಂತೆ, " ನಿಪುಣ ಯೋಧರು ಮೊದಲಿಗೆ ತಮ್ಮನ್ನು ತಾವು ಅಭೇಧ್ಯರನ್ನಾಗಿಸಿಕೊಳ್ಳುತ್ತಾರೆ ಮತ್ತು ಶತ್ರುಗಳು ದಾಳಿಗೆ ಸುಲಭ ತುತ್ತಾಗುವ ಕ್ಷಣಕ್ಕೋಸ್ಕರ ಕಾಯುತ್ತಾರೆ" ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಿರ್ಮಿಸಿಕೊಂಡಷ್ಟು ಮಿಲಿಟರಿ ನೆಲೆಗಳನ್ನು ಅಮೆರಿಕಾ ನಿರ್ಮಿಸಿಲ್ಲ. ಅಮೆರಿಕಾ ಪಿಲಿಪ್ಪೈನ್ಸ್ ಉಪಯೋಗಿಸಿಕೊಂಡು ದಾಳಿ ನಡೆಸಬಹುದಾದ ಸಾಧ್ಯತೆಗಳಿದ್ದರೂ, ಯುದ್ಧ ಸಂದರ್ಭದಲ್ಲಿ ಪಿಲಿಪ್ಪೈನ್ಸ್ ಒಪ್ಪಿಗೆ ಪಡೆದುಕೊಳ್ಳಲೇ ಬೇಕು. ಚೀನಾ ಮಾತ್ರ ಯಾರ ಹಂಗಿಲ್ಲದೇ ತನ್ನ ಮಿಲಿಟರಿ ನೆಲೆಗಳನ್ನು ಈಗಾಗಲೇ ಭದ್ರಪಡಿಸಿಕೊಡಿದೆ. 

ಏಷ್ಯಾ ಖಂಡದಲ್ಲಿ ಅಮೆರಿಕಾ ತನ್ನ ಮಿತ್ರ ರಾಷ್ಟ್ರಗಳ ಜೊತೆಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮತ್ತು ಹೊಸ ಗೆಳೆಯರನ್ನು ಸಂಪಾದಿಸಲು ಹಾತೊರೆಯುತ್ತಿದೆ. ಆದರೆ ಅಮೆರಿಕಾದ ಮಿತ್ರ ರಾಷ್ಟ್ರಗಳಾದ ದಕ್ಷಿಣ ಕೊರಿಯಾ ಮತ್ತು ಜಪಾನ್ ಮಧ್ಯೆ ಒಳಜಗಳಗಳಿರುವುದು ಚೀನಾಗೆ ಅನುಕೂಲಕರವಾಗಿದೆ. ಸನ್ ತ್ಸು ಪುಸ್ತಕದ ಮೂರನೇ ಅಧ್ಯಾಯದ ಪ್ರಕಾರ, " ಶತ್ರುವಿನ ಸಮರತಂತ್ರದ ಮೇಲೆ ದಾಳಿ ಮಾಡುವುದು ಯುದ್ಧದಲ್ಲಿ ಪ್ರಪ್ರಥಮ ಆದ್ಯತೆ ಪಡೆಯುತ್ತದೆ. ಎರಡನೇ ಆದ್ಯತೆ ಶತ್ರುವಿನ ಮೈತ್ರಿಕೂಟವನ್ನು ಛಿದ್ರಗೊಳಿಸುವುದು." ಚೀನಾಗೆ ಸವಾಲೊಡುವ ಉದ್ದೇಶದಿಂದಲೇ ಅಮೆರಿಕಾ ಪ್ರಾರಂಭಿಸಿದ ಟಿ.ಪಿ.ಪಿ ( Trans-Pacific Partnership) ಯಶಸ್ವಿಯಾಗದಿರಲು ಚೀನಾ ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಪೂರ್ವ ಏಷ್ಯಾದ ರಾಷ್ಟ್ರಗಳಿಗೆ ಲಾಭದಾಯಕ ವ್ಯಾಪಾರ, ರಕ್ಷಣಾ ಸಂಬಂಧ ಮತ್ತು ರಾಜಕೀಯ ನೆರವು ನೀಡುವ ಮೂಲಕ ಚೀನಾ ಆ ದೇಶಗಳನ್ನು ಅಮೆರಿಕಾದ ಪ್ರಭಾವಕ್ಕೆ ಒಳಗಾಗದಂತೆ ತಡೆಯುತ್ತಿದೆ. ಅಮೆರಿಕಾದ ಟಿ.ಪಿ.ಪಿ ಗೆ ಪ್ರತಿಸ್ಪರ್ಧಿಯಾಗಿ ಚೀನಾ ಆರ್.ಸಿ.ಇ.ಪಿ (Regional Comprehensive Economic Partnership) ರಚನೆ ಮಾಡಿ ಈ ಪ್ರದೇಶದಿಂದ ಅಮೆರಿಕಾವನ್ನು ಹೊರಗಿಡುವ ವ್ಯವಸ್ಥಿತ ಪ್ರಯತ್ನವೊಂದು ಈಗಾಗಲೇ ಜಾರಿಯಲ್ಲಿದೆ. ಹೇಗ್ ನ್ಯಾಯಾಧಿಕರಣದಲ್ಲಿ ಪಿಲಿಪ್ಪೈನ್ಸ್ ಕೈ ಮೇಲಾದ ನಂತರ ಪಿಲಿಪ್ಪೈನ್ಸ್ ಜೊತೆಗೂ ಸೌಹಾರ್ದಯುತ ಸಂಬಂಧಕ್ಕೆ ಚೀನಾ ಮುಂದಾಗಿರುವುದೇ ಇದಕ್ಕೆ ಸಾಕ್ಷಿ.

"ನೀವು ನಿಜಕ್ಕೂ ಬಲಶಾಲಿಯಾಗಿದ್ದಾಗ, ದುರ್ಬಲನಂತೆ ಕಾಣಿಸಿಕೊಳ್ಳಬೇಕು ಮತ್ತು ನಿಜಕ್ಕೂ ದುರ್ಬಲರಾಗಿದ್ದಾಗ ಬಲಶಾಲಿಯಂತೆ ತೋರ್ಪಡಿಸಿಕೊಳ್ಳಬೇಕು!" ಎಂದಿದ್ದ ಸನ್ ತ್ಸು ವಿಚಾರಗಳು ಇವತ್ತಿಗೆ ಚೀನಾ ರಾಜತಂತ್ರದಲ್ಲಿ ಮತ್ತೆ ಪ್ರಸ್ತುತ ಎನಿಸುತ್ತಿದೆ. ಸೇನಾಧಿಪತಿಯಾಗಿ ರಣರಂಗದ ವ್ಯಾವಹಾರಿಕ ಅನುಭವವಿದ್ದ ಸನ್ ತ್ಸು ಪುಸ್ತಕವೂ ಯುದ್ಧ ತಂತ್ರಗಳ ಕುರಿತಾಗಿಯೇ ಇದೆಯೆಂದ ಮಾತ್ರಕ್ಕೆ ಸನ್ ತ್ಸು ಒಬ್ಬ ಯುದ್ಧ ಪಿಪಾಸು ಎಂದುಕೊಳ್ಳುವಂತಿಲ್ಲ. ಯುದ್ಧ ಮಾಡಿ ಪಡೆಯುವ ನೂರು ವಿಜಯಗಳಿಗಿಂತ ಯುದ್ಧವಿಲ್ಲದೇ ಸಾಧಿಸುವ ಒಂದು ಜಯ ಅತ್ಯಂತ ಶ್ರೇಷ್ಠ ಎನ್ನುವ ಸನ್ ತ್ಸು "ಯುದ್ಧವನ್ನೇ ಮಾಡದೇ ಶತ್ರುವನ್ನು ನಿಗ್ರಹಿಸುವುದು ಅತ್ಯಂತ ಶ್ರೇಷ್ಠ ಸಮರ ಕಲೆ" ಎಂದು ಅಭಿಪ್ರಾಯ ಪಡುತ್ತಾನೆ. ಚೀನೀ ನಾಯಕರು ತಮ್ಮ ಆಕ್ರಮಣಕಾರಿ ನೀತಿಯಲ್ಲಿ ಸನ್ ತ್ಸು ವಿಚಾರಗಳನ್ನು ಯಾವ ರೀತಿ ಅಳವಡಿಸಿಕೊಂಡಿದ್ದಾರೆ ಎನ್ನುವುದು ಈಗಾಗಲೇ ಸ್ಪಷ್ಟ. ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಚೀನಾ ಆಯ್ದುಕೊಂಡ ಆಯ್ಕೆಗಳಿಗೂ 'ದ ಆರ್ಟ್ ಆಫ್ ವಾರ್' ಪುಸ್ತಕದಲ್ಲಿರುವ ತಂತ್ರಗಳಿಗೂ ಬಹಳಷ್ಟು ಸಾಮ್ಯತೆಗಳಿವೆ. ಸನ್ ತ್ಸು ಸಮರತಂತ್ರಗಳನ್ನು ಗಮನಿಸಿದಾಗ ಭಾರತದ ಶ್ರೇಷ್ಠ ಸಮರತಂತ್ರಜ್ಞ ಮತ್ತು ರಾಜತಾಂತ್ರಿಕ ನಿಪುಣ ಆಚಾರ್ಯ ಚಾಣಕ್ಯರ ನೆನಪಾಗದೇ ಇರಲಾರದು. ಚೀನಾ ಜೊತೆಗೆ ಗಡಿ ಮತ್ತಿನ್ನಿತರ ತಕರಾರುಗಳನ್ನು ನಿಭಾಯಿಸಬೇಕಾದ ಭಾರತವೂ ಚೀನಾದ ಈ ಹೊಸ ನಡೆಗಳಿಗೆ ಪ್ರತಿತಂತ್ರ ಹುಡುಕುವ ಅನಿವಾರ್ಯತೆಯಿದೆ.

(This article was published in Hosa Digantha newspaper on 22 November 2016)






      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bengaluru



      

ಶನಿವಾರ, ನವೆಂಬರ್ 19, 2016

ಟ್ರಂಪ್ ಪುಟಿನ್ ಗೆಳೆತನದ ಸುತ್ತ-ಮುತ್ತ

ಹಲವು ದಶಕಗಳ ಕಾಲ ಅಮೆರಿಕನ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೆನ್ರಿ ಕಿಸಿಂಜರ್ ಹೇಳಿದ ಮಾತು ಹೀಗಿದೆ. "ಅಮೆರಿಕಾ ಪಾಲಿಗೆ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ, ಶಾಶ್ವತವಾಗಿರುವುದು ಅಮೆರಿಕಾದ ಹಿತಾಸಕ್ತಿಗಳಷ್ಟೇ!" ಬಹುಶಃ ಈ ಒಂದು ಸರಳ ವಾಕ್ಯ ಅಮೆರಿಕಾ ಚರಿತ್ರೆಯನ್ನು ಮತ್ತು ವಿದೇಶಾಂಗ ನೀತಿಯನ್ನು ವಿವರಿಸಿದಷ್ಟು ಸ್ಪಷ್ಟವಾಗಿ ಯಾವ ಬೃಹತ್ ಗ್ರಂಥವೂ ವಿವರಿಸಲಾಗದು!
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


"ಬಲಿಷ್ಠನಾದ ಶತ್ರುವಿಗೆ ಶರಣಾಗತನಾಗುವ ಮೂಲಕ, ಧೀರರನ್ನು ಭೇದ ನೀತಿಯಿಂದಲೂ, ದುರ್ಬಲರನ್ನು ಉಡುಗೊರೆಗಳಿಂದಲೂ, ಸಮಾನರನ್ನೂ ಪ್ರರಾಕ್ರಮದಿಂದಲೂ ಎದುರಿಸಬೇಕು" ವಿದೇಶಾಂಗ ವ್ಯವಹಾರಗಳ ಬಗ್ಗೆ ವಿವರಿಸುತ್ತಾ ಆಚಾರ್ಯ ಚಾಣಕ್ಯರು ಹೇಳಿದ ಮಾತುಗಳಿವು. ರಾಜ ತನ್ನ ಶತ್ರುಗಳ ಜೊತೆಯಲ್ಲಿ ಮಾತ್ರವಲ್ಲದೇ ಮಿತ್ರರ ಜೊತೆಯಲ್ಲಿ ವ್ಯವಹರಿಸುವಾಗಲೂ ಈ ಚಾಣಕ್ಯ ನೀತಿ ಇಂದಿಗೂ ಪ್ರಸ್ತುತ. ರಾಜಕೀಯ ಚದುರಂಗದಾಟದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಪರಿಸ್ಥಿತಿಯ ಒತ್ತಡಗಳು ಮಿತ್ರರನ್ನು ಶತ್ರುಗಳನ್ನಾಗಿಯೂ ಅಥವಾ ಶತ್ರುಗಳನ್ನು ಮಿತ್ರರನ್ನಾಗಿಯೂ ಕ್ಷಣ ಮಾತ್ರದಲ್ಲಿ ಬದಲಾಯಿಸಿಬಿಡುತ್ತದೆ. ಸಾಂಪ್ರದಾಯಿಕ ಶತ್ರು ರಷ್ಯಾ ಮತ್ತು ಅಮೆರಿಕಾಗಳ ವಿಚಾರದಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಇಂಥದ್ದೊಂದು ಬದಲಾವಣೆಗೆ ನಾಂದಿ ಹಾಡುವಂತಿದೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮುಂದಿನ ಅಧ್ಯಕ್ಷರಾಗಿ ಚುನಾಯಿತರಾಗುವುದರೊಂದಿಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಜಗತ್ತಿನಾದ್ಯಂತ ಮೂಡಿಸಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಟ್ರಂಪ್ ಚುನಾವಣೆಯಲ್ಲಿ ಜಯಗಳಿಸುತ್ತಿದ್ದಂತೆ ಅಮೆರಿಕಾ ಸೇರಿದಂತೆ ವಿಶ್ವದಾಂದ್ಯಂಥ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ವಿಶೇಷವಾಗಿ ರಷ್ಯಾದ ಸಂಸತ್ತಿನಲ್ಲಿದ್ದ ಸಂಸದರೆಲ್ಲರೂ ಚಪ್ಪಾಳೆಗಳೊಂದಿಗೆ ಅತ್ಯುತ್ಸಾಹದಿಂದ ಟ್ರಂಪ್ ಗೆಲುವಿನ ಸುದ್ಧಿಯನ್ನು ಸಂಭ್ರಮಿಸಿದರು! ಹೌದು, ಈ ಬಾರಿ ರಷ್ಯನ್ನರು ಸಾಂಪ್ರದಾಯಿಕ ಶತ್ರು ಎಂದೇ ಬಿಂಬಿತವಾಗಿದ್ದ ಅಮೆರಿಕಾದ ಚುನಾವಣೆಗಳಲ್ಲಿ ಅತಿಯಾದ ಕುತೂಹಲವನ್ನೂ, ಉತ್ಸಾಹವನ್ನೂ ತೋರಿಸಿದ್ದರು. ರಷ್ಯಾದ ಸರಕಾರಿ ಸ್ವಾಮ್ಯದ ಮಾಧ್ಯಮಗಳಲ್ಲೂ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಚರ್ಚೆಯ ವಿಷಯವಾಗಿತ್ತಷ್ಟೇ ಅಲ್ಲದೇ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಆರೋಪಗಳನ್ನು ರಷ್ಯನ್ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದ್ದು ರಷ್ಯಾದಲ್ಲಿಯೂ ಟ್ರಂಪ್ ಪರ ಚುನಾವಣಾ ಪ್ರಚಾರ ಮಾಡಿದಂತಿತ್ತು. ಟ್ರಂಪ್ ಗೆಲುವಿಗೆ ಅಭಿನಂದಿಸಿದ ರಷ್ಯಾ ಅಧ್ಯಕ್ಷ ಪುಟಿನ್, ಟ್ರಂಪ್ ಅಧ್ಯಕ್ಷತೆಯಲ್ಲಿ ಸಿರಿಯಾ ರಾಜಕೀಯ ಪ್ರಕ್ಷುಬ್ಧತೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಪುಟಿನ್ ಕಠಿಣ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಟ್ರಂಪ್, ಒಬಾಮರಿಗಿಂತ ಪುಟಿನ್ ಉತ್ತಮ ನಾಯಕ ಎಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಪುಟಿನ್ ಮತ್ತು ಟ್ರಂಪ್ ನಡುವಿನ ಈ ವೈಯಕ್ತಿಕ ಸ್ನೇಹ ಅಮೆರಿಕಾ ಮತ್ತು ರಷ್ಯಾ ಬಾಂಧವ್ಯಗಳಲ್ಲೂ ಗಮನಾರ್ಹ ಬದಲಾವಣೆಗಳಿಗೆ ನಾಂದಿ ಹಾಡಬಲ್ಲುದು. ಪ್ರಮುಖವಾಗಿ ಭಯೋತ್ಪಾದನಾ ನಿಗ್ರಹದಲ್ಲಿ ಈ ಎರಡು ದೈತ್ಯ ರಾಷ್ಟ್ರಗಳ ಸಮನ್ವಯ ಅದ್ಭುತಗಳನ್ನು ಸಾಧಿಸಬಲ್ಲದು.

ಇನ್ನೊಂದೆಡೆ ಟ್ರಂಪ್ ಎದುರಾಗಿ ಚುನಾವಣಾ ಕಣಕ್ಕಿಳಿದಿದ್ದ ಹಿಲರಿ ಕ್ಲಿಂಟನ್, ರಷ್ಯಾದ ದ್ವೇಷಕ್ಕೆ ಪಾತ್ರರಾಗಿದ್ದು ಟ್ರಂಪ್ ರಷ್ಯಾ ಒಲವಿಗೆ ಇನ್ನಷ್ಟು ಬಲ ತುಂಬಿತ್ತು.  ಹಿಲರಿ ಕ್ಲಿಂಟನ್ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ 2009ರಿಂದ 2013ರವರೆಗಿನ ಅವಧಿಯಲ್ಲಿ ರಷ್ಯಾ ಮತ್ತು ಅಮೆರಿಕಾದ  ಸಂಬಂಧಗಳಲ್ಲಿ ಅಗಾಧ ಬಿರುಕು ಮೂಡಿತ್ತು. ತನ್ನ ಪ್ರಚಾರದುದ್ದಕ್ಕೂ ಹಿಲರಿ, ರಷ್ಯಾದ ಅಧ್ಯಕ್ಷ ಪುಟಿನ್ ಅಂತರಾಷ್ಟ್ರೀಯ ವ್ಯವಸ್ಥೆಗೆ ಮಾರಕ ಎಂದು ತೆಗಳಿದ್ದಲ್ಲದೇ ಟ್ರಂಪ್ ರನ್ನು ತನ್ನ ಕೈಗೊಂಬೆಯಾಗಿಟ್ಟುಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಷ್ಯನ್ ಮಾಧ್ಯಮಗಳೂ ಕೂಡ, ಹಿಲರಿ ಮೇಲೆ ಭ್ರಷ್ಟಾಚಾರಿ ಮತ್ತು ಜಾಗತಿಕ ಶಾಂತಿಗೆ ಕುತ್ತು ತರಬಲ್ಲ ರಾಜಕಾರಣಿ ಎಂಬಂತೆ ಬಿಂಬಿಸಿತ್ತು. ಇವಿಷ್ಟೇ ಅಲ್ಲದೇ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಸಿರಿಯಾ ಅಧ್ಯಕ್ಷ ಬಶರ್-ಅಲ್-ಅಸದ್ ಗೆ ರಷ್ಯಾ ಬೆಂಬಲ ಮತ್ತು ಉಕ್ರೈನ್ ಸಮಸ್ಯೆಯ ಕಾರಣದಿಂದಾಗಿ ಅಮೆರಿಕಾ- ರಷ್ಯಾ ಸಂಬಂಧಗಳು ಅತಿಯಾಗಿ ಹದಗೆಟ್ಟಿದ್ದವು. ಇದೀಗ ಟ್ರಂಪ್ ಅಮೆರಿಕಾ ನಾಯಕತ್ವ ವಹಿಸಿಕೊಳ್ಳುವುದರೊಂದಿಗೆ, ಅಮೆರಿಕಾ ತನ್ನ ಸಾಂಪ್ರದಾಯಿಕ ಶತ್ರು ರಷ್ಯಾ ಜೊತೆ ಸ್ನೇಹ ವೃದ್ಧಿಸಿಕೊಳ್ಳುವುದು ಬಹುತೇಕ ಖಚಿತ. ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೇ ಟ್ರಂಪ್ ರಷ್ಯಾ ಜೊತೆಗೆ ಪ್ರಶ್ನಾರ್ಹ ಸಂಬಂಧಗಳನ್ನಿಟ್ಟುಕೊಂಡಿತ್ತು ಎಂಬ ಆರೋಪಗಳ ಆಧಾರದ ಮೇಲೆ ಎಫ್.ಬಿ.ಐ ಈ ಬಗ್ಗೆ ಪ್ರಾಥಮಿಕ ಹಂತದ ತನಿಖೆ ನಡೆಸಿತ್ತಾದರೂ ಪುರಾವೆಗಳ ಕೊರತೆಯಿಂದಾಗಿ ತನಿಖೆಯನ್ನು ಮೊಟಕುಗೊಳಿಸಲಾಗಿತ್ತು. ಈ ಮಧ್ಯೆ ಡೆಮಾಕ್ರಟಿಕ್ ಪಕ್ಷದ ಮೇಲೆ ರಷ್ಯನ್ನರು ಸೈಬರ್ ದಾಳಿ ನಡೆಸಿದೆ ಮತ್ತು ರಷ್ಯಾದ ಗುಪ್ತಚರ ದಳ ಅಮೆರಿಕಾದಲ್ಲಿ ಟ್ರಂಪ್ ಗೆಲುವಿಗಾಗಿ ರಹಸ್ಯ ಕಾರ್ಯಾಚರಣೆ ನಡೆಸಿದೆ ಎಂಬ ಗುಲ್ಲೆದ್ದಿತ್ತು! ಈ ಊಹೆಗಳ ಸತ್ಯಾಸತ್ಯತೆಗಳೇನೇ ಇದ್ದರೂ ರಷ್ಯಾ ಈ ಬಾರಿ ಅಮೆರಿಕಾದ ಚುನಾವಣಾ ಫಲಿತಾಂಶದಲ್ಲಿ ಅತಿಯಾದ ಉತ್ಸಾಹ ತೋರಿದ್ದು ಮಾತ್ರ ಸುಳ್ಳಲ್ಲ.

ಇಸ್ಲಾಮಿಕ್ ಸ್ಟೇಟ್ ಮತ್ತು ಇತರ ಉಗ್ರ ಸಂಘಟನೆಗಳ ವಿರುದ್ಧದ ಹೋರಾಟದಲ್ಲಿ ನ್ಯಾಟೋ ಸದಸ್ಯ ರಾಷ್ಟ್ರಗಳ ಸಹಕಾರ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವುದು ಟ್ರಂಪ್ ಅಸಮಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಉಗ್ರರನ್ನು ಮಟ್ಟಹಾಕುವಲ್ಲಿ ರಷ್ಯಾದೊಂದಿಗೆ ಅಮೆರಿಕಾ ಕೈ ಜೋಡಿಸುವುದು ಜಾಣತನ ಎನ್ನುವುದು ಟ್ರಂಪ್ ಅಭಿಪ್ರಾಯ. ಟ್ರಂಪ್ ರಷ್ಯಾ ಬಗ್ಗೆ ಹೊಂದಿರುವ ಮೃದು ಧೋರಣೆ ಮತ್ತು ಭವಿಷ್ಯದಲ್ಲಿ ಅಮೆರಿಕಾ ಮತ್ತು ರಷ್ಯಾಗಳು ಮೈತ್ರಿಕೂಟವನ್ನು ರಚಿಸಿಕೊಳ್ಳುವ ಯೋಚನೆಯೇ ಹಲವರಿಗೆ ದಿಗಿಲು ಹುಟ್ಟಿಸಿದೆ.  ಟ್ರಂಪ್-ಪುಟಿನ್ ಗೆಳೆತನದ ಧನಾತ್ಮಕ ಅಂಶವೆಂದರೆ ಈ ಎರಡು ಬಲಾಡ್ಯ ರಾಷ್ಟ್ರಗಳ ಮೈತ್ರಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ಉಗ್ರ ನಿಗ್ರಹದಲ್ಲಿ ಸಮನ್ವಯತೆ ಕಾರ್ಯರೂಪಕ್ಕಿಳಿದರೆ ಭಯೋತ್ಪಾದಕರ ದಮನಕ್ಕೆ ಇನ್ನಷ್ಟು ಬಲ ತುಂಬಿದಂತಾಗುತ್ತದೆ. ಭಯೋತ್ಪಾದಕರಿಗಷ್ಟೇ ಅಲ್ಲ ಬ್ರಿಟನ್ ಪಾಲಿಗೂ ಈ ಹೊಸ ಬದಲಾವಣೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಿರಿಯಾದಲ್ಲಿ ರಷ್ಯಾ ಬೆಂಬಲದಿಂದ ಆಡಳಿತ ನಡೆಸುತ್ತಿರುವ ಅಸದ್ ವಿರುದ್ದ ಹೋರಾಡುತ್ತಿರುವ ದಂಗೆಕೋರರಿಗೆ ಅಮೆರಿಕಾ ಮತ್ತು ಬ್ರಿಟನ್ ನೆರವು ನೀಡುತ್ತಿರುವ ವಿಷಯ ತಿಳಿದೇ ಇದೆ. ಆದರೆ ಟ್ರಂಪ್ ಹೇಳಿರುವಂತೆ, ಅಮೆರಿಕಾ ದಂಗೆಕೋರರಿಗೆ ನೀಡುತ್ತಿರುವ ಬೆಂಬಲ ಹಿಂದೆಗೆದುಕೊಂಡು, ರಷ್ಯಾ ಜೊತೆ ಮೈತ್ರಿ ಸಾಧಿಸಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಮಟ್ಟ ಹಾಕುವ ಆಲೋಚನೆಯಲ್ಲಿರುವುದು ಬ್ರಿಟನ್ ಪಾಲಿಗೆ ದೊಡ್ಡ ಹಿನ್ನಡೆ. ಅಮೆರಿಕಾ ಜೊತೆ ಸೇರಿಕೊಂಡು ಸಿರಿಯಾದಲ್ಲಿರುವ ರಷ್ಯಾ ಪ್ರಭಾವ ಮಟ್ಟಹಾಕಬೇಕು ಎಂದುಕೊಂದಿದ್ದ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ಟ್ರಂಪ್ ರವರ ರಷ್ಯಾ ಪ್ರೀತಿಯಿಂದ ಬೆಚ್ಚಿಬೀಳುವಂತಾಗಿದೆ. ಅಮೆರಿಕಾ ನೇತೃತ್ವದ ನ್ಯಾಟೊ ಮಿತ್ರಕೂಟ ರಷ್ಯಾ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿಟ್ಟಿರುವ 3 ಲಕ್ಷಕ್ಕೂ ಹೆಚ್ಚಿನ ಸೈನ್ಯವನ್ನು ಹಿಂಡೆದುಕೊಳ್ಳಬೇಕು ಎಂದು ಟ್ರಂಪ್ ಮುಂದೆ ಬೇಡಿಕೆಯಿಯಿಟ್ಟಿದ್ದು, ಯುರೋಪಿನ ರಾಷ್ಟ್ರಗಳು ಅಭದ್ರತೆ ಮತ್ತು ರಷ್ಯನ್ ಆಕ್ರಮಣದ ಭೀತಿ ಎದುರಿಸುವಂತಾಗಿದೆ.

ಹಲವು ದಶಕಗಳ ಕಾಲ ಅಮೆರಿಕನ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೆನ್ರಿ ಕಿಸಿಂಜರ್ ಹೇಳಿದ ಮಾತು ಹೀಗಿದೆ. "ಅಮೆರಿಕಾ ಪಾಲಿಗೆ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ, ಶಾಶ್ವತವಾಗಿರುವುದು ಅಮೆರಿಕಾದ ಹಿತಾಸಕ್ತಿಗಳಷ್ಟೇ!" ಬಹುಶಃ ಈ ಒಂದು ಸರಳ ವಾಕ್ಯ ಅಮೆರಿಕಾ ಚರಿತ್ರೆಯನ್ನು ಮತ್ತು ವಿದೇಶಾಂಗ ನೀತಿಯನ್ನು ವಿವರಿಸಿದಷ್ಟು ಸ್ಪಷ್ಟವಾಗಿ ಯಾವ ಬೃಹತ್ ಗ್ರಂಥವೂ ವಿವರಿಸಲಾಗದು! ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಪ್ರತಿಯೊಂದು ರಾಷ್ಟ್ರದ ಆದ್ಯ ಕರ್ತವ್ಯವೇ ಆಗಿದ್ದರೂ, ಈವರೆಗೆ ಈ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಶ್ರೇಯಸ್ಸು ಅಮೆರಿಕಾಗೆ ಸಲ್ಲುತ್ತದೆ. ಈ ವಿಚಾರದಲ್ಲಿ ಅಮೆರಿಕಾ ಇತರ ರಾಷ್ಟ್ರಗಳಿಗೆ ಮಾದರಿಯೇ ಸರಿ. ಅಧ್ಯಕ್ಷ ಗಾದಿಗೆ ಚುನಾಯಿತರಾಗಿರುವ ಟ್ರಂಪ್ ಕೂಡ ರಷ್ಯಾ ಮೇಲಿನ ದ್ವೇಷವನ್ನು ಬಿಟ್ಟುಕೊಡುತ್ತಿದ್ದಾರೆಯೇ ವಿನಃ ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಯನ್ನಲ್ಲ! ಇಷ್ಟಕ್ಕೂ ಟ್ರಂಪ್ ವಿದೇಶಾಂಗ ನೀತಿಯ ಕುರಿತಾಗಿ ಸ್ಪಷ್ಟ ಚಿತ್ರಣಕ್ಕಾಗಿ, 20 ಜನವರಿ 2017ರ ವರೆಗೆ ಕಾದುನೋಡಲೇಬೇಕು.

(This article was published in Vishwavani newspaper on 16 November 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಟ್ರಂಪ್ ಅಧ್ಯಕ್ಷತೆ : ಉತ್ಪ್ರೇಕ್ಷೆ ಮತ್ತು ವಾಸ್ತವ

ಚುನಾವಣಾ ಪ್ರಚಾರದಲ್ಲಿ ಅದೆಂಥಾ ವಿಭಿನ್ನ ವಿಚಿತ್ರ ನಿಲುವುಗಳನ್ನು ಹೊಂದಿದ್ದರೂ ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಅಮೆರಿಕನ್ ವ್ಯವಸ್ಥೆ ಅಧ್ಯಕ್ಷನನ್ನು ತನ್ನ ದೇಶದ ಅವಶ್ಯಕತೆಗಳಿಗೆ ತಕ್ಕಂತೆ ರೂಪಿಸಿಕೊಳ್ಳುತ್ತದೆ ಎನ್ನುವುದು ಚರಿತ್ರೆ ದೃಢಪಡಿಸಿದ ಸತ್ಯ.
- ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


"ಎಲ್ಲರಲ್ಲೂ ನಂಬಿಕೆಯಿಡುವುದು ಅಪಾಯಕಾರಿ ಆದರೆ ಯಾರೊಬ್ಬನಲ್ಲೂ ನಂಬಿಕೆಯಿಲ್ಲ ಎನ್ನುವುದು ಅತ್ಯಂತ ಅಪಾಯಕಾರಿ" ಅಬ್ರಹಾಂ ಲಿಂಕನ್ ಈ ಮಾತುಗಳು ಅಮೆರಿಕಾದ ಪ್ರಸಕ್ತ ರಾಜಕೀಯ ವಿದ್ಯಮಾನಗಳಿಗೆ ಸೂಕ್ತ ರೀತಿಯಲ್ಲಿ ಅನ್ವಯಿಸುತ್ತದೆ. ಅಮೆರಿಕಾ ಹಿಲರಿ ಕ್ಲಿಂಟನ್ ರವರನ್ನು ಅಲಕ್ಷಿಸಿ ಡೊನಾಲ್ಡ್ ಟ್ರಂಪ್ ಗೆ ಮಣೆ ಹಾಕಿದೆ ಎಂಬ ಸತ್ಯ ಜೀರ್ಣಿಸಿಕೊಳ್ಳಲು ಅಮೆರಿಕನ್ನರೂ ಸೇರಿದಂತೆ ಪ್ರಪಂಚದ ಇನ್ನಿತರ ಮೂಲೆಗಳ ಜನರು ಹರಸಾಹಸ ಪಡುತ್ತಿದ್ದಾರೆ. ಚುನಾವಣಾ  ಪೂರ್ವದಲ್ಲಿ ಟ್ರಂಪ್ ಓರ್ವ ಮಾನಸಿಕ ಅಸ್ವಸ್ಥ ಎಂಬಂತೆ ವಿಶ್ಲೇಷಣೆ ಮಾಡಿದವರು, ಟ್ರಂಪ್ ಅಧ್ಯಕ್ಷ ಗಾದಿಯೇರಿದ ಮೇಲೂ ತಮ್ಮ ಹಳೆಯ ನಂಬಿಕೆಯನ್ನು ಬದಲಿಸಿಕೊಳ್ಳಲಾಗದೆ ಪರದಾಡುವಂತಾಗಿದೆ. ಟ್ರಂಪ್ ಅಧ್ಯಕ್ಷತೆಯ ಅಮೆರಿಕಾದ ಭವಿಷ್ಯ ಹೇಗಿರುತ್ತದೆ ಎಂದು ವಿಶ್ಲೇಷಿಸಲು ಇದು ಸಕಾಲವಲ್ಲವಾದರೂ ಟ್ರಂಪ್, ಅಮೆರಿಕಾದ ಹಿಂದಿನ ಅಧ್ಯಕ್ಷರಿಗಿಂತ ತೀರಾ ವಿಭಿನ್ನವಾಗಿ ವರ್ತಿಸುವುದಿಲ್ಲ. ಅಮೆರಿಕಾ ಮತ್ತು ವಿಶ್ವ ರಾಜಕೀಯದ ಬದಲಾಗುತ್ತಿರುವ ವಾತಾವರಣ ಟ್ರಂಪ್ ಅಧ್ಯಕ್ಷತೆಯ ನಡೆಗಳನ್ನು ನಿರ್ಧರಿಸುವುದರಿಂದ ಟ್ರಂಪ್ ಆಕ್ರಮಣಶೀಲತೆಯ ಬಹುಪಾಲು ಉತ್ಪ್ರೇಕ್ಷೆಗಷ್ಟೇ ಸೀಮಿತವಾಗಲಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಭೇರಿಯೊಂದಿಗೆ, ಚುನಾವಣೆಯುದ್ದಕ್ಕೂ ಟ್ರಂಪ್ ಗೆಲುವು ಅಸಾಧ್ಯ ಎಂಬಂತಿದ್ದ ವಾತಾವರಣ ಅನಿರೀಕ್ಷಿತ ಬದಲಾವಣೆಗಳಿಗೆ ದಾರಿ ಮಾಡಿ ಕೊಟ್ಟಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ಅಮೆರಿಕಾದ ಜನತೆ, ಮಾಧ್ಯಮಗಳು ಮಾತ್ರವಲ್ಲ ತನ್ನದೇ ಪಕ್ಷದ ಮುಖಂಡರಿಂದಲೂ ತಿರಸ್ಕಾರಕ್ಕೆ ಒಳಗಾದ ವ್ಯಕ್ತಿ ಈ ಡೊನಾಲ್ಡ್ ಟ್ರಂಪ್! ಟ್ರಂಪ್ ವಿರೋಧಿ ಅಲೆಗೆ ಕಾರಣಗಳು ನೂರಾರು. ಚುನಾವಣಾ ಪ್ರಚಾರದ ಅಬ್ಬರದಲ್ಲಿ ಟ್ರಂಪ್ ಅಮೆರಿಕಾದಲ್ಲಿ ಫ್ಯಾಸಿಸಂ ನೆಲೆಯೂರುವಂತೆ ಮಾಡುತ್ತಾರೆ ಎಂಬ ಭೀತಿ ಅಮೆರಿಕನ್ನರಲ್ಲಿತ್ತು. ಶ್ವೇತ ವರ್ಣೀಯರ ಶ್ರೇಷ್ಠತೆಯನ್ನು ಉತ್ಪ್ರೇಕ್ಷಿಸುವ ಜನಾಂಗೀಯವಾದಿ ಎಂಬ ಆರೋಪವೂ ಟ್ರಂಪ್ ಮೇಲಿತ್ತು. ನ್ಯಾಟೋ ಮೈತ್ರಿಕೂಟದ ಬಗ್ಗೆ ಟ್ರಂಪ್ ತೋರಿಸುತ್ತಿದ್ದ ಅಸಡ್ಡೆ ಮತ್ತು ಪುಟಿನ್ ಮೇಲಿನ ಒಲವು ಕೂಡ ಟ್ರಂಪ್ ಬಗ್ಗೆ ಅಮೆರಿಕಾದಲ್ಲಿ ಈ ಮನುಷ್ಯ ಅಧ್ಯಕ್ಷನಾಗಲು ಯೋಗ್ಯನಲ್ಲ ಎಂಬ ಭಾವನೆ ಮೂಡಿಸಿತ್ತು. ಈ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವಂತೆ ಟ್ರಂಪ್ ಅಮೆರಿಕಾದ 45ನೇ ಅಧ್ಯಕ್ಷರಾಗಿದ್ದಾರೆ. ಹಾಗಿದ್ದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಬಗ್ಗೆ ಇದ್ದ ನಕಾರಾತ್ಮಕ ಅಭಿಪ್ರಾಯಗಳು ಕೇವಲ ಪೂರ್ವಾಗ್ರಹಪೀಡಿತ ಮಾಧ್ಯಮಗಳ ಸೃಷ್ಠಿಯೇ? ಎಂಬ ಪ್ರಶ್ನೆಯ ಜೊತೆಗೆ ಅಧ್ಯಕ್ಷನಾದ ಮೇಲೆ ಟ್ರಂಪ್ ತಾವಾಡಿದ ಮಾತುಗಳನ್ನು ಜಾರಿಗೊಳಿಸುತ್ತಾರೆಯೇ? ಎಂಬ ಪ್ರಶ್ನೆಗಳಿವೆ.

ಟ್ರಂಪ್ ಸಹವರ್ತಿಗಳು ಮತ್ತು ಸಲಹೆಗಾರರ ಪ್ರಕಾರರ ಮಾಧ್ಯಮಗಳು ಟ್ರಂಪ್ ಮಾತುಗಳನ್ನು ತಮಗೆ ಬೇಕಾದಂತೆ ಪೋಣಿಸಿಕೊಂಡು, ವಾಸ್ತವ ವಿಚಾರಗಳನ್ನು ಮರೆಮಾಚಲು ವ್ಯವಸ್ಥಿತ ಸಂಚು ನಡೆಸಿದ್ದಾರೆ. ಉದಾಹರಣೆಗೆ, ಇತರ ದೇಶಗಳಿಂದ ಅಮೆರಿಕಾಕ್ಕೆ ವಲಸೆ ಬಂದವರ ಬಗ್ಗೆ ಕಠಿಣ ನಿಲುವು ತಳೆದಿದ್ದ ಟ್ರಂಪ್ ಮೆಕ್ಸಿಕೋ ಮತ್ತು ಅಮೆರಿಕಾದ ನಡುವೆ ಗೋಡೆಯೊಂದನ್ನು ಕಟ್ಟಬೇಕು ಮತ್ತು ಮೆಕ್ಸಿಕನ್ ವಲಸೆಗಾರರನ್ನು ಅಮೆರಿಕಾದಿಂದ ಗಡಿಪಾರು ಮಾಡಬೇಕು ಎಂದಿದ್ದರು. ಈ ಗೋಡೆ ಕಟ್ಟುವ ಸಂಪೂರ್ಣ ವೆಚ್ಚವನ್ನು ಮೆಕ್ಸಿಕೋ ಭರಿಸಬೇಕು ಎಂಬ ನಿಲುವನ್ನು ತಳೆದಿದ್ದ ಟ್ರಂಪ್ ಚುನಾವಣಾ ಪ್ರಚಾರದ ಅಂತ್ಯದ ವೇಳೆಗೆ ಈ ಬಗ್ಗೆ ಮೃದು ಧೋರಣೆಯನ್ನು ತಳೆದಿದ್ದರು ಎನ್ನುವುದು ಗಮನಾರ್ಹ ಅಂಶ. ಮೆಕ್ಸಿಕೋದಿಂದ ಅಕ್ರಮವಾಗಿ ವಲಸೆ ಬಂದಿರುವ ಡ್ರಗ್ ಮಾರಾಟಗಾರರನ್ನು ಮಾತ್ರ ಅಮೆರಿಕಾದಿಂದ ಹೊರಹಾಕಬೇಕು ಎಂದಿದ್ದರು. ಅದರೆ ಮೊದಲ ಹೇಳಿಕೆಗೆ ಪ್ರಾಶಸ್ತ್ಯ ನೀಡಿದ ಮಾಧ್ಯಮಗಳು ಎರಡನೇ ಹೇಳಿಕೆಯನ್ನು ಸಂಪೂರ್ಣ ಕಡೆಗಣಿಸಿಬಿಟ್ಟರು. ಇದೇ ರೀತಿ ಮುಸ್ಲಿಮರು ಅಮೆರಿಕಾ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದಿದ್ದ ಟ್ರಂಪ್ ಪ್ರಚಾರದ ಅಂತ್ಯದ ವೇಳೆಗೆ ತಮ್ಮ ನಿಲುವುಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಮಾರ್ಚ್ ನಲ್ಲಿ ನಡೆದ ಚರ್ಚೆಯೊಂದರಲ್ಲಿ ಭಯೋತ್ಪಾದನಾ ನಿರ್ಮೂಲನೆಯ ವಿರುದ್ಧ ಮಾತನಾಡುತ್ತಾ, ಭಯೋತ್ಪಾದಕರು ಮತ್ತವರ ಸಂಬಂಧಿಕರನ್ನು ಕೊಲ್ಲುವುದಕ್ಕಾಗಿ ಅಮೆರಿಕನ್ ಸೈನ್ಯ ಅಂತರಾಷ್ಟ್ರೀಯ ಕಾನೂನನ್ನು ಮೀರಲು ಸದಾ ಸಿದ್ಧವಿದೆ ಎಂದಿದ್ದ ಟ್ರಂಪ್ ಮುಂದಿನ ದಿನಗಳಲ್ಲಿ ಅಮೆರಿಕನ್ ಸೈನ್ಯ ಯಾವುದೇ ಕಾನೂನು ಬಾಹಿರ ಕಾರ್ಯಾಚರಣೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದಿದ್ದು ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ. ನ್ಯಾಟೊ ಬಗೆಗೂ ತಿರಸ್ಕಾರ ವ್ಯಕ್ತ ಪಡಿಸಿದ್ದ ಟ್ರಂಪ್ ಭಯೋತ್ಪಾದನೆ ವಿರೋಧದ ಹೋರಾಟದಲ್ಲಿ ಮತ್ರಿಕೂಟದ ನೆರವಿನ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಉದಾಹರಣೆಗಳಲ್ಲೂ ಮಾಧ್ಯಮಗಳು ಪಕ್ಷಪಾತ ಧೋರಣೆ ಅನುಸರಿಸಿ ಸುದ್ದಿಯ ಒಂದು ಮುಖವನ್ನು ಮಾತ್ರ ವರದಿ ಮಾಡಿದ್ದಾರೆ ಎನ್ನುವುದು ಟ್ರಂಪ್ ಬೆಂಬಲಿಗರ ಆರೋಪ.

ಟ್ರಂಪ್ ವಿದೇಶಾಂಗ ನೀತಿಯ ಸಲಹೆಗಾರರ ಪ್ರೊಫೆಸರ್ ವಾಲಿದ್ ಫಾರೆಸ್, ಸ್ಪಷ್ಟಪಡಿಸಿದಂತೆ ಟ್ರಂಪ್ ವಿದೇಶಾಂಗ ನೀತಿ ಎರಡು ಪ್ರಮುಖ ಅಂಶಗಳ ಮೇಲೆ ನಿರ್ಧರಿತವಾಗಲಿದೆ. ಮೊದಲನೆಯದಾಗಿ ಭಯೋತ್ಪಾದನೆ ಮತ್ತು ವಿಶೇಷವಾಗಿ ಇಸ್ಲಾಮಿಕ್ ಸ್ಟೇಟ್ ನಂಥ ಉಗ್ರ ಸಂಘಟನೆಗಳ ನಿರ್ಮೂಲನೆ. ಎರಡನೆಯದಾಗಿ ಇರಾನ್ ಮತ್ತು ಉತ್ತರ ಕೊರಿಯಾಗಳಿಗೆ ಸಂಬಂಧಿಸಿದಂತೆ ಅಣ್ವಸ್ತ್ರಗಳ ಭೀತಿಯನ್ನು ನಿವಾರಿಸುವುದು. ರಷ್ಯಾ ಮತ್ತು ಚೀನಾಗಳತ್ತ ಸ್ನೇಹದ ಹಸ್ತ ಚಾಚುತ್ತಿರುವುದು, ಟ್ರಂಪ್ ವಿಚಾರಧಾರೆಯಲ್ಲಿ ಮಾಡಿಕೊಂಡ ರಾಜಿಯಲ್ಲ ಬದಲಾಗಿ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕಾಗಿ ಮಾತ್ರ ಎನ್ನುವುದನ್ನೂ ಫಾರೆಸ್ ಸ್ಪಷ್ಟಪಡಿಸಿದ್ದಾರೆ. 'ಫಾಕ್ಸ್ ನ್ಯೂಸ್' ನಲ್ಲಿ ಫಾರೆಸ್ ಲೇಖನವೊಂದರಲ್ಲಿ ವಿವರಿಸಿರುವಂತೆ, ರಷ್ಯಾ ಮತ್ತು ಚೀನಾಗಳಿಗಿಂತಲೂ ಭಯೋತ್ಪಾದನೆ ಪ್ರಮುಖ ಮತ್ತು ತತ್ ಕ್ಷಣದ ಬೆದರಿಕೆಯಾಗಿರುವುದರಿಂದ್ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಅಮೆರಿಕಾದ ಶತ್ರುಗಳ ನೆರವನ್ನು ಪಡೆದುಕೊಳ್ಳುವ ಉದ್ದೇಶದಿಂದಾಗಿ ಟ್ರಂಪ್ ಈ ಎರಡು ರಾಷ್ಟ್ರಗಳ ಜೊತೆ ಮೃದು ಧೋರಣೆ ವ್ಯಕ್ತಪಡಿಸಿದ್ದಾರೆ. ಇದೇ ಲೇಖನದಲ್ಲಿ ಫಾರೆಸ್, ಚೀನಾವನ್ನು ತಹಬಂದಿಗೆ ತರಲು ಆರ್ಥಿಕ ಅಸ್ತ್ರಗಳನ್ನು ಉಪಯೋಗಿಸಿ ಈ ಮೂಲಕ ಉತ್ತರ ಕೊರಿಯಾದ ಮಹತ್ವಾಕಾಂಕ್ಷೆಯನ್ನೂ ಹತೋಟಿಯಲ್ಲಿಡುವ ಯೋಜನೆಗಳು ಟ್ರಂಪ್ ಬತ್ತಳಿಕೆಯಲ್ಲಿವೆ ಎಂಬ ಸುಳಿವು ನೀಡಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ವಿದೇಶಾಂಗ ನೀತಿಯಲ್ಲಿ ಟ್ರಂಪ್ ಓರ್ವ ವಾಸ್ತವಿಕವಾದಿ ಎನ್ನುವುದು ರುಜುವಾತಾಗುತ್ತದೆ.

ಟ್ರಂಪ್ ನಾಯಕತ್ವ ಈಗಾಗಲೇ ವೇಗ ಪಡೆದುಕೊಂಡಿರುವ ಭಾರತ - ಅಮೆರಿಕಾ ಸಂಬಂಧಗಳ ಮೇಲೂ ಕೆಲ ಪರಿಣಾಮಗಳನ್ನು ಬೀರಲಿದೆ. ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಚೀನಾ ಆಕ್ರಮಣಕ್ಕೆ ತಡೆ ಹಾಕುವಲ್ಲಿ ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಮತ್ತಿತರ ರಾಷ್ಟ್ರಗಳೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವುದರ ಜೊತೆಗೆ ಅಮೆರಿಕಾದ ಯೋಜನೆಗಳಿಗೆ ಭಾರತದ ನೌಕಾಶಕ್ತಿಯ ಅವಶ್ಯಕತೆ ಬಹಳಷ್ಟಿದೆ. ಅಫಘಾನಿಸ್ತಾನದಲ್ಲಿ ಸ್ಥಿರತೆ ಸಾಧಿಸುವಲ್ಲಿಯೂ ಭಾರತದ ಸಹಕಾರ ಪಡೆದುಕೊಳ್ಳುವ ಅನಿವಾರ್ಯತೆ ಅಮೆರಿಕಾಕ್ಕಿದೆ. ಪಾಕಿಸ್ತಾನ ನಮ್ಮ ಮಿತ್ರ ರಾಷ್ಟ್ರವಲ್ಲ ಎಂದಿರುವ ಟ್ರಂಪ್ ತನ್ನ ಅಣ್ವಸ್ತ್ರಗಳನ್ನು ತ್ಯಜಿಸದಿದ್ದಲ್ಲಿ ಪಾಕ್ ಮುಂದಿನ ದಿನಗಳಲ್ಲಿ ಅಮೆರಿಕಾದಿಂದ ನೆರವು ನಿರೀಕ್ಷಿಸುವಂತಿಲ್ಲ ಎಂದಿದ್ದು ಟ್ರಂಪ್ ಅಧ್ಯಕ್ಷತೆಯಲ್ಲಿ ಭಾರತದ ಪಾಲಿಗೆ ಬೃಹತ್ ರಾಜತಾಂತ್ರಿಕ ಯಶಸ್ಸು. ಟ್ರಂಪ್ ಭಯೋತ್ಪಾದನೆಯ ವಿರುದ್ಧ ತಳೆದಿರುವ ಕಠಿಣ ನಿಲುವು ಭಾರತದ ಪಾಲಿಗೆ ಸಮಾಧಾನಕರ ವಿಷಯವೇ ಆಗಿದ್ದರೂ, ಇಸ್ಲಾಮಿಕ್ ಸ್ಟೇಟ್ ಮತ್ತು ತಾಲಿಬಾನ್ ಉಗ್ರರ ಕುರಿತಾಗಿ ಬೆಂಕಿಯುಗುಳುತ್ತಿರುವ ಟ್ರಂಪ್ ಭಾರತವನ್ನು ಕಾಡುತ್ತಿರುವ ಲಷ್ಕರ್-ಎ-ತಯ್ಬಾ ಮತ್ತು ಜೈಶ್-ಎ-ಮಹಮ್ಮದ್ ಬಗ್ಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಬರಾಕ್ ಒಬಾಮ ಆಂತರಿಕ ಆಡಳಿತ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಅನುಸರಿಸಿದ ಹಲವಾರು ಕ್ರಮಗಳ ಬಗ್ಗೆ ಡೊನಾಲ್ಡ್ ಟ್ರಂಪ್ ಗೆ ಅಸಮಾಧಾನಗಳಿವೆ. ತನ್ನ ಭಿನ್ನಾಬಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವಲ್ಲೂ ಟ್ರಂಪ್ ಯಾವುದೇ ಮುಚ್ಚುಮರೆ ಮಾಡಿಲ್ಲ. "ಪ್ರಸಕ್ತ ಪರಿಸ್ಥಿತಿಗಾಗಿ ತನ್ನ ಹಿಂದಿನ ಅಧ್ಯಕ್ಷರನ್ನು ದೂಷಿಸದ ಒಬ್ಬನೇ ಒಬ್ಬ ಅಧ್ಯಕ್ಷನೆಂದರೆ ಅದು ಜಾರ್ಜ್ ವಾಷಿಂಗ್ಟನ್!" ಎಂಬ ಸಾಲು ಸಾಕು ಅಮೆರಿಕಾದ ಅಧ್ಯಕ್ಷರ ಮನಸ್ಥಿತಿ ಅರ್ಥೈಸಿಕೊಳ್ಳಲು. ಚುನಾವಣಾ ಪ್ರಚಾರದಲ್ಲಿ ಅದೆಂಥಾ ವಿಭಿನ್ನ ವಿಚಿತ್ರ ನಿಲುವುಗಳನ್ನು ಹೊಂದಿದ್ದರೂ ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಅಮೆರಿಕನ್ ವ್ಯವಸ್ಥೆ ಅಧ್ಯಕ್ಷನನ್ನು ತನ್ನ ದೇಶದ ಅವಶ್ಯಕತೆಗಳಿಗೆ ತಕ್ಕಂತೆ ರೂಪಿಸಿಕೊಳ್ಳುತ್ತದೆ ಎನ್ನುವುದು ಚರಿತ್ರೆ ದೃಢಪಡಿಸಿದ ಸತ್ಯ. ಹೀಗಾಗಿ ಟ್ರಂಪ್ ಅಧ್ಯಕ್ಷರಾದ ಕೂಡಲೇ ಪ್ರಚಾರದ ಸಂದರ್ಭಗಳಲ್ಲಿ ಮಾಡಿದ ಹೇಳಿಕೆಗಳೆಲ್ಲವನ್ನು ಜಾರಿಗೊಳಿಸುತ್ತಾರೆ ಎಂದಲ್ಲ. ಟ್ರಂಪ್ ಆಡಳಿತ ವೈಖರಿಯನ್ನು ವಿಶ್ಲೇಷಿಸಲು ಇದು ಸರಿಯಾದ ಸಮಯವೂ ಅಲ್ಲ. 20 ಜನವರಿ 2017ರಂದು ಟ್ರಂಪ್ ಅಧಿಕೃತವಾಗಿ ತನ್ನ ನೀತಿಗಳ ಕುರಿತಾಗಿ ಮಾಡಲಿರುವ ಭಾಷಣ ಮುಂದಿನ ನಾಲ್ಕು ವರ್ಷಗಳ ಅಮೆರಿಕಾ ವಿದೇಶಾಂಗ ನೀತಿಗೆ ನೀಲಿ ನಕಾಶೆ ಒದಗಿಸಲಿದೆ.

(This article was published in Hosa Digantha newspaper on 15 November 2016)






      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಭಾರತ-ಇಸ್ರೇಲ್ ಮೈತ್ರಿ ಮತ್ತು ಪ್ಯಾಲೆಸ್ಟೀನ್ ವಿವಾದ ?

ಭಾರತದ ಆರ್ಥಿಕ, ರಾಜಕೀಯ ಮತ್ತು ಸಮರತಾಂತ್ರಿಕ ಆಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳದೆ ಪ್ಯಾಲೆಸ್ಟೀನ್-ಇಸ್ರೇಲ್ ವಿವಾದ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಕೆಡುಕಾಗದಂತೆ ಪಶ್ಚಿಮ ಏಷ್ಯಾದಲ್ಲಿ ಭಾರತ ತನ್ನ ಮುಂದಿನ ಹೆಜ್ಜೆ ಇಡುವ ಅನಿವಾರ್ಯತೆಯಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೇರುವುದರೊಂದಿಗೆ, ಪಶ್ಚಿಮ ಏಷ್ಯಾ ರಾಷ್ಟ್ರಗಳತ್ತ ಭಾರತದ ವಿದೇಶಾಂಗ ನೀತಿ ಹೊಸ ತಿರುವು ಪಡೆದುಕೊಂಡಿದೆ. ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳುವತ್ತ ಭಾರತ ಹೆಚ್ಚಿನ ಒಲವು ತೋರಿಸುತ್ತಿದೆ. ರಕ್ಷಣಾ ವಲಯ, ಭಯೋತ್ಪಾದನಾ ನಿಗ್ರಹ, ತಂತ್ರಜ್ಞಾನ, ಕೃಷಿ, ಬಾಹ್ಯಾಕಾಶ ಮತ್ತಿನ್ನಿತರ ಕ್ಷೇತ್ರಗಳಲ್ಲಿ ಈಗಾಗಲೇ ಭಾರತ ಮತ್ತು ಇಸ್ರೇಲ್ ಗಳ ನಡುವೆ ಗಮನಾರ್ಹ ಬಾಂಧವ್ಯವಿದೆ. ಇಸ್ರೇಲ್ ಜೊತೆಗೆ ಮೋದಿ ಸಂಬಂಧ ಹೊಸದೇನಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ, ಗುಜರಾತ್ ಕೇಂದ್ರ ಸರಕಾರಕ್ಕಿಂತ ವಿಭಿನ್ನ ಮತ್ತು ಸ್ವತಂತ್ರ ಆರ್ಥಿಕ ಯೋಜನೆಗಳನ್ನು ಅಳವಡಿಸಿಕೊಂಡು ಬೆಳೆಯುವುದರ ಹಿಂದೆಯೂ ಇಸ್ರೇಲ್ ಪ್ರಮುಖ ಪಾತ್ರ ವಹಿಸಿತ್ತು! ಹೀಗಂದ ಮಾತ್ರಕ್ಕೆ ಮೋದಿ ಪ್ರಧಾನಿಯಾದ ಕೂಡಲೇ ಪ್ಯಾಲೆಸ್ಟೀನ್ ಕುರಿತಾಗಿ ಭಾರತ ದಶಕಗಳಿಂದ ಪಾಲಿಸಿಕೊಂಡು ಬಂದ ನೀತಿಯಲ್ಲೇನೂ ಮೂಲಭೂತ ಬದಲಾವಣೆಗಳಾಗಿಲ್ಲ. ಆದರೆ ಪ್ಯಾಲೆಸ್ಟೀನ್ ವಿಷಯದಲ್ಲಿ ಭಾರತ ತನ್ನನ್ನು ತಾನು ಗಮನಾರ್ಹವಾಗಿ ಸೀಮಿತಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಆರಂಭದಿಂದಲೂ ಭಾರತ ಮತ್ತು ಇಸ್ರೇಲ್ ಗಳ ರಾಜತಾಂತ್ರಿಕ ಸಂಬಂಧಗಳ ಮೇಲೆ ಇಸ್ರೇಲ್-ಪ್ಯಾಲೆಸ್ಟೀನ್ ಸಮಸ್ಯೆ ಆಗಾಧ ಪರಿಣಾಮ ಬೀರಿದೆ. ಭಾರತದ ವಿದೇಶಾಂಗ ನೀತಿ ಪ್ಯಾಲೆಸ್ಟೀನ್ ಪರವಾಗಿದ್ದು, ಭಾರತ ಜಾಗತಿಕ ವೇದಿಕೆಯಲ್ಲಿ ಪ್ಯಾಲೆಸ್ಟೀನ್ ಸ್ವತಂತ್ರ ರಾಷ್ಟ್ರದ ಪರ ನಿಲುವನ್ನು ಕಾಪಾಡಿಕೊಂಡು ಬಂದಿದೆ. ಪಶ್ಚಿಮ ಏಷ್ಯಾದ ಅರಬ್ ದೇಶಗಳೊಂದಿಗೆ ಸೌಹಾರ್ದ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದಾಗಿ ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ಭಾರತ ಕಡೆಗಣಿಸಬೇಕಾಯ್ತು. 1992ರಲ್ಲಿ ನರಸಿಂಹ ರಾವ್ ಮುಂದಾಳತ್ವ ಇಸ್ರೇಲ್ ಜೊತೆಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ನಡೆಗಳಿಗೆ ಸಾಕ್ಷಿಯಾದರೂ, ಭಾರತ ಪ್ಯಾಲೆಸ್ಟೀನ್ ಗೆ ನೀಡುತ್ತಿದ್ದ ಬೆಂಬಲ ಕಡಿಮೆಯಾಗಿಲ್ಲದೇ ಇರುವುದು ಭಾರತ- ಇಸ್ರೇಲ್ ಸಂಬಂಧಗಳಲ್ಲಿರುವ ವಿರೋಧಾಭಾಸಗಳಿಗೆ ಸಾಕ್ಷಿಯಾಗಿದೆ.

ಈವರೆಗೆ ಇಸ್ರೇಲ್ ಗೆ ಭೇಟಿ ನೀಡಿದ ಭಾರತದ ರಾಜತಾಂತ್ರಿಕ ಪ್ರತಿನಿಧಿಗಳು, ಪ್ಯಾಲೆಸ್ಟೀನ್ ಗೂ ಭೇಟಿ ನೀಡುವುದರ ಮೂಲಕ ಭಾರತಕ್ಕೆ ಪ್ಯಾಲೆಸ್ಟೀನ್ ಜೊತೆಗಿನ ಸಂಬಂಧಗಳೂ ಮಹತ್ವಪೂರ್ಣ ಎಂಬ ಸಂದೇಶ ರವಾನೆಯಾಗಿದೆ. 2000ದಲ್ಲಿ ಕೇಂದ್ರ ಗೃಹ ಸಚಿವ ಎಲ್. ಕೆ. ಅಡ್ವಾನಿ ಮತ್ತು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಹಾಗೂ 2012ರಲ್ಲಿ ವಿದೇಶಾಂಗ ಸಚಿವ ಎಸ್. ಎಂ ಕೃಷ್ಣ ಇಸ್ರೇಲ್ ಭೇಟಿ ನೀಡುತ್ತಾರೆ. ಅದರೆ ಈ ವಿದೇಶ ಪ್ರವಾಸ ಇಸ್ರೇಲ್ ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಭಾರತದ ಸಚಿವರು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಾಯಕರೊಂದಿಗೆ ಸಮಾನ ಮಾತುಕತೆ ನಡೆಸುತ್ತಾರೆ . ಹೀಗಾಗಿ ಈ ಪ್ರಯತ್ನಗಳು ಪ್ರಾದೇಶಿಕ ಭೇಟಿಗಳಾಗಿ ಪರಿಗಣಿಸಲ್ಪಟ್ಟಿವೆಯೇ ವಿನಃ ಇಸ್ರೇಲ್ ಭೇಟಿ ಎಂದಲ್ಲ. ಈ ಹಿನ್ನೆಲೆಯಲ್ಲಿ 2014 ರ ನವೆಂಬರ್ ನಲ್ಲಿ ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಇಸ್ರೇಲ್ ಭೇಟಿ ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಿ ಗುರುತಿಸಲ್ಪಡುತ್ತದೆ. ಕಾರಣ ರಾಜನಾಥ್ ಸಿಂಗ್ ಭೇಟಿ ಇಸ್ರೇಲ್ ಗೆ ಮಾತ್ರ ಸೀಮಿತವಾಗಿರುತ್ತದೆ. ಪ್ಯಾಲೆಸ್ಟೀನ್ ಕಡೆಗಣಿಸುವ ಮೂಲಕ ಮೋದಿ ಸರಕಾರ ಪಶ್ಚಿಮ ಏಷ್ಯಾ ಕುರಿತಾದ ಸಾಂಪ್ರದಾಯಿಕ ವಿದೇಶಾಂಗ ನೀತಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಎಂಬ ಬಗ್ಗೆ ಚರ್ಚೆಗಳೂ ನಡೆದಿತ್ತು. ಈ ವಿಷಯವಾಗಿ ಹೆಚ್ಚಿನ ಚರ್ಚೆ ವಿವಾದಗಳಿಗೆ ಆಸ್ಪದ ನೀಡದೆ ಮುಂದೆ ಅಕ್ಟೋಬರ್ 2015ರಲ್ಲಿ ಪ್ರಣಬ್ ಮುಖರ್ಜಿ ಇಸ್ರೇಲ್ ಜೊತೆಗೆ ಪ್ಯಾಲೆಸ್ಟೀನ್ ಮತ್ತು ಜೋರ್ಡಾನ್ ಗಳಿಗೆ ಭೇಟಿ ನೀಡಿದ್ದರು. ಜನವರಿ 2016 ರ ವಿದೇಶ ಪ್ರವಾಸದಲ್ಲಿ ಸುಷ್ಮಾ ಸ್ವರಾಜ್ ಇಸ್ರೇಲ್, ಪ್ಯಾಲೆಸ್ಟೀನ್ ಮತ್ತು ಜೋರ್ಡಾನ್ ಗಳಿಗೆ ಭೇಟಿ ನೀಡಿ ಪ್ಯಾಲೆಸ್ಟೀನ್ ಪರವಾದ ಭಾರತದ ನಿಲುವನ್ನು ಸಮರ್ಥಿಸಿಕೊಂಡರು.

ಸೆಪ್ಟೆಂಬರ್ 2014ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆ ಕಾರ್ಯಕ್ರಮವೊಂದರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಮೋದಿಯವರನ್ನು ಇಸ್ರೇಲ್ ಗೆ ಆಹ್ವಾನಿಸಿದ್ದಾರೆ. ಮುಂದೆ ಮಾರ್ಚ್ 2015ರಲ್ಲಿ ಸಿಂಗಾಪೂರ್ ನಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮವೊಂದರಲ್ಲಿ ಇಸ್ರೇಲ್ ಅಧ್ಯಕ್ಷ ರೇವೆನ್ ರಿವ್ಲಿನ್ ರನ್ನು ಭೇಟಿ ಮಾಡಿದ ಮೋದಿ ಇಸ್ರೇಲ್ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಮೋದಿ ಇಸ್ರೇಲ್ ಗೆ ಮಾತ್ರ ಭೇಟಿ ನೀಡಿದಲ್ಲಿ ಭಾರತ ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬಂದ ಸಾಂಪ್ರದಾಯಿಕ ವಿದೇಶಾಂಗ ನೀತಿಗೆ ತಿಲಾಂಜಲಿ ಇಟ್ಟಂತಾಗುತ್ತದೆ. ಸ್ವತಂತ್ರ ಪ್ಯಾಲೆಸ್ಟೀನ್ ರಾಜ್ಯವನ್ನು ಸತತವಾಗಿ ಬೆಂಬಲಿಸಿಕೊಂಡು ಬಂದ ಭಾರತ ತನ್ನ ನೀತಿಯನ್ನು ಇಸ್ರೇಲ್ ಪರ ನೀತಿಯನ್ನಾಗಿ ಬದಲಾಯಿಸಿಕೊಳ್ಳುತ್ತದೆ. ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಅರಬ್ ರಾಷ್ಟ್ರಗಳೊಂದಿಗೆ ಕಾಪಾಡಿಕೊಂಡು ಬಂದ ಸೌಹಾರ್ದತೆಯನ್ನೂ ಇಸ್ರೇಲ್ ಮಿತೃತ್ವಕ್ಕೋಸ್ಕರ ಪಣಕ್ಕಿಡಬೇಕಾಗುತ್ತದೆ. ಪೆಟ್ರೋಲಿಯಂ ಇನ್ನಿತರ ಶಕ್ತಿಮೂಲಗಳಿಗಾಗಿ ಇರಾನ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲೆ ಭಾರತ ಅವಲಂಬಿತವಾಗಿದ್ದು ಇಸ್ರೇಲ್ ಸ್ನೇಹ ಈ ದೇಶಗಳೊಂದಿಗೆ ವೈರತ್ವಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದಲ್ಲದೇ 2017ರ ಉತ್ತರ ಪ್ರದೇಶ ಚುನಾವಣೆಗಳ ಮೇಲೆ ಇದು ದುಬಾರಿ ಪರಿಣಾಮ ಬೀರುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿರುವ ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನೂ ಗಮನದಲ್ಲಿಟ್ಟುಕೊಂಡರೆ, ಬಿ.ಜೆ.ಪಿ ಗೆ ಪ್ಯಾಲೆಸ್ಟೀನ್ ವಿರೋಧಿ ನೀತಿ ಮುಂದಿನ ಚುನಾವಣೆಯಲ್ಲಿ ಮಾರಕವಾಗಬಹುದು. ಅಂತರಾಷ್ಟ್ರೀಯ ಮಟ್ಟದಲ್ಲೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಪ್ರಯತ್ನಿಸುತ್ತಿರುವ ಭಾರತಕ್ಕೆ ಅರಬ್ ದೇಶಗಳ ಬೆಂಬಲ ಅತ್ಯಗತ್ಯ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅರಬ್ ದೇಶಗಳ ಸಂಖ್ಯಾಬಲ ಭಾರತದ ಆಕಾಂಕ್ಷೆಗೆ ಮುಳ್ಳಾಗಬಹುದು. ಹೀಗಾಗಿ ಭಾರತದ ಆರ್ಥಿಕ, ರಾಜಕೀಯ ಮತ್ತು ಸಮರತಾಂತ್ರಿಕ ಆಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳದೆ ಪ್ಯಾಲೆಸ್ಟೀನ್-ಇಸ್ರೇಲ್ ವಿವಾದ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಕೆಡುಕಾಗದಂತೆ ಪಶ್ಚಿಮ ಏಷ್ಯಾದಲ್ಲಿ ಭಾರತ ತನ್ನ ಮುಂದಿನ ಹೆಜ್ಜೆ ಇಡುವ ಅನಿವಾರ್ಯತೆಯಿದೆ.

ನಡೆದುಹೋದ ಘಟನೆಗಳೇನೇ ಇದ್ದರೂ ಭಾರತ ವಿದೇಶಾಂಗ ನೀತಿ ಚರಿತ್ರೆಯ ಸಂಕೋಲೆಗಳನ್ನು ಬೀಡಿಸಿಕೊಂಡು ಹೊಸ ಗಮ್ಯದತ್ತ ದೃಷ್ಟಿ ನೆಟ್ಟಿದೆ. ಎಪ್ರಿಲ್ 2016ರಲ್ಲಿ ಯುನೆಸ್ಕೋ ಸಾಮಾನ್ಯ ಸಭೆಯೊಂದರಲ್ಲಿ ಭಾರತ ಮತ್ತು ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳು ಅಲ್- ಅಕ್ಸಾ ಮಸೀದಿ ಮತ್ತು ಹರಾಮ್ ಅಲ್-ಶರೀಫ್ ಗಳಲ್ಲಿ ಇಸ್ರೇಲ್ ದೌರ್ಜನ್ಯ ವಿರೋಧಿಸಿ ಇಸ್ರೇಲನ್ನು ಖಂಡಿಸಿದ್ದವು. ಆದರೆ ಇದೇ ವಿಷಯ ಅಕ್ಟೋಬರ್ 2016ರಲ್ಲಿ ಚರ್ಚೆಗೆ ಬಂದಾಗ ಇಸ್ರೇಲ್ ವಿರುದ್ಧ ಮತ ಹಾಕಲು ಭಾರತ ನಿರಾಕರಿಸಿತ್ತು! ಈ ಎರಡೂ ಸಂದರ್ಭಗಳಲ್ಲಿ ಚರ್ಚಾವಿಷಯದಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ, ಇಸ್ರೇಲ್ ಕುರಿತಾದ ಭಾರತದ ಧೋರಣೆ ಬದಲಾಗಿತ್ತು! ಇತ್ತೀಚೆಗೆ ಹಿಮಾಚಲ ಪ್ರದೇಶದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿಯವರು ಭಾರತೀಯರ ಸೈನಿಕರ ಶೌರ್ಯ, ಪರಾಕ್ರಮಗಳ ಬಗ್ಗೆ ಪ್ರಸ್ತಾಪಿಸುತ್ತಾ ಸರ್ಜಿಕಲ್ ಸ್ಟ್ರೈಕ್ ಗಳನ್ನು ಈ ಹಿಂದೆ  ಇಸ್ರೇಲ್ ಕಾರ್ಯರೂಪಕ್ಕಿಳಿಸಿತ್ತು ಮತ್ತು ಭಾರತದ ಸೇನೆ ವಿಶ್ವದ ಯಾವುದೇ ಸೇನೆಗೂ ಕಡಿಮೆಯಿಲ್ಲ ಎಂದಿದ್ದರು. ಈ ಸಂದರ್ಭ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಿಂದ ಮುಖ್ಯವಾಹಿನಿ ಮಾಧ್ಯಮಗಳವರೆಗೂ ಇಸ್ರೇಲ್ ಯುದ್ಧ ನೀತಿ ಮತ್ತು ಸಮರ ತಂತ್ರಗಳ ಬಗ್ಗೆ ಚರ್ಚೆಯಾಗಿತ್ತು.

ಇತ್ತೀಚೆಗೆ ಪಶ್ಚಿಮ ಏಷ್ಯಾದ ವಾತಾವರಣವೂ ಬಹಳಷ್ಟು ಬದಲಾಗಿದ್ದು, ಈ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸೃಷ್ಟಿಸಿದ ಗೊಂದಲಗಳು ಮತ್ತು ಕೋಲಾಹಲಗಳಿಂದಾಗಿ ಇಸ್ರೇಲ್-ಪ್ಯಾಲೆಸ್ಟೀನ್ ವಿವಾದ ಮಸುಕಾಗಿದೆ. ಪಶ್ಚಿಮ ಏಷ್ಯಾದ ರಾಷ್ಟ್ರಗಳು ತಮ್ಮ ಒಳಜಗಳಗಳು ಮತ್ತು ಉಗ್ರರ ವಿಧ್ವಂಸಕ ಕೃತ್ಯಗಳಿಂದಾಗಿ ಭಾರತ-ಇಸ್ರೇಲ್ ಸಂಬಂಧಗಳ ಬಗ್ಗೆ ಯೋಚಿಸುವ ಪರಿಸ್ಥಿತಿಯಲ್ಲಿಲ್ಲ. ಈ ಅಪರೂಪದ ಅವಕಾಶ ಭಾರತ-ಇಸ್ರೇಲ್ ಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬೆಸೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಅತ್ತ ಪಶ್ಚಿಮ ಏಷ್ಯಾದ ಅರಬ್ ರಾಷ್ಟ್ರಗಳೊಂದಿಗೂ ವಿಶ್ವಾಸ ಉಳಿಸಿಕೊಂಡು ಇಸ್ರೇಲ್ ಮಿತೃತ್ವವನ್ನೂ ಗಟ್ಟಿ ಮಾಡಿಕೊಳ್ಳುವ ರಾಜತಾಂತ್ರಿಕ ಮುತ್ಸದ್ಧಿತನ ಭಾರತದ ವಿದೇಶಾಂಗ ನೀತಿಯ ಸದ್ಯದ ಅವಶ್ಯಕತೆ.

(This article was published in Hosa Digantha newspaper on 8 November 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಅಮೆರಿಕಾದ ಅಸ್ಮಿತೆ, ಐಕ್ಯತೆ ಮತ್ತು ಶತ್ರುಗಳು

1990ರಲ್ಲಿ ಸೊವಿಯೆತ್ ಒಕ್ಕೂಟ ಛಿಧ್ರವಾದಾಗ, ಶೀತಲ ಸಮರ ಅಂತ್ಯವಾಗುವ ಸಂದರ್ಭದಲ್ಲಿ ಸೊವಿಯೆತ್ ಮೂಲದ ರಾಜಕೀಯ ವಿಶ್ಲೇಷಕ ಜಾರ್ಜಿ ಅರ್ಬಟೊವ್ ಅಮೆರಿಕಾವನ್ನು ಉದ್ದೇಶಿಸಿ ಈ ರೀತಿ ಹೇಳುತ್ತಾರೆ, "ನಾವು ನಿಮ್ಮ ವಿರುದ್ಧ ಒಂದು ಭಯಾನಕ ಕೆಲಸ ಮಾಡಲಿದ್ದೇವೆ. ಅದೇನೆಂದರೆ ಇನ್ನು ಮುಂದೆ ನಿಮಗೆ ಶತ್ರುಗಳಿರುವುದಿಲ್ಲ!" ಹೌದು ಶತ್ರುಗಳಿಲ್ಲದೇ ಇರುವುದು ಅಮೆರಿಕಾದ ಪಾಲಿಗೆ ದುಃಸ್ವಪ್ನವೇ ಸರಿ!
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)



ರಾಷ್ಟ್ರ ಮತ್ತು ರಾಷ್ಟ್ರೀಯ ಅಸ್ಮಿತೆಗಳನ್ನು ರೂಪಿಸುವಲ್ಲಿ ಹಲವಾರು ಅಂಶಗಳು ಮುಖ್ಯ ಪಾತ್ರ ವಹಿಸುತ್ತವೆ. ಇತಿಹಾಸ, ಸಂಸ್ಕೃತಿ, ಭೌಗೋಳಿಕ ಅಂಶಗಳು, ಭಾಷೆ ಇನ್ನಿತರ ಅನೇಕ ಅಂಶಗಳು ಸೇರಿ ವಿಭಿನ್ನ ಸಮುದಾಯಗಳನ್ನೆಲ್ಲಾ ಒಂದೆಡೆ ಸೇರಿಸಿ ರಾಷ್ಟ್ರೀಯ ಅಸ್ಮಿತೆಯೊಂದು ಜೀವ ತಲೆಯುತ್ತದೆ. ವಿಪರ್ಯಾಸವೆಂಬಂತೆ ಶತ್ರು ಭಯ ಮತ್ತು ಯುದ್ಧಗಳೂ ರಾಷ್ಟ್ರವೊಂದರ ಅಸ್ಮಿತೆಯನ್ನು ರೂಪಿಸಬಲ್ಲವು. ರಾಷ್ಟ್ರದೊಳಗಿನ ಆಂತರಿಕ ವೈಮನಸ್ಸು ಪ್ರತ್ಯೇಕತಾವಾದಗಳನ್ನು ನಿವಾರಿಸಿಬಿಡುವಲ್ಲೂ ನಿರಂತರ ಶತ್ರು ಕಾಟ ಮತ್ತು ಯುದ್ಧಗಳು ಮಹತ್ತರ ಪಾತ್ರವಹಿಸುತ್ತವೆ! ಎಲ್ಲಾ ರಾಷ್ಟ್ರಗಳ ವಿಚಾರದಲ್ಲೂ ಇದು ನಿಜ. ಆದರೆ ಕೆಲ ದೇಶಗಳಿಗಂತೂ ತಮ್ಮ ಅಸ್ಮಿತೆ ಮತ್ತು ಏಕತೆಯನ್ನೂ ಉಳಿಸಿಕೊಳ್ಳಲು ಪ್ರತಿ ಕಾಲಘಟ್ಟದಲ್ಲೂ ಕೆಲ ವೈರಿಗಳು ಮತ್ತು ಯುದ್ಧಗಳು ಅನಿವಾರ್ಯ. ಸ್ವತಂತ್ರಗೊಂಡ ನಂತರ ಹಲವು ವರ್ಷಗಳನ್ನು 'ದಿವ್ಯ ನಿರ್ಲಿಪ್ತತೆ'ಯನ್ನೇ ವಿದೇಶಾಂಗ ನೀತಿಯನ್ನಾಗಿಸಿಕೊಂಡಿದ್ದ ಅಮೆರಿಕಾದ ಸಂಯುಕ್ತ ಸಂಸ್ಥಾನ ಈ ಮಾತಿಗೆ ಜ್ವಲಂತ ಉದಾಹರಣೆ.

ಅಮೆರಿಕಾ ಚರಿತ್ರೆಯುದ್ದಕ್ಕೂ 'ಸುರಕ್ಷಿತ ಯುಗ' ಮತ್ತು 'ಭಯದ ಯುಗ'ಗಳೆಂಬ ಎರಡು ಪರ್ಯಾಯ ಯುಗಗಳ ಪ್ರಭಾವ ಕಾಣಬಹುದು. ಈ ಎರಡು ಯುಗಗಳು ರಾತ್ರಿ- ಹಗಲುಗಳಂತೆ ಒಂದಾದ ಮೇಲೆ ಇನ್ನೊಂದರಂತೆ ಕಾಲ ಕಾಲಕ್ಕೆ ಅಮೆರಿಕಾದ ಜನರ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಸುರಕ್ಷಿತ ಯುಗದಲ್ಲಿ ಬಾಹ್ಯ ಶತ್ರುಗಳ ಭಯವಿಲ್ಲದೇ ಇರುವುದರಿಂದ ಅಮೆರಿಕನ್ನರು ಆಂತರಿಕ ವಿಷಯಗಳೆಡೆ ಹೆಚ್ಚು ಗಮನ ನೀಡುತ್ತಾರೆ. ಬಾಹ್ಯ ಶತ್ರುಗಳ ಕೊರತೆ ಪ್ರತ್ಯೇಕತಾ ಭಾವನೆಗಳನ್ನು ಬೆಳೆಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಪ್ರಜೆಗಳಿಗೆ ಅಧ್ಯಕ್ಷನಷ್ಟೇ ಅಲ್ಲದೇ ಇನ್ನಿತರ ರಾಷ್ಟ್ರೀಯ ಸಂಸ್ಥೆಗಳ ಮೇಲೆ ಅವಿಶ್ವಾಸ ಮೂಡುತ್ತದೆ. ಮಿಲಿಟರಿ ಹಸ್ತಕ್ಷೇಪಗಳೂ ಜನಾನುರಾಗ ಕಳೆದುಕೊಳ್ಳುತ್ತವೆ. ಇನ್ನೊಂದೆಡೆ ಭಯದ ಯುಗ ಅಮೆರಿಕಾ ಜನತೆಯಲ್ಲಿ ಬಾಹ್ಯ ಶತ್ರುವಿನ ಭಯವನ್ನು ಹುಟ್ಟುಹಾಕುತ್ತದೆಯಷ್ಟೇ ಅಲ್ಲಾ ಇದೇ ಅಭದ್ರತೆಯ ಕಾರಣದಿಂದಾಗಿಯೇ ಜನ ರಾಷ್ಟ್ರೀಯ ಐಕ್ಯತೆಗೆ ಪ್ರಾಮುಖ್ಯತೆ ನೀಡುತ್ತಾರೆ. ಅಧ್ಯಕ್ಷ ಮತ್ತು ರಾಷ್ಟ್ರೀಯ ಸಂಸ್ಥೆಗಳ ಮೇಲೆ ಪೂರ್ಣ ವಿಶ್ವಾಸ ವ್ಯಕ್ತ ಪಡಿಸುತ್ತಾರೆ. ಯುದ್ಧ ಸಂದರ್ಭಗಳಲ್ಲಿ ಅಮೆರಿಕಾದ ಜನತೆ ತಮ್ಮ ಸರಕಾರಗಳಿಗೆ ನೀಡಿದ ಬೆಂಬಲವೇ ಇದಕ್ಕೆ ಸಾಕ್ಷಿ.

ಹದಿನೆಂಟನೇ ಶತಮಾನದ ಕೊನೆಯ ದಶಕಗಳಲ್ಲಿ ಬ್ರಿಟಿಷ್ ನಿಯಂತ್ರಣದಲ್ಲಿದ್ದ ಅಮೆರಿಕನ್ ವಸಾಹತುಗಳು ವಿಭಿನ್ನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನೆದುರಿಸುತ್ತಿದ್ದವು. ತಮ್ಮದೇ ಆದ ಪ್ರತ್ಯೇಕ ಅಸ್ಮಿತೆ ಮತ್ತು ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತಿದ್ದ ಎಲ್ಲಾ ವಸಾಹತುಗಳು ಒಗ್ಗಟ್ಟಾಗಿದ್ದು ಬ್ರಿಟನ್ ಎಂಬ ಬಾಹ್ಯ ಶಕ್ತಿಯನ್ನು ಒದ್ದೋಡಿಸಲು! 1776ರ ಅಮೆರಿಕಾದ ಸ್ವಾತಂತ್ರ್ಯದ ಘೋಷಣೆ ಮತ್ತು ಅಮೆರಿಕಾದ ಕ್ರಾಂತಿಗೆ ಅದರದ್ದೇ ಆದ ಇತಿಮಿತಿಗಳಿದ್ದವು. ಬ್ರಿಟನ್ ಸೋಲಿಸಲು ಒಟ್ಟುಗೂಡಿದ್ದ ವಸಾಹತುಗಳು ಒಂದು ಪೂರ್ಣ ಪ್ರಮಾಣದ ಒಕ್ಕೂಟವಾಗಿರಲಿಲ್ಲ ಮತ್ತು ಯುದ್ಧಕ್ಕೆ ಅವಶ್ಯಕವಾದ ಸಂಪತ್ತು ಹಾಗೂ ಸೈನಿಕ ಶಕ್ತಿಯನ್ನು ಒದಗಿಸುವುದರ ಕುರಿತಾಗಿಯೂ ವಸಾಹತುಗಳ ಮಧ್ಯೆ ವಾಗ್ಯುದ್ಧವೇ ನಡೆದಿತ್ತು. ಆದರೆ ಇವೆಲ್ಲವನ್ನೂ ಮೀರಿಸಿ ಅಮೆರಿಕನ್ನರನ್ನು ಒಂದಾಗಿ ಹೋರಾಡುವಂತೆ ಮಾಡಿದ್ದು ಅವರೆದುರಿಗಿದ್ದ ಬಾಹ್ಯ ಶತ್ರು ಬ್ರಿಟನ್! ಹೀಗೆ ಬ್ರಿಟನ್ ಭಯ ಅಮೆರಿಕಾದ ವಸಾಹತುಗಳಲ್ಲಿ ರಾಷ್ಟ್ರೀಯ ಅಸ್ಮಿತೆಯೊಂದರ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಸ್ವಾತಂತ್ರ್ಯಾನಂತರದಲ್ಲೂ ಬ್ರಿಟನ್ 1783ರ ಶಾಂತಿ ಒಪ್ಪಂದವನ್ನು ಕಾಲ ಕಸ ಮಾಡಿಕೊಂಡು ಅನಧಿಕೃತವಾಗಿ ತನ್ನ ಮಿಲಿಟರಿ ಪೋಸ್ಟ್ ಗಳನ್ನು ಸ್ಥಾಪಿಸಿತ್ತು. ಮಿಸ್ಸಿಸ್ಸಿಪ್ಪಿಯನ್ನು ಮುಚ್ಚಿದ ಸ್ಪೈನ್ ಅಮೆರಿಕಾದ ಹಡಗುಗಳ ಸಂಚಾರವನ್ನು ನಿರ್ಬಂಧಿಸಿದ್ದಷ್ಟೇ ಅಲ್ಲ ಕಡಲ್ಗಳ್ಳರೂ ಕೂಡ ಅಮೆರಿಕಾ ಪಾಲಿನ ಶತ್ರುಗಳಾಗಿ ಹೊರಹೊಮ್ಮಿದರು. ಈ ಶತ್ರುಗಳನ್ನೆಲ್ಲಾ ನಿಭಾಯಿಸಲು ಬಲಿಷ್ಠ ಕೇಂದ್ರ ಸರಕಾರದ ಅಗತ್ಯತೆಯನ್ನು ಮನಗಂಡ ಅಮೆರಿಕನ್ನರ ಆಶಯ 1787ರಲ್ಲಿ ರಚಿಸಿದ ಅಮೆರಿಕಾದ ಸಂವಿಧಾನದಲ್ಲಿ ಪ್ರತಿಬಿಂಬಿತವಾಯ್ತು. ಭಯದ ಯುಗ ಅಮೆರಿಕನ್ನರನ್ನು ಸಾಧ್ಯವಾದ ಮಟ್ಟಿಗೆ ಅಧಿಕಾರದ ಕೇಂದ್ರೀಕರಣದತ್ತ ಕೊಂಡೊಯ್ದಿತ್ತು!

ಹತ್ತೊಂಬತ್ತನೇ ಶತಮಾನದ ಆರಂಭಿಕ ದಶಕಗಳಲ್ಲಿ ಭಯದ ವಾತಾವರಣ ಮುಗಿದು ಅಮೆರಿಕಾದಲ್ಲಿ ಸುರಕ್ಷಿತ ಯುಗಕ್ಕೆ ದಾರಿ ಮಾಡಿಕೊಟ್ಟಿತ್ತು. ಅಟ್ಲಾಂಟಿಕ್ ಸಾಗರ, ಶಾಂತಸಾಗರಗಳಿಂದ ರಕ್ಷಿಸಲ್ಪಟ್ಟ ಅಮೆರಿಕಾದ ಜನಸಂಖ್ಯೆ ಮತ್ತು ಆರ್ಥಿಕತೆಯೂ ಸದೃಢವಾಗಿ ಬೆಳೆದುದರಿಂದ ವಿಶ್ವದ ಯಾವ ಶಕ್ತಿಯೂ ಅಮೆರಿಕಾವನ್ನು ಮುಟ್ಟಲಾಗದು ಎಂಬ ಅಭಿಪ್ರಾಯ ಸರ್ವೇ ಸಾಮಾನ್ಯವಾಯಿತು. ಇದೇ ಕಾರಣಕ್ಕಾಗಿಯೇ ಅಬ್ರಹಾಂ ಲಿಂಕನ್ 1838ರಲ್ಲಿ ತನ್ನ ಲೀಸಿಯಂ ಭಾಷಣದಲ್ಲಿ ಈ ರೀತಿ ಹೇಳಿದ್ದರು, "ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಎಲ್ಲಾ ಸೈನ್ಯಗಳು ಒಟ್ಟಾಗಿ, ಪ್ರಪಂಚದ ಎಲ್ಲಾ ಸಂಪತ್ತು ಮಿಲಿಟರಿಗೋಸ್ಕರ ವ್ಯಯವಾದರೂ, ನೆಪೋಲಿಯನ್ ಬೊನಾಪಾರ್ಟ್ ನಂಥ ದಕ್ಷ ಸೇನಾಧಿಪತಿಯಾಗಿ ಬಂದು ಸಾವಿರಾರು ವರ್ಷಗಳು ಕಾದಾಡಿದರೂ ಅಮೆರಿಕಾವನ್ನು ಸೋಲಿಸಲಾಗದು.." ಈ ಮಾತುಗಳು ಲಿಂಕನ್ ವಿರಾವೇಶವೋ ಅಥವಾ ಹುಂಬತನವೋ ಎನ್ನುವುದು ಪ್ರತ್ಯೇಕ ಚರ್ಚೆಯೇ ಸರಿ. ಅದರೆ ಇದೇ ಭಾಷಣದಲ್ಲಿ ಲಿಂಕನ್ ಹೇಳಿದ ಇನ್ನೊಂದು ಸಾಲು ಚಿಂತನೆಗೆ ಎಡೆ ಮಾಡಿಕೊಡುತ್ತದೆ ಅದೇನೆಂದರೆ, "ಒಂದು ವೇಳೆ ಅಮೆರಿಕಾ ಸೋತುಹೋಗುತ್ತದೆ ಎಂದಾದಲ್ಲಿ, ಆ ಸೋಲಿನ ಕಾರಣ ಅಮೆರಿಕನ್ನರೇ ಆಗಿರುತ್ತಾರೆ!" ಲಿಂಕನ್ ನುಡಿದ ಈ ಭವಿಷ್ಯ ಮುಂದೆ ಬಾಗಶಃ ನಿಜವಾಗುತ್ತದೆ. ವಿದೇಶಿ ಆಕ್ರಮಣಕಾರರ ಭಯವಿಲ್ಲದೇ ಹೋದುದರಿಂದ ಅಮೆರಿಕಾ ಆಂತರಿಕ ವಿಷಯಗಳಿಗೆ, ಅದರಲ್ಲೂ ಗುಲಾಮಿತನದ ನಿವಾರಣೆಯ ಬಗ್ಗೆ ಎದ್ದ ಹೊಸ ಪ್ರಶ್ನೆಗಳು 1961ರಲ್ಲಿ ಅಮೆರಿಕಾದೊಳಗೊಂದು ಆಂತರಿಕ ನಾಗರಿಕ ಯುದ್ಧಕ್ಕೆ ಕಾರಣವಾದವು. ಈ ಆಂತರಿಕ ಯುದ್ಧ ಪ್ರತ್ಯೇಕತೆಯ ಕೂಗಿಗೂ ಅವಕಾಶ ಮಾಡಿಕೊಟ್ಟಿತ್ತು. ಅಮೆರಿಕಾಕ್ಕೆ ಯಾವುದೇ ಬಾಹ್ಯ ಶತ್ರುಗಳ ಭಯವಿಲ್ಲದ ಕಾರಣಕ್ಕೇ ಈ ಆಂತರಿಕ ಬಿಕ್ಕಟ್ಟು ಉದ್ಭವಿಸಿತ್ತು ಎಂಬುದನ್ನು ಇವತ್ತಿಗೂ ಅಮೆರಿಕಾದ ರಾಜತಂತ್ರ ನಿಪುಣರು ಒಪ್ಪಿಕೊಳ್ಳುತ್ತಾರೆ. ಈ ಆಂತರಿಕ ಯುದ್ಧವನ್ನು ಕೊನೆಗಾಣಿಸಲು ಮತ್ತು ಅಮೆರಿಕನ್ನರ ಒಗ್ಗಟ್ಟನ್ನು ಪುನರ್ಸ್ಥಾಪಿಸಲು ಹೊರಗಿನ ಯಾವುದಾದರೊಂದು ಆಕ್ರಮಣದ ಭಯವನ್ನು ಮೂಡಿಸಲೇಬೇಕಾದ ಅನಿವಾರ್ಯತೆಯಿಂದಾಗಿ ಆಗಿನ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಫ್ರಾನ್ಸ್ ಮತ್ತು ಸ್ಪೈನ್ ಗಳ ಮೇಲೆ ಯುದ್ಧ ಘೋಷಿಸಲು ಸಲಹೆ ನೀಡಿದ್ದರು!
1917ರಲ್ಲಿ ಅಮೆರಿಕಾ ಪ್ರಥಮ ಮಹಾಯುದ್ಧದ ರಣರಂಗ ಪ್ರವೇಶಿಸಿದಾಗ ದಶಕಗಳ ನಂತರ ಮತ್ತೆ ಅಮೆರಿಕಾಕ್ಕೆ ಹೊಸ ಶತ್ರುಗಳು ಸಿಕ್ಕಿದ್ದರು. ಸುರಕ್ಷಿತ ಯುಗದಿಂದ ಭಯದ ಯುಗಕ್ಕೆ ಅಮೆರಿಕಾ ಕಾಲಿಟ್ಟಾಗಿತ್ತು. ಭಯ, ಸಿಟ್ಟು, ಆದರ್ಶಗಳು ಮತ್ತು ಸರಕಾರೀ ಪ್ರಾಯೋಜಿತ ಪ್ರಚಾರದಿಂದಾಗಿ ಇಡೀ ಅಮೆರಿಕಾ ಒಂದಾಗಿತ್ತು! ಇವೆಲ್ಲವನ್ನು ಗಮನಿಸಿಯೇ 'ದ ನೇಶನ್' ಪತ್ರಿಕೆ ಈ ಬದಲಾವಣೆಯನ್ನು 'ಅಮೆರಿಕಾದಲ್ಲಿ ದೇಶಪ್ರೇಮದ ಪುನರ್ಜನ್ಮ' ಎಂದು ವ್ಯಾಖ್ಯಾನಿಸಿತ್ತು. ದ್ವಿತೀಯ ಮಹಾಯುದ್ಧದ ಸಂಧರ್ಭದಲ್ಲೂ ಜರ್ಮನಿ ಮತ್ತು ಜಪಾನ್ ಗಳಂಥ ಶತ್ರುಗಳ ಕೃಪೆಯಿಂದಾಗಿ ಅಮೆರಿಕನ್ನರು ತಮ್ಮ ದೇಶಪ್ರೇಮದ ತೀವೃತೆಯನ್ನು ಕಾಪಾಡಿಕೊಳ್ಳುವಂತಾಯ್ತು. ಅಮೆರಿಕನ್ನರಲ್ಲಿ ಈ ಐಕ್ಯತೆಯ ಭಾವನೆ ಶೀತಲ ಸಮರದ ಕಾಲದಲ್ಲಿಯೂ ಮುಂದುವರಿಯುತ್ತದೆ. ಕಾರಣ ಸೊವಿಯೆತ್ ಒಕ್ಕೂಟದ ಆಕ್ರಮಣದ ಭಯ! ವಿಭಿನ್ನ ವಿಶ್ವಶಕ್ತಿಗಳು ವಿಬಿನ್ನ ಕಾಲಘಟ್ಟದಲ್ಲಿ ಅಮೆರಿಕಾದ ಶತ್ರುಗಳಾಗಿ ಅಮೆರಿಕನ್ನರ ಒಗ್ಗಟ್ಟು ಮತ್ತು ಸಮಗ್ರತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣವಾಗುತ್ತವೆ. 1990ರಲ್ಲಿ ಸೊವಿಯೆತ್ ಒಕ್ಕೂಟ ಛಿಧ್ರವಾದಾಗ, ಶೀತಲ ಸಮರ ಅಂತ್ಯವಾಗುವ ಸಂದರ್ಭದಲ್ಲಿ ಸೊವಿಯೆತ್ ಮೂಲದ ರಾಜಕೀಯ ವಿಶ್ಲೇಷಕ ಜಾರ್ಜಿ ಅರ್ಬಟೊವ್ ಅಮೆರಿಕಾವನ್ನು ಉದ್ದೇಶಿಸಿ ಈ ರೀತಿ ಹೇಳುತ್ತಾರೆ, "ನಾವು ನಿಮ್ಮ ವಿರುದ್ಧ ಒಂದು ಭಯಾನಕ ಕೆಲಸ ಮಾಡಲಿದ್ದೇವೆ. ಅದೇನೆಂದರೆ ಇನ್ನು ಮುಂದೆ ನಿಮಗೆ ಶತ್ರುಗಳಿರುವುದಿಲ್ಲ!" ಹೌದು ಶತ್ರುಗಳಿಲ್ಲದೇ ಇರುವುದು ಅಮೆರಿಕಾದ ಪಾಲಿಗೆ ದುಃಸ್ವಪ್ನವೇ ಸರಿ!

ಶೀತಲ ಸಮರದ ನಂತರದ ದಿನಗಳು ಅಮೆರಿಕಾ ಪಾಲಿಗೆ ಸುರಕ್ಷಿತ ಯುಗವಾಗಿ ಮಾರ್ಪಟ್ಟಿವೆ. ಕೆಲವೆಡೆ ಭಯೋತ್ಪಾದಕರ ಕಾಟ ಇದ್ದರೂ, ಅವರನ್ನು ಬಲಿಷ್ಠ ಶತ್ರುಗಳಾಗಿದ್ದ ನಾಝಿ ಜರ್ಮನಿ ಅಥವಾ ಸೊವಿಯೆತ್ ಒಕ್ಕೂಟಗಳ ಜೊತೆ ಹೋಲಿಸಲಾಗದು. ಅಫ್ಘಾನಿಸ್ತಾನ ಮತ್ತು ಇರಾಕ್ ಗಳ ಮೇಲೆ ಅಮೆರಿಕಾ ದಾಳಿ ನಡೆಸಿದಾಗಲೂ ಇದರಿಂದಾಗಿ ಅಮೆರಿಕಾದ ಜನರಲ್ಲಿ ಮೂಡಿದ ಐಕ್ಯತಾ ಭಾವ ಅಲ್ಪಸಮಯಕ್ಕಷ್ಟೇ ಸೀಮಿತವಾಯ್ತು. ಹಿಂದೆ ನಡೆದ ಯುದ್ಧಗಳ ಸಂದರ್ಭಗಳಲ್ಲಿ ಅಮೆರಿಕಾಗೆ ದೊರಕಿದ ಸಾರ್ವಜನಿಕ ಬೆಂಬಲ ಇತ್ತೀಚಿನ ಅಮೆರಿಕಾದ ಕಾರ್ಯಾಚರಣೆಗಳಲ್ಲಿ ಕಡಿಮೆಯಾಗುತ್ತಿರುವುದನ್ನು ಗಮನಿಸಬಹುದು. ಸುರಕ್ಷಿತ ಯುಗದಲ್ಲಿರುವ ಅಮೆರಿಕನ್ನರಿಗೆ ಅಧ್ಯಕ್ಷ ಮತ್ತು ಇನ್ನಿತರ ರಾಷ್ಟ್ರೀಯ ಸಂಸ್ಥೆಗಳ ಮೇಲಿನ ನಿಷ್ಟೆ ಕಡಿಮೆಯಾಗುವುದಷ್ಟೇ ಅಲ್ಲದೇ ದೇಶಪ್ರೇಮದ ತೀವೃತೆಯಲ್ಲೂ ಕಡಿಮೆಯಾಗುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ ಅಮೆರಿಕನ್ನರ ಒಗ್ಗಟ್ಟಿಗೆ ಆಂತರಿಕ ಸಮಸ್ಯೆಗಳಿಗಿಂತಲೂ ಬಾಹ್ಯ ಶತ್ರುಗಳೇ ಹೆಚ್ಚಿನ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕಾಗಿಯೇ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳಲ್ಲೂ ಆಂತರಿಕ ಸಮಸ್ಯೆಗಳಿಗಿಂತಲೂ ಅಂತರಾಷ್ಟ್ರೀಯ ಸಮಸ್ಯೆಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತವೆ. ಯಾರೇ ಅಧ್ಯಕ್ಷರಾದರೂ ಅವರ ಮೊದಲ ಆದ್ಯತೆ ಅಮೆರಿಕಾಕ್ಕೆ ಬಲಿಷ್ಠ ಶತ್ರುವೊಬ್ಬನ ಹುಡುಕಾಟ!

(This article was published in Vishwavani newspaper on 31 October 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಚೀನಾ ಡ್ರ್ಯಾಗನ್ ಗೆ ಜಪಾನ್ ಸಮುರಾಯಿ ಸವಾಲು

ದಕ್ಷಿಣ ಚೀನಾ ವಿವಾದದಲ್ಲಿ ಜಪಾನ್ ಹಸ್ತಕ್ಷೇಪವನ್ನು ಹೇಗೋ ಸಹಿಸಿಕೊಂಡಿರಬಹುದು ಎಂದುಕೊಂಡಿದ್ದ ಚೀನೀಯರಿಗೆ, ಇತ್ತೀಚೆಗೆ ಭಾರತದೊಂದಿಗೂ ಜಪಾನ್ ಹತ್ತಿರವಾಗುತ್ತಿರುವುದು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದೆ. ಭಾರತದ ಬೆಳವಣಿಗೆಯನ್ನು ಸಹಿಸದೆ, ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನದಲ್ಲಿರುವ ಚೀನಾಗೆ ಬಲವಾದ ರಾಜತಾಂತ್ರಿಕ ಹೊಡೆತ ನೀಡುವ ಭಾರತದ ಯೋಜನೆಗಳಿಗೂ ಬಲ ಬಂದಂತಾಗಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


ಶೀತಲ ಸಮರದ ಅನೂಹ್ಯ ತಿರುವೊಂದರಲ್ಲಿ ಅಮೆರಿಕಾ ಏಷ್ಯಾದಲ್ಲಿ ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ದೈತ್ಯ ಶಕ್ತಿ ಚೀನಾ ಜೊತೆಗೆ ಬಾಂಧವ್ಯ ಬೆಳೆಸಿಕೊಂಡಿತ್ತು. ಆವತ್ತಿನ ಸಂದರ್ಭದಲ್ಲಿ ಸೊವಿಯೆತ್ ಒಕ್ಕೂಟವನ್ನು ನಿಯಂತ್ರಿಸಲು ಅಮೆರಿಕಾಕ್ಕೆ ಚೀನಾದ ಅವಶ್ಯಕತೆಯೂ ಬಹಳಷ್ಟಿತ್ತು. ಆದರೆ ಕಳೆದೊಂದು ದಶಕದಿಂದ ಜಾಗತಿಕ ರಾಜಕಾರಣದಲ್ಲಾದ ಬದಲಾವಣೆಗಳೊಂದಿಗೆ ಚೀನಾ ಮೇಲಿನ ಅಮೆರಿಕಾ  ಧೋರಣೆಗಳೂ ಬದಲಾಗಿವೆ. ಚೀನಾ ಜೊತೆ ವಿಬಿನ್ನ ಸ್ತರಗಳಲ್ಲಿ ಆರ್ಥಿಕ ಸಂಬಂಧಗಳಿವೆಯಾದರೂ ಅಮೆರಿಕಾ ಇತ್ತೀಚೆಗೆ ಚೀನಾ ಪ್ರಭಾವವನ್ನು ನಿಯಂತ್ರಿಸುವತ್ತ ತನ್ನ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕಾ ಏಷ್ಯಾದ ಕೆಲ ಪ್ರಮುಖ ಶಕ್ತಿಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಒಲವು ಪ್ರದರ್ಶಿಸುತ್ತಿದೆ. ಪಾಕಿಸ್ತಾನದ ವಿಚಾರದಲ್ಲಿ ಪದೇ ಪದೇ ಪರ ವಹಿಸಿಕೊಳ್ಳುತ್ತಿದ್ದ ಅಮೆರಿಕಾ ಇತ್ತಿಚೆಗೆ ಭಾರತದ ಸ್ನೇಹ ಗಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಮೂಲಕ ಭಾರತವನ್ನು ಉಪಯೋಗಿಸಿಕೊಂಡು ಚೀನಾವನ್ನು ಬಗ್ಗುಬಡಿಯುವುದು ಅಮೆರಿಕಾದ ರಣತಂತ್ರ. ಒಂದು ಕಾಲದ ಪರಮ ವೈರಿ ವಿಯೆಟ್ನಾಮ್ ಜೊತೆಗೂ ಅಮೆರಿಕಾ ಸಮರತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್ ಗಳ ಚೀನಾ ವೈರತ್ವವನ್ನೂ ತನ್ನ ಪರವಾಗಿ ಉಪಯೋಗಿಸಿಕೊಳ್ಳುವ ಅವಕಾಶವನ್ನು ಅಮೆರಿಕಾ ಕೈಬಿಟ್ಟಿಲ್ಲ. ಚೀನಾ ಉದ್ಧಟತನಕ್ಕೆ ಪ್ರತ್ಯುತ್ತರವಾಗಿ ಭಾರತ, ಜಪಾನ್, ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳನ್ನೊಳಗೊಂಡ ವಿಶೇಷ ಮೈತ್ರಿಕೂಟದ ರಚನೆಗೂ ವೇದಿಕೆ ಸಿದ್ಧವಾಗಿದೆ.

ಚೀನಾ ಆಕ್ರಮಣಕಾರಿ ನೀತಿಗೆ ತಿರುಗೇಟು ನೀಡಲು ಇಷ್ಟೆಲ್ಲಾ ಪ್ರಯತ್ನಗಳ ಮಧ್ಯೆ ಜಪಾನ್ ಮಾತ್ರ ಅಮೆರಿಕಾವನ್ನು ಸಂಪೂರ್ಣ ಅವಲಂಬಿಸದೆ ಚೀನಾವನ್ನು ಅಂಕೆಯಲ್ಲಿಡುವುದಕ್ಕೆ ತನ್ನದೇ ಆದ ಸಮರತಂತ್ರ ರೂಪಿಸುತ್ತಿದೆ. ದಕ್ಷಿಣ ಚೀನಾ ಸಮುದ್ರದ ವಿವಾದದ ಕುರಿತಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳು ಚೀನಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದಾಗ ಜಪಾನ್ ಮುಕ್ತವಾಗಿಯೇ ಆಗ್ನೇಯ ಏಷ್ಯಾ ರಾಷ್ಟ್ರಗಳ ಬೆಂಬಲಕ್ಕೆ ನಿಂತಿತ್ತು. 2013ರಲ್ಲೇ ಜಪಾನ್ ಈ ವಿಚಾರವಾಗಿ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಜೊತೆ ತನ್ನನ್ನು ತಾನು ಗುರುತಿಸಿಕೊಂಡಿದ್ದು, ಆನಂತರದ ವರ್ಷಗಳಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಧೋರಣೆಯನ್ನು ಖಡಾಖಂಡಿತವಾಗಿ ವಿರೋದಿಸುತ್ತಲೇ ಬಂದಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಮುಕ್ತ ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡಲು ಜಪಾನ್ ನೌಕಾಬಲವೂ ಸಾಗರಕ್ಕಿಳಿದಿರುವುದು ಚೀನಾವನ್ನು ಬೆಚ್ಚಿಬೀಳುವಂತೆ ಮಾಡಿದೆ. ವಿಯೆಟ್ನಾಮ್ ಮತ್ತು ಮಲೇಷಿಯಾಗಳಿಗೆ ಗಸ್ತು ಹಡಗುಗಳನ್ನು ಒದಗಿಸಲು ಜಪಾನ್ ಒಪ್ಪಿಕೊಂಡಿದೆಯಷ್ಟೇ ಅಲ್ಲದೇ ಪಿಲಿಪ್ಪೈನ್ಸ್ ಗೆ ಸಾಗರ ಸಂಬಂಧಿತ ಮಿಲಿಟರಿ ರಕ್ಷಣೆ ಮತ್ತು ಇಂಡೊನೇಷಿಯಾ ಜೊತೆ ರಕ್ಷಣಾ ಒಪ್ಪಂದಗಳಿಗೂ ಸಹಿ ಹಾಕಿದೆ. ಈ ಮೂಲಕ ಚೀನಾವನ್ನು ಮಣ್ಣುಮುಕ್ಕಿಸಲು ಯಾವ ದೇಶದ ಜೊತೆಗೂ ಸಮರತಾಂತ್ರಿಕ ಸಂಧಾನಕ್ಕೂ ಸೈ ಎನ್ನುವ ಮನೋಭಾವ ಪ್ರದರ್ಶಿಸುತ್ತಿದೆ!

ದಕ್ಷಿಣ ಚೀನಾ ವಿವಾದದಲ್ಲಿ ಜಪಾನ್ ಹಸ್ತಕ್ಷೇಪವನ್ನು ಹೇಗೋ ಸಹಿಸಿಕೊಂಡಿರಬಹುದು ಎಂದುಕೊಂಡಿದ್ದ ಚೀನೀಯರಿಗೆ, ಇತ್ತೀಚೆಗೆ ಭಾರತದೊಂದಿಗೂ ಜಪಾನ್ ಹತ್ತಿರವಾಗುತ್ತಿರುವುದು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದೆ. ಭಾರತದೊಂದಿಗೆ 1.65 ಬಿಲಿಯನ್ ಡಾಲರ್ ಗಳ ಮಿಲಿಟರಿ ಯುದ್ಧ ವಿಮಾನಗಳ ಒಪ್ಪಂದವೊಂದಕ್ಕಾಗಿ ಜಪಾನ್ ನಲ್ಲಿ ಈಗಾಗಲೇ ಪ್ರಯತ್ನಗಳು ಜಾರಿಯಲ್ಲಿವೆ. ಸಾಗರ ಸಂಬಂಧಿತ ರಕ್ಷಣೆಯ ವಿಚಾರವಾಗಿಯೂ ಹಲವಾರು ಒಪ್ಪಂದಗಳ ಸಾಧ್ಯತೆ ದಟ್ಟವಾಗಿದೆ. ಈ ವಿಷಯಗಳನ್ನು ಗಮನಿಸಿದ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊ. ರಾಜನ್ ಮೆನನ್ ತಮ್ಮ ಸಂಶೋಧನೆಯಲ್ಲಿ ಜಪಾನ್ ಮತ್ತು ಭಾರತದ ಮಧ್ಯೆ ಮಿಲಿಟರಿ ಒಕ್ಕೂಟವೊಂದು ಏರ್ಪಡುವ ಎಲ್ಲಾ ಸಾಧ್ಯತೆಗಳನ್ನು ಗುರುತಿಸುತ್ತಾರೆ. ಏಷ್ಯಾದಲ್ಲಿ ಚೀನಾ ನಡೆಗಳನ್ನು ಗಂಭೀರವಾಗಿ ಪ್ರತಿರೋಧಿಸಲು ಜಪಾನ್ ಗೆ ಬಲವಾದ ಕಾರಣಗಳೂ ಇವೆ. ಡಯಾಯು/ಸೆಂಕಾಕು ದ್ವೀಪಗಳ ಮೇಲೆ ಹಕ್ಕುಸ್ವಾಮ್ಯ ಸಾಧಿಸಲು ಚೀನಾ ಪ್ರಯತ್ನ ಜಪಾನ್ ರಾಜತಾಂತ್ರಿಕ ವಲಯದಲ್ಲಿ ಒತ್ತಡಕ್ಕೆ ಕಾರಣವಾಗಿದೆ. ಈ ಬಾರಿ ಚೀನೀಯರನ್ನು ರಾಜತಾಂತ್ರಿಕವಾಗಿ ಮತ್ತು ಸಮರತಾಂತ್ರಿಕ ರೀತಿಯಲ್ಲೂ ಕಟ್ಟಿಹಾಕುವ ಉತ್ಸಾಹದಲ್ಲಿರುವ ಜಪಾನ್ ಸಹಜವಾಗಿಯೇ ಏಷ್ಯಾದಲ್ಲಿ ಪ್ರಭಾವ ವೃದ್ಧಿಸಿಕೊಳ್ಳುತ್ತಿರುವ ಭಾರತದೊಂದಿಗೆ ಗೆಳೆತನ ಬಯಸುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ನವೆಂಬರ್ ನಲ್ಲಿ ಜಪಾನ್ ಭೇಟಿ ಮಾಡಲಿದ್ದಾರೆ. ತಮ್ಮ ಎರಡು ದಿನಗಳ ಜಪಾನ್ ಭೇಟಿಯಲ್ಲಿ ಜಪಾನಿನ ರಾಜ ಅಕಿಟೊ ಮತ್ತು ಪ್ರಧಾನಿ ಶಿಂಜೊ ಅಬೆ ಜೊತೆ ಮಾತುಕತೆ ನಡೆಸಿ ಹಲವಾರು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ವಿಶೇಷವಾಗಿ ಭಾರತ ಮತ್ತು ಜಪಾನ್ ಗಳು ನಾಗರಿಕ ಅಣು ಒಪ್ಪಂದಕ್ಕೂ ಸಹಿ ಮಾಡಲಿದೆ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪದಕ್ಕೆ ಭಾರತ ಸಹಿ ಹಾಕದ ಕಾರಣ ಹಿಂದೊಮ್ಮೆ ಭಾರತದೊಂದಿಗೆ ನಾಗರಿಕ ಅಣು ಒಪ್ಪಂದಕ್ಕೆ ಹಿಂದೇಟು ಹಾಕಿದ್ದ ಜಪಾನ್ ಇದೀಗ ಭಾರತದ ಬಗ್ಗೆ ತನ್ನ ಮೃದು ನಿಲುವನ್ನು ತಳೆದಿದೆ. ಒಂದು ರೀತಿಯಲ್ಲಿ ಚೀನಾ ಜೊತೆ ಗಡಿವಿವಾದ ಹಂಚಿಕೊಂಡಿರುವ ಮತ್ತು ಚೀನಾದಿಂದ ಸಮಾನ ಬೆದರಿಕೆ ಎದುರಿಸುತ್ತಿರುವ ಎರಡು ರಾಷ್ಟ್ರಗಳೆಂದರೆ ಭಾರತ ಮತ್ತು ಜಪಾನ್. ಶತ್ರುವಿನ ಶತ್ರು ಮಿತ್ರ ಎಂಬ ಚಾಣಕ್ಯವಾಣಿಯಂತೆ ಭಾರತಕ್ಕೆ ಜಪಾನ್ ಅದೇ ರೀತಿ ಜಪಾನ್ ಗೆ ಭಾರತದ ಅವಶ್ಯಕತೆ ಬಹಳಷ್ಟಿದೆ. ತೆರೆಮರೆಯಲ್ಲಿ ಪಾಕಿಸ್ತಾನದ ಎಲ್ಲಾ ಭಾರತ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿ, ಯುದ್ಧ ಸಂದರ್ಭದಲ್ಲೂ ಪಾಕ್ ಬೆನ್ನಿಗೆ ನಿಲ್ಲುವ ಈ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳನ್ನು ಚೀನಾ ಮಾಡುತ್ತಲೇ ಬಂದಿದೆ. ಭಾರತದ ಬೆಳವಣಿಗೆಯನ್ನು ಸಹಿಸದೆ, ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನದಲ್ಲಿರುವ ಚೀನಾಗೆ ಬಲವಾದ ರಾಜತಾಂತ್ರಿಕ ಹೊಡೆತ ನೀಡುವ ಭಾರತದ ಯೋಜನೆಗಳಿಗೂ ಬಲ ಬಂದಂತಾಗಿದೆ. ಚೀನೀ ಡ್ರ್ಯಾಗನ್ ಗೆ ಸಡ್ಡು ಹೊಡೆಯಲು ಹೊಸದಾಗಿ ರೂಪ ಪಡೆಯುತ್ತಿರುವ 'ಕ್ವಾಡ್' ಮಿಲಿಟರಿ ಒಕ್ಕೂಟದಲ್ಲೂ ಭಾರತ ಮತ್ತು ಜಪಾನ್ ಪ್ರಮುಖ ಪಾತ್ರವಹಿಸಲಿವೆ.

ಹಿಂದೊಮ್ಮೆ ಜಪಾನ್ ಆಕ್ರಮಣಗಳು ಮತ್ತು ಮಿಲಿಟರಿ ಸಾಧನೆಗಳು ಚೀನಾದ ನಿದ್ದೆಗೆಡಿಸಿದ್ದವು. ಆದರೆ ದ್ವಿತೀಯ ಮಹಾಯುದ್ಧದ ಅಂತ್ಯ ಜಪಾನ್ ಪಾಲಿಗೆ ದಾರುಣವಾಗಿತ್ತು. 1945ರ ಆಗಸ್ಟ್ 6ರಂದು ಲಿಟಲ್ ಬಾಯ್ ಹಿರೊಶಿಮಾವನ್ನು, ಆಗಸ್ಟ್ 9ಕ್ಕೆ ಫ್ಯಾಟ್ ಮ್ಯಾನ್ ನಾಗಸಾಕಿಯನ್ನು ಧ್ವಂಸ ಮಾಡುವುದರೊಂದಿಗೆ ಏಷ್ಯಾದ ಸಿಡಿಲಮರಿಯಂತಿದ್ದ ಜಪಾನ್ ಗೆ ಮಂಕು ಬಡಿದಂತಾಗಿತ್ತು. ಈ ಘಟನೆಯ ಬಳಿಕ ಇತಿಹಾಸದ ಸಂಕೋಲೆಗಳಲ್ಲಿ ಬಂಧಿಯಾಗಿದ್ಧ ಜಪಾನಿನ ವಿದೇಶಾಂಗ ನೀತಿ ಇದೀಗ ಮತ್ತೆ ತನ್ನ ಗತವೈಭವವನ್ನು ನೆನಪಿಸಿಕೊಳ್ಳುತ್ತಿದೆ. ಭಾರತದ ಪ್ರಧಾನಿ ಮೋದಿ ಮತ್ತು ಜಪಾನಿನ ಅಬೆಯವರ ವಿಚಾರಧಾರೆಗಳಲ್ಲಿರುವ ಸಾಮ್ಯತೆಗಳು ಮತ್ತು ಈ ಇಬ್ಬರೂ ನಾಯಕರೂ ಆಕ್ರಮಣಕಾರಿ ಚೀನಾ ಬಗ್ಗೆ ಹೊಂದಿರುವ ಪ್ರಾಮಾಣಿಕ ಕಾಳಜಿಗಳು ಭವಿಷ್ಯದ ಏಷ್ಯಾ ಶಕ್ತಿ ರಾಜಕೀಯದಲ್ಲಿ ಹೊಸ ಕ್ರಾಂತಿಯ ನಿರೀಕ್ಷೆ ಮೂಡಿಸಿವೆ. 

(This article was published in Hosa Digantha newspaper on 2 November 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.