ಶನಿವಾರ, ಡಿಸೆಂಬರ್ 17, 2016

ಕಮ್ಯುನಿಸ್ಟ್ ಕನಸಿನ ಗೋಪುರ ಕೆಡವಿದವರ್ಯಾರು?

ಕಾರ್ಲ್ ಮಾರ್ಕ್ಸ್ ಬರೆದಿಟ್ಟಿದ್ದ ಕ್ರಾಂತಿಯನ್ನು ಪ್ರಪಂಚದ ಮುಂದೆ ತೆರೆದಿಟ್ಟಿದ್ದು ಸೊವಿಯೆತ್ ಮಾದರಿ. 'ಇಸಂ' ಗಳ ತಾಕಲಾಟದಲ್ಲಿ, ವಿಶ್ವ ಶಕ್ತಿಯಾಗುವ ಕಾತರದಲ್ಲಿ ಅತ್ತ ಕಡೆ ಮಾರ್ಕ್ ನನ್ನೂ ಇತ್ತ ಕಡೆ ನೈತಿಕತೆಯನ್ನೂ ಕಳೆದುಕೊಂಡ ಸೊವಿಯೆತ್ ಹಿಂತಿರುಗಿ ನೋಡುವಷ್ಟರಲ್ಲಿ ಚೂರುಗಳಾಗಿ ಒಡೆದುಹೋಗಿತ್ತು!!
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಕಾರ್ಲ್ ಮಾರ್ಕ್ಸ್ ಕಂಡ ಕ್ರಾಂತಿಯ ಕನಸು ಅವನ ಜೀವಿತಾವಧಿಯಲ್ಲಿ ನನಸಾಗದೇ ಹೋದರೂ ಮುಂದೊಂದು ದಿನ ರಷ್ಯಾದಲ್ಲಿ ಲೆನಿನ್ ನಾಯಕತ್ವದಲ್ಲಿ ನಿಜವಾಗುತ್ತದೆ. ಮಾರ್ಕ್ಸ್ ಹೇಳಿದ್ದಕ್ಕೂ ರಷ್ಯಾದಲ್ಲಿ ನಡೆದ ಕ್ರಾಂತಿಗೂ ಅಜಗಜಾಂತರ ವ್ಯತ್ಯಾಸಗಳಿದ್ದರೂ ಕ್ರಾಂತಿಯೊಂದು ನಡೆದುಹೋಯಿತು. ಮುಂದೆ ಸ್ಟಾಲಿನ್ ಬಂದ ಮೇಲಂತೂ ಕಮ್ಯುನಿಸ್ಟರಿಗೆ ಕಾರ್ಲ್ ಮಾರ್ಕ್ಸ್ ಅಕ್ಷರಶಃ ಮರೆತು ಹೋಗುವಂತಾಗಿದ್ದು ವಿಪರ್ಯಾಸ. ಇವೆಲ್ಲದರ ಮಧ್ಯೆ ಮಾರ್ಕ್ಸ್ ವಿಚಾರಧಾರೆಯ ಹೆಸರಿನಲ್ಲಿ ಸೊವಿಯೆತ್ ಒಕ್ಕೂಟದ ನಿರ್ಮಾಣವಾಗಿ, ಅದೊಂದು ಸೂಪರ್ ಪವರ್ ಆಗಿ ಬದಲಾಗಿ ವಿಶ್ವವನ್ನೇ ನಡುಗಿಸುತ್ತದೆ. ಅಮೆರಿಕಾಗೆ ಸಡ್ಡು ಹೊಡೆದು ಶೀತಲ ಸಮರದಲ್ಲಿ ದ್ವಿತೀಯ ಜಗತ್ತಿನ ನಾಯಕತ್ವ ವಹಿಸಿಕೊಳ್ಳುತ್ತದೆ. ಅಮೆರಿಕಾ ಇಟ್ಟ ಪ್ರತಿ ಹೆಜ್ಜೆಗೂ ಸವಾಲು ಹಾಕುತ್ತಾ ಅಣ್ವಸ್ತ್ರಗಳಿಂದ ಸ್ಟಾರ್ ವಾರ್ ಗಳ ತನಕವೂ ತನ್ನ ಜಿದ್ದು ಸಾಧಿಸಿದ ಸೊವಿಯೆತ್ ಒಕ್ಕೂಟ 1991ರಲ್ಲಿ ಸಿಡಿದು ಛಿಧ್ರವಾಗಿತ್ತು. ಯಾರೂ ಊಹೆಗೂ ನಿಲುಕದ ರೀತಿಯಲ್ಲಿ ಸೊವಿಯೆತ್ ಒಕ್ಕೂಟದಲ್ಲಿ ಹಠಾತ್ ಬದಲಾವಣೆಗಳು ಸೊವಿಯೆತ್ ಒಕ್ಕೂಟವೆಂಬ ಶಕ್ತಿ ಕೇಂದ್ರ ಕಮ್ಯುನಿಸಂನ ಕೆಂಪು ಬಣ್ಣದೊಳಗೂ ಬಣ್ಣ ಬಣ್ಣದ ಕಥೆಗಳೊಂದಿಗೆ ಇತಿಹಾಸದ ಪುಟ ಸೇರುವಂತೆ ಮಾಡಿತ್ತು.  ಚರಿತ್ರೆ ಸೊವಿಯೆತ್ ಒಕ್ಕೂಟದ್ದಾಯಿತು. ಮಿಕಾಯಿಲ್ ಗೊರ್ಬಚೆವ್ ಮಾರ್ಚ್ 1985ರಲ್ಲಿ ಕಮ್ಯುನಿಸ್ಟ್ ಪಕ್ಷದ ಜನರಲ್ ಸೆಕ್ರೆಟರಿಯಾದಾಗ, ಸೊವಿಯೆತ್ ಒಕ್ಕೂಟದ ಉದ್ದಗಲಕ್ಕೂ ಸಮಸ್ಯೆಗಳಿದ್ದುದು ನಿಜವೇ ಆಗಿದ್ದರೂ, ಸೊವಿಯೆತ್ ಅಂತ್ಯವನ್ನೂ ಯಾರೊಬ್ಬರೂ ಕನಸಿನಲ್ಲೂ ಊಹಿಸರಿರಲಿಲ್ಲ! 
Image may contain: 1 person
ಶೀತಲ ಸಮರದಲ್ಲಿ ಅಮೆರಿಕಾ ಸಮರತಂತ್ರಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಜಾರ್ಜ್ ಕೆನನ್ ಮತ್ತು ರಷ್ಯಾ ಇತಿಹಾಸದ ಆಳವಾದ ಅಧ್ಯಯನ ನಡೆಸಿದ ಅಮೆರಿಕನ್ ಇತಿಹಾಸಕಾರ ರಿಚರ್ಡ್ ಪೈಪ್ ನಂಥ ಅತಿರಥ ಮಹಾರಥರೂ ಸೊವಿಯೆತ್ ಪತನವನ್ನು ಅನಿರೀಕ್ಷಿತ ಮತ್ತು ಚರಿತ್ರೆಯ ಊಹಿಸಲಾಗದ ತಿರುವು ಎಂದು ಅಭಿಪ್ರಾಯಪಡುತ್ತಾರೆ. ಈ ಘಟನೆ ಅದೆಷ್ಟು ಅನಿರೀಕ್ಷಿತ ಎನ್ನುವುದಕ್ಕೆ ನ್ಯಾಶನಲ್ ಇಂಟರೆಸ್ಟ್ ನ ೧೯೯೩ರ ವಿಶೇಷ ಸಂಚಿಕೆ 'ಸೊವಿಯೆತ್ ಕಮ್ಯುನಿಸ್ಂನ ವಿಚಿತ್ರ ಸಾವು' (The Strange Death of Soviet Communism) ಎಂಬ ಶೀರ್ಷಿಕೆಯೊಂದಿಗೆ ಹೊರಬಂದಿದ್ದೇ ಸಾಕ್ಷಿ. ಈ ಘಟನೆ ನಡೆದು ಕಾಲು ಶತಮಾನ ಕಳೆದರೂ ಇವತ್ತಿಗೂ ನಾವು ಸೊವಿಯೆತ್ ಒಕ್ಕೂಟ ಒಡೆದುಹೋಗಲು ನೀಡುತ್ತಿರುವ ಸಾಮಾನ್ಯ ಕಾರಣಗಳು ಈ ಐತಿಹಾಸಿಕ ಘಟನೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ. ಸೊವಿಯೆತ್ ಒಕ್ಕೂಟ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಅನುಭವಿಸುತ್ತಿದ್ದುದು ನಿಜವೇ ಆದರೂ 1985ರಲ್ಲಿ ಸೊವಿಯೆತ್ ನೈಸರ್ಗಿಕ ಸಂಪನ್ಮೂಲಗಳ ಪ್ರಮಾಣಕ್ಕೂ ಮತ್ತು ಹತ್ತು ವರ್ಷಗಳ ಹಿಂದಿನ ಸೊವಿಯೆತ್ ಸ್ಥಿತಿಗೂ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಜೀವನ ಮಟ್ಟ ಕುಸಿದಿತ್ತು. ಆಹಾರದ ಕೊರತೆ, ದಿನನಿತ್ಯದ ಬಳಕೆಯ ಸಾಮಗ್ರಿಗಳಿಗಾಗಿ ಮಾರುದ್ದ ಸಾಲುಗಳು, ಅತಿಯಾದ ಬಡತನ ಇವೆಲ್ಲವುಗಳೂ ಸೊವಿಯೆತ್ ಎಂಬ ದೈತ್ಯನನ್ನು ಹಿಂಡಿ ಹಿಪ್ಪೆ ಮಾಡಿದ್ದವು. ಆದರೆ ಇಂಥ ಎಲ್ಲಾ ಸಮಸ್ಯೆಗಳು ದಶಕಗಳಿಂದ ಕಾಡುತ್ತಿದ್ದರೂ ಸೊವಿಯೆತ್ ದೈತ್ಯರು ಯಾವತ್ತೂ ಸಮಾಜ, ರಾಜಕೀಯ ಮತ್ತು ಆರ್ಥಿಕತೆಯ ಮೇಲಿನ ತಮ್ಮ ಹಿಡಿತ ಬಿಟ್ಟು ಕೊಟ್ಟಿರಲಿಲ್ಲ. 1985ಕ್ಕಿಂತ ಮುಂಚೆ ಸೊವಿಯೆತ್ ತರೆಹೇವಾರಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸೊವಿಯೆತ್ ತನ್ನನ್ನು ತಾನು ವಿಭಜಿಸಿಕೊಳ್ಳುವ ಯೋಚನೆಯನ್ನೂ ಮಾಡಿರಲಿಲ್ಲ. 1986ರಲ್ಲಿ ಜಾಗತಿಕ ತೈಲ ಬೆಲೆಗಳು ಒಂದು ಬ್ಯಾರಲ್ ಗೆ $66ರಿಂದ  $20ಕ್ಕೆ ಇಳಿದಿದ್ದು ಸೊವಿಯೆತ್ ಪಾಲಿಗೆ ದೊಡ್ಡ ಹೊಡೆತವೇ ಆಗಿದ್ದರೂ ಸೊವಿಯೆತ್ ಈ ಹೊಡೆತವನ್ನು ತಾಳಿಕೊಳ್ಳುವ ಪರಿಸ್ಥಿತಿಯಲ್ಲಿತ್ತು ಎನ್ನುವುದನ್ನು ಅರ್ಥಶಾಸ್ತ್ರಜ್ಞರು ಒಪ್ಪಿಕೊಳ್ಳುತ್ತಾರೆ.

ಇನ್ನು ರಾಜಕೀಯವಾಗಿ ಸೊವಿಯೆತ್ ಪತನಕ್ಕೆ ಬಲವಾದ ಕಾರಣಗಳೇನಾದರೂ ಇವೆಯೇ? ಎಂದು ಯೋಚಿಸಿದಲ್ಲಿ ಮತ್ತೊಮ್ಮೆ ಉತ್ತರ ಇಲ್ಲ ಎನ್ನುತ್ತದೆ. ಕಮ್ಯುನಿಸ್ಟ್ ಸೊವಿಯೆತ್ ನಾಯಕರು ತಮ್ಮ ವಿರೋಧಿಗಳನ್ನೆಲ್ಲಾ ವ್ಯವಸ್ಥಿತವಾಗಿ ಮಟ್ಟ ಹಾಕಿದ್ದರು. ಕ್ಯಾಂಪ್ ಮತ್ತು ಜೈಲುಗಳಲ್ಲಿ ವ್ಯವಸ್ಥೆಯ ವಿರೋಧಿಗಳನ್ನು ಕೊಲೆ ಮಾಡಲಾಯಿತು ಇನ್ನುಳಿದವರು ದೇಶ ಬಿಟ್ಟು ತಲೆ ಮರೆಸಿಕೊಂಡಿದ್ದರಿಂದ ಸೊವಿಯೆತ್ ನಾಯಕತ್ವಕ್ಕೆ ಹೇಳಿಕೊಳ್ಳುವಂಥ ಪ್ರಭಾವಿ ಮಟ್ಟದ ರಾಜಕೀಯ ವಿರೋಧಿಗಳಿರಲಿಲ್ಲ. ಸೊವಿಯೆತ್ ಒಕ್ಕೂಟದ ಸೇನೆ ಅಫಘಾನಿಸ್ತಾನ ಪ್ರವೇಶಿಸಿ ಅಲ್ಲಿನ ಕಲಹದಲ್ಲಿ ಪಾಲ್ಗೊಂಡು ಬೃಹತ್ ಕಷ್ಟ ನಷ್ಟಗಳನ್ನು ಭರಿಸಬೇಕಾಯ್ತಾದರೂ, ಸುಮಾರು 5 ಮಿಲಿಯನ್ ಸಂಖ್ಯಾಬಲವಿದ್ದ ಬಲಿಷ್ಠ ಸೊವಿಯೆತ್ ಮಿಲಿಟರಿಗೆ ಇದು ತಡೆದುಕೊಳ್ಳಲಾಗದ ಸಂಕಟವಂತೂ ಆಗಿರಲಿಲ್ಲ. ಸೊವಿಯೆತ್ ವಿನಾಶಕ್ಕೆಂದೇ ಕಾಯುತ್ತಿದ್ದ ಅಮೆರಿಕಾ ಕೂಡ ಸೊವಿಯೆತ್ ಪತನಕ್ಕೆ ವಿಶೇಷ ಪ್ರಯತ್ನಪಟ್ಟಿರಲಿಲ್ಲ ಎನ್ನುವುದು ಇಲ್ಲಿ ವಿಶೇಷ. ಆ ಕಾಲಕ್ಕಾಗಲೇ 'ರೇಗನ್ ಡಾಕ್ಟ್ರಿನ್' ಅನ್ನು ತನ್ನ ವಿದೇಶಾಂಗ ನೀತಿಯನ್ನಾಗಿ ಮಾಡಿಕೊಂಡಿದ್ದ ಅಮೆರಿಕಾ ತೃತಿಯ ಜಗತ್ತಿನ ರಾಷ್ಟ್ರಗಳಾದ ಅಫಘಾನಿಸ್ತಾನ್, ಅಂಗೋಲ, ನಿಕರಾಗುವ ಮತ್ತು ಇಥಿಯೋಪಿಯಾಗಳಲ್ಲಿ ಕಮ್ಯುನಿಸಂ ವ್ಯಾಪಿಸದಂತೆ ತಡೆಯುವ ಪ್ರಯತ್ನ ಮಾಡಿತ್ತಷ್ಟೇ. ಇದರ ಹೊರತಾಗಿ ಸೊವಿಯೆತ್ ಛಿದ್ರವಾಗುವ ಯೋಚನೆಯೂ ಅಮೆರಿಕಾಗೆ ಇರಲಿಲ್ಲ! ಈ ಹಿನ್ನೆಲೆಯಲ್ಲಿ ಸೊವಿಯೆತ್ ಒಕ್ಕೂಟ ಒಂದು ಸೂಪರ್ ಪವರ್ ಗೆ ಸರ್ವೇ ಸಾಮಾನ್ಯವಾದ ಕೆಲ ಸಹಜ ರಾಜಕೀಯ ಸಮಸ್ಯೆಗಳನ್ನು ಎದುರಿಸುತ್ತಿತ್ತೆನ್ನುವುದನ್ನು ಬಿಟ್ಟರೆ, ತನ್ನ ಜಾಗತಿಕ ಶಕ್ತಿ ವಲಯ ಮತ್ತು ಪ್ರಭಾವದ ವಿಚಾರದಲ್ಲಿ 1980ರಲ್ಲೂ ಅಮೆರಿಕಾಕ್ಕೆ ಸಡ್ಡು ಹೊಡೆಯುವ ಮಟ್ಟದಲ್ಲಿತ್ತು! ಇತಿಹಾಸಕಾರ ಆಡಂ ಉಲಂ ಹೇಳುವಂತೆ, 1985ರಲ್ಲಿ ಪ್ರಪಚದ ಯಾವುದೇ ಪ್ರಮುಖ ರಾಷ್ಟ್ರ ಸೊವಿಯೆತ್ ನಷ್ಟು ದೃಢವಾಗಿರಲಿಲ್ಲ ಮತ್ತು ಯಾವುದೇ ರಾಷ್ಟ್ರದ ಯೋಜನೆಗಳು ಸೊವಿಯೆತ್ ಯೋಜನೆಗಳಷ್ಟು ಸ್ಪಷ್ಟವಾಗಿರಲಿಲ್ಲ!

ಸೊವಿಯೆತ್ ಪತನದಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಂಶಗಳ ಪಾತ್ರವನ್ನು ಸಂಪೂರ್ಣವಾಗಿ ಅಲ್ಲಗೆಳೆಯಲಾಗದಿದ್ದರೂ, ದಶಕಗಳಿಂದ ಕಾಡುತ್ತಿದ್ದ ಈ ಸಮಸ್ಯೆಗಳಿಗೆ ಇನ್ನಷ್ಟು ಬಲತುಂಬಿ ಸೊವಿಯೆತ್ ನಲ್ಲಿ ಪ್ರತಿಕ್ರಾಂತಿಯೊಂದನ್ನು ಪ್ರಚೋದಿಸಿ ಮುನ್ನಡೆಸಿದ್ದು ನೈತಿಕ ಅಧಃಪತನ! ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಕಮ್ಯುನಿಸ್ಟ್ ವ್ಯವಸ್ಥೆ ಸೃಷ್ಟಿಸಿದ್ದ ನೈತಿಕ ಆಧಃಪತನದ ವಿರುದ್ದ ಜನಮಾನಸದಲ್ಲಿ ಜಾಗೃತಿ ಮೂಡಿಸಿದ ನೈತಿಕ ಪುನರುಜ್ಜೀವನ! ಸುಮಾರು ಏಳು ದಶಕಗಳ ಕಾಲ ಕಮ್ಯುನಿಸ್ಟ್ ನಿರಂಕುಶ ಆಡಳಿತ ಮತ್ತು ನಿರಂತರ ಅಪನಂಬಿಕೆಯಿಂದ ಬಳಲಿದ್ದ ಸೊವಿಯೆತ್ ಸಮಾಜಕ್ಕೆ ನೈತಿಕ ಪುನರುಜ್ಜೀವನ ನೀಡಿದ್ದು ಅನೇಕ ಲೇಖಕರು, ಪತ್ರಕರ್ತರು ಮತ್ತು ಕಲಾವಿದರರು. ರಾಜಕೀಯ ತತ್ವಜಾನಿಗಳಾದ ಇಗೊರ್ ಕ್ಲ್ಯಾಮ್ಕಿನ್, ಅಲೆಕ್ಸಾಂಡರ್ ಟಿ, ಪತ್ರಕರ್ತರಾದ ಯೆಗೊರ್ ಯಾಕೊವ್ಲೆವ್ ಮುಂತಾದವರು ಸೊವಿಯೆತ್ ನಲ್ಲಿ ಪ್ರತಿಕ್ರಾಂತಿಗೆ ದಾರಿ ಮಾಡಿಕೊಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. 1980ರ ದಶಕದಲ್ಲಿ ಸೊವಿಯೆತ್ ಸಮಾಜದಲ್ಲಿ ಮೂಡಿದ ನೈತಿಕ ಪ್ರಜ್ಞೆ ಸ್ಟಾಲಿನಿಸಂ, ಭ್ರಷ್ಟಾಚಾರಗಳ ವಿರುದ್ಧ ಹೋರಾಡುವಲ್ಲಿ ಪ್ರಮುಖ ಅಸ್ತ್ರವಾಗಿ ಮಾರ್ಪಡುತ್ತದೆ.

1985ರಲ್ಲಿ ಸೊವಿಯೆತ್ ಅನ್ಯುನ್ನತ ನಾಯಕನಾಗಿದ್ದ ಗೊರ್ಬಚೆವ್ ಅನೇಕ ಸುಧಾರಣೆಗಳನ್ನು ತರುತ್ತಾನೆ. ಅವುಗಳಲ್ಲಿ ಮುಖ್ಯವಾದುದು 'ಪೆರೆಸ್ಟ್ರಾಯಿಕಾ' ಮತ್ತು 'ಗ್ಲಾಸ್ ನಾಸ್ಟ್'. ಈ ಎಲ್ಲಾ ಯೋಜನೆಗಳು ಮೇಲ್ನೋಟಕ್ಕೆ ಆರ್ಥಿಕ ಸುಧಾರಣೆಗಳಂತೆ ಕಂಡರೂ ಇವುಗಳ ಮೂಲ ಉದ್ದೇಶ ಸ್ಟಾಲಿನ್ ಮತ್ತು ತದನಂತರದ ರಾಜಕೀಯದಿಂದ ಸಮಾಜ ಕಳೆದುಕೊಂಡ ನೈತಿಕತೆಯನ್ನು ಸೊವಿಯೆತ್ ಗೆ ಹಿಂದಿರುಗಿಸುವುದೇ ಆಗಿತ್ತು! ಸೊವಿಯೆತ್ ಒಕ್ಕೂಟ ಕ್ರಾಂತಿಯ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲವಾಗಿದೆ ಎಂಬ ಸತ್ಯ ಗೊರ್ಬಚೆವ್ ಗೆ ಅರಿವಾಗಿತ್ತು. ಸೊವಿಯೆತ್ ಪತನವಾದ ಕೆಲ ವರ್ಷಗಳ ನಂತರ ಸಂದರ್ಶನವೊಂದರಲ್ಲಿ ಗೊರ್ಬಚೆವ್ ಹೇಳಿದ ಮಾತು ಹೀಗಿದೆ, "ಸೊವಿಯೆತ್ ಮಾದರಿ ಆರ್ಥಿಕ ಮತ್ತು ಸಾಮಾಜಿಕ ಹಂತಗಳಲ್ಲಿ ಮಾತ್ರವಲ್ಲದೇ ಸಾಂಸ್ಕೃತಿಕವಾಗಿಯೂ ಸೋತುಹೊಗಿದೆ. ಜನ ಸಂಸ್ಕೃತಿಯ ಕಾರಣಗಳಿಂದಾಗಿ ಸೊವಿಯೆತ್ ಮಾದರಿಯನ್ನು ತಿರಸ್ಕರಿಸಿದ್ದಾರೆ. ಏಕೆಂದರೆ ಈ ಮಾದರಿ ಮನುಷ್ಯನನ್ನು ಗೌರವಿಸುವುದಿಲ್ಲ ಮತ್ತವನನ್ನು ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಶೋಷಿಸುತ್ತದೆ." 1980ರಲ್ಲಿ  ಗೊರ್ಬಚೆವ್ ನನ್ನು ಇನ್ನಿತರ ಎಲ್ಲಾ ಕಾರಣಗಳಿಗಿಂತಲೂ ಹೆಚ್ಚಾಗಿ ಕಾಡಿದ್ದು ಈ ನೈತಿಕ ಅಧಃಪತನ. ಈ ಸೊವಿಯೆತ್ ನಾಯಕ ಮನಸ್ಸು ಮಾಡಿದ್ದರೆ ಸ್ಟಾಲಿನ್ ಮಾದರಿಯಲ್ಲಿ ಎಲ್ಲಾ ದಂಗೆಗಳನ್ನು ಬಗ್ಗು ಬಡಿದು ಸೊವಿಯೆತ್ ಒಕ್ಕೂಟವನ್ನು ಉಳಿಸಿಕೊಳ್ಳುವುದು ಸಾಧ್ಯವಿತ್ತು. ಆದರೆ ಆ ಕಾಲಕ್ಕಾಗಲೇ ಸೊವಿಯೆತ್ ಸಮಾಜದಲ್ಲಿ ಮೂಡಿದ್ದ ನೈತಿಕ ಪ್ರಜ್ಞೆ ಈ ಮಾರ್ಗವನ್ನು ಅನುಸರಿಸುವುದರಿಂದ ಗೊರ್ಬಚೆವ್ ನನ್ನು ತಡೆದಿತ್ತಲ್ಲದೇ ಈ ನಡೆ ಸ್ವತ್ಃ ಗೊರ್ಬಚೆವ್ ಆದರ್ಶವಾದಿ ವ್ಯಕ್ತಿತ್ವಕ್ಕೆ ವಿರೋಧಾಭಾಸವಾಗಿತ್ತು. "ಆರಂಭದಿಂದಲೂ ನಮಗೆ ಮುಷ್ಟಿಯಿಂದ ಮೇಜನ್ನು ಗುದ್ದಿ ಮಾತನಾಡುವುದನ್ನು ಕಲಿಸಲಾಗಿದೆ. ಹಾಗೆ ಮಾಡುವುದು ಸಾಧ್ಯವಿದೆ ಆದರೆ ಅಂಥ ಭಾವನೆ ಇರಬಾರದು" ಗೊರ್ಬಚೆವ್ ರವರ ಈ ಮಾತುಗಳು ಆಗಿನ ಸೊವಿಯೆತ್ ಪರಿಸ್ಥಿತಿ ಮತ್ತು ಗೊರ್ಬಚೆವ್ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಪರಿಚಯಿಸುತ್ತವೆ. 

ಕಾರ್ಲ್ ಮಾರ್ಕ್ಸ್ ಬರೆದಿಟ್ಟಿದ್ದ ಕಮ್ಯುನಿಸ್ಟ್ ಸ್ವರ್ಗವನ್ನು ತನ್ನದೇ ರೀತಿಯಲ್ಲಿ ತೆರೆದಿಟ್ಟ ಸೊವಿಯೆತ್ ಒಕ್ಕೂಟ ಇತಿಹಾಸದ ಪುಟ ಸೇರಿ ಕಾಲು ಶತಮಾನವೇ ಕಳೆದುಹೋಗಿದೆ. ಪ್ರತಿಯೊಂದು ಕ್ರಾಂತಿಗೂ ಎದುರಾಗಿ ಪ್ರತಿಕ್ರಾಂತಿಯೊಂದಿರುತ್ತದೆ. ಮಾರ್ಕ್ಸ್ ಮತ್ತು ಕ್ರಾಂತಿಯ ಹೆಸರಲ್ಲಿ ವಿಶ್ವದ ಸೂಪರ್ ಪವರ್ ಆಗಿದ್ದ ಕಮ್ಯುನಿಸ್ಟ್ ದೈತ್ಯನಿಗೆ ಕ್ರಾಂತಿಯ ಪ್ರಶ್ನೆಗಳು ಕೊನೆಗೂ ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿತ್ತು. ಸೊವಿಯೆತ್ ಮಾದರಿಯಲ್ಲಿ ಅನೇಕ ಕಮ್ಯುನಿಸ್ಟ್ ರಾಷ್ಟ್ರಗಳು ಹುಟ್ಟಿಕೊಂಡವಾದರೂ, ದಿನೇ ದಿನೇ ಕಮ್ಯುನಿಸಂ ಮಾರ್ಕ್ಸ್ ನಿಂದ ದೂರ ಹೋಗತೊಡಗಿದ್ದು ಸತ್ಯ. ನೈತಿಕತೆ ಮತ್ತು ಮಾನವೀಯತೆಗಳ ಬಂಧ ಸಡಿಲಿಸಿಕೊಂಡ ಯಾವುದೇ 'ಇಸಂ'ಗಳು ಯಶಸ್ವಿಯಾದ ಉದಾಹರಣೆ ಇತಿಹಾಸದಲ್ಲೆಲ್ಲೂ ಇಲ್ಲ. ಇವೆಲ್ಲವನ್ನೂ ನೋಡಿದ ಮೇಲೆ ಇರಬೇಕು ಮಾರ್ಕ್ಸ್ ನಂಥ ಮಾರ್ಕ್ಸ್ ಮಹಾಶಯನೇ, "ನಾನು ಮಾರ್ಕ್ಸಿಸ್ಟ್ ಅಲ್ಲ" ಎಂದಿದ್ದು!

(This article was published in Vishwavani newspaper on 16 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ನಾಗರಿಕತೆಗಳ ಸಂಘರ್ಷದತ್ತ ಸಾಗುತ್ತಿದೆಯೇ ಜಾಗತಿಕ ರಾಜಕಾರಣ?

ಮಾರ್ಕ್ಸ್ ಹೇಳಿದ ಉಳ್ಳವರು ಮತ್ತು ಶೋಷಿತರ ಯುದ್ಧಕ್ಕೂ ಕೊನೆಯಿದೆ, ಇಸಂಗಳ ನಡುವಿನ ಯುದ್ಧಕ್ಕೂ ಕೊನೆಯಿದೆ. ಆದರೆ ಸಂಸ್ಕೃತಿಯ ಸಂಘರ್ಷಕ್ಕೆ ಕೊನೆ ಹುಡುಕುವುದು ಕಷ್ಟಸಾಧ್ಯವೇ ಸರಿ. ಟ್ರಂಪ್ ಹೊರತಾಗಿಯೂ 21ನೇ ಶತಮಾನದ ಜಾಗತಿಕ ರಾಜಕೀಯ ವ್ಯವಸ್ಥೆ ರಹಸ್ಯ ತಿರುವೊಂದಕ್ಕೆ ಸಾಕ್ಷಿಯಾಗುತ್ತಿದೆ. ಇಲ್ಲಿ ಟ್ರಂಪ್ ಮತ್ತಿತರು ನೆಪ ಮಾತ್ರ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಕೆಲವೇ ದಿನಗಳಲ್ಲಿ ಟ್ರಂಪ್ ಅಧಿಕೃತವಾಗಿ ಅಮೆರಿಕಾದ ಅಧ್ಯಕ್ಷರಾಗಲಿದ್ದಾರೆ. ಟ್ರಂಪ್ ವಿದೇಶಾಂಗ ನೀತಿಯಲ್ಲಿ ವ್ಯಕ್ತಪಡಿಸುತ್ತಿರುವ ಮನೋಭಾವಗಳು, ಟ್ರಂಪ್ ಗೆ ಸಲಹೆ ನೀಡುತ್ತಿರುವ ವಿದೇಶಾಂಗ ವ್ಯವಹಾರಗಳ ನಿಪುಣರು, ಭಯೋತ್ಪಾದನೆಯ ಬಗೆಗಿನ ನಿಲುವು ಮತ್ತು ವಲಸಿಗರ ಕುರಿತಾಗಿಯೂ ಅಮೆರಿಕಾದ ಬದಲಾಗುತ್ತಿರುವ ಧೋರಣೆಯನ್ನು ಗಮನಿಸಿದಲ್ಲಿ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಟ್ರಂಪ್ ಅಧ್ಯಕ್ಷತೆಯ ಅಮೆರಿಕಾದ ಭವಿಷ್ಯಕ್ಕೂ ಸುಮಾರು ಕಾಲು ಶತಮಾನಗಳ ಹಿಂದೆ ಸ್ಯಾಮುಯೆಲ್ ಪಿ ಹಂಟಿಂಗ್ಟನ್ ನೀಡಿದ್ದ 'ನಾಗರಿಕತೆಗಳ ಸಂಘರ್ಷ'ಕ್ಕೂ ಅಚ್ಚರಿ ಮೂಡಿಸುವಷ್ಟು ಸಾಮ್ಯತೆಗಳಿವೆ.  ಚುನಾವಣಾ ಪ್ರಚಾರದುದ್ದಕ್ಕೂ ಟ್ರಂಪ್ ಮತ್ತವರ ಬೆಂಬಲಿಗರ ಮಾತುಗಳಲ್ಲಿ ಕೆಲವೊಮ್ಮೆ ಪ್ರತ್ಯಕ್ಷವಾಗಿ ಹಾಗೂ ಹಲವು ಬಾರಿ ಪರೋಕ್ಷವಾಗಿ 'ನಾಗರಿಕತೆಗಳ ಸಂಘರ್ಷ'ದ ಛಾಯೆ ದಟ್ಟವಾಗಿತ್ತು!

ಏನಿದು ನಾಗರಿಕತೆಗಳ ಸಂಘರ್ಷ? ಸೊವಿಯೆತ್ ಒಕ್ಕೂಟದ ಪತನದೊಂದಿಗೆ ವಿಶ್ವ ಇತಿಹಾಸದಲ್ಲಿ ಶೀತಲ ಸಮರವೂ ಕೊನೆಗೊಂಡಾಗ, ಜಾಗತಿಕ ವ್ಯವಸ್ಥೆಯ ಭವಿಷ್ಯದ ಬಗ್ಗೆ ಹಲವಾರು ಪ್ರಶ್ನೆಗಳೆದ್ದಿದ್ದವು. ಶೀತಲ ಸಮರೋತ್ತರದಲ್ಲಿ ಅಮೆರಿಕಾಗೆ ಪ್ರತಿಸ್ಪರ್ಧಿಗಳಿರುವುದಿಲ್ಲವೇ? ಜಾಗತಿಕ ಸಂಘರ್ಷಗಳಿಗೆ ಕಾರಣವಾಗುವಂಥ ಅಂಶಗಳಾದರೂ ಯಾವುವು? ಮುಂದಿನ ಜಾಗತಿಕ ವ್ಯವಸ್ಥೆ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ? ಮುಂತಾದ ಹತ್ತು ಹಲವು ಪ್ರಶ್ನೆಗಳು ವಿಶ್ವದ ರಾಜಕೀಯ ಚಿಂತಕರು ಮತ್ತು ರಾಜತಂತ್ರಜ್ಞರ ಪಾಲಿಗೆ ಸವಾಲಾಗಿ ನಿಂತಿದ್ದವು. 1990ರ ದಶಕದ ಆರಂಭದಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಂಥ ಪ್ರಯತ್ನವೊಂದರಲ್ಲಿ ಫ್ರಾನ್ಸಿಸ್ ಫುಕುಯಾಮ 'ಇತಿಹಾಸದ ಅಂತ್ಯ' (End of History) ಎಂಬ ಪರಿಕಲ್ಪನೆಯೊಂದನ್ನು ಪ್ರತಿಪಾದಿಸುತ್ತಾರೆ. ಫುಕುಯಾಮರವರ ಪ್ರಕಾರ ಭವಿಷ್ಯದ ವಿಶ್ವ ರಾಜಕೀಯದಲ್ಲಿ ಗಂಭೀರ ಸಂಘರ್ಷಗಳಿಗೆ ಅವಕಾಶವಿರುವುದಿಲ್ಲ. ಯಾಕೆಂದರೆ ಕಮ್ಯೂನಿಸಂನ ಅಂತ್ಯದೊಂದಿಗೆ ಪಾಶ್ಚಿಮಾತ್ಯ ಜಗತ್ತಿನ ಉದಾರವಾದಿ ವಿಚಾರಧಾರೆಗಳು ಅಂತಿಮ ಜಯಗಳಿಸಿವೆ ಮತ್ತು ವಿಶ್ವ ಇತಿಹಾಸದಲ್ಲಿ ಹೊಸ ವಿಚಾರಧಾರೆಗೆ ಅವಕಾಶವಾಗಲಿ ಅಥವಾ ಅದರ ಅವಶ್ಯಕತೆಯಾಗಲಿ ಇರುವುದಿಲ್ಲ! ಫುಕುಯಾಮರವರ ಈ ಚಿಂತನೆ ವಿಶ್ವಾದ್ಯಂತ ಚರ್ಚಿತವಾಗಿ ಬಹಳಷ್ಟು ಪರ ವಿರೋಧಗಳನ್ನು ಎದುರಿಸುತ್ತದೆ. ಇದೇ ರೀತಿಯಲ್ಲಿ ಆದರೆ ಫುಕುಯಾಮ ವಿಶ್ಲೇಷಣೆಗೆ ವಿರುದ್ಧ ದಿಕ್ಕಿನಲ್ಲಿ ಮೂಡಿಬಂದ ಪರಿಕಲ್ಪನೆಯೇ 'ನಾಗರಿಕತೆಗಳ ಸಂಘರ್ಷ'!

1993ರಲ್ಲಿ ಸ್ಯಾಮುಯೆಲ್ ಪಿ ಹಂಟಿಂಗ್ಟನ್ 'ಫಾರಿನ್ ಅಫೇರ್ಸ್'ನಲ್ಲಿ ಲೇಖನವೊಂದನ್ನು ಪ್ರಕಟಿಸುತ್ತಾರೆ. ಆ ಲೇಖನದ ಶೀರ್ಷಿಕೆಯೇ 'ನಾಗರಿಕತೆಗಳ ಸಂಘರ್ಷ?'(Clash of Civilisations?) ಈ ಮೂಲಕ ಹಂಟಿಗ್ಟನ್ ಶೀತಲ ಸಮರೋತ್ತರದ ವಿಶ್ವ ರಾಜಕೀಯದ ಕುರಿತಾಗಿ ವಿಭಿನ್ನವಾದ ನಿಲುವೊಂದನ್ನು ಪ್ರಪಂಚದ ಮುಂದಿಡುತ್ತಾರೆ. ಫುಕುಯಾಮ ಚಿಂತನೆಯನ್ನು ವಿರೋಧಿಸುತ್ತಾ, ಕಮ್ಯುನಿಸಂ ಅಂತ್ಯವಾದರೂ ವಿಶ್ವ ರಾಜಕೀಯದಲ್ಲಿ ಸಂಘರ್ಷಗಳು ಮುಂದುವರಿಯುತ್ತವೆ ಮತ್ತು ಜಗತ್ತಿನ ವಿಭಿನ್ನ ನಾಗರಿಕತೆಗಳು ಈ ಸಂಘರ್ಷಕ್ಕೆ ಕಾರಣವಾಗಲಿವೆ ಎಂಬ ಪರಿಕಲ್ಪನೆಯನ್ನು 'ನಾಗರಿಕತೆಗಳ ಸಂಘರ್ಷ' ಪುರಾವೆಗಳ ಸಮೇತ ಚರ್ಚಿಸುತ್ತದೆ. ಪಾಶ್ಚಿಮಾತ್ಯ, ಇಸ್ಲಾಮಿಕ್, ಕನ್ಫ್ಯೂಷಿಯಸ್ (ಚೈನೀಸ್), ಸ್ಲಾವಿಕ್-ಅರ್ತೋಡಾಕ್ಸ್, ಜಪಾನೀಸ್, ಹಿಂದು, ಲ್ಯಾಟಿನ್ ಅಮೆರಿಕನ್, ಆಫ್ರಿಕನ್ ನಾಗರಿಕತೆಗಳ ಈ ಸಂಘರ್ಷದಲ್ಲಿ ಸಂಸ್ಕೃತಿಯ ಅಸ್ಮಿತೆಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಸಂಸ್ಕೃತಿಗಳ ಘರ್ಷಣೆ ಹಿಂದಿನ ಎಲ್ಲಾ ಸಂಘರ್ಷಗಳಿಗಿಂತಲೂ ಭೀಕರವಾಗಿರಲಿದೆ ಎಂದು ಹಂಟಿಗ್ಟನ್ ಅಭಿಪ್ರಾಯಪಡುತ್ತಾರೆ. ತನ್ನ ದೀರ್ಘ ಲೇಖನದಲ್ಲಿ ಪಶ್ಚಿಮ ಮತ್ತು ಇತರ ನಾಗರಿಕತೆಗಳ ( The West versus the Rest) ಮಧ್ಯೆ ಏರ್ಪಡುವ ತಿಕ್ಕಾಟವನ್ನು ನಿರೂಪಿಸುತ್ತಾ ಹೋಗುವ ಹಂಟಿಂಗ್ಟನ್ ಕೊನೆಯದಾಗಿ ಎರಡು ನಾಗರಿಕತೆಗಳ ಘರ್ಷಣೆಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತಾರೆ. ಅದೇ ಪಶ್ಚಿಮ ಮತ್ತು ಮುಸ್ಲಿಂ ನಾಗರಿಕತೆಗಳ ಮಧ್ಯೆ ನಡೆಯುವ ಸಂಘರ್ಷ! ಕ್ರುಸೇಡ್ ಗಳು ಮತ್ತು ಜಿಹಾದ್ ಗಳ ಐತಿಹಾಸಿಕ ಉದಾಹರಣೆಗಳಿಂದ ಹಿಡಿದು ತನ್ನ ವಾದಕ್ಕೆ ಪೂರಕವಾಗುವ ಎಲ್ಲಾ ಅಂಶಗಳನ್ನು ಬಳಸಿಕೊಳ್ಳುವ ಹಂಟಿಗ್ಟನ್ ಪಶ್ಚಿಮ ಮತ್ತು ಇಸ್ಲಾಮಿಕ್ ನಾಗರಿಕತೆಗಳ ಸಂಘರ್ಷ ಅನಿವಾರ್ಯ ಎಂದು ವಾದಿಸುತ್ತಾರೆ. ಈ ಸಂಘರ್ಷದಲ್ಲಿ ಚೀನಾ ಇಸ್ಲಾಮಿಕ್ ನಾಗರಿಕತೆಗೆ ಸಂಪೂರ್ಣ ಬೆಂಬಲ ನೀಡುತ್ತದೆ ಮತ್ತು ಹಂಟಿಗ್ಟನ್ ಈ ವಿಚಾರವನ್ನು 'ಕನ್ಫ್ಯೂಷಿಯಸ್-ಇಸ್ಲಾಮಿಕ್ ಮೈತ್ರಿ' ಎಂದು ಗುರುತಿಸುತ್ತಾರೆ. ಈ ಸಂಕಟವನ್ನು ಎದುರಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಅಮೆರಿಕಾದ ನೇತೃತ್ವದಲ್ಲಿ ಪ್ರತಿತಂತ್ರ ನಡೆಸುವ ಸಲಹೆ ಸೂಚನೆಗಳನ್ನೂ ಹಂಟಿಗ್ಟನ್ ತನ್ನ 'ನಾಗರಿಕತೆಗಳ ಸಂಘರ್ಷದಲ್ಲಿ'ವಿವರಿಸಿದ್ದಾನೆ. ಈ ರೀತಿಯಾಗಿ ಶೀತಲ ಸಮರೋತ್ತರದಲ್ಲೂ ಪಾಶ್ಚಿಮಾತ್ಯ ಜಗತ್ತಿಗೆ ಸವಾಲೊಡ್ಡುವ ಸಾಂಸ್ಕೃತಿಕ ಶಕ್ತಿಯಾಗಿ ಇಸ್ಲಾಂ ನ್ನು ಹಂಟಿಗ್ಟನ್ ಬಿಂಬಿಸುತ್ತಾರೆ.

ಟ್ರಂಪ್ ರ ಹೊಸ ರಾಜತಾಂತ್ರಿಕ ಸಲಹೆಗಾರ ಸ್ಟೀವ್ ಬ್ಯಾನನ್, "ಜಿಹಾದಿ ಇಸ್ಲಾಮಿಕ್ ಫ್ಯಾಸಿಸಂನ ವಿರುದ್ಧದ ಹೋರಾಟದಲ್ಲಿ ಪಾಶ್ಚಿಮಾತ್ಯ ಜಗತ್ತು ಆರಂಭಿಕ ಹೆಜ್ಜೆಗಳನ್ನಿಡುತ್ತಿದೆ ಎಂಬರ್ಥದಲ್ಲಿ ವಾದ ಮಂಡಿಸಿದ್ದರು. ಅಮೆರಿಕಾದ ಹೊಸ ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರ ಕೆ. ಟಿ. ಮೆಕ್ ಫರ್ಲಾಂಡ್ ನಾವು ಇಸ್ಲಾಂ ವಿರುದ್ಧ ದೀರ್ಘ ಯುದ್ಧದಲ್ಲಿ ತೊಡಗಿದ್ದೇವೆ ಎಂದಿದ್ದಾರೆ. ಅಮೆರಿಕಾದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರಕಾರದ ಆಯಕಟ್ಟಿನ ಸ್ಥಾನಗಳನ್ನು ಆಕ್ರಮಿಸಿಕೊಂಡಿರುವ ಪ್ರಮುಖ ವ್ಯಕ್ತಿಗಳ ಹೇಳಿಕೆಗಳು ಮತ್ತು ಮನೋಭಾವ ನಾಗರಿಕತೆಯ ಸಂಘರ್ಷದಲ್ಲಿ ಹಂಟಿಗ್ಟನ್ ಹೇಳಿದ್ದನ್ನು ನೆನಪಿಸುವಂತಿದೆ. ಹಂಟಿಗ್ಟನ್ ನಾಗರಿಕತೆಗಳ ನಡುವಿನ ಸಂಘರ್ಷವನ್ನಷ್ಟೇ ಅಲ್ಲದೇ ಶೀತಲ ಸಮರದ ನಂತರದಲ್ಲಿ ಅಮೆರಿಕಾ ನಾಯಕತ್ವದಲ್ಲಿ ಪಾಶ್ಚಿಮಾತ್ಯ ಜಗತ್ತು ಸಾರ್ವಭೌಮತ್ವ ಸಾಧಿಸುವ ಹಾದಿಯಲ್ಲಿ ಎದುರಾಗುವ ಪಶ್ಚಿಮ ಮತ್ತು ಇತರ ನಾಗರಿಕತೆಗಳ ಮಧ್ಯೆ ಏರ್ಪಡುವ ತಿಕ್ಕಾಟವನ್ನು ವಿವರಿಸುತ್ತಾನೆ. ಈ ವಿಚಾರವನ್ನು ಬೆಂಬಲಿಸುತ್ತಿರುವ ಮೈಕೆಲ್ ಫಿನ್ ಮುಂಬರುವ ಟ್ರಂಪ್ ಅಧ್ಯಕ್ಷತೆಯ ಸಂಭಾವ್ಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಎನ್ನುವುದು ಇನ್ನಷ್ಟು ಕುತೂಹಲ ಮೂಡಿಸಿದೆ. ಇತ್ತಿಚೆಗೆ ಪ್ರಕಟವಾದ ತನ್ನ ಪುಸ್ತಕವೊಂದರಲ್ಲಿ, ಫಿನ್ ಪಾಶ್ಚಿಮಾತ್ಯ ವಿರೋಧಿ ಮೈತ್ರಿಯೊಂದನ್ನು ಗುರುತಿಸುತ್ತಾರೆ. ಈ ಮೈತ್ರಿ, ಅಲ್ ಖೈದಾ, ಹೆಜ್ಬೊಲ್ಲಾಹ್, ಇಸ್ಲಾಮಿಕ್ ಸ್ಟೇಟ್ ನಂಥ ಉಗ್ರ ಗುಂಪುಗಳ ಜೊತೆ ರಾಷ್ಟ್ರಗಳಾದ ಚೀನಾ, ರಷ್ಯಾ, ಸಿರಿಯಾ, ಇರಾನ್ ಮತ್ತು ವೆನೆಜುವೆಲಾಗಳನ್ನು ಒಳಗೊಂಡಿರುತ್ತದೆ!


ಇತ್ತೀಚೆಗೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದಕರ ಚಟುವಟಿಕೆಗಳು, ಟ್ರಂಪ್ ಮನೋಭಾವ ಮತ್ತು ವಿದೇಶಾಂಗ ನೀತಿಯೆಡೆಗಿನ ಟ್ರಂಪ್ ಸಲಹೆಗಾರರ ದೃಷ್ಟಿಕೊನ 'ನಾಗರಿಕತೆಗಳ ಸಂಘರ್ಷ'ವನ್ನು ಕಾರ್ಯಾಚರಣೆಗಿಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನಾಗರಿಕತೆಗಳ ಸಂಘರ್ಷ ದ ಸತ್ಯಾಸತ್ಯತೆಗಳನ್ನು ಬದಿಗಿರಿಸಿದರೂ, ಈ ಪರಿಕಲ್ಪನೆ ಅಮೆರಿಕಾದ ಶತ್ರುಗಳ ವಿರುದ್ಧ ರಣನೀತಿಯೊಂದನ್ನು ರೂಪಿಸಿಕೊಳ್ಳಲು ಕಾರಣವನ್ನಂತೂ ನೀಡುತ್ತದೆ. ಬುಶ್ ಮತ್ತು ಒಬಾಮ ಅಧ್ಯಕ್ಷತೆಯಲ್ಲಿ, ಭಯೋತ್ಪಾದನೆಯ ವಿರುದ್ಧದ ಹೋರಾಟ ನಡೆದಿದ್ದರೂ ಈ ಸಂಘರ್ಷ ಪಶ್ಚಿಮ ಮತ್ತು ಮುಸ್ಲಿಂ ಜಗತ್ತುಗಳ ಹೋರಾಟವಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಪ್ರಯತ್ನಗಳು ನಡೆದಿದ್ದವು ಮತ್ತು ಈ ಪ್ರಯತ್ನದಲ್ಲಿ ಈ ಹಿಂದಿನ ಅಧ್ಯಕ್ಷರು ಯಸಸ್ವಿಯೂ ಆಗಿದ್ದರು. ಇದೀಗ ಅಮೆರಿಕಾದ ನಡೆ ಹಂಟಿಗ್ಟನ್ ಮಾತುಗಳನ್ನು ನಿಜ ಮಾಡಲು ಹೊರಟಂತಿದೆ. ನಾಗರಿಕತೆಗಳ ಸಂಘರ್ಷ ಅಲ್ ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗಳ ಪ್ರಕಟನೆಗಳಲ್ಲೂ ಮುಖ್ಯ ಸ್ಥಾನ ಪಡೆದುಕೊಂಡಿದೆ. ಅಮೆರಿಕಾದಲ್ಲಿ ಟ್ರಂಪ್ ಅಧ್ಯಕ್ಷತೆಯನ್ನೇ ಇಸ್ಲಾಮಿಕ್ ಉಗ್ರ ಗುಂಪುಗಳೂ ಬಯಸಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ ಕಮಾಂಡರ್ ಒಬ್ಬನ ಹೇಳಿಕೆ ಹೀಗಿತ್ತು, "ಟ್ರಂಪ್ ನ ಅತಿಯಾದ ಇಸ್ಲಾಂ ದ್ವೇಷ ನಮ್ಮ ಕೆಲಸವನ್ನು ಇನ್ನಷ್ಟು ಸರಳಗೊಳಿಸುತ್ತವೆ ಏಕೆಂದರೆ ನಾವಿನ್ನೂ ಸುಲಭವಾಗಿ ಸಾವಿರಾರು ಯುವಕರನ್ನು ಇಸ್ಲಾಮಿಕ್ ಸ್ಟೇಟ್ ಗೆ ಸೇರ್ಪಡೆಗೊಳಿಸಿಕೊಳ್ಳಬಹುದು"

ಗೊತ್ತಿದ್ದೋ ಗೊತ್ತಿಲ್ಲದೆಯೋ ಟ್ರಂಪ್ ಸರಕಾರ ಹಂಟಿಗ್ಟನ್ ನಾಗರಿಕತೆಗಳ ಸಂಘರ್ಷವನ್ನು ತನ್ನ ವಿದೇಶಾಂಗ ನೀತಿಯಲ್ಲಿ ವಿಲೀನಗೊಳಿಸುವಂತಿದೆ. ಫ್ಲಿನ್ ತನ್ನ ಪುಸ್ತಕದಲ್ಲಿ ವಾದಿಸಿರುವಂತೆ, "ನಾವು ವಿಶ್ವಯುದ್ಧವೊಂದರಲ್ಲಿ ಪಾಲ್ಗೊಂಡಿದ್ದೇವೆ. ಕೆಲ ಅಮೆರಿಕನ್ನರಷ್ಟೇ ಈ ಯುದ್ಧವನ್ನು ಗುರುತಿಸಿದ್ದಾರೆ". ಫ್ಲಿನ್ ಗುರುತಿಸಿದ ವಿಶ್ವಯುದ್ಧದ ಕಲ್ಪನೆಗೂ ಹಂಟಿಗ್ಟನ್ ನ ಸಾಂಸ್ಕೃತಿಕ ಸಮರಕ್ಕೂ ಬಹಳಷ್ಟು ಸಾಮ್ಯತೆಗಳಿವೆ. ಒಂದು ಬಾರಿ ವಿಶ್ವ ಸಾಂಸ್ಕೃತಿಕ ಸಮರದಲ್ಲಿ ತೊಡಗಿಕೊಂಡ ಮೇಲೆ, ಹಿಂದೆಗೆಯುವುದು ಅಸಾಧ್ಯವೇ ಸರಿ. ಮಾರ್ಕ್ಸ್ ಹೇಳಿದ ಉಳ್ಳವರು ಮತ್ತು ಶೋಷಿತರ ಯುದ್ಧಕ್ಕೂ ಕೊನೆಯಿದೆ, ಇಸಂಗಳ ನಡುವಿನ ಯುದ್ಧಕ್ಕೂ ಕೊನೆಯಿದೆ. ಆದರೆ ಸಂಸ್ಕೃತಿಯ ಸಂಘರ್ಷಕ್ಕೆ ಕೊನೆ ಹುಡುಕುವುದು ಕಷ್ಟಸಾಧ್ಯವೇ ಸರಿ. ಟ್ರಂಪ್ ಹೊರತಾಗಿಯೂ 21ನೇ ಶತಮಾನದ ಜಾಗತಿಕ ರಾಜಕೀಯ ವ್ಯವಸ್ಥೆ ರಹಸ್ಯ ತಿರುವೊಂದಕ್ಕೆ ಸಾಕ್ಷಿಯಾಗುತ್ತಿದೆ. ಇಲ್ಲಿ ಟ್ರಂಪ್ ಮತ್ತಿತರು ನೆಪ ಮಾತ್ರ.

(This article was published in Vishwavani newspaper on 14 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಮಧ್ಯ ಏಷ್ಯಾದಲ್ಲಿ ಭಾರತದ ರಾಜತಾಂತ್ರಿಕ ನಡೆ

ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆ ಕೇವಲ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗದೆ ಆಚರಣೆಗೆ ಬರುವಂತಾದರೆ, ಮಧ್ಯ ಏಷ್ಯಾದಲ್ಲಿ ಭಾರತ ಪ್ರಭಾವಶಾಲಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೊಂದು ವೇಳೆ ಭಾರತ ಈ ಐತಿಹಾಸಿಕ ಬಂಧವನ್ನು ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪಿಸಿದ್ದೇ ಆದಲ್ಲಿ ಈ ರಾಜತಾಂತ್ರಿಕ ನಡೆಗೆ ಏಷ್ಯಾ ರಾಜಕೀಯದ ದಿಕ್ಕು ಬದಲಿಸುವ ಸಾಮರ್ಥ್ಯವಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಮಧ್ಯ ಏಷ್ಯಾ ರಾಷ್ಟ್ರಗಳ ಜೊತೆಗಿನ ಭಾರತದ ರಾಜಕೀಯ ಸಂಬಂಧಗಳು ಇಂದು ನಿನ್ನೆಯದಲ್ಲ. ಸಹಸ್ರಾರು ವರ್ಷಗಳ ಹಿಂದಿನಿಂದಲೂ ಮಧ್ಯ ಏಷ್ಯಾದ ಚರಿತ್ರೆಯ ವಿವಿಧ ಆಯಾಮಗಳು ಭಾರತದ ಜೊತೆಗೂ ತಳುಕುಹಾಕಿಕೊಂಡಿದೆ. ಉದಾಹರಣೆಗೆ ಕುಶಾನರ ಸಾಮ್ರಾಜ್ಯ ಈ ಎರಡು ಪ್ರದೇಶಗಳನ್ನು ರಾಜಕೀಯವಾಗಿ ತುಂಬಾ ಹತ್ತಿರಕ್ಕೂ ತಂದಿತ್ತು. ಮುಂದೆ ಉತ್ತರ ಭಾರತಕ್ಕೆ ಲಗ್ಗೆ ಹಾಕಿದ ಅನೇಕ ಹೆಚ್ಚಿನ ಮುಸ್ಲಿಂ ದೊರೆಗಳ ಮೂಲವೂ ಮಧ್ಯ ಏಷ್ಯಾವೇ ಆಗಿತ್ತು. ಪ್ರಸಕ್ತ ಭಾರತದ ವಿದೇಶಾಂಗ ನೀತಿಯೂ ಮಧ್ಯ ಏಷ್ಯಾದ ರಾಷ್ಟ್ರಗಳಿಗೆ 'ವಿಸ್ತ್ರತ ನೆರೆಹೊರೆ'ಯ (Extended Neighbourhood) ಸ್ಥಾನಮಾನ ನೀಡಿದೆ. ಈ ಪ್ರದೇಶದಲ್ಲಿರುವ ಕಜಕಿಸ್ತಾನ್, ಕಿರ್ಗಿಸ್ತಾನ್, ತಾಜಿಕಿಸ್ತಾನ್, ಟರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಳು ಸೊವಿಯೆತ್ ಒಕ್ಕೂಟದ ಭಾಗಗಳಾಗಿದ್ದು, ಸೊವಿಯೆತ್ ಒಕ್ಕೂಟ ಹೊಡೆದುಹೋದಾಗ 1991ರಲ್ಲಿ ಪ್ರತ್ಯೇಕ ಸ್ವತಂತ್ರ ರಾಷ್ಟ್ರಗಳಾದವು. ಸೊವಿಯೆತ್ ಒಕ್ಕೂಟದ ಜೊತೆ ಉತ್ತಮ ಬಾಂಧವ್ಯ ಉಳಿಸಿಕೊಂಡಿದ್ದ ಭಾರತಕ್ಕೆ ಸಹಜವಾಗಿಯೇ ಮಧ್ಯ ಏಷ್ಯಾದ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಲುಗೆ ಬೆಳೆದಿತ್ತು.

ಸೊವಿಯೆತ್ ಒಕ್ಕೂಟದ ಪತನದೊಂದಿಗೆ ಬದಲಾದ ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ತರಾತುರಿಯಲ್ಲಿದ್ದ ಭಾರತ ಭಾರತದ ಮಧ್ಯ ಏಷ್ಯಾದ ಕಡೆಗೆ ಅಷ್ಟೊಂದು ಗಮನ ನೀಡಲಾಗಲಿಲ್ಲ. ಸೊವಿಯೆತ್ ಒಕ್ಕೂಟದ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿದ್ದ ರಷ್ಯಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಶೀತಲ ಸಮರೋತ್ತರ ಕಾಲದಲ್ಲಿ ಭಾರತಕ್ಕೆ ತನ್ನ ದ್ವಿಪಕ್ಷೀಯ ಒಪ್ಪಂದಗಳ ಪುನರ್ ವಿಮರ್ಶೆಯ ಅನಿವಾರ್ಯತೆಯೂ ಬಹಳಷ್ಟಿತ್ತು. ಈ ಎಲ್ಲಾ ಒತ್ತಡಗಳು ಮಧ್ಯ ಏಷ್ಯಾ ರಾಷ್ಟ್ರಗಳನ್ನು ಮುಂದಿನ ಸುಮಾರು ಒಂದು ದಶಕದವರೆಗೆ ಭಾರತದ ವಿದೇಶಾಂಗ ನೀತಿಯ ಆದ್ಯತೆಗಳ ಪಟ್ಟಿಯಿಂದ ಹೊರಗುಳಿಯುವಂತೆ ಮಾಡಿತ್ತು. ಆದರೆ ಕಳೆದೊಂದು ದಶಕ ಜಾಗತಿಕ ರಾಜಕೀಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಮಧ್ಯ ಏಷ್ಯಾ ನೈಸರ್ಗಿಕ ಸಂಪನ್ಮೂಲಗಳ ಕಾರಣಕ್ಕಾಗಿ ವಿಶ್ವಶಕ್ತಿಗಳ ಮಧ್ಯೆ ಪೈಪೋಟಿಗೆ ಕಾರಣವಾಗಿದೆ. ಇದೇ ವೇಳೆ ಭಾರತ ನಿಧಾನವಾಗಿ ಎಚ್ಚೆತ್ತುಕೊಂಡು ವಿಶ್ವದ ಆರ್ಥಿಕ ಶಕ್ತಿಯಾಗಿ ಮತ್ತು ಏಷ್ಯಾದ ಪ್ರಾದೇಶಿಕ ಶಕ್ತಿಯಾಗಿಯೂ ಗುರುತಿಸಿಕೊಂಡಿದೆ. ಭಾರತದ ಪ್ರಾದೇಶಿಕ ಪ್ರಭಾವಕ್ಕೆ ಏಟು ನೀಡಲು ತನ್ನ ಸಾಮರ್ಥ್ಯ ಮೀರಿದ ಪ್ರಯತ್ನಗಳನ್ನು ಮಾಡುತ್ತಿರುವ ಚೀನಾ ಭಾರತದ ನೆರೆಹೊರೆಯ ರಾಷ್ಟ್ರಗಳನ್ನು ತನ್ನ ಪ್ರಭಾವದ ತೆಕ್ಕೆಗೆ ಎಳೆದುಕೊಂಡಿದೆ. ತನ್ನೆಲ್ಲಾ ನೆರೆಹೊರೆಯ ರಾಷ್ಟ್ರಗಳಲ್ಲಿ ಚೀನಾ ಪ್ರಭಾವವಿರುವುದು ಸಮರತಾಂತ್ರಿಕ ದೃಷ್ಟಿಯಿಂದ ಭಾರತದ ಪಾಲಿಗೆ ಕಳವಳಕಾರಿ ವಿಚಾರವೇ ಸರಿ. ಈ ನಿಟ್ಟಿನಲ್ಲಿ ಭಾರತ ತನ್ನ ಪ್ರಾದೇಶಿಕ ಪ್ರಭಾವ ಉಳಿಸಿಕೊಳ್ಳಬೇಕಾದಲ್ಲಿ ಮಧ್ಯ ಏಷ್ಯಾದಲ್ಲಿ ಭಾರತಕ್ಕಿರುವ ಐತಿಹಾಸಿಕ ಬಾಂಧವ್ಯವನ್ನು ಮರು ದೃಢಪಡಿಸಿಕೊಳ್ಳುವುದು ಅನಿವಾರ್ಯ.

ಮಧ್ಯ ಏಷ್ಯಾ ಕುರಿತಾದ ಭಾರತದ ವಿದೇಶಾಂಗ ನೀತಿಯ ಪ್ರಮುಖ ಮೈಲಿಗಲ್ಲು 2012ರ ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆ. ಈ ಯೋಜನೆಯ ಮುಖ್ಯ ಗುರಿ ಹಳಿ ತಪ್ಪಿರುವ ಭಾರತ-ಪೂರ್ವ ಏಷ್ಯಾ ರಾಜಕೀಯ ಸಂಪರ್ಕವನ್ನು ಪುನರ್ ಸ್ಥಾಪಿಸುವುದು. ರಾಜಕೀಯ, ಆರ್ಥಿಕ, ಸಮರತಾಂತ್ರಿಕ, ತಂತ್ರಜ್ಞಾನ, ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಸಮನ್ವಯತೆಗಳಿಗೆ ಅವಕಾಶ ಕಲ್ಪಿಸುವುದರ ಜೊತೆಗೆ ಪ್ರಾದೇಶಿಕ ಸಂಪರ್ಕ ಮತ್ತು ಮಾಹಿತಿ ತಂತ್ರಜಾನದಲ್ಲೂ ಮಧ್ಯ ಏಷ್ಯಾ ದೇಶಗಳ ಜೊತೆಗೆ ತೊಡಗಿಸಿಕೊಳ್ಳುವ ಆಲೋಚನೆ ಭಾರತಕ್ಕಿದೆ. ಯುರೋಪ್ ಮತ್ತು ಏಷ್ಯಾಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಂತಿರುವ ಮಧ್ಯ ಏಷ್ಯಾ ಜಾಗತಿಕ ರಾಜಕಾರಣದಲ್ಲಿ ಆಯಕಟ್ಟಿನ ಪ್ರದೇಶವೂ ಹೌದು. ಕಚ್ಚಾತೈಲ, ನೈಸರ್ಗಿಕ ಅನಿಲ, ಹತ್ತಿ, ಬಂಗಾರ, ಅಲ್ಯೂಮಿನಿಯಂ, ಕಬ್ಬಿಣ ಮತ್ತಿತರ ನೈಸರ್ಗಿಕ ಸಂಪನ್ಪೂಲಗಳ ವಿಚಾರದಲ್ಲೂ ಮಧ್ಯ ಏಷ್ಯಾ ಶ್ರೀಮಂತ ಭೂಪ್ರದೇಶವೇ ಸರಿ. ಇವೆಲ್ಲವುಗಳ ಜೊತೆ, ರಕ್ಷಣಾ ವಲಯ, ಭಯೋತ್ಪಾದನಾ ನಿಗ್ರಹ ಮತ್ತು ಅಫಘಾನಿಸ್ತಾನದಲ್ಲಿ ಸ್ಥಿರತೆ ಸಾಧಿಸುವುದು ಭಾರತ ಮತ್ತು ಮಧ್ಯ ಏಷ್ಯಾಗಳ ತತ್ ಕ್ಷಣದ ಕಾಳಜಿಗಳಾಗಿದ್ದು ಈ ಸಾಮ್ಯತೆಗಳು ಭಾರತಕ್ಕೆ ಮಧ್ಯ ಏಷ್ಯಾ ರಾಷ್ಟ್ರಗಳನ್ನು ಇನ್ನಷ್ಟು ಹತ್ತಿರವಾಗಿಸಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಭಾರತ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳ ಮಧ್ಯೆ ಅನ್ಯೋನ್ಯ ಕೊಡುಕೊಳ್ಳುವಿಕೆಯಿದೆ. ಮಧ್ಯ ಏಷ್ಯಾದ ವಿಧ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣಕ್ಕಾಗಿ ಭಾರತವನ್ನು ಆಶ್ರಯಿಸುತ್ತಿದ್ದಾರೆ. ಅಮೆರಿಕಾ, ಯುರೋಪ್ ಗಳಲ್ಲಿ ಶಿಕ್ಷಣದ ವೆಚ್ಚಗಳಿಗೆ ಹೋಲಿಸಿದಲ್ಲಿ ಭಾರತ ಈ ಪ್ರದೇಶದ ವಿದ್ಯಾರ್ಥಿಗಳಿಗೆ ಮಿತವ್ಯಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುತ್ತಿದೆ. ಭಾರತದ ವಿದ್ಯಾರ್ಥಿಗಳೂ ಸಂಶೋಧನೆ ಮತ್ತಿನ್ನಿತರ ಕಾರಣಗಳಿಗೆ ಮಧ್ಯ ಏಷ್ಯಾ ಪ್ರವೇಶಿಸುತ್ತಿದ್ದಾರೆ.
Image may contain: 1 person
ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆಯಲ್ಲಿ ನಿರೀಕ್ಷೆಗಳು ಮತ್ತು ಉಜ್ವಲ ಅವಕಾಶಗಳಿದ್ದಂತೆ ಸಮಸ್ಯೆಗಳೂ ಬಹಳಷ್ಟಿವೆ. ಭಾರತ ಮತ್ತು ಪೂರ್ವ ಏಷ್ಯಾವನ್ನು ಸಂಪರ್ಕಿಸಲು ಅತ್ಯಂತ ಹತ್ತಿರದ ಹಾದಿಯೆಂದರೆ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳನ್ನು ಹಾದುಹೋಗುವುದು. ಅದರೆ ಪಾಕಿಸ್ತಾನ ಮತ್ತು ಭಾರತಗಳ ವೈರತ್ವ ಹಾಗೂ ಪಾಕಿಸ್ತಾನವನ್ನು ಎಲ್ಲಾ ರೀತಿಯಲ್ಲೂ ಅಂಕೆಯಲ್ಲಿಟ್ಟುಕೊಂಡಿರುವ ಚೀನಾಗಳಿಂದಾಗಿ ಇದು ಕಷ್ಟಸಾಧ್ಯ. ಇಷ್ಟಕ್ಕೂ ಒಂದು ವೇಳೆ ಪಾಕಿಸ್ತಾನದ ಜೊತೆ ಭಾರತ ಉತ್ತಮ ಬಾಂಧವ್ಯ ಹೊಂದಿದ್ದರೂ, ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳಲ್ಲಿರುವ ಅಸ್ಥಿರತೆ ಗೊಂದಲಗಳಿಂದಾಗಿ, ವ್ಯಾಪಾರ ವಾಣಿಜ್ಯೋದ್ದೇಶಗಳಿಗೆ ಈ ಮಾರ್ಗ ಖಂಡಿತಾ ಒಳ್ಳೆಯ ಆಯ್ತ್ಕೆಯಂತೂ ಅಲ್ಲ. ಇದೇ ಕಾರಣಕ್ಕಾಗಿಯೇ 'ಟರ್ಕ್ ಮೆನಿಸ್ತಾನ್ ಅಫಘಾನಿಸ್ತಾನ್ ಪಾಕಿಸ್ತಾನ್ ಭಾರತ ಪೈಪ್ ಲೈನ್ ಯೋಜನೆ' (TAPI) ಇವತ್ತಿಗೂ ಕಾರ್ಯರೂಪಕ್ಕೆ ಬರದೆ ಯೋಜನೆಯಾಗಿಯೇ ಉಳಿದಿದೆ. ಇದರಿಂದಾಗಿಯೇ ಇಲ್ಲಿಯವರೆಗೆ ಮಧ್ಯ ಏಷ್ಯಾದಿಂದ ಒಂದು ತೊಟ್ಟು ತೈಲವೂ ಭಾರತಕ್ಕೆ ತಲುಪಿಲ್ಲ! ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಮಧ್ಯ ಏಷ್ಯಾದ ರಾಷ್ಟ್ರಗಳಾದ ಕಜಕಿಸ್ತಾನ್, ಕಿರ್ಗಿಸ್ತಾನ್, ತಾಜಿಕಿಸ್ತಾನ್, ಟರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಳಿಗೆ ಭೇಟಿ ನೀಡಿದ್ದು ರಾಜತಾಂತ್ರಿಕ ಸಂಬಂಧಗಳೊಂದಿಗೆ, ಈ ಪ್ರದೇಶದಲ್ಲಿರುವ ಉಗ್ರ ಗುಂಪುಗಳನ್ನು ನಿಗ್ರಹಿಸುವ ಬಗೆಗೂ ಮಾತುಕತೆಗಳಾಗಿವೆ. ಇಸ್ಲಾಮಿಕ್ ಮೂವಮೆಂಟ್ ಆಫ್ ಉಜ್ಬೇಕಿಸ್ತಾನ್ ಮತ್ತು ಜುಂಡ್-ಅಲ್- ಖಿಲಾಫಾಹ್ ಈ ಪ್ರದೇಶದ ಎರಡು ಪ್ರಮುಖ ಉಗ್ರ ಸಂಘಟನೆಗಳಾಗಿದ್ದು ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್-ಖೈದಾ ಸ್ಪರ್ಧೆಯೂ ಈ ಪ್ರದೇಶದಲ್ಲಿ ಅಸ್ಥಿರತೆ ಮೂಡಿಸುತ್ತಿವೆ. 

ಮಧ್ಯ ಏಷ್ಯಾ ಕಡೆಗಿನ ರಾಜತಾಂತ್ರಿಕ ಪ್ರಯತ್ನಗಳಿಗೆ ಆಶ್ಚರ್ಯಕರ ರೀತಿಯಲ್ಲಿ ಭಾರತದ ಸಾಂಸ್ಕ್ರತಿಕ ಹಿರಿಮೆ ಇನ್ನಷ್ಟು ಬಲ ತುಂಬಲಿದೆ. ಸೊವಿಯೆತ್ ಒಕ್ಕೂಟದ ಸಮಯದಿಂದಲೂ ಈ ಪ್ರದೇಶದಲ್ಲಿ ಭಾರತದ ಸಂಸ್ಕೃತಿಗೆ ಬಹಳಷ್ಟು ಜನಪ್ರಿಯತೆ ಪಡೆದಿದೆ. ಇಲ್ಲಿನ ಜನರು ಹಿಂದಿ ಗೀತೆಗಳನ್ನು ಆಲಿಸುತ್ತಾರಷ್ಟೇ ಅಲ್ಲದೇ ಬಾಲಿವುಡ್ ಸಿನಿಮಾಗಳನ್ನು ಬಹಳಷ್ಟು ಇಷ್ಟ ಪಡುತ್ತಾರೆ. ಈ ಅಂಶಗಳು ಭಾರತಕ್ಕೆ ಮಧ್ಯ ಏಷ್ಯಾದಲ್ಲಿ ವಿಶಿಷ್ಟ ಅವಕಾಶಗಳನ್ನು ತೆರೆದಿಟ್ಟಿವೆ. ಭಾರತ ಈ ಪ್ರದೇಶದಲ್ಲಿ ತನ್ನ ರಾಜತಾಂತ್ರಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತನ್ನ ನೈತಿಕ ಶಕ್ತಿಯನ್ನು ಬಳಸಿಕೊಳ್ಳುವುದು ಜಾಣತನದ ಹೆಜ್ಜೆ. ಕನೆಕ್ಟ್ ಸೆಂಟ್ರಲ್ ಏಷ್ಯಾ ಯೋಜನೆ ಕೇವಲ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾಗದೆ ಆಚರಣೆಗೆ ಬರುವಂತಾದರೆ, ಮಧ್ಯ ಏಷ್ಯಾದಲ್ಲಿ ಭಾರತ ಪ್ರಭಾವಶಾಲಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೊಂದು ವೇಳೆ ಭಾರತ ಈ ಐತಿಹಾಸಿಕ ಬಂಧವನ್ನು ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪಿಸಿದ್ದೇ ಆದಲ್ಲಿ ಈ ರಾಜತಾಂತ್ರಿಕ ನಡೆಗೆ ಏಷ್ಯಾ ರಾಜಕೀಯದ ದಿಕ್ಕು ಬದಲಿಸುವ ಸಾಮರ್ಥ್ಯವಿದೆ.

(This article was published in Hosa Digantha newspaper on 6 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಗುರುವಾರ, ಡಿಸೆಂಬರ್ 1, 2016

ಮೈತ್ರಿಯಿಂದ ಮರೆಯಾದ 'ರಾಜತಾಂತ್ರಿಕ ಸಂಕೋಚ'!

ಭಯೋತ್ಪಾದನೆಯೇ ಇರಲಿ ಅಥವಾ ನೆರೆಹೊರೆಯ ಎಡಬಿಡಂಗಿ ರಾಷ್ಟ್ರಗಳ ಜೊತೆಗೆ ಏಗುವ ವಿಚಾರದಲ್ಲೇ ಆಗಲಿ ಇಸ್ರೇಲ್ ಗಿಂತ ಶ್ರೇಷ್ಠ ಮಾದರಿ ಇನ್ಯಾವ ರಾಷ್ಟ್ರವೂ ಆಗಲಾರದು. ಈ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತದ ಏಕಾಂಗಿ ಹೋರಾಟಕ್ಕೆ ಹೆಗಲು ನೀಡುವಂಥ ಮಿತ್ರರಾಷ್ಟ್ರವೇನಾದರೂ ಇದ್ದಲ್ಲಿ ಅದು ಇಸ್ರೇಲ್ ಮಾತ್ರ! 
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

ಸ್ವತಂತ್ರ ಭಾರತದ ಇಷ್ಟು ವರ್ಷಗಳ ವಿದೇಶಾಂಗ ನೀತಿಯಲ್ಲಿ ಭಾರತವನ್ನು ಬಿಟ್ಟೂ ಬಿಡದಂತೆ ಕಾಡಿದ್ದು ಎರಡು ಪ್ರಮುಖ ಅಂಶಗಳು. ಮೊದಲನೆಯದಾಗಿ ಪಾಕಿಸ್ತಾನ, ಚೀನಾ ಮಾತ್ರವಲ್ಲದೇ, ಉಳಿದ ಎಲ್ಲಾ ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಭಾರತಕ್ಕಿರುವ ಮನಸ್ತಾಪಗಳು. ಎರಡನೆಯದಾಗಿ ಮತ್ತು ಅತ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳುವ ಅಂಶ ಭಯೋತ್ಪಾದಕರ ಹುಚ್ಚಾಟಗಳು. ಭಾರತ ಪದೇ ಪದೇ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಿದಾಗ, ವಿಶ್ವ ಶಕ್ತಿಗಳಿಗೆ ಭಾರತದ ವಾದ ತಮಾಷೆಯ ವಿಷಯವಾಗಿತ್ತು.  2001 ಸೆಪ್ಟೆಂಬರ್ 11ರಲ್ಲಿ ಅಲ್ ಖೈದಾ ಅಮೆರಿಕಾದ ಮೇಲೆ ತನ್ನ ವಕ್ರದೃಷ್ಟಿ ಬೀರಿದ ಮೇಲಷ್ಟೇ ಭಯೋತ್ಪಾದನೆಯ ವಿಚಾರದಲ್ಲಿ ವಿಶ್ವದ ದೊಡ್ಡಣ್ಣನ ದೃಷ್ಟಿ ನೆಟ್ಟಗಾಗಿದ್ದು! ತದನಂತರ ಭಯೋತ್ಪಾದಕರನ್ನು ಬೇರು ಸಮೇತ ಕಿತ್ತುಹಾಕುತ್ತೇವೆ ಎಂದು ಅಮೆರಿಕಾ ಅಬ್ಬರಿಸಿದರೂ, ಭಾರತದ ಸಮಸ್ಯೆಗಳ ಪರಿಹಾರಕ್ಕೇನೂ ದೊಡ್ಡ ಮಟ್ಟಿನ ಅನುಕೂಲವಾಗಿರಲಿಲ್ಲ. ಇದಕ್ಕೆಲ್ಲಾ ಕಾರಣ ಭಾರತದಲ್ಲಾಗುತ್ತಿರುವ ಭಯೋತ್ಪಾನೆಯ ಅನುಭವಗಳಿಗೂ ಅಮೆರಿಕಾ ಮತ್ತಿತರ ಯುರೋಪಿಯನ್ ರಾಷ್ಟ್ರಗಳು ಭಯೋತ್ಪಾದನೆಯನ್ನು ಪರಿಭಾವಿಸುತ್ತಿರುವ ರೀತಿಗೂ ಇರುವ ಅಜಗಜಾಂತರ ವ್ಯತ್ಯಾಸಗಳು. ಈ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತದ ಏಕಾಂಗಿ ಹೋರಾಟಕ್ಕೆ ಹೆಗಲು ನೀಡುವಂಥ ಮಿತ್ರರಾಷ್ಟ್ರವೇನಾದರೂ ಇದ್ದಲ್ಲಿ ಅದು ಇಸ್ರೇಲ್ ಮಾತ್ರ! ಭಯೋತ್ಪಾದನೆಯೇ ಇರಲಿ ಅಥವಾ ನೆರೆಹೊರೆಯ ಎಡಬಿಡಂಗಿ ರಾಷ್ಟ್ರಗಳ ಜೊತೆಗೆ ಏಗುವ ವಿಚಾರದಲ್ಲೇ ಆಗಲಿ ಇಸ್ರೇಲ್ ಗಿಂತ ಶ್ರೇಷ್ಠ ಮಾದರಿ ಇನ್ಯಾವ ರಾಷ್ಟ್ರವೂ ಆಗಲಾರದು. ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದ್ದ ಭಾರತ- ಇಸ್ರೇಲ್ ರಾಜತಾಂತ್ರಿಕ ಸಂಬಂಧಗಳಲ್ಲಿ ಇತ್ತೀಚಿನ ವಿದ್ಯಮಾನಗಳು ಹೊಸ ಹುರುಪು ತುಂಬುತ್ತಿರುವುದೂ ಧನಾತ್ಮಕ ಬೆಳವಣಿಗೆಯೇ ಸರಿ. 

ಇಸ್ರೇಲಿನ ಅಧ್ಯಕ್ಷ ರೂವೆನ್ ರಿವಿನ್ ಭಾರತಕ್ಕೆ ಆರು ದಿನಗಳ ಭೇಟಿ ನೀಡಿದ್ದರು. ಈ ಬಾರಿ ರೂವೆನ್ ರಿವಿನ್ ಭಾರತ ಮತ್ತು ಇಸ್ರೇಲ್ ಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಮೆರುಗು ನೀಡುವ ಮಾತುಗಳನ್ನಾಡಿದ್ದು, ಭಾರತ ಮತ್ತು ಇಸ್ರೇಲ್ ಗಳ ನಡುವೆ ಬೆಳೆಯುತ್ತಿರುವ ಸ್ನೇಹ, ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರಗಳು ಭವಿಷ್ಯದಲ್ಲಿ ಧನಾತ್ಮಕ ಫಲ ನೀಡಲಿದೆ ಎಂದಿದ್ದಾರೆ. ಈ ಎರಡೂ ರಾಷ್ಟ್ರಗಳಿಗೂ ಸಮಾನ ಶತ್ರುವಾಗಿರುವ ಭಯೋತ್ಪಾದನೆ ನಿರ್ಮೂಲನೆಯಲ್ಲೂ ಇಸ್ರೇಲ್ - ಭಾರತಗಳು ಕಾರ್ಯನಿರ್ವಹಿಸುತ್ತಿರುವ ನೀತಿಯ ಬಗೆಗೂ ಪ್ರಸ್ತಾವಿಸಿದ ರಿವಿನ್, ಭಾರತದ ಕೃಷಿ, ರಕ್ಷಣಾ ಮತ್ತು ಸೈಬರ್ ಯುದ್ಧಗಳ ವಿಚಾರದಲ್ಲೂ ನೆರವು ನೀಡಲು ಇಸ್ರೇಲ್ ಸಿದ್ಧವಾಗಿದೆ ಎನ್ನುವ ಮೂಲಕ ಇಸ್ರೇಲ್ ಭಾರತ ಸಂಬಂಧಗಳನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯುವ ಎಲ್ಲಾ ಲಕ್ಷಣಗಳೂ ಕಂಡು ಬಂದಿವೆ. ಇಸ್ರೇಲೀ ಅಧ್ಯಕ್ಷರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ, ಭಾರತ- ಇಸ್ರೇಲ್ ನ ಭವಿಷ್ಯದ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಬೆಳಕೊಂದು ಕಂಡಿದ್ದರಲ್ಲಿ ತಪ್ಪೇನೂ ಇಲ್ಲ. ಈ ಎರಡೂ ರಾಷ್ಟ್ರಗಳ ಸಂಬಂಧಗಳಲ್ಲಿ ಇದೇ ವೇಗ ಉಳಿಸಿಕೊಂಡು ಇನ್ನಷ್ಟು ಬಲ ತುಂಬಲು ಪ್ರಧಾನಿ ನರೇಂದ್ರ  ಮೋದಿಯವರು ಜನವರಿ 2017ರಲ್ಲಿ ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. 2006ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಇಸ್ರೇಲ್ ಭೇಟಿ ಮಾಡಿದ್ದ ನರೇಂದ್ರ ಮೋದಿ, ಈ ಬಾರಿ ಪ್ರಧಾನಿಯಾಗಿ ನೀಡುವ ಭೇಟಿ ಬಹಳ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಈ ಭೇಟಿಯ ಮೂಲಕ ಇಸ್ರೇಲ್ ಗೆ ಭೇಟಿ ನೀಡಿದ ಪ್ರಪ್ರಥಮ ಭಾರತದ ಪ್ರಧಾನಿಯೆನಿಸಿಕೊಳ್ಳಲಿದ್ದಾರೆ ಮೋದಿ.

1992ರಲ್ಲಿ ಇಸ್ರೇಲ್-ಭಾರತಗಳ ಬಾಂಧವ್ಯಕ್ಕೆ ನೆಲೆಗಟ್ಟನ್ನು ಹಾಕಿಕೊಟ್ಟ ಕೀರ್ತಿ ಆಗಿನ ಪ್ರಧಾನಿ ನರಸಿಂಹ ರಾವ್ ಅವರಿಗೆ ಸಲ್ಲುತ್ತದೆ. ಕೃಷಿ, ರಕ್ಷಣೆ, ಭಯೋತ್ಪಾದನಾ ನಿಗ್ರಹ ಇನ್ನಿತರ ವಿಚಾರಗಳಲ್ಲಿ ಕಳೆದ ಹಲವು ವರ್ಷಗಳಿಂದ ಇಸ್ರೇಲ್ ಜೊತೆಗೆ ಭಾರತದ ಬಾಂಧವ್ಯ ಉತ್ತಮವಾಗಿಯೇ ಮುಂದುವರಿದಿತ್ತಾದರೂ, ವಿಶ್ವಮಟ್ಟದಲ್ಲಿ ಇಸ್ರೇಲ್ ಜೊತೆಗೆ ಮುಕ್ತವಾಗಿ ಗುರುತಿಸಿಕೊಳ್ಳಲು ಭಾರತ ಹಿಂಜರಿಯುತ್ತಿತ್ತು! ಈ ಹಿಂಜರಿಕೆ ಮತ್ತು ಸಂಕೋಚಗಳಿಗೆ ಕಾರಣಗಳೂ ಇಲ್ಲದಿಲ್ಲ. ಇಸ್ರೇಲ್ ಜೊತೆಗಿನ ಅತಿಯಾದ ನಂಟು, ಅರಬ್ ರಾಷ್ಟ್ರಗಳ ವಿರೋಧಕ್ಕೆ ಕಾರಣವಾಗಬಹುದು ಎಂಬ ಭೀತಿ ಭಾರತೀಯ ನಾಯಕರನ್ನು ಈ ಇಬ್ಬಂದಿ ನೀತಿಯತ್ತ ವಾಲುವಂತೆ ಮಾಡಿತ್ತು. ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗುವ ಭಾರತದ ಆಕಾಂಕ್ಷೆ ಮತ್ತಿನ್ನಿತರ ಜಾಗತಿಕ ವಿಚಾರಗಳಲ್ಲಿ ಅರಬ್ ರಾಷ್ಟ್ರಗಳ ಉಪಸ್ಥಿತಿ ಮತ್ತು ಪ್ರಭಾವವನ್ನು ಕಡೆಗಣಿಸುವಂತಿಲ್ಲ. ಪಾಕಿಸ್ತಾನದ ವಿಚಾರದಲ್ಲೂ ಅರಬ್ ರಾಷ್ಟ್ರಗಳು ಭಾರತದ ಪರ ನಿಲ್ಲುವ ದೂರದ ಆಸೆ ಇಟ್ಟುಕೊಂಡ ಭಾರತದ ವಿದೇಶಾಂಗ ನೀತಿ ಅರಬ್ ರಾಷ್ಟ್ರಗಳ ವಿಶ್ವಾಸ ಪಡೆದುಕೊಳ್ಳಲು ಹರಸಾಹಸ ಪಡುತ್ತಿರುವಾಗ ಅರಬ್ಬರ ಬದ್ಧವೈರಿಯಾದ ಇಸ್ರೇಲ್ ಜೊತೆಗೆ ಭಾರತ ಹೇಗೆ ತಾನೆ ಗುರುತಿಸಿಕೊಂಡೀತು? ಪ್ಯಾಲೆಸ್ಟೀನ್ ವಿವಾದ ಯಾವುದೇ ರಾಷ್ಟ್ರದ ಮಧ್ಯಪ್ರಾಚ್ಯದ ವಿದೇಶಾಂಗ ನೀತಿಯ ಅಳತೆಗೋಲು ಎಂದರೆ ಅತಿಶಯೋಕ್ತಿಯೇನಿಲ್ಲ. ಭಾರತ ತನ್ನ ಪ್ಯಾಲೆಸ್ಟೀನ್ ನೀತಿಯುದ್ದಕ್ಕೂ ಅರಬ್ ರಾಷ್ಟ್ರಗಳನ್ನು ಓಲೈಸುವ ಪ್ರಯತ್ನದಲ್ಲಿ ಪ್ಯಾಲೆಸ್ಟೀನಿಯರ ಪರವಹಿಸಿಕೊಂಡು, ಇಸ್ರೇಲನ್ನು ದೂರ ಮಾಡಿಕೊಂಡಿದ್ದು ಸ್ಪಷ್ಟವಾಗಿತ್ತು. ಭಾರತದ ವಿದೇಶಾಂಗ ನೀತಿಯ ಈ 'ರಾಜತಾಂತ್ರಿಕ ಸಂಕೋಚ' ಭಾರತದ ಜೊತೆಗೆ ವಿಶ್ವಾಸಾರ್ಹ ಸಂಬಂಧಗಳನ್ನು ಹೊಂದಿದ್ದ ಇಸ್ರೇಲನ್ನು ಉದ್ದೇಶಪೂರ್ವಕವಾಗಿಯೇ ದೂರವಿಡುವಂತೆ ಮಾಡಿತ್ತು. ಈ ಇಬ್ಬಂದಿತನದಿಂದಾಗಿ ಇಸ್ರೇಲ್ ಕೂಡ ಭಾರತದ ಜೊತೆಗೆ ಹೆಚ್ಚಿನ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಲು ಆಸಕ್ತಿ ವಹಿಸದಂತೆ ಮಾಡಿಬಿಟ್ಟಿತ್ತು

ಇಸ್ರೇಲ್ ವಿರೋಧವನ್ನೂ ಕಟ್ಟಿಕೊಂಡು, ಅರಬ್ ನಾಯಕರನ್ನು ಒಲೈಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದ ಭಾರತಕ್ಕೆ ವಾಸ್ತವ ಅರಿವಾದಾಗ ದಿಗ್ಭ್ರಮೆಯಾಗಿತ್ತು. ಭಾರತದ ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಅರಬ್ ರಾಷ್ಟ್ರಗಳು ಮಾತ್ರ, "ಕೊಟ್ಟವ ಕೋಡಂಗಿ, ಈಸ್ಕೊಂಡವ ವೀರಭದ್ರ" ಎಂಬಂತೆ ಭಾರತದ ಬೆಂಬಲ ಸಹಕಾರಗಳನ್ನೆಲ್ಲಾ ಪಡೆದುಕೊಂಡು ಭಾರತದ ವಿರುದ್ಧ ಪಾಕಿಸ್ತಾನಕ್ಕೆ ನೆರವು ನೀಡುವ ಚಾಳಿ ಮುಂದುವರಿಸಿದ್ದವು! ಎಲ್ಲೋ ದೂರದ ಸಮಸ್ಯೆಗೆ ಅರಬ್ಬರಿಗೆ ಸಹಾಯ ಮಾಡಲು ಹೋದ ಭಾರತಕ್ಕೆ, ತನ್ನ ನೆರೆಹೊರೆಯ ಸಮಸ್ಯೆಗೂ ಅರಬ್ಬರ ಸಹಾಯ ದೊರೆಯಲಿಲ್ಲ. ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೊಂಬರಾಟಗಳು, ಭಯೋತ್ಪಾದಕರಿಗೆ ನೀಡುತ್ತಿರುವ ಕುಮ್ಮಕ್ಕು ಇನ್ನಿತರ ಪಾಕಿಸ್ತಾನದ ಹುಚ್ಚಾಟಗಳಿಗೆ ಅರಬ್ ರಾಷ್ಟ್ರಗಳು ಬೆಂಬಲ ನೀಡಿವೆಯೇ ಹೊರತು ಬುದ್ಧಿ ಹೇಳುವ ಪ್ರಯತ್ನ ಮಾಡಿಲ್ಲ. ಅರಬ್ ರಾಷ್ಟ್ರಗಳೆಲ್ಲಾ ಸೇರಿಕೊಂಡು Organization of Islamic Conference (OIC) ಎಂಬ ಹೆಸರಿನಲ್ಲಿ ನೇರವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದಾಗ, ಭಾರತದ ವಿದೇಶಾಂಗ ನೀತಿ ತಪ್ಪು ಹಾದಿಯಲ್ಲಿ ನಡೆದಿದ್ದು ಸ್ಪಷ್ಟವಾಗಿತ್ತು. ಇಷ್ಟೆಲ್ಲಾ ನಡೆದ ಮೇಲೆ ಮತ್ತೆ ಇಸ್ರೇಲ್ ಜೊತೆಗಿನ ವಿಶ್ವಾಸ ವೃದ್ಧಿಸಿಕೊಳ್ಳುವುದು ಕಷ್ಟಸಾಧ್ಯವೇ ಸರಿ. ಹೀಗಿದ್ದಾಗ್ಯೂ ಮೋದಿ ಸರಕಾರ ಭಾರತದ ಸ್ನೇಹದಲ್ಲಿ ಇಸ್ರೇಲ್ ಗೆ ವಿಶ್ವಾಸ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮೋದಿ ದೇಶ ಮತ್ತು ವಿದೇಶಗಳಲ್ಲಿ ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಯಾವುದೇ ಸಂಕೋಚ ಮತ್ತು ಗೊಂದಲಗಳಿಲ್ಲದೇ ಬಹಳ ಸ್ಪಷ್ಟವಾಗಿ ಪ್ರಸ್ತುತ ಪಡಿಸುತ್ತಿರುವುದು ಭಾರತದ ವಿದೇಶಾಂಗ ನೀತಿಯ ಟ್ರಂಪ್ ಕಾರ್ಡ್ ಆಗಿ ಬದಲಾಗುತ್ತಿದೆ.

ಭಾರತ ತನ್ನ ಹಿಂದಿನ 'ರಾಜತಾಂತ್ರಿಕ ಸಂಕೋಚ'ದ ನೀತಿಯನ್ನು ಕೈಬಿಟ್ಟುಇಸ್ರೇಲ್ ಗೆಳೆತನವನ್ನು ಮುಕ್ತವಾಗಿ ಒಪ್ಪಿಕೊಳ್ಳುವ ಅವಶ್ಯಕತೆ ಇಂದೆಂದಿಗಿಂತಲೂ ಹೆಚ್ಚಿದೆ. 1990ರಿಂದೀಚೆಗೆ ಭಾರತ ಹಂತ ಹಂತವಾಗಿ ಪ್ಯಾಲೆಸ್ಟೀನ್ ನೀತಿಯಲ್ಲಿ ಬದಲಾವಣೆ ಮಾಡಿಕೊಂಡು ಇಸ್ರೇಲ್ ನತ್ತ ಸಾಗುತ್ತಿರುವುದು ಸ್ಪಷ್ಟವಾಗಿದೆ. ಭಾರತ ಇಸ್ರೇಲ್ ಜೊತೆಗೆ ವ್ಯವಹರಿಸುವಲ್ಲಿ ರಾಜತಾಂತ್ರಿಕ ಸಂಕೋಚ ಗೊಂದಲಗಳನ್ನು ವ್ಯಕ್ತಪಡಿಸಿದ್ದರೂ ಇಸ್ರೇಲ್ ಮಾತ್ರ ಭಾರತಕ್ಕೆ ಅವಶ್ಯಕತೆ ಬಿದ್ದಾಗಲೆಲ್ಲಾ ಷರತ್ತುರಹಿತ ಬೆಂಬಲ ನೀಡಿದೆ. ಉದಾಹರಣೆಗೆ ಮೇ 1998ರಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಮೇಲೆ ನಿರ್ಬಂಧ ಹೇರಿದ್ದ ಸಂದರ್ಭದಲ್ಲೂ ಇಸ್ರೇಲ್ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುವ ಇಚ್ಚೆ ವ್ಯಕ್ತಪಡಿಸಿತ್ತು! 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಇಸ್ರೇಲ್ ತನ್ನ ಮಾನವರಹಿತ ವಿಮಾನಗಳನ್ನು (UAV) ಉಪಯೋಗಿಸಿಕೊಂಡು ಪಾಕಿಸ್ತಾನದ ಮಿಲಿಟರಿ ನೆಲೆಗಳು ಮತ್ತಿತರ ಸಮರತಾಂತ್ರಿಕ ಮಹತ್ವದ ಮಾಹಿತಿಗಳನ್ನು ದೃಶ್ಯಾವಳಿಗಳ ಸಮೇತ ಭಾರತೀಯ ಸೇನೆಗೆ ಒದಗಿಸಿತ್ತು! ಇಸ್ರೇಲ್ ನೀಡಿದ ಈ ವಿಶೇಷ ನೆರವು ಕಾರ್ಗಿಲ್ ನಲ್ಲಿ ವೈರಿಗಳ ಸದ್ದಡಗಿಸಿ ವಿಜಯ್ ದಿವಸ್ ಆಚರಿಸುವಲ್ಲಿ ಬೃಹತ್ ಪಾತ್ರ ವಹಿಸಿತ್ತು. 2002ರಲ್ಲಿ ಪಾಕಿಸ್ತಾನದ ನಿರಂತರ ಕೆಣಕುವಿಕೆಗೆ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದಲ್ಲಿ ಭಾರತೀಯ ಸೇನೆ ನೀಡಿದ ಉತ್ತರ 'ಆಪರೇಶನ್ ಪರಾಕ್ರಮ್'! ಈ ಕಾರ್ಯಾಚರಣೆಯಲ್ಲೂ ಭಾರತದ ಸೇನೆಗೆ ಅಗತ್ಯವಿದ್ದ ಸಾಮಗ್ರಿಗಳನ್ನು ಕ್ಷಿಪ್ರಗತಿಯಲ್ಲಿ ತನ್ನ ವಿಶೇಷ ವಿಮಾನಗಳ ಮೂಲಕ ಒದಗಿಸಿದ್ದು ಇದೇ ಇಸ್ರೇಲ್! ಹೀಗಿರುವಾಗ ಇಸ್ರೇಲ್ ಜೊತೆಗಿನ ಭಾರತದ ರಾಜತಾಂತ್ರಿಕ ನಂಟನ್ನು ನೇರವಾಗಿ ಒಪ್ಪಿಕೊಳ್ಳುವುದರಲ್ಲಿ ಯಾವ ಸಂಶಯವೂ ಬೇಕಾಗಿಲ್ಲ. ಈ ಧೀಮಂತ ನಡೆ ಇಸ್ರೇಲ್ ಭಾರತಕ್ಕೆ ನೀಡಿದ ಷರತ್ತುರಹಿತ ಬೆಂಬಲಗಳಿಗೆ ಸ್ನೇಹಪೂರ್ವಕ ಗೌರವ ಸೂಚಿಸಿದಂತೆಯೂ ಆಗುತ್ತದೆ.

(This article was published in Vishwavani newspaper on 1 December 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು ಮತ್ತು ಕ್ಯಾಸ್ಟ್ರೊ

ಅಣ್ವಸ್ತ್ರ ಯುದ್ಧದ ವಿಧ್ವಂಸಕತೆಯ ಬಗ್ಗೆ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು ಅರಿವು ಮೂಡಿಸಿದಷ್ಟು ಸ್ಪಷ್ಟವಾಗಿ ಯಾವ ಪ್ರವಾದಿಯೂ ವಿವರಿಸಲಾರ. ಇಂಥ ಒಂದು ಐತಿಹಾಸಿಕ ಬಿಕ್ಕಟ್ಟಿಗೆ ಇತ್ತೀಚಿನವರೆಗೂ ಜೀವಂತ ಸಾಕ್ಷಿಯಾಗಿ, ಆ ಬಿಕ್ಕಟ್ಟಿನ ಅವಿಭಾಜ್ಯ ಅಂಗವೇ ಆಗಿದ್ದ  ಫಿಡೆಲ್ ಕ್ಯಾಸ್ಟ್ರೊ ಮರಣ ಅಣ್ವಸ್ತ್ರ ಶಕ್ತಿಗಳು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟನ್ನು ನೆನಪಿಸಿಕೊಂಡು ತಮ್ಮ ನೈತಿಕ ಜವಾಬ್ದಾರಿಯನ್ನು ಪುನರ್ಮನನ ಮಾಡಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


ಸ್ಯಾಂಟಿಗೋ ಡಿ ಕ್ಯೂಬಾದಲ್ಲಿ ಮಿಲಿಟರಿ ದಂಗೆಯ ನೇತೃತ್ವ ವಹಿಸಿದ್ದಕ್ಕಾಗಿ 1953ರಲ್ಲಿ ಫಿಡೆಲ್ ಕ್ಯಾಸ್ಟ್ರೋ ನನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ ಕ್ಯಾಸ್ಟ್ರೊ, "ನನ್ನನ್ನು ನಿಂದನೆ ಮತ್ತು ಖಂಡನೆಗೆ ಒಳಪಡಿಸಬಹುದು, ಆದರೆ ಇತಿಹಾಸ ನನ್ನನ್ನು ಬಿಡುಗಡೆಗೊಳಿಸುತ್ತದೆ' ಎಂದು ಮಾರ್ಮಿಕವಾಗಿ ಘೋಷಿಸಿದ್ದ. ಮುಂದೆ ಕ್ಯೂಬಾ ಮತ್ತು ವಿಶ್ವ ರಾಜಕೀಯದಲ್ಲಿ ಕ್ಯಾಸ್ಟ್ರೊ ಮೂಡಿಸಿದ ಛಾಪು ಯಾರೂ ಮರೆಯುವಂತಿರಲಿಲ್ಲ. ಸುಮಾರು ದಶಕಗಳ ಕಾಲ ಕ್ಯೂಬಾ ಇತಿಹಾಸ ಕ್ಯಾಸ್ಟ್ರೊ ಜೀವನಚರಿತ್ರೆಯೇ ಆಗಿಬಿಟ್ಟಿತು. ಇತ್ತೀಚೆಗೆ ತನ್ನ 90ನೇ ವಯಸ್ಸಿನಲ್ಲಿ ಮರಣ ಹೊಂದಿದ ಕ್ಯಾಸ್ಟ್ರೊ, ಕ್ಯೂಬಾ ಮತ್ತು ವಿಶ್ವ ಇತಿಹಾಸದಲ್ಲಿ ಬಿಟ್ಟುಹೋದ ನೆನಪುಗಳು ಅಗಾಧ. ಕ್ಯೂಬಾದಲ್ಲಿ ಯುವ ಕ್ರಾಂತಿಕಾರಿಯಾಗಿ, ವೈಯಕ್ತಿಕ ವರ್ಚಸ್ಸಿನ ನಾಯಕನಾಗಿ, ಸರ್ವಾಧಿಕಾರಿಯಾಗಿ ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ಅಮೆರಿಕಾದ ಬಗಲಲ್ಲೇ ಇದ್ದುಕೊಂಡು ಅಮೆರಿಕಾವನ್ನು ಅರ್ಧ ಶತಮಾನದವರೆಗೆ ಬಿಟ್ಟೂ ಬಿಡದೆ ಕಾಡಿದ ಫಿಡೆಲ್ ಕ್ಯಾಸ್ಟ್ರೊ, ಇನ್ನೊಂದೆಡೆ ತನ್ನ ಹಠಮಾರಿ ಸ್ವಭಾವ,  ತನ್ನ ಮೂಗಿನ ನೇರಕ್ಕೆ ತೆಗೆದುಕೊಂಡ ಕೆಲ ಮೂರ್ಖತನದ ನಿರ್ಧಾರಗಳಿಗೂ ಹೆಸರುವಾಸಿ. ಇವೆಲ್ಲವುಗಳ ಮಧ್ಯೆ ಕ್ಯಾಸ್ಟ್ರೊ ವಿಶ್ವ ಇತಿಹಾಸಕ್ಕೆ ನೆನಪಿಟ್ಟುಕೊಳ್ಳಲು ನೀಡಿದ ಕಾಣಿಕೆ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು.

ಅಮೆರಿಕಾದ ಸಂಯುಕ್ತ ಸಂಸ್ಥಾನದಿಂದ ಕೇವಲ 90 ಮೈಲಿ ದೂರದಲ್ಲಿರುವ ಒಂದು ಸಣ್ಣ ದ್ವೀಪ ರಾಷ್ಟ್ರ ಕ್ಯೂಬಾ. ದ್ವಿತೀಯ ವಿಶ್ವಯುದ್ಧದ ನಂತರ ವಿಶ್ವದೆಲ್ಲೆಡೆ ಪ್ರಭಾವ ಬೀರಿದ್ದ ದೊಡ್ಡಣ್ಣ ಅಮೆರಿಕಾದ ಪ್ರಭಾವದಿಂದ ಹೊರಗುಳಿಯುವುದು ಕ್ಯೂಬಾ ಎಂಬ ಪುಟ್ಟ ದ್ವೀಪ ರಾಷ್ಟ್ರಕ್ಕೂ ಸಾಧ್ಯವಿರಲಿಲ್ಲ. ಆ ಸಮಯಕ್ಕಾಗಲೇ  ಕ್ಯೂಬಾದಲ್ಲಿ ತನ್ನ ಅಧಿಕಾರ ಭದ್ರಪಡಿಸಿಕೊಳ್ಳಲು ಅಮೆರಿಕಾದ ಬೆಂಬಲವೊಂದೇ ಸಾಕು ಎಂದುಕೊಂಡಿದ್ದ ಅಮೆರಿಕಾ ಬೆಂಬಲಿತ ಸರ್ವಾಧಿಕಾರಿ ಫುಲ್ಗೆನ್ಸಿಯೊ ಬಾಟಿಸ್ಟಾ ಕ್ಯೂಬಾದ ಸುಧಾರಣೆಗಳತ್ತ ಕಿಂಚಿತ್ತು ಗಮನಹರಿಸಿರಲಿಲ್ಲ. ಬಡತನ, ಅನಾರೋಗ್ಯ, ಅನಕ್ಷರತೆಗಳೇ ಕ್ಯೂಬಾದ ರಾಷ್ಟ್ರೀಯ ಲಾಂಛನಗಳಾಗಿ ಹೋದವು. ಒಂದು ರೀತಿಯಲ್ಲಿ ಬಾಟಿಸ್ಟಾ ಆಡಳಿತದಲ್ಲಿ ಕ್ಯೂಬನ್ನರು ಬದುಕಿರುವುದೇ ಅಮೆರಿಕಾ ಸೇವೆಗೆ ಎಂಬಂತಾಗಿತ್ತು. ಕ್ಯೂಬಾ ಗ್ವಾಂಟಾನಮೊದಲ್ಲಿ ಅಮೆರಿಕಾಕ್ಕೆ ನೌಕಾ ನೆಲೆ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತ್ತಷ್ಟೇ ಅಲ್ಲದೆ ಕ್ಯೂಬಾದಲ್ಲಿನ ಹೆಚ್ಚಿನ ಕೃಷಿ ಮತ್ತು ಕಾರ್ಖಾನೆಗಳ ಮಾಲಿಕತ್ವ ಅಮೆರಿಕನ್ನರದೇ ಆಗಿತ್ತು. ಅತ್ಯಂತ ಕಡಿಮೆ ಬೆಲೆಗೆ ಕ್ಯೂಬಾದ ಕೆಲಸಗಾರರೂ ದೊರೆತಿದ್ದು ಅಮೆರಿಕನ್ನರ ಆರ್ಥಿಕ, ರಾಜಕೀಯ ಮತ್ತು ಸಮರತಾಂತ್ರಿಕ ದೃಷ್ಟಿಯಲ್ಲೂ ಕ್ಯೂಬಾ ಪ್ರಾಮುಖ್ಯತೆ ಪಡೆದುಕೊಳ್ಳಲಾರಂಭಿಸಿತು. ಕಾಲ ಕ್ರಮೇಣ ಕ್ಯೂಬಾ ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಯ ಒಂದು ಭಾಗವೇ ಆಗಿ ಹೋಗಿತ್ತು. ಈ ಎಲ್ಲಾ ಕಾರಣಗಳಿಗಾಗಿಯೇ ಅಮೆರಿಕಾ, ಜನ ಬೆಂಬಲವಿಲ್ಲದೇ ಹೋದರೂ ಬಾಟಿಸ್ಟಾ ಸರ್ವಾಧಿಕಾರಕ್ಕೆ ಬೇಷರತ್ ಬೆಂಬಲ ನೀಡುತ್ತಿತ್ತು. 

ಸರ್ವಾಧಿಕಾರಿ ಬಾಟಿಸ್ಟಾ ವಿರುದ್ಧ ಕ್ಯೂಬಾದ ಜನತೆಯ ಮನದಲ್ಲಿದ್ದ ಆಕ್ರೋಶ, ಉದ್ವೇಗಗಳಿಗೆ ಮೂರ್ತ ರೂಪ ಕೊಟ್ಟವನು ಫಿಡೆಲ್ ಕ್ಯಾಸ್ಟ್ರೊ. ಹಲವಾರು ಅಡೆತಡೆಗಳ ಬಳಿಕ ಫಿಡೆಲ್ ಕ್ಯಾಸ್ಟ್ರೊ ನೇತೃತ್ವದ ಗೆರಿಲ್ಲಾ ಸೈನ್ಯ ಜನವರಿ 1959ರಲ್ಲಿ ಕ್ಯೂಬಾದಲ್ಲಿ ಬಾಟಿಸ್ಟಾ ಸರ್ವಾಧಿಕಾರಕ್ಕೆ ಕೊನೆ ಹಾಡಿತ್ತು. ಕ್ಯೂಬಾದಲ್ಲಾದ ಈ ಕ್ಷಿಪ್ರ ಕ್ರಾಂತಿಗೆ ಆಗಿನ ಅಮೆರಿಕಾ ಅಧ್ಯಕ್ಷ ಐಸೆನ್ ಹೊವರ್ ಕೂಡ ಹೆಚ್ಚಿನ ವಿರೋಧ ವ್ಯಕ್ತಪಡಿಸುವುದಿಲ್ಲ. ಹಾಳುಬಿದ್ದಿದ್ದ ಕ್ಯೂಬಾವನ್ನು ಮತ್ತೆ ಶ್ರೇಷ್ಟತೆಯತ್ತ ಕೊಂಡೊಯ್ಯಲು, ಕ್ಯೂಬಾವನ್ನು ಅಮೆರಿಕಾದ ಪ್ರಭಾವದಿಂದ ಬೇರ್ಪಡಿಸುವುದು ಅತ್ಯಂತ ಜರೂರಾಗಿ ನಡೆಯಬೇಕಾದ ಕಾರ್ಯ ಎಂದುಕೊಂಡ ಕ್ಯಾಸ್ಟ್ರೊ ಕಾರ್ಯೋನ್ಮುಖನಾಗುತ್ತಾನೆ. ಹಂತ ಹಂತವಾಗಿ ಕ್ಯೂಬಾ ಅಮೆರಿಕನ್ ವಿರೋಧಿಯಾಗಿ ಬದಲಾಗುತ್ತದೆ. ಕ್ಯೂಬಾದಲ್ಲಿದ್ದ ಎಲ್ಲಾ ಅಮೆರಿಕನ್ ಆಸ್ಥಿಯನ್ನು ಮುಟ್ಟುಗೋಲು ಹಾಕಿಕೊಂಡು, ತನ್ನ ವಿರೋಧಿಗಳನ್ನು ನಿರ್ದಯವಾಗಿ ಹತ್ತಿಕ್ಕಲಾರಂಬಿಸಿದ ಫಿಡೆಲ್ ಕ್ಯಾಸ್ಟ್ರೊ. ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದಕ್ಕೋಸ್ಕರ ಚುನಾವಣೆಗಳು ಮುಂದೂಡುತ್ತಾನೆ. ಕ್ಯಾಸ್ಟ್ರೊ  ಅಮೆರಿಕನ್ ವಿರೋಧಿ ಮನೋಭಾವ ಕ್ಯೂಬಾ ಜನಮಾನಸದಲ್ಲಿ ಬೃಹತ್ ಮಟ್ಟದ ಬೆಂಬಲ ಪಡೆಯಿತು. ಕ್ಯೂಬನ್ ಜನತೆ ಕ್ಯಾಸ್ಟ್ರೊ ನನ್ನು ಆರಾಧಿಸುವಂತಾದಾಗ, ಎಚ್ಚೆತ್ತುಕೊಂಡಿದ್ದ ಅಮೆರಿಕಾದ ಅಧ್ಯಕ್ಷ ಐಸೆನ್ ಹೊವರ್, ಕ್ಯಾಸ್ಟ್ರೊ ಒಬ್ಬ ಕಮ್ಯುನಿಸ್ಟ್ ಎಂದು ಘೋಷಿಸಿದ್ದ. ಆದರೆ ಆ ಸಮಯದಲ್ಲಿನ್ನೂ ಕ್ಯಾಸ್ಟ್ರೊ ಕಮ್ಯುನಿಸ್ಟ್ ಆಗಿರಲಿಲ್ಲ!

ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾರಕನಾಗಿದ್ದ ಕ್ಯಾಸ್ಟ್ರೊನನ್ನು ಕ್ಯೂಬಾದಿಂದ ತೊಲಗಿಸಲು ಅಮೆರಿಕಾ ಇನ್ನಿಲ್ಲದ ಪ್ರಯತ್ನ ಮಾಡಿತ್ತು. ಸಾಲು ಸಾಲು ಆರ್ಥಿಕ ನಿರ್ಬಂಧಗಳು, ಇನ್ನಿತರ ಅಂತರಾಷ್ಟ್ರೀಯ ಒತ್ತಡಗಳಿಗೆ ಕ್ಯಾಸ್ಟ್ರೊ ಬಗ್ಗದಿದ್ದಾಗ, ಐಸೆನ್ ಹೊವರ್ ಮತ್ತು ಅಮೆರಿಕಾದ ಗುಪ್ತಚರ ದಳ ಸಿ.ಐ.ಎ ಭೂಗತ ಜಗತ್ತಿಗೆ, ಕ್ಯಾಸ್ಟ್ರೊ ಹತ್ಯೆ ಮಾಡಲು ಸುಪಾರಿಯನ್ನೂ ನೀಡಿತ್ತು! ಹಲವಾರು ಬಾರಿ ಕ್ಯಾಸ್ಟ್ರೊ ಮೇಲೆ ಹತ್ಯೆಯ ಪ್ರಯತ್ನಗಳಾದಾಗಲೂ ಅತ್ಯಂತ ಬುದ್ಧಿವಂತಿಕೆಯಿಂದ ಅವೆಲ್ಲವುಗಳನ್ನೂ ವಿಫಲಗೊಳಿಸಲಾಗಿತ್ತು. ವಿಶ್ವದ ಸೂಪರ್ ಪವರ್ ಎನಿಸಿಕೊಂಡಿದ್ದ ಅಮೆರಿಕಾಗೆ ತನ್ನ ಪಕ್ಕದಲ್ಲೇ ಇರುವ ಪುಟ್ಟ ದ್ವೀಪ ರಾಷ್ಟ್ರವೊಂದನ್ನು ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಹತಾಶೆಯಿಂದ ಐಸೆನ್ ಹೊವರ್ ಕ್ಯೂಬಾ ವಿರುದ್ದ ರಚಿಸಿದ ಯುದ್ಧ ತಂತ್ರದ ಹೆಸರೇ 'ದ ಬೇ ಆಫ್ ಪಿಗ್ಸ್ ದಾಳಿ'. ಅದರೆ ಐಸೆನ್ ಹೊವರ್ ಅಧ್ಯಕ್ಷತೆಯಲ್ಲಿ ಕಾರಣಾಂತರಗಳಿಂದ ಈ ಯುದ್ಧತಂತ್ರ ಕಾರ್ಯರೂಪಕ್ಕೆ ಇಳಿಯಲಿಲ್ಲ. ಮುಂದೆ 1961ರಲ್ಲಿ ಆಗಿನ ಅಧ್ಯಕ್ಷ ಜಾನ್ ಎಫ್ ಕೆನಡಿ ಈ ಯುದ್ಧತಂತ್ರದಲ್ಲಿ ಹಲವಾರು ನ್ಯೂನ್ಯತೆಗಳಿವೆ ಎಂಬ ಮಿಲಿಟರಿ ತಜರ ಸಲಹೆಗಳನ್ನು ಪರಿಗಣಿಸದೆ ಈ ಕಾರ್ಯಾಚರಣೆ ನಡೆಸುವಲ್ಲಿ ಅತ್ಯಂತ ಉತ್ಸುಕರಾಗಿರುತ್ತಾರೆ.  ಈ ಯೋಜನೆಯ ಪ್ರಕಾರ 1400 ಸೈನಿಕರನ್ನು ಕ್ಯೂಬಾದೊಳಕ್ಕೆ ಕಳುಹಿಸಿ, ಕ್ಯಾಸ್ಟ್ರೊ ವಿರುದ್ಧ ಕಾರ್ಯಾಚರಣೆ ನಡೆಸುವುದು. ನಂತರ ಕ್ಯೂಬಾದ ಜನತೆ ಸ್ವಯಂ ಪ್ರೇರಿತರಾಗಿ ದಂಗೆಕೋರರಿಗೆ ನೆರವು ನೀಡಿ ಕ್ಯಾಸ್ಟ್ರೊ ಆಡಳಿತ ಕೊನೆಗೊಳಿಸಲಾಗುತ್ತದೆ. ಅದರೆ ಈ ದಾಳಿ ಸಂಪೂರ್ಣ ವಿಫಲವಾಗುತ್ತದೆ. ಈ ವಿಫಲ ಯತ್ನದ ನಂತರ ಕೆನಡಿ ಕಾರ್ಯರೂಪಕ್ಕಿಳಿಸಿದ ಇನ್ನೊಂದು ಕಾರ್ಯಾಚರಣೆಯೇ 'ಆಪರೇಷನ್ ಮಂಗೂಸ್' ಈ ಮೂಲಕ ಹಲವಾರು ಕ್ಯಾಸ್ಟ್ರೊ ಬೆಂಬಲಿಗರನ್ನು ಹತ್ಯೆ ಮಾಡಲಾಗುತ್ತದೆ. ಇದಾದ ಮೇಲೆ ಸುಮಾರು 40000 ಅಮೆರಿಕನ್ ಯೋಧರು ಕೆರಿಬಿಯನ್ ನಲ್ಲಿದ್ದ ಒಂದು ಅನಾಮಿಕ ದ್ವೀಪವೊಂದರ ಮೇಲೆ ದಾಳಿ ಮಾಡಿ ಅಲ್ಲಿನ ಸರ್ವಾಧಿಕಾರಿಯನ್ನು ಕಿತ್ತೊಗೆಯುವ ರೀತಿಯಲ್ಲಿ ಒಂದು ಬೃಹತ್ ಮತ್ತು ವಿಶಿಷ್ಟ ಸಮರಾಭ್ಯಾಸವನ್ನು ಮಾಡುತ್ತಾರೆ. ಈ ವಿಚಿತ್ರ ಕಾರ್ಯಾಚರಣೆಗೆ ಕೆನಡಿ ಕೊಟ್ಟ ಹೆಸರು 'ಆಪರೇಶನ್ ಓರ್ಸ್ಟಾಕ್'  (ORTSAC) ಆಂಗ್ಲ ಭಾಷೆಯಲ್ಲಿ ಈ ಹೆಸರನ್ನು ಹಿಂದಿನಿಂದ ಮುಂದಕ್ಕೆ ಓದಿದರೆ ಅದು ಕ್ಯಾಸ್ಟ್ರೊ ಎಂದಾಗುತ್ತದೆ! ಈ ರೀತಿ ಅಮೆರಿಕಾ ತನ್ನ ಸಾಮರ್ಥ್ಯ ಪ್ರದರ್ಶನದೊಂದಿಗೆ, ಕ್ಯಾಸ್ಟ್ರೊನನ್ನು ಎಚ್ಚರಿಸುವ ಪ್ರಯತ್ನವನ್ನೂ ಮಾಡಿತ್ತು ಮತ್ತು ಈ ಪ್ರಯತ್ನದಲ್ಲಿ ಯಶಸ್ವಿಯೂ ಆಗಿಬಿಟ್ಟಿತ್ತು. ಆದರೆ ಅಮೆರಿಕಾದ ದುರದೃಷ್ಟಕ್ಕೆ ಈ ಕಾರ್ಯಾಚರಣೆ ಕ್ಯಾಸ್ಟ್ರೊನನ್ನು ಮಾತ್ರವಲ್ಲ, ಸೊವಿಯೆತ್ ನಾಯಕ ನಿಕಿತಾ ಕ್ರುಶ್ಚೇವ್ ನನ್ನೂ ಎಚ್ಚರಿಸಿಬಿಟ್ಟಿತ್ತು!

ಕ್ಯೂಬಾವನ್ನು ಇನ್ನೇನು ಅಮೆರಿಕಾ ಆಕ್ರಮಿಸಿಕೊಳ್ಳುತ್ತದೆ, ಕ್ಯಾಸ್ಟ್ರೊ ಆಟ ಮುಂದಕ್ಕೆ ನಡೆಯುವುದಿಲ್ಲ ಎಂದುಕೊಂಡಾಗಲೇ ಆಗಿನ ಕಮ್ಯುನಿಸ್ಟ್ ದೈತ್ಯ ಸೊವಿಯೆತ್ ಒಕ್ಕೂಟ ಕ್ಯೂಬಾ ರಣರಂಗಕ್ಕೆ ಪ್ರವೇಶ ಮಾಡಿತ್ತು! ಅಮೆರಿಕಾದಿಂದ ದಿನೇ ದಿನೇ ಹೆಚ್ಚಾಗುತ್ತಿರುವ ಬೆದರಿಕೆಗಳನ್ನು ಗಮನಿಸಿದ ಕ್ಯಾಸ್ಟ್ರೊ ಅಮೆರಿಕಾಗೆ ಸಡ್ಡು ಹೊಡೆಯುವಂಥ ಒಬ್ಬ ಮಿತ್ರನ ಅವಶ್ಯಕತೆ ಬಹಳಷ್ಟಿತ್ತು. ಈ ಅವಶ್ಯಕತೆ, ಕ್ಯಾಸ್ಟ್ರೊನನ್ನು ಸೊವಿಯೆತ್ ನಾಯಕ ಕ್ರುಶ್ಚೆವ್ ಗೆಳೆತನ ಸಂಪಾದಿಸುವಂತೆ ಮಾಡಿಬಿಟ್ಟಿತು. ಶೀತಲ ಸಮರ ಉತ್ತುಂಗದಲ್ಲಿದ್ದ ಆ ಸಮಯದಲ್ಲಿ ಕ್ರುಶ್ಚೇವ್ ತಲೆಯಲ್ಲಿ ಕ್ಯೂಬಾ ಕುರಿತಾಗಿ ಅವನದ್ದೇ ಆದ ಆಲೋಚನೆಗಳಿದ್ದವು. 1962ರ ಆರಂಭದಲ್ಲಿ ಅಮೆರಿಕಾ ಟರ್ಕಿಯಲ್ಲಿ ತನ್ನ ಜ್ಯೂಪಿಟರ್ ಕ್ಷಿಪಣಿಗಳನ್ನು ಇರಿಸುವುದರ ಮುಖಾಂತರ ಸೊವಿಯೆತ್ ಅನ್ನು ನೇರ ಹೊಡೆತಕ್ಕೆ ಸಿಗುವಂತೆ ವ್ಯವಸ್ಥೆ ರೂಪಿಸಿಕೊಂಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ತನ್ನ ಖಂಡಾಂತರ ಕ್ಷಿಪಣಿಗಳನ್ನು ಕ್ಯೂಬಾದಲ್ಲಿ ನೆಲೆಯಾಗಿಸಿ, ಅಮೆರಿಕಾಕ್ಕೆ ಗುರಿಯಿರಿಸುವುದು ಕ್ರುಶ್ಚೆವ್ ತಂತ್ರವಾಗಿತ್ತು.  ಇದನ್ನು ಕಾರ್ಯರೂಪಕ್ಕಿಳಿಸಲು ಸೊವಿಯೆತ್ ಒಕ್ಕೂಟಕ್ಕೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಕ್ಷಿಪ್ರವಾಗಿ ಖಂಡಾಂತರ ಅಣ್ವಸ್ತ್ರ ಕ್ಷಿಪಣಿಗಳನ್ನು ಸ್ಥಾಪಿಸಲು ಅಗತ್ಯವಾದ ಎಲ್ಲಾ ವ್ಯವಸ್ಥೆಗಳೂ ಸೊವಿಯೆತ್ ನಿಂದ ಕ್ಯೂಬಾಗೆ ರವಾನೆಯಾಗತೊಡಗಿತು. ಅಮೆರಿಕಾ ದಾಳಿಯ ಭೀತಿಯಲ್ಲಿದ್ದ ಕ್ಯೂಬಾದಲ್ಲಿ ಅಣ್ವಸ್ತ್ರ ಕ್ಷಿಪಣಿಗಳ ಆಗಮನ ಸಹಜವಾಗಿಯೇ ಕ್ಯಾಸ್ಟ್ರೊನಲ್ಲಿ ಸುರಕ್ಷತಾ ಭಾವ ಮೂಡಿಸಿತ್ತು ಹಾಗಾಗಿ ಸಹಜವಾಗಿಯೇ ಕ್ಯಾಸ್ಟ್ರೊ ಕೂಡ ಸೊವಿಯೆತ್ ಸಿದ್ಧತೆಗಳನ್ನು ಸಂತೋಷದಿಂದಲೇ ಸ್ವಾಗತಿಸುತ್ತಾನೆ. ಕ್ಯೂಬಾದಲ್ಲಿ ನೆಲೆಯಾಗಿಸಿದ ಸೊವಿಯೆತ್ ಕ್ಷಿಪಣಿಗಳನ್ನು ನಿಯಂತ್ರಿಸಲು ಒಬ್ಬ ಸೊವಿಯೆತ್ ಕಮಾಂಡರ್ ನೇಮಕಗೊಳ್ಳುತ್ತಾನೆ. ಒಂದು ವೇಳೆ ಕ್ಯೂಬಾದ ಮೇಲೆ ಅಮೆರಿಕಾ ದಾಳಿ ಮಾಡಿದಲ್ಲಿ ಕ್ಷಿಪಣಿಗಳನ್ನು ಬಳಸುವ ಅಧಿಕಾರವನ್ನು ಸೊವಿಯೆತ್ ಕಮಾಂಡರ್ ವಿವೇಚನೆಗೆ ಬಿಡಲಾಗಿತ್ತು.

ಈ ಯೋಜನೆ ಸಂಪೂರ್ಣವಾಗಿ ಕಾರ್ಯಗತಗೊಳ್ಳುವವರೆಗೆ ಮತ್ತು ಕ್ಷಿಪಣಿಗಳು ಕಾರ್ಯಾಚರಣೆಗೆ ಸಿದ್ಧವಾಗುವವರೆಗೆ ಇದೊಂದು ರಹಸ್ಯ ಯೋಜನೆಯಾಗಿರಬೇಕು ಎನ್ನುವುದು ಸೊವಿಯೆತ್ ತಂತ್ರವಾಗಿತ್ತು. ಅದರೆ ಇಂಥ ಬೃಹತ್ ಯೋಜನೆಯನ್ನೂ ಸಂಪೂರ್ಣ ರಹಸ್ಯವಾಗಿ ಸಾಧಿಸುವುದು ಕಷ್ಟಸಾಧ್ಯವಾದ ಮಾತಾಗಿತ್ತು. 1962ರ ಆಗಸ್ಟ್ ನಲ್ಲಿ ಕ್ಯೂಬಾದಲ್ಲಿ ಸೊವಿಯೆತ್ ಕ್ಷಿಪಣಿಗಳ ಬಗ್ಗೆ ಊಹಾಪೋಹಗಳು ಅಮೆರಿಕನ್ ಮಾಧ್ಯಮಗಳಲ್ಲಿ ಪ್ರಸಾರವಾಗತೊಡಗಿತ್ತು. ಅದರೆ ಸೊವಿಯೆತ್ ರಾಜತಾಂತ್ರಿಕ ಅಧಿಕಾರಿಗಳಿಗೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಹೋದುದರಿಂದ, ಎಲ್ಲಾ ಊಹಾಪೋಹಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು. ಆದರೆ 14 ಅಕ್ಟೋಬರ್ 1962ರಲ್ಲಿ ಅಮೆರಿಕಾದ ಯು2 ಗುಪ್ತಚರ ವಿಮಾನಗಳು ಕ್ಯೂಬಾದಲ್ಲಿ ಕ್ಷಿಪಣಿಗಳು ನಿರ್ಮಾಣಗೊಳ್ಳುತ್ತಿರುವುದರ ಕುರಿತಾಗಿ ಬಲವಾದ ಸಾಕ್ಷ್ಯಗಳೊಂದಿಗೆ ಹಿಂದಿರುಗಿದಾಗ ಅಮೆರಿಕಾ ಬೆಚ್ಚಿಬಿದ್ದಿತ್ತು. ಅಮೆರಿಕಾದ ಅಧ್ಯಕ್ಷ ಕೆನಡಿ ಇದನ್ನು ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆ ಎಂದು ಪರಿಗಣಿಸುತ್ತಾರೆ. 

'ಬೇ ಆಫ್ ಪಿಗ್ಸ್ ದಾಳಿ'ಯಲ್ಲಿ ಮುಖಭಂಗ ಅನುಭವಿಸಿದ್ದ ಕೆನಡಿ ಈ ಬಾರಿ ಎಚ್ಚರಿಕೆಯ ನಡೆ ಇಡುತ್ತಾರೆ. ಈ ಬಗ್ಗೆ ಸಲಹೆ ನೀಡಲು 'ಎಕ್ಸ್ ಕಾಮ್' ಎಂಬ ವಿಶೇಷ ಸಲಹಾಗಾರರ ಗುಂಪೊಂದನ್ನು ರಚಿಸಲಾಗುತ್ತದೆ. ವಿಶೇಷ ಸಲಹಾಗಾರರ ಗುಂಪು ಎರಡು ಬಣಗಳಾಗಿ ಒಡೆದುಹೋಗಿತ್ತು. 'ಹಾಕ್ಸ್' ಎಂಬ ಗುಂಪು ತಕ್ಷಣವೇ ಯುದ್ಧ ಘೋಷಿಸಲು ಸಲಹೆ ನೀಡಿದರೆ, ಇನ್ನೊಂದು ಗುಂಪು 'ಡವ್ಸ್' ನೇರ ಸಂಘರ್ಷವನ್ನು ತಪ್ಪಿಸುವಂತೆ ಸಲಹೆ ನೀಡಿದ್ದವು. ಈ ಚರ್ಚೆ ಸುಮಾರು 13 ದಿನಗಳ ಕಾಲ ಮುಂದುವರಿಯುತ್ತದೆ. ಕೊನೆಯದಾಗಿ ಕೆನಡಿ ನೇರ ಯುದ್ಧವೂ ಅಲ್ಲದ ತಟಸ್ಥವೂ ಆಗಿಲ್ಲದ ಯುದ್ಧ ನೀತಿಯೊಂದನ್ನು ರೂಪಿಸಬೇಕಾಯ್ತು. ಇದರಂತೆ ಕೆನಡಿ ಸೊವಿಯೆತ್ ನಿಂದ ಕ್ಯೂಬಾಗೆ ಸಾಗಾಟವಾಗುತ್ತಿದ್ದ ಅಣ್ವಸ್ತ್ರದ ಉಪಕರಣಗಳನ್ನು ಸಾಗರ ಮಧ್ಯದಲ್ಲಿಯೇ ತಡೆಹಿಡಿಯುವಂತಹ ನೌಕಾ ದಿಗ್ಭಂಧನ ಹಾಕುವ ನಿರ್ಧಾರ ಕೈಗೊಂಡರು. 22ನೇ ಅಕ್ಟೊಬರ್ 1962ರಲ್ಲಿ ಸೊವಿಯೆತ್ ಕ್ಷಿಪಣಿಗಳ ವಿಚಾರ ಮತ್ತು ಅಮೆರಿಕಾದ ಪ್ರತಿತಂತ್ರಗಳು ಸಾರ್ವಜನಿಕವಾಗಿ ಚರ್ಚೆಗೆ ಒಳಗಾದವು. ಕೆನಡಿ ಮತು ಕ್ರುಶ್ಚೇವ್ ತಮ್ಮ ತಮ್ಮ ಸ್ವಪ್ರತಿಷ್ಟೆಗಳಿಗೆ, ವಿಶ್ವವನ್ನು ಅಣ್ವಸ್ತ್ರ ಯುದ್ಧದತ್ತ ಕೊಂಡೊಯ್ದಿದ್ದರು. 23ನೇ ಅಕ್ಟೋಬರ್ 27 ಸೊವಿಯೆತ್ ಹಡಗುಗಳು ಅಮೆರಿಕಾದ ನೌಕಾ ದಿಗ್ಬಂಧನದತ್ತ ಸಾಗುತ್ತಿದ್ದಂತೆ, ವಿಶ್ವ ಅಣ್ವಸ್ತ್ರ ವಿಧ್ವಂಸದ ಕರಿ ನೆರಳಿನಲ್ಲಿ ನರಳತೊಡಗಿತ್ತು. ಸೊವಿಯೆತ್ ಹಿಂದಕ್ಕೆ ಸರಿಯುತ್ತದೆ ಎಂಬ ವಿಶ್ವಾಸದಲ್ಲಿ ನೌಕಾ ದಿಗ್ಬಂಧನ ಮಾಡಿದ್ದ ಕೆನಡಿಗೆ ಮುಂದೇನು ಮಾಡಬೇಕು ಎಂದು ತೋಚದಾಗಿತ್ತು. ಎರಡು ಅಣ್ವಸ್ತ್ರ ಶಕ್ತಿಗಳು ನೋಡ ನೋಡುತ್ತಿದ್ದಂತೆ ಅಣ್ವಸ್ತ್ರಗಳನ್ನು ಬಳಸಲು ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದ್ದವು. ಈ ಬಿಕ್ಕಟ್ಟಿಗೆ ಇತಿಹಾಸ ನೀಡಿದ ಹೆಸರೇ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು!
ಕೊನೆಯದಾಗಿ ಸೊವಿಯೆತ್ ಹಡಗುಗಳನ್ನು ಹಿಂದಕ್ಕೆ ಕಳುಹಿಸಲಾಯಿತು ಎಂಬ ಸುದ್ಧಿ ಕೇಳಿ ಕೆನಡಿ ನಿಟ್ಟುಸಿರು ಬಿಟ್ಟಿದ್ದರು. ಸೊವಿಯೆತ್ ಹಡಗುಗಳು ಹಿಂದಿರುಗಿದಾಕ್ಷಣ ಸಮಸ್ಯೆಯೇನೂ ಪರಿಹಾರವಾಗಿರಲಿಲ್ಲ. ಕ್ಯಾಸ್ಟ್ರೊ ಸತತವಾಗಿ, ಅಣ್ವಸ್ತ್ರ ಕ್ಷಿಪಣಿಗಳನ್ನು ಅಮೆರಿಕಾದ ಮೇಲೆ ಪ್ರಯೋಗಿಸುವಂತೆ ಸೊವಿಯೆತ್ ಕಮಾಂದರ್ ಮೆಲೆ ಒತ್ತಡ ಹೇರಿದ್ದ. ಆದರೆ ಕ್ರುಶ್ಚೇವ್ ಮಾತ್ರ, ಸೊವಿಯೆತ್ ನಿಂದ ಆಧಿಕೃತ ಸಂದೇಶ ರವಾನೆಯಾಗುವ ತನಕ ಅಂಥ ಯಾವುದೇ ಹುಚ್ಚಾಟಕ್ಕೆ ಕೈಹಾಕಬೇಡಿ ಎಂದು ಸ್ಪಷ್ಟವಾಗಿ ತನ್ನ ಕಮಾಂಡರ್ ಗೆ ನಿರ್ದೇಶನ ನೀಡಿದ್ದ. ಸೊವಿಯೆತ್ ಹಡಗುಗಳನ್ನು ಹಿಂದಿರುಗಿಸಿದ ಬಳಿಕ, ಕ್ಯೂಬಾದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಸೊವಿಯೆತ್ ಅಣ್ವಸ್ತ್ರ ಕ್ಷಿಪಣಿಗಳನ್ನು ತೆರವು ಮಾಡುವತ್ತ ಅಮೆರಿಕಾ ಯೋಚಿಸತೊಡಗಿತು. ಆ ಹೊತ್ತಿಗಾಗಲೇ ಟರ್ಕಿಯಿಂದ ಅಮೆರಿಕಾ ಕ್ಷಿಪಣಿಗಳನ್ನು ತೆರವುಗೊಳಿಸಿದಲ್ಲಿ, ಕ್ಯೂಬಾದಲ್ಲಿರುವ ಕ್ಷಿಪಣಿಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಸಿದ್ಧ ಎಂಬ ಸಂದೇಶ ಕ್ರುಶ್ಚೇವ್ ಕಡೆಯಿಂದ ಬಂದಿತ್ತು. ಜೊತೆ ಜೊತೆಯಲ್ಲೇ ಕ್ಯೂಬಾ ಮೇಲೆ ಇನ್ನು ಮುಂದಕ್ಕೆ ಯಾವುದೇ ಆಕ್ರಮಣ ಮಾಡುವುದಿಲ್ಲ ಎಂಬ ಷರತ್ತಿಗೂ ಅಮೆರಿಕನ್ನರು ಒಪ್ಪಿಕೊಳ್ಳಬೇಕಾಯ್ತು. ಸೂಪರ್ ಪವರ್ ಗಳ ಹೊಡೆದಾಟಗಳೇನೇ ಇರಲಿ ಕ್ಯೂಬಾವನ್ನು ಅಮೆರಿಕಾದ ಆಕ್ರಮಣ ಮತ್ತು ಪ್ರಭಾವಗಳಿಂದ ಮುಕ್ತಗೊಳಿಸಿದ್ದ. ಮುಂದಿನ ಸುಮಾರು ಅರ್ಧ ಶತಮಾನ ಅಮೆರಿಕಾದ ಬಗಲಲ್ಲೇ ಅಮೆರಿಕಾ ಅಂಕೆಗೆ ಸಿಗದಂತೆ ಕ್ಯೂಬಾವನ್ನು ಆಳಿದ್ದ ಕಿಲಾಡಿ ಫಿಡೆಲ್ ಕ್ಯಾಸ್ಟ್ರೊ!

ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು ವಿಶ್ವಕ್ಕೊಂದು ಪಾಠ ಕಲಿಸಿತ್ತು. ಅಮೆರಿಕಾ ಮತ್ತು ಸೊವಿಯೆತ್ ಗಳಿಗೂ ಶೀತಲ ಸಮರದ ಈ ಒಂದು ನೇರ ಮುಖಾಮುಖಿ, ಅಣ್ವಸ್ತ್ರ ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಅರಿವಾಗಿತ್ತು. ಮುಂದಿನ ದಿನಗಳಲ್ಲಿ ಎರಡೂ ದೈತ್ಯ ರಾಷ್ಟ್ರಗಳು ಇಂಥ ಸನ್ನಿವೇಶ ಮರುಕಳಿಸದಂತೆ ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. 1962ರಿಂದ ಇವತ್ತಿನ ವರೆಗೆ ವಿಶ್ವದ ಯಾವುದೇ ಮೂಲೆಯಲ್ಲೂ ಎರಡು ಅಣ್ವಸ್ತ್ರ ಶಕ್ತಿಗಳು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನಂಥ ಪರಿಸ್ಥಿತಿಗೆ ಎಡೆಮಾಡಿಕೊಟ್ಟಿಲ್ಲ. ಅಣ್ವಸ್ತ್ರ ಯುದ್ಧದ ವಿಧ್ವಂಸಕತೆಯ ಬಗ್ಗೆ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು ಅರಿವು ಮೂಡಿಸಿದಷ್ಟು ಸ್ಪಷ್ಟವಾಗಿ ಯಾವ ಪ್ರವಾದಿಯೂ ವಿವರಿಸಲಾರ. ಇಂಥ ಒಂದು ಐತಿಹಾಸಿಕ ಬಿಕ್ಕಟ್ಟಿಗೆ ಇತ್ತೀಚಿನವರೆಗೂ ಜೀವಂತ ಸಾಕ್ಷಿಯಾಗಿ, ಆ ಬಿಕ್ಕಟ್ಟಿನ ಅವಿಭಾಜ್ಯ ಅಂಗವೇ ಆಗಿದ್ದ  ಫಿಡೆಲ್ ಕ್ಯಾಸ್ಟ್ರೊ ಮರಣ ಅಣ್ವಸ್ತ್ರ ಶಕ್ತಿಗಳು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟನ್ನು ನೆನಪಿಸಿಕೊಂಡು ತಮ್ಮ ನೈತಿಕ ಜವಾಬ್ದಾರಿಯನ್ನು ಪುನರ್ಮನನ ಮಾಡಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ.

(This article was published in Hosa Digantha newspaper on 29 November 2016)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru