ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಮೊಸುಲ್ ಮಹಾಸಮರ ಧನಾತ್ಮಕ ಫಲಿತಾಂಶಗಳನ್ನು ಕಾಣುತ್ತಿದೆ. ಯುದ್ಧಾರಂಭದಲ್ಲಿ ಜಾಗತಿಕ ವಿಶ್ಲೇಷಕರಲ್ಲಿದ್ದ ಋಣಾತ್ಮಕ ನಿಲುವುಗಳನ್ನು ಅಣಕಿಸುವಂತೆ ಇರಾಕೀ ಸೇನೆ, ಸುನ್ನಿ ದಂಗೆಕೋರಗುಂಪುಗಳು ಮತ್ತು ಕರ್ದಿಶ್ ಜನಾಂಗದ ಪೆಶ್ಮರ್ಗಾ ಸೈನ್ಯಗಳು ಮೊಸುಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸದೆಬಡಿಯುತ್ತಿದ್ದಾರೆ. ಯುದ್ಧ ನಿರ್ಣಾಯಕ ಹಂತದತ್ತ ಸಾಗುತ್ತಿರುವಂತೆ, ಸಮರೋತ್ತರ ಪರಿಣಾಮಗಳ ಕುರಿತಾಗಿಹಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಈ ಪ್ರಶ್ನೆಗಳಲ್ಲಿ ಸ್ವತಂತ್ರ ಕರ್ದಿಸ್ತಾನದ ಕೂಗು ಸಮರೋತ್ತರ ಮಧ್ಯಪ್ರಾಚ್ಯದ ರಾಜಕೀಯದಲ್ಲಿ ಹೊಸ ಸವಾಲೊಡ್ಡಲಿದೆ.
ಇಸ್ಲಾಮಿಕ್ ಸ್ಟೇಟ್ ಮೊಸುಲ್ ನಿಂದ ಹಿಮ್ಮೆಟ್ಟುತ್ತಿದ್ದಂತೆ ಕರ್ದಿಶ್ ಪೆಶ್ಮರ್ಗಾ ಸೈನಿಕರು ಮೊಸುಲ್ ನಗರದ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಿಕೊಂಡು ಇಸ್ಲಾಮಿಕ್ ಸ್ಟೇಟ್ ರಚಿಸಿದ್ದ ವ್ಯವಸ್ಥೆಯನ್ನು ಬುಡಸಮೇತ ಕಿತ್ತುಹಾಕುತ್ತಿದ್ದಾರೆ.ಉತ್ತರ ಇರಾಕಿನಲ್ಲಿರುವ ಈ ಪ್ರದೇಶದಲ್ಲಿ ಈಗಾಗಲೇ ಕರ್ದ್ ಜನಾಂಗದ ಅಧಿಕೃತ ಸೇನೆ ' ಪೆಶ್ಮರ್ಗಾ' ಗಣನೀಯ ಪ್ರಮಾಣದಲ್ಲಿ ಪ್ರಭಾವ ವೃದ್ಧಿಸಿಕೊಂಡಿದೆ. ಮಿಲಿಟರಿ ಕಾರ್ಯಾಚರಣೆಗಳ ಯಶಸ್ಸಿನೊಂದಿಗೆ ಕರ್ದಿಶ್ ಜನಾಂಗದಬಹುಕಾಲದ ಕನಸು ಸ್ವತಂತ್ರ ಕರ್ದಿಸ್ತಾನದ ಬೇಡಿಕೆಯೂ ಮೂರ್ತರೂಪಕ್ಕೆ ಬರುವ ಸಾಧ್ಯತೆಗಳಿವೆ. ಕರ್ದಿಶ್ ಗುಂಪು, ಸ್ವತಂತ್ರ ರಾಷ್ಟ್ರವಿಲ್ಲದೇ ಇರುವ ಪ್ರಪಂಚದ ಬೃಹತ್ ಜನಾಂಗ. ಸದ್ಯಕ್ಕೆ ಇರಾಕ್ ದೇಶದೊಳಗೆ ಸ್ಥಳೀಯ ಸ್ವಾಯತ್ತಆಡಳಿತ ಪ್ರದೇಶವಾಗಿರುವ ಕರ್ದಿಸ್ತಾನ್, ತನ್ನ ರಾಜಧಾನಿ ಎರ್ಬಿಲ್ ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಕರ್ದಿಶ್ ಜನಾಂಗ ತಮ್ಮದೇ ರಾಜಕೀಯ ವ್ಯವಸ್ಥೆಯನ್ನು ಹೊಂದಿದ್ದರೂ ಪ್ರತ್ಯೇಕವಾದ ಸ್ವತಂತ್ರರಾಷ್ಟ್ರವಾಗಿಲ್ಲ ಮತ್ತು ತನ್ನ ಭೂಭಾಗವನ್ನು ವಿಸ್ತರಿಸಿಕೊಂಡು ಸ್ವತಂತ್ರ ರಾಷ್ಟ್ರ ಕರ್ದಿಸ್ತಾನ್ ರಚಿಸಲು ದೀರ್ಘಕಾಲದಿಂದ ಕಾಯುತ್ತಿದ್ದಾರೆ. ಇದೇ ಉದ್ದೇಶದಿಂದ ಕರ್ದಿಶ್ ಹೋರಾಟಗಾರರು ತಮ್ಮ ಅಧಿಕೃತ ಭೂಭಾಗದಿಂದ ಮುಂದೊತ್ತಿಬಂದು ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ವಶಪಡಿಸಿಕೊಂಡ ಉತ್ತರ ಇರಾಕಿನ ಪ್ರದೇಶಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಸೋಲಿನ ನಂತರ, ಈ ಯುದ್ಧದಲ್ಲಿ ಕರ್ದಿಶ್ ಜನಾಂಗದ ತ್ಯಾಗ ಬಲಿದಾನಗಳಿಗೆ ಬದಲಾಗಿಸ್ವತಂತ್ರ ಕರ್ದಿಸ್ತಾನವನ್ನು ಪಡೆದೇ ತೀರುತ್ತೇವೆ ಎನ್ನುತ್ತಿದೆ ಎರ್ಬಿಲ್ ನಲ್ಲಿರುವ ಸ್ಥಳೀಯ ಸ್ವಾಯತ್ತ ಕರ್ದಿಶ್ ಸರಕಾರ!
ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಿಂದಾಗಿ ಕರ್ದಿಶ್ ಜನಾಂಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನೂ ಪಡೆದುಕೊಳ್ಳುತ್ತಿದೆ. ಕರ್ದಿಶ್ ಸೇನೆಯಲ್ಲಿರುವ ವಿಶಿಷ್ಟ ಶಾಖೆ, ಜನ ರಕ್ಷಣಾ ಘಟಕ (People’s Protection Unit)ತನ್ನ ಕಮಾಂಡರ್ ಗಳ ನೇಮಕಕ್ಕೂ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ಪರ ರಾಷ್ಟ್ರಗಳ ಮೆಚ್ಚುಗೆ ಗಳಿಸಿದೆ. ಇವಿಷ್ಟೇ ಅಲ್ಲದೇ ಕರ್ದಿಶ್ ಜನರ ಹಿತಾಸಕ್ತಿಗಾಗಿ ಪ್ರೇಗ್, ಸ್ಟಾಕ್ ಹೋಮ್, ಬರ್ಲಿನ್ ಮತ್ತು ಮಾಸ್ಕೊಗಳಲ್ಲಿರಾಜತಾಂತ್ರಿಕ ಸಂಬಂಧಗಳನ್ನೂ ತೆರೆಯುವ ಮೂಲಕ ತನ್ನ ಭವಿಷದ ಕನಸಿಗೆ ಭರ್ಜರಿ ತಯಾರಿಯನ್ನೇ ನಡೆಸಿದೆ. ಈ ಮಧ್ಯೆ ಮಧ್ಯಪ್ರಾಚ್ಯದಲ್ಲಿ ಪ್ರಭಾವಕ್ಕಾಗಿ ಸ್ಪರ್ಧಿಸುತ್ತಿರುವ ಏಷ್ಯಾದ ಶಕ್ತಿಗಳಾದ ಭಾರತ ಮತ್ತು ಚೀನಾಗಳು ಕರ್ದಿಶ್ರಾಜಧಾನಿ ಎರ್ಬಿಲ್ ನಲ್ಲಿ ದೂತಾವಾಸಗಳನ್ನು ತೆರೆದಿವೆ. ಕಳೆದ ವರ್ಷ ಆಗಸ್ಟ್ ನಲ್ಲಿ ಕರ್ದಿಶ್ ನಗರದೊಂದಿಗೆ ಪೂರ್ಣಪ್ರಮಾಣದ ರಾಜತಾಂತ್ರಿಕ ಅವಕಾಶಗಳಿಗೆ ತೆರೆದುಕೊಂಡ ಭಾರತ, ದೀಪಕ್ ಮಿಗ್ಲಾನಿಯವರನ್ನು ಎರ್ಬಿಲ್ ನಲ್ಲಿರಾಯಭಾರಿಯನ್ನಾಗಿ ನೇಮಿಸಿದೆ. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಎಂಟು ಮಿಲಿಯನ್ ಗೂ ಹೆಚ್ಚು ಭಾರತೀಯ ವಲಸಿಗರ ರಕ್ಷಣೆ ಮಾತ್ರವಲ್ಲದೇ ಇಲ್ಲಿನ ರಾಜಕೀಯದಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಕರ್ದಿಶ್ ಜನಾಂಗನಿರೀಕ್ಷಿಸುವಂತಾಗಿದೆ.
ಎರ್ಬಿಲ್ ನಲ್ಲಿರುವ ಕರ್ದಿಶ್ ಸ್ವಾಯತ್ತ ಸರಕಾರ, ಬಹಳಷ್ಟು ಸಮಯದಿಂದ ಭಾರತ ಈ ಪ್ರದೇಶದಲ್ಲಿ ಇನ್ನಷ್ಟು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಬೇಡಿಕೆಯಿಡುತ್ತಿದೆ. ಆದರೆ ಭಾರತ ಈ ಪ್ರದೇಶದಲ್ಲಿ ನೇರವಾಗಿ ಪಾಲ್ಗೊಂಡರೆ ಇರಾಕಿಸರಕಾರದ ಗೆಳೆತನ ಕಳೆದುಕೊಳ್ಳಬೇಕಾಗುತ್ತದೆ. ತೈಲ ಉತ್ಪಾದನೆ ಮತ್ತು ಇನ್ನಿತರ ವಲಯಗಳಲ್ಲಿ ಹೆಚ್ಚು ಸ್ವಾಯತ್ತತೆಯನ್ನು ಬಯಸುತ್ತಿರುವ ಕರ್ದಿಶ್ ಜನಾಂಗವನ್ನು ಇರಾಕಿ ಸರಕಾರ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾರಕ ಎಂದುಪರಿಗಣಿಸುತ್ತಿರುವುದರಿಂದ, ಕರ್ದಿಶ್ ಜನಾಂಗಕ್ಕೆ ಬೆಂಬಲ ನೀಡುವ ಯಾರೇ ಆದರೂ ಇರಾಕ್ ನೊಂದಿಗೆ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ. ಹಿಂದೊಮ್ಮೆ ಭಾರತ ಟರ್ಕಿ ಕಂಪೆನಿಗಳ ಮೂಲಕ ಕರ್ದಿಸ್ತಾನದಿಂದ ತೈಲ ಖರೀದಿಮಾಡುತ್ತಿತ್ತಾದರೂ ಇದು ಅಲ್ಪಕಾಲಕ್ಕೆ ಸೀಮಿತವಾಯ್ತು. 2007ರಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಕುರ್ದಿಸ್ತಾನದ ರೊವಾ ಮತ್ತು ಸರ್ಟಾ ಗಳ ತೈಲೋತ್ಪಾದನೆಯಲ್ಲಿ ಬಂಡವಾಳವನ್ನೂ ಹೂಡಿತ್ತು. ಆದರೆ ಇರಾಕಿನಿಂದಅತಿಯಾದ ಒತ್ತಡ ಬಂದ ಹಿನ್ನೆಲೆಯಲ್ಲಿ ಭಾರತ ಕರ್ದಿಸ್ತಾನದೊಂದಿಗೆ ಯಾವುದೇ ದೀರ್ಘಕಾಲದ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಾಗಲಿಲ್ಲ.
ಎರ್ಬಿಲ್ ನಲ್ಲಿದ್ದ ಕರ್ದಿಶ್ ಸರಕಾರವೂ, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಭಾರತೀಯ ವಲಸಿಗರ ಸುರಕ್ಷತೆಯಲ್ಲಿ ಗಮನಾರ್ಹ ಪಾತ್ರವಹಿಸಿತ್ತು. ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ವಲಸಿಗರ ಸುರಕ್ಷತೆಯ ವಿಚಾರದಲ್ಲಿ ಭಾರತ ಸರಕಾರ,ಬಾಗ್ದಾದ್ ಮಾತ್ರವಲ್ಲದೇ ಎರ್ಬಿಲ್ನ ಸಹಾಯವನ್ನೂ ಪಡೆದುಕೊಂಡಿತ್ತು.2014ರಲ್ಲಿ ಇಸ್ಲಾಮಿಕ್ ಸ್ಟೇಟ್ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡು ಅಬ್ಬರಿಸುತ್ತಿದ್ದಾಗ, ಕರ್ದಿಶ್ ಡೆಮಾಕ್ರಟಿಕ್ ಪಕ್ಷದ ಅಂತರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥಹೆಮನ್ ಹರ್ವಾನಿ , ಭಾರತದ ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಹಳೆಯ ಇರಾಕ್ ಸತ್ತು ಹೋಗಿದೆ, ಭವಿಷ್ಯದಲ್ಲಿ ಶಿಯಾ, ಸುನ್ನಿ ಮತ್ತು ಕರ್ದಿಶ್ ರಾಷ್ಟ್ರಗಳ ಒಕ್ಕೂಟ ಅಥವಾ ಸಂಪೂರ್ಣ ಸ್ವತಂತ್ರ ದೇಶಗಳು ಅಸ್ತಿತ್ವಕ್ಕೆಬರಲಿವೆ. ಮುಂದೆ ಬರಲಿರುವ ಹಾದಿಯಲ್ಲಿ ನಾವು ಭಾರತವನ್ನು ಅತ್ಯಂತ ಪ್ರಮುಖ ಪಾಲುದಾರನನ್ನಾಗಿ ನೋಡಲು ಬಯಸುತ್ತೇವೆ ಎಂದಿದ್ದರು. 2016 ರಲ್ಲಿ ಇರಾಕಿನಲ್ಲಿದ್ದ ಭಾರತದ ರಾಯಭಾರಿ ಎರ್ಬಿಲ್ ಗೆ ಭೇಟಿ ನೀಡಿದ್ದು ಭಾರತ ಮತ್ತುಕರ್ದಿಸ್ತಾನ್ ಗಳ ರಾಜತಾಂತ್ರಿಕ ಸಂಬಂಧ ಹೊಸ ಧೃಡತೆಯತ್ತ ಸಾಕ್ಷಿಯಾಯಿತು. ಈ ಭೇಟಿಯ ನಂತರ ಕರ್ದಿಶ್ ಸ್ಥಳೀಯ ಸ್ವಾಯತ್ತ ಸರಕಾರ, ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಲ್ಲಿ ಭಾರತದ ನೆರವನ್ನು ಯಾಚಿಸಿತ್ತು. ಕರ್ದಿಶ್ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಫತಾ ಮುಸ್ತಫಾ, ಈ ಪ್ರದೇಶದಲ್ಲಿ ಭಾರತದಿಂದ ಮಾನವೀಯ ನೆರವು ಮತ್ತು ಮುಖ್ಯವಾಗಿ ಮಿಲಿಟರಿ ಸಹಾಯವನ್ನು ನಿರೀಕ್ಷಿಸುತ್ತೇವೆ ಎಂದಿದ್ದರು.
ಭಾರತ ಮಾನವೀಯ ನೆಲೆಯಲ್ಲಿ ಕರ್ದಿಸ್ತಾನ್ ಗೆ ಕೆಲ ನೆರವುಗಳನ್ನು ನೀಡಬಹುದಾದರೂ, ಕರ್ದಿಶ್ ಜನರ ಸ್ವತಂತ್ರ ರಾಷ್ಟ್ರದ ಬೇಡಿಕೆಯಲ್ಲಿ ಹಸ್ತಕ್ಷೇಪ ಮಾಡಲಾಗದು. ಹಾಗೇನಾದರೂ ಭಾರತ, ಸ್ವತಂತ್ರ ಕರ್ದಿಶ್ ನೆಲಕ್ಕೆ ತನ್ನಬೆಂಬಲವನ್ನು ಸೂಚಿಸಿದ್ದೇ ಆದಲ್ಲಿ ಇರಾಕ್ ಜೊತೆಗಿನ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಮಧ್ಯ ಪ್ರಾಚ್ಯದ ಇನ್ನೊಂದು ಪ್ರಭಾವಿ ಶಕ್ತಿ ಟರ್ಕಿ ಕೂಡ ಭಾರತದ ನಿಲುವಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿರುವುದರಿಂದ,ಭಾರತ ಇಂಥದ್ದೊಂದು ತಪ್ಪು ರಾಜತಾಂತ್ರಿಕತೆಯ ಸಾಹಸಕ್ಕೆ ಕೈ ಹಾಕುವಂತಿಲ್ಲ. ಟರ್ಕಿಯಂತೂ ಇಸ್ಲಾಮಿಕ್ ಸ್ಟೇಟ್ ಉಗ್ರರಿಗಿಂತ ಕರ್ದಿಶ್ ಹೋರಾಟಗಾರರೇ ತನ್ನ ದೀರ್ಘಕಾಲೀನ ಹಿತಾಸಕ್ತಿಗಳಿಗೆ ಮಾರಕ ಎಂದುಪರಿಭಾವಿಸಿರುವುದರಿಂದ ಕರ್ದಿಶ್ ಸ್ವತಂತ್ರ ರಾಷ್ಟ್ರಕ್ಕೆ ಬೆಂಬಲ ನೀಡುವ ಯಾವುದೇ ಶಕ್ತಿ ಮಧ್ಯಪ್ರಾಚ್ಯದಲ್ಲಿ ತನ್ನ ಪ್ರಭಾವ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಸಂಘರ್ಷಗಳ ಮಧ್ಯದಲ್ಲೂ ಮಧ್ಯಪ್ರಾಚ್ಯದಲ್ಲಿ ದಶಕಗಳಿಂದ ಸಮತೋಲಿತವಿದೇಶಾಂಗ ನೀತಿ ಅನುಸರಿಸಿದ ಹೆಗ್ಗಳಿಕೆ ಭಾರತಕ್ಕಿದೆ. ಮಧ್ಯಪ್ರಾಚ್ಯದ ರಾಜಕೀಯ ವ್ಯವಸ್ಥೆ, ಆಗೊಮ್ಮೆ ಈಗೊಮ್ಮೆ ಬದಲಾಗುವ ನಾಯಕರು ಮತ್ತು ಸರಕಾರಗಳು ಭಾರತ ಪಾಲಿಗೆ ರಾಜತಾಂತ್ರಿಕ ಸಮಸ್ಯೆಯಾಗಿಲ್ಲ ಎನ್ನುವುದುಗಮನಾರ್ಹ. ಅದ್ಯಾವ ಬದಲಾವಣೆಗಳಾದರೂ ಜಗ್ಗದ ಭಾರತ ಈ ಪ್ರದೇಶದಲ್ಲಿ ಎಲ್ಲರ ಜೊತೆಗೂ ಸಮತೋಲಿತ ನೀತಿ ಅನುಸರಿಸಿದೆ. ಇರಾಕಿನ ಸದ್ದಾಮ್ ಹುಸೇನ್, ಸಿರಿಯಾದ ಬಶರ್ ಅಲ್ ಅಸದ್ ರಿಂದ ಇರಾನಿನ ಅಯತೊಲ್ಲಾಖೊಮೈನಿ ವರೆಗೂ ಭಾರತ ತನಗೆ ಬೇಕಾದ ಗೌರವ ಸಲ್ಲುವಂತೆ ನೋಡಿಕೊಂಡಿದೆ ಹಾಗೂ ಈ ಪ್ರದೇಶದಲ್ಲಿ ಅಗಾಧವಾಗಿರುವ ಭಾರತೀಯ ವಲಸಿಗರ ಹಿತರಕ್ಷಣೆಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವಮಧ್ಯಪ್ರಾಚ್ಯದಲ್ಲಿ ಯಾವುದೇ ದೀರ್ಘಕಾಲಿನ ಯೋಜನೆಗಳನ್ನು ಹಾಕಿಕೊಳ್ಳದೇ ಇರುವುದೇ ಭಾರತದ ಚಾಣಾಕ್ಷತನ!
ಸದ್ಯದ ಜಾಗತಿಕ ವ್ಯವಹಾರಗಳನ್ನು ಗಮನಿಸಿದರೆ, ಇಸ್ಲಾಮಿಕ್ ಸ್ಟೇಟ್ ವಿರುದ್ದದ ಹೋರಾಟದಲ್ಲಿ ಕರ್ದಿಶ್ ಹೋರಾಟಗಾರರಿಗೆ ಭಾರತ ಮಿಲಿಟರಿ ನೆರವು ನೀಡುವುದು ದೂರದ ಮಾತು. ಆದರೆ ಔಷದಿಗಳು, ಪೋರ್ಟೆಬಲ್ ಮನೆಗಳು,ಆಹಾರ ಮತ್ತಿನ್ನಿತರ ಮಾನವೀಯ ನೆರವುಗಳನ್ನು ನೀಡುವ ಸಾಧ್ಯತೆಯಿದೆ. ವಿಶೇಷವಾಗಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಲ್ಲದೆ ನೇರವಾಗಿ ಎರ್ಬಿಲ್ ನಲ್ಲಿ ಕಾರ್ಯಪ್ರವೃತ್ತವಾಗುವ ಯೋಜನೆಯೂ ಭಾರತದ ಮುಂದಿದೆ. ನೇಪಾಳದಿಂದಫಿಜಿಯವರೆಗೂ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ಕಾರ್ಯನಿರ್ವಹಿಸಿದ ರೀತಿ ಜಾಗತಿಕ ಮಟ್ಟದಲ್ಲಿ ಮಿಲಿಟರಿ ಮತ್ತು ರಾಜತಾಂತ್ರಿಕ ಶಕ್ತಿಗಳ ಜೊತೆಗೆ ನೈತಿಕ ಶಕ್ತಿ ಎಂಬ ಛಾಪನ್ನೂ ಬೆಳೆಸಿಕೊಂಡಿರುವಭಾರತ, ಸಂಕಷ್ಟದಲ್ಲಿರುವ ಬಡರಾಷ್ಟ್ರಗಳ ಆಪದ್ಭಾಂಧವನಾಗಿಯೂ ಗುರುತಿಸಿಕೊಂಡಿದೆ. ಹೀಗಾಗಿ ಭಾರತದ ಕರ್ದಿಶ್ ವಿದೇಶಾಂಗ ನೀತಿ ಅಲ್ಪಮಟ್ಟಿಗೆ ಭಾರತದ ಅಫಘಾನಿಸ್ತಾನ ನೀತಿಯನ್ನು ಪ್ರತಿನಿಧಿಸುವ ಸಾಧ್ಯತೆಯಿದೆ. ಸದ್ಯಕ್ಕೆರಾಜಕೀಯ ಮತ್ತು ಮಿಲಿಟರಿ ಸಂಘರ್ಷಗಳಿಂದ ದೂರವಿದ್ದು, ಮಾನವೀಯ ನೆಲೆಯಲ್ಲಿ ಭಾರತ ಮಧ್ಯಪ್ರಾಚ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಿದೆ.
(This article was published in Hosadigantha Newsapaper on 7 March 2017)
KEERTHIRAJ (prof.keerthiraj@gmail.com)
International Relations and Political Science
Alliance University, Bengaluru
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ