ಶನಿವಾರ, ನವೆಂಬರ್ 19, 2016

ಭಾರತದ ಭವಿಷ್ಯದ ಬಗ್ಗೆ ಕರ್ಜನ್ ಹೇಳಿದ್ದೇನು?

ಮಹಾಬಲಿ ಆನೆಯನ್ನು ಮಾವುತ ಅಂಕುಶದಿಂದ ನಿಯಂತ್ರಿಸಿದಂತೆಬ್ರಿಟಿಷರು ತಮ್ಮ ಕುಟಿಲ ನೀತಿಯಿಂದ ಭಾರತೀಯರನ್ನು ಅಡಿಯಾಳಾಗಿಸಿಕೊಂಡರು.ಅದರಲ್ಲೂ ಚಾಣಾಕ್ಷ ಕರ್ಜನ್ ಭಾರತದ ಶಕ್ತಿಯ ಬಗ್ಗೆ 1909ರಲ್ಲೇ ಅಂದಾಜಿಸಿದ್ದ!
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)


ಪಾಕಿಸ್ತಾನ ತನ್ನ ಹೇಡಿತನದ ಕೃತ್ಯಗಳ ಮೂಲಕ ಕಾಲು ಕೆರೆದುಕೊಂಡು ಭಾರತವನ್ನು ಕೆಣಕುತ್ತಿರುವುದರಲ್ಲೇ ಸಮಯ ಕಳೆಯುತ್ತಿರುವಾಗ, ವಿಶ್ವಮಟ್ಟದಲ್ಲಿ ಭಾರತದ ಕುರಿತಾಗಿ ಇನ್ನೊಂದು ಚರ್ಚೆ ಆರಂಭವಾಗಿದೆ. ಏಷ್ಯಾ ಮತ್ತು ವಿಶ್ವ ಭದ್ರತೆಯಲ್ಲಿ ಭಾರತದ ಪಾತ್ರವನ್ನು ನಿರ್ಧರಿಸುವತ್ತ ಗಂಭೀರ ಚಿಂತನೆಗಳು ನಡೆದಿವೆ. ಭೌಗೋಳಿಕವಾಗಿಯೂ ರಾಜಕೀಯವಾಗಿಯೂ ಭಾರತ ತನ್ನದೇ ಆದ ಪ್ರಾಮುಖ್ಯತೆ ಉಳಿಸಿಕೊಂಡಿದೆ. ಪೂರ್ವ ಏಷ್ಯಾ, ಮಧ್ಯ ಏಷ್ಯಾ ಮತ್ತು ಮಧ್ಯ ಪ್ರಾಚ್ಯಗಳನ್ನು ಪ್ರಭಾವಿಸುವಂಥ ಅಧಿಕಾರಯುತ ಸ್ಥಾನದಲ್ಲಿದ್ದರೂ, ಭಾರತ ಸ್ವತಂತ್ರ ರಾಷ್ಟ್ರವಾದ ಮೇಲೆ ಗಳಿಸಿದ ರಾಜತಾಂತ್ರಿಕ ಯಶಸ್ಸುಗಳು ವಿರಳ ಎನ್ನುವುದು ವಿಪರ್ಯಾಸ 

ಭಾರತದಲ್ಲಿ ಬ್ರಿಟಿಷ್ ಅಧಿಕಾರಶಾಹಿ ಅಸ್ತಿತ್ವದಲ್ಲಿದ್ದಾಗ ಭಾರತವನ್ನು ಆಳಿದ ವೈಸರಾಯ್ ಗಳಲ್ಲಿ ಲಾರ್ಡ್ ಜಾರ್ಜ್ ಕರ್ಜನ್ ಕೂಡ ಒಬ್ಬ. ಇವತ್ತಿಗೆ ಕರ್ಜನ್ ಭಾರತೀಯರ ನೆನಪಿನಲ್ಲಿರುವುದು ಬಂಗಾಳದ ವಿಭಜನೆಗೆ ಕಾರಣನಾದ ಬ್ರಿಟಿಷ್ ವೈಸರಾಯ್ ಎಂದಷ್ಟೇ.  ಹೌದು, ಲಾರ್ಡ್ ಕರ್ಜನ್ ಕುಟಿಲ ರಾಜನೀತಿಯಿಂದಾಗಿ 1905 ರಲ್ಲಿ ಹಿಂದೂ - ಮುಸಲ್ಮಾನರ ಕೋಮುಗಳ ಆಧಾರದಲ್ಲಿ ಬಂಗಾಳವನ್ನು ವಿಭಜಿಸಿಬಿಡುತ್ತಾನೆ. ಇದೇ ಕರ್ಜನ್ 1909ರಲ್ಲಿ ಭಾರತದ ಕುರಿತಾಗಿ ಈ ರೀತಿ ಬರೆಯುತ್ತಾನೆ, "ನಿಸ್ಸಂಶಯವಾಗಿಯೂ ಭಾರತ ಆಧುನಿಕ ಕಾಲಘಟ್ಟದಲ್ಲಿ ಏಷ್ಯಾದ ಬಲಿಷ್ಟ ಶಕ್ತಿಯಾಗಿ ಹೊರಹೊಮ್ಮುತ್ತದೆಯಷ್ಟೇ ಅಲ್ಲ, ವಿಶ್ವ ರಾಜಕೀಯದಲ್ಲೇ ಶ್ರೇಷ್ಟ ಶಕ್ತಿಯೆಂದು ಗುರುತಿಸಲ್ಪಡುತ್ತದೆ. ಆಯಕಟ್ಟಿನ ಭೂಪ್ರದೇಶ, ಸಮೃದ್ಧ ನೈಸರ್ಗಿಕ ಸಂಪತ್ತು, ಅಗಾಧ ಮಾನವ ಶಕ್ತಿ, ಶ್ರೀಮಂತ ರೇವು ಬಂದರುಗಳಷ್ಟೇ ಅಲ್ಲದೇ ಭಾರತದ ಮೀಸಲು ಮಿಲಿಟರಿ ಪಡೆ ಉನ್ನತ ಮಟ್ಟದ ದಕ್ಷತೆಯಿಂದ ಕೂಡಿದ್ದು, ಯಾವುದೇ ಕ್ಷಣದಲ್ಲೂ ವೈರಿಯ ಸದ್ದಡಗಿಸುವ ಕ್ಷಮತೆ ಹೊಂದಿದೆ..."

ಶತಮಾನಕ್ಕೂ ಹಿಂದೆ ಕರ್ಜನ್ ಬರೆದಿದ್ದ ಪ್ರತಿ ಅಕ್ಷರವೂ ಇವತ್ತಿನ ಭಾರತದ ಪರಿಸ್ಥಿತಿಯ ವಿಶ್ಲೇಷಣೆಯಲ್ಲಿ ಮುಖ್ಯ ಪಾತ್ರ ವಹಿಸುವಂತಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ, ಭಾರತದ ರಾಜಕೀಯ ಮತ್ತು ಮಿಲಿಟರಿ ಶಕ್ತಿಗಳು ಬ್ರಿಟಿಷರ ಹಲವು ಯೋಜನೆಗಳಿಗೆ ಬೆನ್ನೆಲುಬಾಗಿದ್ದವು. ಹತ್ತೊಂಬತ್ತನೇ ಶತಮಾನದುದ್ದಕ್ಕೂ ಮತ್ತು ಇಪ್ಪತ್ತೊಂದನೆಯ ಶತಮಾನದ ಆರಂಭದ ವರ್ಷಗಳಲ್ಲಿ ಬ್ರಿಟನ್ ಹಿಂದೂ ಮಹಾಸಾಗರವನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದು ಭಾರತದ ಭೌಗೋಳಿಕ ಮತ್ತು ಮಿಲಿಟರಿ ಅನುಕೂಲತೆಗಳಿಂದಾಗಿಯೇ! ಅಡೆನ್, ಸಿಂಗಾಪುರ್, ಅಫ್ಘಾನಿಸ್ತಾನ, ಇರಾಕ್ ಮತ್ತು ಚೀನಾಗಳಲ್ಲೂ ಬ್ರಿಟನ್ ಪಾರಮ್ಯ ಸಾಧ್ಯವಾಗಿದ್ದು ಭಾರತದ ಮೇಲೆ ಬ್ರಿಟನ್ ಗಿದ್ದ ಹಿಡಿತದಿಂದಾಗಿಯೇ ಸರಿ. ಜನ್ಜೀಬಾದಿಂದ ಹಾಂಕಾಂಗ್ ವರೆಗೆ ವ್ಯಾಪಿಸಿದ್ದರೆ ಮುಕ್ತ ಸರೋವರಗಳಲ್ಲಿ ಬ್ರಿಟನ್ ಪರವಾಗಿ ಗಸ್ತು ತಿರುಗುತ್ತಿದ್ದು ಭಾರತೀಯರೇ!

ಮಹಾಬಲಿ ಆನೆಯನ್ನು ಮಾವುತ ಅಂಕುಶದಿಂದ ನಿಯಂತ್ರಿಸಿದಂತೆ, ಬ್ರಿಟಿಷರು ತಮ್ಮ ಕುಟಿಲ ನೀತಿಯಿಂದ ಭಾರತೀಯರನ್ನು ಅಡಿಯಾಳಾಗಿಸಿಕೊಂಡರು. ಅದರಲ್ಲೂ ಚಾಣಾಕ್ಷ ಕರ್ಜನ್ ಭಾರತದ ಶಕ್ತಿಯ ಬಗ್ಗೆ 1909ರಲ್ಲೇ ಅಂದಾಜಿಸಿದ್ದ! ಹೀಗಿದ್ದಾಗ್ಯೂ 1947ರಲ್ಲಿ ಸ್ವತಂತ್ರ ರಾಷ್ಟ್ರವಾಗುವುದರೊಂದಿಗೆ ಭಾರತದ ರಾಜತಾಂತ್ರಿಕ ಪ್ರಾಮುಖ್ಯತೆ ಮಸುಕಾಗುತ್ತದೆ. ಭಾರತದ ಪ್ರಭಾವ ಕಡಿಮೆಯಾಗಲು ಎರಡು ಪ್ರಮುಖ ಕಾರಣಗಳಿವೆ. ಸೈದ್ಧಾಂತಿಕ ಮತ್ತು ಭೂರಾಜಕೀಯ. ಸೈದ್ಧಾಂತಿಕವಾಗಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಶಕ್ತಿ ರಾಜಕೀಯದ ಬಗ್ಗೆ ತೋರಿದ ದಿವ್ಯ ನಿರ್ಲಕ್ಷ್ಯ. ಆಲಿಪ್ತ ನೀತಿಯತ್ತ ವಾಲಿಕೊಂಡ ಭಾರತಕ್ಕೆ ಶಕ್ತಿ ರಾಜಕೀಯದಲ್ಲಿ ತನ್ನ ಪಾತ್ರ ಮರೆತುಹೋಗಿತ್ತು! ಅಲಿಪ್ತ ನೀತಿಯೂ ವಿಶ್ವರಾಜಕೀಯದಲ್ಲಿ ಭಾರತಕ್ಕೊಂದು ವರ್ಚಸ್ಸು ಒದಗಿಸಿದರೂ, ನಿರೀಕ್ಷೆಯ ಮಟ್ಟ ತಲುಪಲಾಗಲಿಲ್ಲ. ಇನ್ನು ಭೂರಾಜಕೀಯದ ದೃಷ್ಟಿಯಿಂದಲೂ ಭಾರತಕ್ಜೆ ಸ್ವಾತಂತ್ರ್ಯದೊಂದಿಗೆ, ಪಾಕಿಸ್ತಾನವೆಂಬ ಮಗ್ಗುಲ ಮುಳ್ಳೂ ಸೃಷ್ಟಿಯಾಗಿ ಹೋಗುತ್ತದೆ. ಪಾಕಿಸ್ತಾನದ ಉದಯ ಭಾರತವನ್ಬು ಮಧ್ಯ ಪ್ರಾಚ್ಯ ಮತ್ತು ಮಧ್ಯ ಏಷ್ಯಾಗಳ ಜೊತೆ ಭಾರತದ ನೇರ ಸಂಪರ್ಕಕ್ಜೆ ಅಂತ್ಯ ಹಾಡಿತ್ತು. ಪಾಕಿಸ್ತಾನ ಮತ್ತು ಚೀನಾ ಜೊತೆಗಿನ ಗಡಿ ವಿವಾದಗಳಲ್ಲೇ ಭಾರತ ಸಮಯ ವ್ಯರ್ಥ ಮಾಡಿಕೊಳ್ಳುವಂತಾಯ್ತು. ಈ ಎಲ್ಲಾ ಸಮಸ್ಯೆಗಳು ಭಾರತವನ್ನು ನೆರೆಹೊರೆಯ ರಾಜಕೀಯಕ್ಕೆ ಸೀಮಿತಗೊಳಿಸುವ, ವಿಶ್ವಶಕ್ತಯಾಗುವ ಅವಕಾಶಗಳಿಗೆ ತಣ್ಣೀರೆರಚಿತ್ತು. ಇದಲ್ಲದೆ ಶೀತಲ ಸಮರದ ಅಂತ್ಯದ ನಂತರ ಅಲಿಪ್ತ ಚಳುವಳಿಯೂ ಮೂಲೆಗುಂಪಾಗುವುದರೊಂದಿಗೆ ಭಾರತದ ನಾಯಕತ್ವವೂ ತೆರೆಗೆ ಸರಿಯುವ ಲಕ್ಷಣಗಳು ನಿಚ್ಛಳವಾಗಿದ್ದವು. ಮಧ್ಯ ಪ್ರಾಚ್ಯದಲ್ಲಾದ ರಾಜಕೀಯ ಬದಲಾವಣೆಗಳು, ಭಯೋತ್ಪಾದನೆ, ಪೂರ್ವ ಏಷ್ಯಾದಲ್ಲಿ ದೈತ್ಯ ಪ್ರಭಾವವಾಗಿ ಹೊರಹೊಮ್ಮಿದ್ದ ಚೀನಾ, ಭಾರತ ವಿಶ್ವಶಕ್ತಿಯಾಗಿ ಬೆಳೆಯುವ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತ್ತು.

ಈ ಎಲ್ಲಾ ಮಿತಿಗಳನ್ನೂ ಮೀರಿ ಭಾರತ ವಿಶ್ವ ಮಟ್ಟದಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಳ್ಳಬೇಕಾದಲ್ಲಿ, ಸೈದ್ಧಾಂತಿಕ ಮತ್ತು ಭೂರಾಜಕೀಯದಲ್ಲಿ ಭಾರತ ತನಗಿರುವ ತೊಡಕುಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ಶಕ್ತಿರಾಜಕೀಯದ ವಿಚಾರವಾಗಿ ಭಾರತ ಸನ್ಯಾಸವನ್ನು ಬದಲಾಯಿಸಬೇಕಾಗುತ್ತದೆ. ಭಾರತ ಹಲವಾರು ಸಂಸ್ಕೃತಿಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಒಂದು ಪ್ರತ್ಯೇಕ ಪ್ರಪಂಚವನ್ನೇ ಪ್ರತಿನಿಧಿಸುತ್ತದೆ. ಇಂಥ ಒಂದು ರಾಜಕೀಯ ವ್ಯವಸ್ಥೆ, ರಾಜಕಾರಣಿಗಳಿಂದ ನಿರಂತರವಾಗಿ ನಿರೀಕ್ಷೆಗಳನ್ನಿಟ್ಟುಕೊಳ್ಳುತ್ತಾರೆ. ಹೀಗಾಗಿಯೇ ಭಾರತದ ನಾಯಕರೂ ಆಂತರಿಕ ನೀತಿಗೆ ನೀಡಿದಷ್ಟು ಪ್ರಾಮುಖ್ಯತೆ ವಿದೇಶಾಂಗ ನೀತಿಗೆ ನೀಡಿಲ್ಲ. ಈ ಎಲ್ಲಾ ಮಿತಿಗಳನ್ನೂ ಮೀರಿ ಪ್ರಧಾನಿ ಮೋದಿಯವರು ವಿದೇಶಾಂಗ ನೀತಿಗೂ ಸಮಾನ ಪ್ರಾಮುಖ್ಯತೆ ನೀಡಿ ಆಂತರಿಕ ರಾಜಕೀಯದ ಜೊತೆಗೂ ಸಮತೋಲನ ಕಾಯ್ದುಕೊಂಡು ಹೊಸ ರಾಜತಾಂತ್ರಿಕ ಮನಸ್ಥಿತಿಗೆ ನಾಂದಿ ಹಾಡಿದ್ದಾರೆ.

ಅಖಿಲೇಶ್ ಪಿಲ್ಲಾಮಾರಿಯವರು ಗುರುತಿಸಿದಂತೆ ಭಾರತದ ಯಶಸ್ಸಿನ ಹಾದಿಯಲ್ಲಿರುವ ಮುಖ್ಯ ಸವಾಲು ಪಾಕಿಸ್ತಾನವನ್ನು ನಿಗ್ರಹಿಸಲು ಎರಡು ತಂತ್ರಗಳನ್ನು ಬಳಸಬಹುದು. ಇಪ್ಪತೊಂದನೇ ಶತಮಾನದ ತಂತ್ರ ಮತ್ತು ಹತ್ತೊಂಬತ್ತನೇ ಶತಮಾನದ ತಂತ್ರ. ಇಪ್ಪತ್ತೊಂದನೆಯ ಶತಮಾನದ ತಂತ್ರದ ಪ್ರಕಾರ ಸಹಕಾರ ಮತ್ತು ಸೌಹಾರದತೆಯ ಮೂಲಕ ಪಾಕಿಸ್ತಾನವನ್ನು ಆರ್ಥಿಕ ತಂತ್ರಗಳಿಂದ ತನಗೆ ಅನುಕೂಲಕರವಾಗಿ ಪರಿವರ್ತಿಸಿಕೊಳ್ಳುವುದು. ಭಾರತ ಮತ್ತು ಪಾಕಿಸ್ತಾನಗಳಿಗಿಂತ ಹೆಚ್ಚು ದ್ವೇಷ ಕಾರಿಕೊಳ್ಳುತ್ತಿದ್ದ ಫ್ರಾನ್ಸ್ ಮತ್ತು ಜರ್ಮನಿಗಳು ಇದೇ ವಿಧಾನ ಅನುಸರಿಸಿ ಯಶ ಕಂಡಿವೆ. ಇದಲ್ಲದಿದ್ದರೆ ಎರಡನೇ ತಂತ್ರ ಅಂದರೆ ಹತ್ತೊಂಬತ್ತನೇ ಶತಮಾನದ ತಂತ್ರದ ಪ್ರಕಾರ ಪಾಕಿಸ್ತಾನದಲ್ಲಿರುವ ಅನೇಕ ಅತೃಪ್ತ ಸಮುದಾಯಗಳಿಗೆ ನೆರವು ನೀಡಿ ಪಾಕಿಸ್ತಾನದ ವಿಭಜನೆಗೆ ಪ್ರಚೋದಿಸಿ, ವಿಭಜಿತ ಗುಂಪುಗಳನ್ನು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ಪರವಾಗಿ ಉಪಯೋಗಿಸಿಕೊಳ್ಳುವುದು. ಈ ಮೂಲಕ ಪಾಕ್ ಅಟ್ಟಹಾಸವನ್ನು ಮಟ್ಟ ಹಾಕುವುದು ಹತ್ತೊಂಬತ್ತನೆಯ ಶತಮಾನದ ತಂತ್ರದ ಹೆಚ್ಚುಗಾರಿಕೆ.

ಇವಿಷ್ಟೇ ಅಲ್ಲದೇ ಭಾರತಕ್ಕೆ ಇನ್ನೂ ಹಲವಾರು ಸಮರತಾಂತ್ರಿಕ ಅವಕಾಶಗಳಿವೆ. ಭಾರತ ತನ್ನ ಬಲಿಷ್ಠ ನೌಕಾಸೇನೆಯನ್ನು ಇನ್ನಷ್ಟು ಬಲಪಡಿಸಿಕೊಂಡು, ಸಾಗರದ ಮೇಲೆ ಅಧಿಪತ್ಯ ಸಾಧಿಸುವತ್ತ ಗಮನಹರಿಸುವುದು. ಅಫ್ಘಾನಿಸ್ತಾನದಲ್ಲಿ ಭಾರತ ತನಗಿರುವ ರಾಜತಾಂತ್ರಿಕ ಅವಕಾಶಗಳನ್ನು ಉಪಯೋಗಿಸಿಕೊಂಡು, ತನ್ನ ನೆಲೆಗಳನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನಗಳು ಈಗಾಗಲೇ ಜಾರಿಯಲ್ಲಿವೆ. ಏಷ್ಯಾದ ಹಲವು ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಭಾರತ ಪಾಕಿಸ್ತಾನವನ್ನು ಒಬ್ಬಂಟಿಯನ್ನಾಗಿಸಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಪಾಕಿಸ್ತಾನವನ್ಬು ನೇರವಾಗಿ ಸಮರ್ಥಿಸಿಕೊಳ್ಳಲು ಯೋಚಿಸುವಂತಾಗಿದೆ. ಚೀನಾ, ರಷ್ಯಾ, ಅಮೆರಿಕಾ, ಮತ್ತು ಯುರೋಪಿನ ರಾಷ್ಟ್ರಗಳನ್ನು ಬಳಸಿಕೊಳ್ಳುವ ರಾಜತಾಂತ್ರಿಕ ಚಾಣಾಕ್ಷತೆ ಅತ್ಯವಶ್ಯಕ. ವಿಯೆಟ್ನಾಮ್, ಜಪಾನ್, ಸೌದಿ ಅರೇಬಿಯಾ, ಇಸ್ರೇಲ್ ಇನ್ನಿತರ ದೇಶಗಳ ಜೊತೆಗಿನ ಗೆಳೆತನದಲ್ಲೂ ಸಮಯಪ್ರಜ್ಞೆ ತೋರಬೇಕಾದ ಸಮಯ ಬಂದಿದೆ. 


(This article was published in Hosa Digantha newspaper on 18 October 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore. 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ